Advertisement

ಅಮೃತಸರ ರೈಲು ದುರಂತ: ರಾಮಲೀಲೆಯ ರಾವಣ ಪಾತ್ರಧಾರಿಯೂ ವಿಧಿವಶ

05:15 PM Oct 20, 2018 | udayavani editorial |

ಅಮೃತಸರ : ಕಳೆದ ಕೆಲ ವರ್ಷಗಳಿಂದ ಅಮೃತಸರದಲ್ಲಿ ರಾಮಲೀಲಾ ಉತ್ಸವದಲ್ಲಿ ರಾವಣನ ಪಾತ್ರ ವಹಿಸುತ್ತಿದ್ದ ದಲ್‌ ಬೀರ್‌  ಸಿಂಗ್‌ ಗೆ ಈ ಬಾರಿ ತಾನು ವಹಿಸುತ್ತಿದ್ದ ಪೌರಾಣಿಕ ಪಾತ್ರಕ್ಕೆ ಆದ ಗತಿಯೇ ಆದದ್ದು ವಿಧಿಯ ವಿಪರ್ಯಾಸ.

Advertisement

ಅಮೃತಸರ ರೈಲು ದುರಂತದಲ್ಲಿ ಮೃತಪಟ್ಟಿರುವ 60 ಮಂದಿ ದುರ್ದೈವಿಗಳಲ್ಲಿ “ರಾವಣ ಪಾತ್ರಧಾರಿ’ ದಲ್‌ ಬೀರ್‌  ಸಿಂಗ್‌ ಕೂಡ ಒಬ್ಬರಾಗಿದ್ದಾರೆ. 

ದಲ್‌ ಬೀರ್‌ ಸಿಂಗ್‌ ತನ್ನ ತಾಯಿ, ಪತ್ನಿ ಮತ್ತು 8 ತಿಂಗಳ ಮಗುವನ್ನು ಅಗಲಿದ್ದಾರೆ. ದಲ್‌ ಬೀರ್‌  ತನ್ನ ಕುಟುಂಬಕ್ಕೆ ಏಕೈಕ ಆಧಾರ ಸ್ತಂಭವಾಗಿದ್ದರು. ಈಗ ಅವರನ್ನೇ ಕಳೆದು ಕೊಂಡಿರುವ ಅವರ ಕುಟುಂಬ ಬಹುತೇಕ ನಿರ್ಗತಿಕವಾಗಿತ್ತು. 

ಮಗನನ್ನು ಕಳೆದುಕೊಂಡಿರುವ ದಲ್‌ ಬೀರ್‌  ಸಿಂಗ್‌ ಅವರ ವೃದ್ಧ ತಾಯಿಯ ಪುತ್ರ ಶೋಕ ಮುಗಿಲು ಮುಟ್ಟಿದೆ. “ನನ್ನ ಸೊಸೆಗೆ ಒಂದು ಉದ್ಯೋಗ ದಯಪಾಲಿಸಿ ಎಂಬುದೇ ಸರಕಾರಕ್ಕೆ ನನ್ನ ಮನವಿ. ಆಕೆಗೆ ಎಂಟು ತಿಂಗಳ ಹಸುಗೂಸು ಇದೆ. ನಮ್ಮನ್ನು ಇನ್ನು ದೇವರೇ ಕಾಪಾಡಬೇಕು’ ಎಂದು ದಲ್‌ ಬೀರ್‌  ತಾಯಿ ರೋದಿಸಿದ್ದಾಳೆ. 

Advertisement

ಈ ನಡುವೆ ಭಾರತೀಯ ರೈಲ್ವೆ ಅಮೃತಸರ ಅವಘಡವನ್ನು ತಾನು ರೈಲು ಅಪಘಾತಗಳ ಪಟ್ಟಿಗೆ ಸೇರಿಸುವುದಿಲ್ಲ. ಇದೊಂದು ರೈಲು ಅಪಘಾತ ಅಲ್ಲ, ಹಾಗಾಗಿ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಹೇಳಿದೆ. 

ಕೇಂದ್ರ ಸಹಾಯಕ ರೈಲ್ವೆ ಸಚಿವ ಮನೋಜ್‌ ಸಿನ್ಹಾ ಅವರು “ಘಟನೆಯ ಬಗ್ಗೆ ಯಾವುದೇ ತನಿಖೆಯನ್ನು ಕೈಗೊಳ್ಳುವ ಅಗತ್ಯ ರೈಲ್ವೇ ಗೆ ಇಲ್ಲ; ರೈಲಿನ ಚಾಲಕರಿಗೆ ಎಲ್ಲಿ ರೈಲನ್ನು ನಿಧಾನವಾಗಿ ಚಲಾಯಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಸೂಚನೆಗಳಿದ್ದವು; ಅವಘಡ ನಡೆದಲ್ಲಿ ತಿರುವುಗಳಿದ್ದವು; ಹಾಗಾಗಿ ರೈಲಿನ ಚಾಲಕರಿಗೆ ಜನರು ಹಳಿಯಲ್ಲಿ ನಿಂತಿರುವುದು ಗೋಚರಿಸಿರಲಿಲ್ಲ. ಹಾಗಾಗಿ ನಾವು ಯಾವುದರ ಬಗ್ಗೆ ತನಿಖೆ ನಡೆಸಬೇಕು ? ರೈಲುಗಳಿರುವುದೇ ವೇಗವಾಗಿ ಸಾಗಲು’ ಎಂದು ಹೇಳಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ದಲ್‌ ಬೀರ್‌ ಕುಟುಂಬಕ್ಕೆ ರೈಲ್ವೆಯಿಂದ ಯಾವುದೇ ಪರಿಹಾರ ಸಿಗುವ ಸಾಧ್ಯತೆಗಳು ಶೂನ್ಯವಾಗಿದ್ದು ಇನ್ನು ರಾಜ್ಯ ಸರಕಾರದಿಂದ ಮಾತ್ರವೇ ಉದ್ಯೋಗ ರೂಪದಲ್ಲಿ ಪರಿಹಾರ ಸಿಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next