Advertisement

Chandrayaan-3: ಅಂ.ರಾ. ಮಾಧ್ಯಮಗಳಲ್ಲಿ ವಿಕ್ರಮನ ಪರಾಕ್ರಮ

09:54 PM Aug 24, 2023 | Team Udayavani |

ನವದೆಹಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಪ್ರಥಮ ದೇಶವೆಂಬ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಭಾರತದ ಸಾಧನೆಗೆ ವಿಶ್ವರಾಷ್ಟ್ರಗಳೂ ಕೂಡ ತಲೆದೂಗಿವೆ. ಈ ಹಿಂದೆ ಅನೇಕಬಾರಿ ಭಾರತವನ್ನು ಜರಿದಿದ್ದ, ಸಾಧನೆಯನ್ನು ಸಂಶಯಿಸಿದ್ದ ಖ್ಯಾತ ಅಂತಾರಾಷ್ಟ್ರೀಯ ಮಾಧ್ಯಮಗಳೇ ಇಂದು ಇಸ್ರೋವನ್ನು ಬಣ್ಣಿಸಿ, ತಮ್ಮ ಮುಖಪುಟದಲ್ಲೇ ಚಂದ್ರನ ಮೇಲೆ ನಿಂತ ವಿಕ್ರಮ ಲ್ಯಾಂಡರ್‌ನ ಪರಾಕ್ರಮವನ್ನು ಬಣ್ಣಿಸಿರುವುದು ಭಾರತೀಯ ವಿಜ್ಞಾನಿಗಳ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

Advertisement

ವಿಶೇಷವೆಂದರೆ ಗಡಿವಿಚಾರಗಳು, ಕಲಹಗಳ ನಡುವೆಯೇ ಪಾಕಿಸ್ತಾನವೂ ಕೂಡ ಭಾರತದ ಗೆಲುವನ್ನು ಪ್ರಶಂಸಿಸಿದ್ದು, ಪಾಕ್‌ ಮಾಧ್ಯಮಗಳು ಕೂಡ ಮುಖಪುಟದಲ್ಲಿ ಭಾರತದ ಐತಿಹಾಸಿಕ ಸಾಧನೆಗೆ ಸ್ಥಾನ ನೀಡಿವೆ. 40 ದಿನಗಳ ಪ್ರಯಾಣದ ಯಶಸ್ಸು ಭಾರತಕ್ಕೆ ಸಂದಿದೆ ಎಂದು ಜಿಯೋ ನ್ಯೂಸ್‌ ಬರೆದಿದ್ದರೆ, ಇತ್ತ ಡಾನ್‌ ಪತ್ರಿಕೆಯು ಭಾರತಕ್ಕಿದು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದೆ. ಪಾಕ್‌ನ ಸಚಿವರಾಗಿದ್ದ ಫ‌ಹಾದ್‌ ಚೌದ್ರಿ ಕೂಡ ಪ್ರಶಂಸೆ ವ್ಯಕ್ತಪಡಿಸಿ, ಇಸ್ರೋ ಅಧ್ಯಕ್ಷ ಸೋಮನಾಥ್‌ ಅವರೊಂದಿಗೆ ದೇಶದ ಕಿರಿಯ ವಿಜ್ಞಾನಿಗಳು ಕೂಡ ಸಂಭ್ರಮಿಸುತ್ತಿರುವುದನ್ನು ನೋಡಿ ಸಂತಸವಾಯಿತು. ಭಾರತಕ್ಕಿದು ಅಭೂತಪೂರ್ವ ಕ್ಷಣವೆಂದು ಹೇಳಿದ್ದಾರೆ.

ಇತ್ತ ನ್ಯೂಯಾರ್ಕ್‌ ಟೈಮ್ಸ್‌ನಿಂದ ಹಿಡಿದು ಬಿಬಿಸಿವರೆಗೆ , ದಿ ಗಾರ್ಡಿಯನ್‌, ವಾಷಿಂಗ್ಟನ್‌ ಪೋಸ್ಟ್‌ನಂಥ ಹಲವಾರು ಸಂಸ್ಥೆಗಳು ಚಂದ್ರಯಾನ-3ರ ಯಶಸ್ಸನ್ನು ತಮ್ಮದು ಎಂಬಂತೆ ಸಂಭ್ರಮಿಸಿವೆ. ಭಾರತದ ಈ ಸಾಧನೆ ವಿಶ್ವ ಬಾಹ್ಯಾಕಾಶ ಸಂಶೋಧನೆ ರೇಸ್‌ಗೆ ಹೊಸ ಹುರುಪು ನೀಡಿದೆ. ಚಂದ್ರನ ಧ್ರುವಗಳಲ್ಲಿ ಲ್ಯಾಂಡರ್‌ ಇರಿಸುವುದು ಅಸಾಮಾನ್ಯವಾದ ಕೆಲಸ ಅದನ್ನು ಭಾರತ ನಿರಾಯಾಸವಾಗಿ ಸಾಧಿಸಿ ತೋರಿಸಿದೆ ಎಂದು ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ. ಭಾರತವು ಬಾಹ್ಯಾಕಾಶ ರೇಸ್‌ಗೆ ಬಲಿಷ್ಠ ಗುಂಡು ಹೊಡೆದಿದೆ ಎಂದು ಟೆಲಿಗ್ರಾಫ್ ಮಾಧ್ಯಮ ಸಂಸ್ಥೆ ಹೇಳಿದೆ.

ರಷ್ಯಾ ಸೇರಿದಂತೆ ಇತರ ದೇಶಗಳು ವಿಫ‌ಲವಾದ ಕಾರ್ಯದಲ್ಲಿ ಭಾರತ ಯಶಸ್ಸು ಸಾಧಿಸಿದೆ. ಕಡಿಮೆ ವೆಚ್ಚದಲ್ಲಿ, ನವೀನ ಬಾಹ್ಯಾಕಾಶ ನೌಕೆ ಸಿದ್ದಪಡಿಸಿ, ಚಂದ್ರನ ಅಂಗಳಕ್ಕೂ ಇಳಿಸಿ ಅಸಾಧ್ಯವೆನ್ನುವಂತೆ ಕಂಡಿದ್ದನ್ನೂ ಇಸ್ರೋ ಸಾಧ್ಯವಾಗಿಸಿದೆ ಎಂದು ಸ್ಕೈ ನ್ಯೂಸ್‌ ಸಂಸ್ಥೆ ವರದಿ ಮಾಡಿದೆ. ಇನ್ನು ಭಾರತದ ಈ ಸಾಧನೆ ದೇಶದ ಬಾಹ್ಯಾಕಾಶ ಕೇಂದ್ರದ ಕನಸಿನ ಅಭಿವೃದ್ಧಿಯ ಸೂಚಕವೆಂದು ನ್ಯೂಯಾರ್ಕ್‌ ಟೈಮ್ಸ್‌ ಬಣ್ಣಿಸಿದ್ದರೆ, ಇದು ಅವರ್ಣನೀಯ ಸಾಧನೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಇತ್ತ ಭಾರತವೇ ಚಂದ್ರನಲ್ಲಿಗೆ ಸೇರಿದೆ ಎಂದು ವಾಲ್‌ಸ್ಟ್ರೀಟ್‌ ಸಂಸ್ಥೆ ಬಣ್ಣಿಸಿದರೆ, ಭಾರತ ಚಂದ್ರನ ದಕ್ಷಿಣ ಧ್ರುವ ತಲುಪಿ ಬಾಹ್ಯಾಕಾಶ ಕ್ಷೇತ್ರದ ಸೂಪರ್‌ ಪವರ್‌ ಆಗಿ ಬದಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಒಡಿಶಾದ ಮಕ್ಕಳಿಗೆ ಚಂದ್ರಯಾನದ ಹೆಸರು
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಸುಲಲಿತವಾಗಿ ಇಳಿದ ಸಂದರ್ಭದಲ್ಲೇ ಒಡಿಶಾದ ಕೇಂದ್ರಪಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಜನಿಸಿವೆ. ಈ ಪೈಕಿ ಒಂದು ಹೆಣ್ಣು ಮಗುವಿದ್ದು, ಈ ನಾಲ್ಕೂ ಮಕ್ಕಳಿಗೆ ಚಂದ್ರಯಾನದ ಯಶಸ್ಸಿನ ನಿಮಿತ್ತ ಆ ಸಂಬಂಧಿಸಿದ ಹೆಸರುಗಳನ್ನೇ ನಾಮಕರಣ ಮಾಡುವುದಾಗಿ ಪೋಷಕರು ತಿಳಿಸಿದ್ದಾರೆ. ಲೂನಾ, ಪ್ರಜ್ಞಾನ್‌, ವಿಕ್ರಮ್‌, ಚಂದ್ರ ಹೀಗೆ ಚಂದ್ರಯಾನ-3ಕ್ಕೆ ಸಂಬಂಧಿಸಿದ ಹೆಸರುಗಳನ್ನಿಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Advertisement

ಬಾಹ್ಯಾಕಾಶದ ಕನಸಿಗೆ ರೆಕ್ಕೆ ಕಟ್ಟಿದ್ದ ಚರ್ಚ್‌
ಚಂದ್ರಯಾನ-3ರ ಯಶಸ್ಸು ಭಾರತದ ಗರಿಮೆಯನ್ನು ಹೆಚ್ಚಿಸಿರುವ ನಡುವೆಯೇ, ದೇಶದಲ್ಲಿ ಇಸ್ರೋ ಸ್ಥಾಪನೆಯಿಂದ ಹಿಡಿದು ಪ್ರಸಕ್ತದ ಯಶಸ್ಸಿನ ವರೆಗೆ ಪಾತ್ರವಹಿಸಿದ, ಸಹಕರಿಸಿದವರ ಹೆಮ್ಮೆಯೂ ಹೇಳತೀರದ್ದಾಗಿದೆ. ಅಂಥ ಸಾಲಿನಲ್ಲಿ ಕೇರಳದ ಲ್ಯಾಟಿನ್‌ ಚರ್ಚ್‌ಕೂಡ ಸೇರಿದ್ದು, ಇಸ್ರೋ ಸಾಧನೆಯ ಹಾದಿಯಲ್ಲಿ ತನ್ನ ಕೊಡುಗೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದೆ. 1960ರಲ್ಲಿ ತಿರುವನಂತಪುರದ ಕರಾವಳಿ ಭಾಗದ ಪ್ರದೇಶವಾದ ತುಂಬಾದಲ್ಲಿರುವ ಬಹುತೇಕ ಪ್ರದೇಶ ಮ್ಯಾಗ್ಡಲೀನ್‌ ಚರ್ಚ್‌ನ ಒಡೆತನದಲ್ಲಿತ್ತು. ನೂರಾರು ಮೀನುಗಾರರ ಕುಟುಂಬಕ್ಕೆ ಅದೇ ಆಧಾರವಾಗಿತ್ತು. ಅಂಥ ಸಂದರ್ಭದಲ್ಲಿ ವಿಕ್ರಮ್‌ ಸಾರಾಭಾಯಿ ಅವರು ಲ್ಯಾಟಿನ್‌ ಚರ್ಚ್‌ನ ಬಿಷಪ್‌ ಅವರನ್ನು ಭೇಟಿಯಾಗಿ, ದೇಶದ ಬಾಹ್ಯಾಕಾಶ ಕಾರ್ಯಾಚರಣೆಗೆ ಆ ಪ್ರದೇಶದ ಅಗತ್ಯವಿದೆ. ಅದು ರಾಕೆಟ್‌ ಉಡಾವಣೆಗೆ ಸೂಕ್ತವಾದ ಜಾಗವಾದ ಕಾರಣ ಅದನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಅಂದು ದೇಶದ ಒಳಿತಿಗಾಗಿ ಚರ್ಚ್‌ ತುಂಬು ಮನಸ್ಸಿನಿಂದ ಜಾಗವನ್ನು ಹಸ್ತಾಂತರಿಸಿತು. ಅಲ್ಲಿದ್ದ ಚರ್ಚ್‌ ರಾಕೆಟ್‌ ಉಡಾವಣಾ ಕೇಂದ್ರದ ಮೊದಲ ಕಚೇರಿಯಾಯಿತು ಎಂಬುದನ್ನು ಚರ್ಚ್‌ ಸ್ಮರಿಸಿದೆ.

45 ಟ್ರಿ. ಡಾಲರ್‌ ಬ್ರಿಟನ್‌ ಕೊಡಲಿ
ಚಂದ್ರಯಾನದ ಯಶಸ್ಸಿನ ಬಗ್ಗೆ ಪ್ರಶಂಸೆಗಳು ಬರುತ್ತಿದ್ದಂತೆಯೇ ಹಲವರು ಕುಹಕವನ್ನಾಡಿದ್ದೂ ಇದೆ. ಅಂಥದ್ದೇ ಉದ್ದಟತನಕ್ಕೆ ಮುಂದಾದ ಬ್ರಿಟನ್‌ನ ಪತ್ರಕರ್ತೆ ಸೋಫಿ ಕುರ್ಕೋರಾನ್‌ಗೆ ಭಾರತೀಯ ನೆಟ್ಟಿಗರು ಸರಿಯಾಗಿ ಚಾಟಿ ಬೀಸಿದ್ದಾರೆ. ಎಕ್ಸ್‌ನಲ್ಲಿ ಚಂದ್ರಯಾನದ ಕುರಿತು ಟ್ವೀಟ್‌ ಮಾಡಿದ್ದ ಅವರು, ಭಾರತದ ಬಾಹ್ಯಾಕಾಶ ಉಪಕ್ರಮಗಳಿಗೆಂದು ಈವರೆಗೆ ಬ್ರಿಟನ್‌ ಧನಸಹಾಯ ನೀಡುತ್ತಿತ್ತು. ಇನ್ನು ಮುಂದೆ ಅದರ ಅಗತ್ಯವಿಲ್ಲ, ಭಾರತ ಈಗ ಚಂದ್ರನಲ್ಲಿಗೆ ತಲುಪುವಷ್ಟು ಸಮರ್ಥವಾಗಿದೆ. ಈಗೇನಿದ್ದರೂ ನಾವು ಕೊಟ್ಟಿದ್ದನ್ನು ಮರಳಿ ಪಡೆಯುವ ಸಮಯ ಎಂದಿದ್ದರು. ಇದಕ್ಕೆ ಭಾರತೀಯರು ಪ್ರತಿಕ್ರಿಯಿಸಿ, ನಿಮ್ಮ ಹಣ ವಾಪಸ್‌ ಮಾಡುವ ಮೊದಲು ನೀವು ನಮ್ಮ ದೇಶದಿಂದ ಲೂಟಿ ಹೊಡೆದಿರುವ 45 ಟ್ರಿಲಿಯನ್‌ ಡಾಲರ್‌ಗಳನ್ನು (3,714 ಲಕ್ಷ ಕೋಟಿ ರೂ.) ಹಿಂದಿರುಗಿಸಿ ಎಂದಿದ್ದಾರೆ. ಜತೆಗೆ ನಮ್ಮ ಕೊಹಿನೂರ್‌ ವಜ್ರವನ್ನೂ ಮರಳಿಸಿ ಎಂದು ತಾಕೀತು ಮಾಡಿದ್ದಾರೆ.

ಚಂದ್ರನ ಮೇಲೆ ಕಾಲಿಟ್ಟ ರೋಶನ್‌: ದೀದಿ ಯಡವಟ್ಟು…
ಇಸ್ರೋ ಸಾಧನೆಗೆ ಅಭಿನಂದನೆ ಸಲ್ಲಿಸುವ ವೇಳೆ, ಯಶಸ್ಸಿಗೆ ಕಾಂಗ್ರೆಸ್‌ನ ಪಾತ್ರವನ್ನೂ ಸ್ಮರಿಸಲು ಹೋಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಡವಟ್ಟು ಮಾಡಿ ಟ್ರೋಲಿಗರ ಗಾಳಕ್ಕೆ ಸಿಲುಕಿದ್ದಾರೆ. ಇಂದಿರಾ ಗಾಂಧಿ ಅವರ ಆಡಳಿತದ ಸಂದರ್ಭದಲ್ಲಿ ಬಾಹ್ಯಾಕಾಶ ತಲುಪಿದ್ದ ಪ್ರಥಮ ಭಾರತೀಯ ರಾಕೇಶ್‌ ಶರ್ಮಾ ಅವರನ್ನು ತಪ್ಪಾಗಿ ಬಾಲಿವುಡ್‌ ನಿರ್ಮಾಪಕ ರಾಕೇಶ್‌ ರೋಶನ್‌ ಎಂದು ಮಮತಾ ಸಂಬೋಧಿಸಿದ್ದಾರೆ ಅಲ್ಲದೇ, ರಾಕೇಶ್‌ ಅವರು ಚಂದ್ರನ ಮೇಲೇ ಕಾಲಿಟ್ಟ ಪ್ರಥಮರು ಎಂದಿದ್ದಾರೆ. ಇತ್ತ ರಾಜಸ್ಥಾನ ಕ್ರೀಡಾ ಸಚಿವ ಅಶೋಕ್‌ ಚಂದನಾ, ಚಂದ್ರಯಾನ -3 ಮಾನವ ಸಹಿತ ಬಾಹ್ಯಾಕಾಶ ಯೋಜನೆ ಎಂದು ಭಾವಿಸಿ, ಚಂದ್ರನ ಮೇಲೆ ಕಾಲಿಟ್ಟ ಪ್ರಯಾಣಿಕರಿಗೆ ಅಭಿನಂದನೆ ಎಂದು ಟ್ವೀಟ್‌ ಮಾಡಿ ಪೇಚಿಗೆ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next