Advertisement

ನಾಳೆ ದ.ಕ. ಜಿಲ್ಲೆಗೆ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

11:38 PM Feb 09, 2023 | Team Udayavani |

ಪುತ್ತೂರು: ಅಮಿತ್‌ ಶಾ ಅವರು ಕೇಂದ್ರ ಗೃಹ ಸಚಿವರಾದ ಬಳಿಕ ಫೆ. 11ರಂದು ಪ್ರಥಮ ಬಾರಿಗೆ ದ.ಕ. ಜಿಲ್ಲೆಗೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವರು.
ಕಣ್ಣೂರಿಗೆ ವಿಮಾನ ಮೂಲಕ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಈಶ್ವರಮಂಗಲಕ್ಕೆ ಆಗಮಿಸಿ, ಹನುಮಗಿರಿಯಲ್ಲಿ ಭಾರತ ಮಾತಾ ಮಂದಿರ ಲೋಕಾರ್ಪಣೆ ಮಾಡುವರು. ಅನಂತರ ಕ್ಯಾಂಪ್ಕೊದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸಹಕಾರಿಗಳು, ಅಡಿಕೆ ಕೃಷಿಕ ರನ್ನು ಉದ್ದೇಶಿಸಿ ಮಾತನಾಡುವರು. ಅನಂತರ ಮಂಗಳೂರಿ ನಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು.

Advertisement

ಅಮಿತ್‌ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಈಗಾ ಗಲೇ ಸಕಲ ಸಿದ್ಧತೆಗಳು ಆಗಿವೆ. ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳು ಪರಿ ಶೀಲನೆ ನಡೆಸಿ ಮಾರ್ಗದರ್ಶನ ನೀಡಿರುವರು.
ಭದ್ರತೆ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನಗಣ್ಣಿರಿಸಲಾಗಿದೆ. ಕೆಲವು ದಿನಗಳಿಂದ ಕೇರಳ ಗಡಿ ಸಹಿತ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ.

ಪೊಲೀಸ್‌ ಬಲ
ರಾಜ್ಯದ ನಾನಾ ಭಾಗದ 1,600 ಪೊಲೀಸ್‌ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 7 ಮಂದಿ ಎಸ್‌ಪಿ, 22 ಮಂದಿ ಡಿವೈಎಸ್‌ಪಿ, 38 ಮಂದಿ ಇನ್‌ಸ್ಪೆಕ್ಟರ್‌, 80ಕ್ಕೂ ಅಧಿಕ ಪಿಎಸ್‌ಐಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಇದರ ಜತೆಗೆ ಪ್ಯಾರಾ ಮಿಲಿಟರಿ ಪೋರ್ಸ್‌, ಅಮಿತ್‌ ಶಾ ಅವರಿಗೆ ಎಸ್‌ಪಿಜಿ ಭದ್ರತೆ ಇರಲಿದೆ. ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್‌, ತೆಂಕಿಲ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗುತ್ತದೆ.

ನಕ್ಸಲ್‌ ಶೋಧ
ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ನಕ್ಸಲ್‌ ಚಲನವಲನ ಇರುವ ಹಿನ್ನೆಲೆಯಲ್ಲಿ ಶಾ ಭೇಟಿಗೆ ಪೂರ್ವಭಾವಿಯಾಗಿ ಎಎನ್‌ಎಫ್‌, ಎಎನ್‌ಎಸ್‌ ಪಡೆಯು ಪುತ್ತೂರು, ಸುಳ್ಯ, ಬಂಟ್ವಾಳಗಳಲ್ಲಿ ನಕ್ಸಲ್‌ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಸ್ವಲ್ಪ ಸಮಯದ ಹಿಂದೆ ಕೊಡಗು ತಪ್ಪಲಿನಲ್ಲಿ ನಕ್ಸಲರ ಓಡಾಟ ಕಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಯಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪರ್ಯಾಯ ವ್ಯವಸ್ಥೆ
ಶಾ ಅವರು ಹನುಮಗಿರಿ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಹೊರಡುವ 1 ಗಂಟೆ ಮೊದಲು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ 2 ಕಡೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರ ವರೆಗೆ ಲಿನೆಟ್‌ ಜಂಕ್ಷನ್‌ನಿಂದ ಮುಕ್ರುಂಪಾಡಿ ತನಕ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗುತ್ತದೆ.

Advertisement

ಪರ್ಯಾಯ ಮಾರ್ಗ ಇಂತಿದೆ
ಸುಳ್ಯ ಭಾಗದಿಂದ ಬರುವ ವಾಹನಗಳು ಪರ್ಪುಂಜದಿಂದ ಪಂಜಳ ರಸ್ತೆಯಲ್ಲಿ ಸಂಚರಿಸಿ ಪುರುಷರಕಟ್ಟೆ-ದರ್ಬೆಗೆ ಬಂದು ನಗರ ಮೂಲಕ ಬೊಳುವಾರಿಗೆ ಸಾಗಿ ರಾ. ಹೆ.ಸಂಪರ್ಕಿಸಿ ಕಬಕ ಮಂಗಳೂರು ಕಡೆ ಸಂಚರಿಸುವುದು. ಅದೇ ರೀತಿ ಕಬಕ ಭಾಗದಿಂದ ಬರುವ ವಾಹನಗಳು ಮಂಜಲ್ಪಡಿ³ನಿಂದ ಕೊಂಚ ಮುಂದಕ್ಕೆ ಲಿನೆಟ್‌ ಜಂಕ್ಷನ್‌ನಿಂದ ಪುತ್ತೂರಿಗೆ ಪ್ರವೇಶಿಸುವ ಸರ್ಕಲ್‌ ಮೂಲಕ ದರ್ಬೆ- ಪುರುಷರಕಟ್ಟೆ-ಪಂಜಳ-ಪರ್ಪುಂಜ ಸೇರಿ ರಾ. ಹೆ. ಸಂಪರ್ಕಿಸಬೇಕು. ನಗರದ ರಸ್ತೆಗಳು ದಿನಪೂರ್ತಿ ತೆರೆದಿರುತ್ತವೆ.

ಕೊರಗಜ್ಜನ ನೇಮ ಹಿನ್ನೆಲೆ: ಶಾ ರೋಡ್‌ ಶೋ ರದ್ದು
ಮಂಗಳೂರು/ಸುರತ್ಕಲ್‌: ಕೇಂದ್ರ ಸಚಿವ ಅಮಿತ್‌ ಶಾ ಅವರ ವೇಳಾಪಟ್ಟಿಯಲ್ಲಿ ಆಗಿರುವ ಕೊನೇ ಕ್ಷಣದ ಬದಲಾವಣೆ ಹಾಗೂ ಭದ್ರತಾ ಕಾರಣಗಳಿಗಾಗಿ ಮಂಗಳೂರಿನಲ್ಲಿ ಫೆ. 11ರಂದು ಸಂಜೆ ನಡೆಯಬೇಕಿದ್ದ ರೋಡ್‌ ಶೋ ರದ್ದುಗೊಳಿಸಲಾಗಿದೆ. ಇದರ ಬದಲು ಕೆಂಜಾರಿನಲ್ಲಿ ಸಚಿವ ಶಾ ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ.

ಸುರತ್ಕಲ್‌ ವಿಧಾನಸಭಾ ಕ್ಷೇತ್ರದ ಕಾವೂರಿನಿಂದ ಪದವಿನಂಗಡಿ ಮೇರಿಹಿಲ್‌ ವರೆಗೆ ರೋಡ್‌ ಶೋಗೆ ತೀರ್ಮಾನಿಸಲಾಗಿತ್ತು. ಆದರೆ ಸಚಿವರ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದ್ದು ಅವರು ಬರುವಾಗಲೇ ಅರ್ಧಗಂಟೆ ತಡವಾಗುತ್ತದೆ. ಅಲ್ಲದೆ ಪದವಿನಂಗಡಿಯ ಧಾರ್ಮಿಕ ಕಾರ್ಯಕ್ರಮ, ಕೊರಗಜ್ಜನ ನೇಮ ಕೂಡ ನಡೆಯುತ್ತದೆ. ಒಂದು ವೇಳೆ ರೋಡ್‌ ಶೋ ತಡವಾದರೆ ಈ ಕಾರ್ಯಕ್ರಮಗಳಿಗೆ ಸಮಸ್ಯೆ ಆಗುವ ತೊಂದರೆ ಇರುತ್ತದೆ.

ಈ ವಿಚಾರವನ್ನು ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರೇ ಅಮಿತ್‌ ಶಾಗೆ ತಿಳಿಸಿದ್ದು, ಜಾತ್ರೆಗೆ ಯಾವುದೇ ಸಮಸ್ಯೆ ಆಗಬಾರದೆಂಬ ನೆಲೆಯಲ್ಲಿ ಈ ಭಾಗದಲ್ಲಿನ ರೋಡ್‌ ಶೋ ರದ್ದುಗೊಳಿಸಿ ಎಂದು ಶಾ ಸೂಚಿಸಿದ್ದಾರೆ.

ಕೆಂಜಾರಿನಲ್ಲಿ ಭವ್ಯಸ್ವಾಗತ
ಫೆ. 11ರಂದು ಸಂಜೆ ಮಂಗಳೂರಿನ ಕೆಂಜಾರಿನಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಭಾಗವಹಿಸಲು ಆಗಮಿಸುವ ಅಮಿತ್‌ ಶಾ ಅವರನ್ನು ವಿಮಾನ ನಿಲ್ದಾಣದ ಕೆಳಗೆ ಕೆಂಜಾರು ವೃತ್ತದಲ್ಲಿ ಬಿಜೆಪಿ ವತಿಯಿಂದ ಸಾವಿರಾರು ಕಾರ್ಯಕರ್ತರು ಸ್ವಾಗತಿಸಲಿದ್ದಾರೆ.

ಭದ್ರತೆ ದೃಷ್ಟಿಯಿಂದ ಕಾರ್ಯಕರ್ತರೆಲ್ಲರೂ 5 ಗಂಟೆ ಒಳಗಾಗಿ ಕೆಂಜಾರು ತಲುಪಬೇಕು. ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ಮಂಗಳೂರು ಮತ್ತು ಶಿವಮೊಗ್ಗ ವಿಭಾಗದ ಪ್ರಮುಖರ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‌ ಸಿಂಗ್‌, ಸಿ.ಟಿ. ರವಿ ಹಾಗೂ 2 ವಿಭಾಗದಲ್ಲಿರುವ ಸಚಿವರು, ಶಾಸಕರು, ಮಾಜಿ ಶಾಸಕರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ತಿಳಿಸಿದ್ದಾರೆ.

1.30ರ ಮೊದಲೇ ಆಗಮಿಸಿ
ರಾ. ಹೆ. ಎರಡು ದಿಕ್ಕಿನಲ್ಲಿ ವಾಹನ ಸಂಚಾರ ಬಂದ್‌ ಮಾಡುವ ಕಾರಣ ಸಮಾವೇಶ ಸ್ಥಳಕ್ಕೆ ಬರುವವರು ಮಧ್ಯಾಹ್ನ 1.30ರ ಮೊದಲೇ ಆಗಮಿಸಿದರೆ ಉತ್ತಮ. ಮಹಾಲಿಂಗೇಶ್ವರ ದೇವಸ್ಥಾನ, ಕಿಲ್ಲೆ ಮೈದಾನ ಸಹಿತ ವಿವಿಧ ಭಾಗಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
-ರಾಜಶೇಖರ, ಎಸ್‌ಐ, ಸಂಚಾರ ಠಾಣೆ, ಪುತ್ತೂರು

ಅಮಿತ್‌ ಶಾ ಭೇಟಿ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳ ನಿರ್ದೇಶನದಂತೆ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಮೂರು ಕಡೆ ಚೆಕ್‌ ಪೋಸ್ಟ್‌ ತೆರೆಯಲಾಗಿದೆ, ನಕ್ಸಲ್‌ ಶೋಧ, ಡ್ರೋನ್‌ ಸರ್ವೇ ನಡೆಸಲಾಗುತ್ತಿದೆ.
– ಡಾ| ವೀರಯ್ಯ ಹಿರೇಮಠ್ ಡಿವೈಎಸ್ಪಿ ಪುತ್ತೂರು ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next