Advertisement

ಮೈತ್ರಿ ಚರ್ಚೆ: ಎಚ್ಡಿಕೆ, ವಿಜಯೇಂದ್ರ ದಿಲ್ಲಿಗೆ

01:03 AM Dec 21, 2023 | Team Udayavani |

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೈತ್ರಿಗೆ ನಿರ್ಧರಿಸಿರುವ ಬಿಜೆಪಿ ಮತ್ತು ಜೆಡಿಎಸ್‌, ಟಿಕೆಟ್‌ ಹಂಚಿಕೆ ಮತ್ತು ಮೈತ್ರಿ ವಿಸ್ತರಣೆ ಕುರಿತು ಬಿಜೆಪಿ ವರಿಷ್ಠರ ಜತೆಗೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರತ್ಯೇಕವಾಗಿ ದಿಲ್ಲಿಗೆ ತೆರಳಿದ್ದಾರೆ.

Advertisement

ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರ ಜತೆಗಿನ ಕಾರ್ಯ ಕಾರಿಣಿಯಲ್ಲಿ ಮಾತ್ರ ವಿಜಯೇಂದ್ರ ಭಾಗವಹಿಸಲಿದ್ದಾರೆ. ಸೀಟು ಹಂಚಿಕೆ ಸಂಬಂಧ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೆ ಕುಮಾರಸ್ವಾಮಿ ಮಾತ್ರ ಚರ್ಚೆ ನಡೆಸಲಿದ್ದಾರೆ.

ಸಂಸತ್‌ ಅಧಿವೇಶನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ದಿಲ್ಲಿಯಲ್ಲಿಯೇ ಇದ್ದಾರೆ. ಅವರು ಬಿಜೆಪಿ ವರಿಷ್ಠರನ್ನು ಭೇಟಿಯಾಗುತ್ತಾರೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಮಂಗಳವಾರವಷ್ಟೇ ಸಿಂಗಾಪುರದಿಂದ ಬೆಂಗಳೂರಿಗೆ ಆಗಮಿಸಿರುವ ಕುಮಾರಸ್ವಾಮಿಗೆ ಬಿಜೆಪಿ ವರಿಷ್ಠರು ತುರ್ತು ಬುಲಾವ್‌ ನೀಡಿದ ಹಿನ್ನೆಲೆ ಯಲ್ಲಿ ಅವರು ದಿಲ್ಲಿಗೆ ತೆರಳಿದ್ದಾರೆ. ಈ ಪ್ರಯಾಣವನ್ನು ಗುಟ್ಟಾಗಿಡಲು ಕುಮಾರಸ್ವಾಮಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. “ನಾನು ವೈಯಕ್ತಿಕ ಕಾರಣಕ್ಕಾಗಿ ದಿಲ್ಲಿಗೆ ಹೋಗುತ್ತಿದ್ದೇನೆ. ಸೀಟು ಹಂಚಿಕೆ ಸಂಬಂಧ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುತ್ತಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಸೀಟು ಹಂಚಿಕೆ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಳ್ಳುವುದು ಸೂಕ್ತ ಎಂಬುದು ಜೆಡಿಎಸ್‌ ನಾಯಕರ ನಿಲುವಾಗಿದೆ. ಕೊನೆ ಹಂತದಲ್ಲಿ ಕೊಡು ಕೊಳ್ಳುವಿಕೆಗಿಂತಲೂ ಯಾರಿಗೆ ಎಷ್ಟು ಸ್ಥಾನ ಎಂಬುದು ಈಗಲೇ ಇತ್ಯರ್ಥಗೊಂಡರೆ ಗೊಂದಲವಿಲ್ಲದೆ, ಸಂಘಟನ ಕಾರ್ಯ ನಡೆಸಬಹುದೆಂಬುದು ಜೆಡಿಎಸ್‌ ನಿಲುವಾಗಿದೆ. ಆ ಪಕ್ಷದ ಮೂಲಗಳ ಪ್ರಕಾರ ಹಳೆ ಮೈಸೂರು ಭಾಗದ ಐದು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿಯಬಹುದು. ಅಂತಿಮವಾಗಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆ ಇದೆ.

ಕುಮಾರಸ್ವಾಮಿ ಸ್ಪರ್ಧೆ ?
ಇದೆಲ್ಲದರ ಮಧ್ಯೆ ಕುಮಾರಸ್ವಾಮಿ ಅವರ ಲೋಕಸಭಾ ಚುನಾವಣೆ ಸ್ಪರ್ಧೆ ಬಗೆಗಿನ ವದಂತಿಗೂ ಈ ಭೇಟಿಯಲೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಕುಮಾರಸ್ವಾಮಿಯವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲು ಬಿಜೆಪಿ ವರಿಷ್ಠರು ಆಸಕ್ತರಾಗಿದ್ದಾರೆ. ಹೀಗಾಗಿ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸೂಚನೆ ನೀಡಲಾಗಿದೆ ಎಂಬ ಸುದ್ದಿಯನ್ನು ಜೆಡಿಎಸ್‌ ಪಾಳಯದಿಂದ ಹರಿಬಿಡ ಲಾಗಿದೆ.

Advertisement

ಆದರೆ ನಮ್ಮ ಪಾರಂಪರಿಕ ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬುದು ಬಿಜೆಪಿ ರಾಜ್ಯ ಘಟಕದ ವಾದವಾಗಿದೆ. ಹೀಗಾಗಿ ಸೀಟು ಹಂಚಿಕೆ ಚರ್ಚೆ ನಡೆದರೆ ಬೆಂಗಳೂರು “ಉತ್ತರ’ದ ಕುರಿತು ಎದ್ದಿರುವ “ಪ್ರಶ್ನೆ”ಗಳಿಗೆ ಸ್ಪಷ್ಟತೆ ಸಿಗಲಿದೆ.

ಭಾಗಿಯಿಲ್ಲ
ಸೀಟು ಹಂಚಿಕೆ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ. ಅವರು ಕುಮಾರಸ್ವಾಮಿಯವರ ಜತೆಗೆ ಯಾವುದೇ ಜಂಟಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ಪ್ರಧಾನಿ ಭೇಟಿಗೆ ವಿಜಯೇಂದ್ರ ಸಮಯ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಸೋಮಣ್ಣ ಮೌನಕ್ಕೆ ಶರಣಾಗಿದ್ದೇಕೆ?
ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಡಿಸೆಂಬರ್‌ 19ರ ಬಳಿಕ ದಿಲ್ಲಿಗೆ ಹೋಗುತ್ತೇನೆಂದು ಘೋಷಿಸಿದ್ದರೂ ಅವರಿಗಿನ್ನೂ ವರಿಷ್ಠರು ಸಮಯಾವಕಾಶ ನೀಡಿಲ್ಲ. ಇನ್ನೊಬ್ಬ ಬಂಡಾಯ ನಾಯಕ ಬಸನಗೌಡ ಯತ್ನಾಳ್‌ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದು, ಮುಂದಿನ ವಾರ ವಿಪಕ್ಷ ನಾಯಕ ಆರ್‌.ಅಶೋಕ್‌ ದಿಲ್ಲಿಗೆ ತೆರಳಲಿದ್ದಾರೆ.

ಎಲ್ಲ ರಾಜ್ಯಗಳ ಬಿಜೆಪಿ ನಾಯಕರ ಜತೆಗಿನ ಸಭೆಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋಗುತ್ತಿದ್ದೇನೆ. ಸೀಟು ಹಂಚಿಕೆ ಕುರಿತು ಸಭೆ ನಡೆಯುವ ಬಗ್ಗೆ ನನಗೆ ಮಾಹಿತಿ ಇಲ್ಲ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next