Advertisement

ಲಿಂಗಾಯತ ಅಸ್ತ್ರಕ್ಕೆ ಮೊನಚು: ರಾಜ್ಯ BJP ಮುಖಂಡರಿಗೆ ಅಮಿತ್‌ ಶಾ ತಾಕೀತು

10:27 PM Apr 22, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಕಟ್ಟಿರುವ “ಬಿಜೆಪಿ ಲಿಂಗಾಯತ ವಿರೋಧಿ’ ಎಂಬ ಹಣೆಪಟ್ಟಿಗೆ ಸೂಕ್ತ ತಿರುಗೇಟು ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. “ಲಿಂಗಾಯತ ಸಿಎಂ’ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವನ್ನು ನಿರಂತರವಾಗಿ ಪ್ರಶ್ನಿಸುವಂತೆ ನಿರ್ದೇಶನ ನೀಡಿದ್ದಾರೆ.

Advertisement

ಶುಕ್ರವಾರ ರಾತ್ರಿ ನಡೆದ ಮಹತ್ವದ ಸಭೆಯಲ್ಲಿ ಈ ಸೂಚನೆ ನೀಡಿರುವ ಅವರು, ಲಿಂಗಾಯತ ಮುಖ್ಯಮಂತ್ರಿ ವಿಚಾರವನ್ನು ಚರ್ಚೆಯಲ್ಲಿಡಿ. ಇದರಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಸೂಚಿಸಿದ್ದಾರೆ. ಅಮಿತ್‌ ಶಾ ಸೂಚನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಶನಿವಾರ “ವೀರೇಂದ್ರ ಪಾಟೀಲ್‌ ಪ್ರಕರಣ’ವನ್ನು ಮತ್ತೆ ಕೆದಕಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪ್ರಮುಖರು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಚುನಾವಣ ಉಸ್ತುವಾರಿಗೆ ನಿಯೋಜನೆಗೊಂಡಿರುವ ಅನ್ಯ ರಾಜ್ಯಗಳ ಪ್ರಮುಖರ ಜತೆಗಿನ ಸಭೆಯ ಬಳಿಕ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಅಮಿತ್‌ ಶಾ ತಂತ್ರಗಾರಿಕೆಯ ಬಗ್ಗೆ ಚರ್ಚಿಸಿದರು. ಕಾಂಗ್ರೆಸನ್ನು ಕಟ್ಟಿ ಹಾಕುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗಿದ್ದು, “ಲಿಂಗಾಯತ ಸಿಎಂ’ ಅಸ್ತ್ರವನ್ನು ಕಾಂಗ್ರೆಸ್‌ ವಿರುದ್ಧ ಇನ್ನಷ್ಟು ಹರಿತಗೊಳಿಸಿ ಪ್ರಯೋಗಿಸಿ ಎಂದು ಸೂಚನೆ ನೀಡಿದ್ದಾರೆ.

25 ಕ್ಷೇತ್ರಗಳ ಗುರಿ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 25 ಪ್ರಮುಖ ನಾಯಕರ ಕ್ಷೇತ್ರಗಳನ್ನು ಗುರಿ ಮಾಡುವಂತೆಯೂ ಅಮಿತ್‌ ಶಾ ಸೂಚನೆ ನೀಡಿದ್ದಾರೆ. ಪ್ರಮುಖ ನಾಯಕರುಗಳನ್ನು ಆಯಾ ಕ್ಷೇತ್ರಗಳಲ್ಲೇ ಕಟ್ಟಿ ಹಾಕಿದರೆ ಅನ್ಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ವಿಚಲಿತರಾಗುವಂತೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸುವಂತೆ ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಎಚ್‌.ಡಿ. ಕುಮಾರಸ್ವಾಮಿ, ಸತೀಶ್‌ ಜಾರಕಿಹೊಳಿ, ಎಚ್‌.ಸಿ. ಮಹದೇವಪ್ಪ, ಯು.ಟಿ. ಖಾದರ್‌ ಕ್ಷೇತ್ರ ಬಿಟ್ಟು ಕದಲದಂತೆ ಮಾಡಿ ಎಂದು ಸೂಚನೆ ನೀಡಲಾಗಿದೆ.

ಅನ್ಯ ರಾಜ್ಯಗಳ ಉಸ್ತುವಾರಿ
ಇದೆಲ್ಲದರ ಮಧ್ಯೆ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಿರ್ವಹಿಸಿದ ಅನುಭವ ಹೊಂದಿರುವ ಅನ್ಯ ರಾಜ್ಯಗಳ ಸಂಸದರು ಹಾಗೂ ಸಚಿವರನ್ನು ಕರ್ನಾಟಕ ಚುನಾವಣೆಗೆ ಪರ್ಯಾಯ ಉಸ್ತುವಾರಿಗಳಾಗಿ ನಿಯೋಜನೆ ಮಾಡಲಾಗಿದೆ.

Advertisement

ಪ್ರತೀ ಜಿಲ್ಲೆಗೆ ಒಬ್ಬರಂತೆ ಒಟ್ಟು 40 ಅನ್ಯ ರಾಜ್ಯ ಉಸ್ತುವಾರಿಗಳು ಶುಕ್ರವಾರ ರಾಜ್ಯಕ್ಕೆ ಆಗಮಿಸಿದ್ದು, ಅವರ ಜತೆಗೆ ಅಮಿತ್‌ ಶಾ ಮಹತ್ವದ ಚರ್ಚೆ ನಡೆಸಿದರು. ರಾಜ್ಯ ನಾಯಕರ ಜತೆಗೆ ಅಮಿತ್‌ ಶಾ ನಿಯೋಜನೆ ಮಾಡಿರುವ ಉಸ್ತುವಾರಿಗಳು ನೇರ ಸಂಪರ್ಕ ಹೊಂದಿರುತ್ತಾರೆ.

ಕಾಂಗ್ರೆಸ್‌ ಗುಂಡಿಯಲ್ಲಿ ನೀರೇ ಇಲ್ಲದಿರುವಾಗ ಹರಿದು ಹೋಗುವ ಪ್ರಶ್ನೆ ಎಲ್ಲಿ ಬಂತು? 2018ರಲ್ಲಿ ಲಿಂಗಾಯತ ಧರ್ಮ ವಿಭಜನೆಗೆ ಕಾಂಗ್ರೆಸ್‌ ಕೈ ಹಾಕಿದ್ದನ್ನು ಯಾರೊಬ್ಬರೂ ಮರೆತಿಲ್ಲ. ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗಳಿಂದ ಲಿಂಗಾಯತರು ಇನ್ನಷ್ಟು ಜಾಗೃತರಾಗುತ್ತಿದ್ದಾರೆ.
– ಬಸವರಾಜ ಬೊಮ್ಮಾಯಿ, ಸಿಎಂ,

ಟಿಕೆಟ್‌ ನಿರಾಕರಣೆಗೆ ಶಾ ಸಮರ್ಥನೆ
ಹೊಸದಿಲ್ಲಿ: ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸುವ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬಿಜೆಪಿ ಸದಾ ಬದಲಾವಣೆಯಲ್ಲಿ ನಂಬಿಕೆ ಇರಿಸಿಕೊಂಡಿದೆ. ಅದಕ್ಕೆ ಅನುಸಾರವಾಗಿಯೇ ಪಕ್ಷದಲ್ಲಿ ಟಿಕೆಟ್‌ ಹಂಚಿಕೆ ಮಾಡಲಾಗಿದೆ’ ಎಂದಿದ್ದಾರೆ. ಟಿಕೆಟ್‌ ನಿರಾಕರಿಸಲಾಗಿದೆ ಎಂದ ಮಾತ್ರಕ್ಕೆ ಅವರೆಲ್ಲ ಕಳಂಕಿತರು ಎಂದರ್ಥವಲ್ಲ. ಹಲವಾರು ಅಂಶಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾವ ಕಾರಣಕ್ಕಾಗಿ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿಲ್ಲ ಎಂಬ ಬಗ್ಗೆ ಅವರಿಗೆ ವಿವರಣೆ ನೀಡಲಾಗಿದೆ ಎಂದರು. ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡುವುದೂ ಆದ್ಯತೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ 15ರಿಂದ 20 ಕ್ಷೇತ್ರಗಳಲ್ಲಿ ಹೆಚ್ಚು ಜಯ ಸಾಧಿಸಲಿದೆ ಎಂದರು.

ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖರು ಟಿಕೆಟ್‌ ಸಿಗದೆ, ಕಾಂಗ್ರೆಸ್‌ ಸೇರಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅಮಿತ್‌ ಶಾ ಮಾತುಗಳು ಮಹತ್ವ ಪಡೆದಿವೆ.
ಮೇ 10ರ ಚುನಾವಣೆಯಲ್ಲಿ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ಜಗದೀಶ್‌ ಶೆಟ್ಟರ್‌ ಮಾತ್ರ ಕಾಂಗ್ರೆಸ್‌ ಸೇರಿರುವುದೇ ವಿನಾ ನಮ್ಮ ಪಕ್ಷದ ಮತದಾರರು, ಕಾರ್ಯಕರ್ತರು ಕಾಂಗ್ರೆಸ್‌ ಸೇರಿಲ್ಲ. ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಕಾಂಗ್ರೆಸ್‌ ಮಾಡುತ್ತಿರುವ ಭ್ರಷ್ಟಾಚಾರ ಆರೋಪ ಆಧಾರ ರಹಿತ ಎಂದರು.

ರಾಹುಲ್‌ ಗಾಂಧಿ ಅನರ್ಹತೆ ವಿಚಾರದ ಬಗ್ಗೆ ಮಾತನಾಡಿ, “ದೇಶದಲ್ಲಿ ಯಾವುದೇ ಕುಟುಂಬ ಕಾನೂನಿಗಿಂತ ದೊಡ್ಡದಲ್ಲ. ಒಬಿಸಿ ಸಮುದಾಯವನ್ನು ಅವಹೇಳನ ಮಾಡಿ ಎಂದು ಅವರಿಗೆ ನಾವು ಹೇಳಿಲ್ಲ. ಈ ಪ್ರಕರಣದಲ್ಲಿ ಅವರೇ ಕ್ಷಮೆ ಯಾಚಿಸಲು ಹಿಂದುಳಿದರು. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ರಚನೆ ಮಾಡಿದ ಕಾನೂನಿನಲ್ಲೇ ಶಿಕ್ಷೆಯಾಗಿದೆ. ಆಗ ಪ್ರಧಾನಿಯಾಗಿದ್ದವರು ಆ ಕಾನೂನು ರದ್ದುಗೊಳಿಸಲು ಪ್ರಯತ್ನಿಸಿದ್ದಕ್ಕೆ ರಾಹುಲ್‌ ಆಕ್ಷೇಪಿಸಿದ್ದರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next