Advertisement

ಕಾಸರಗೋಡಿನ ಹಳೆ ದಾಖಲೆಗಳೆಲ್ಲ ಕನ್ನಡದಲ್ಲೇ ಇದೆ 

06:00 AM May 28, 2018 | |

ಕಾಸರಗೋಡು: ನೀಲೇಶ್ವರದ ವರೆಗಿನ ಬಹುತೇಕ ಶಾಲೆಗಳಲ್ಲಿರುವ ಹಳೆಯ ದಾಖಲೆಗಳೆಲ್ಲ ಕನ್ನಡದಲ್ಲೇ ಇವೆ. ಆದರೆ ಈ ದಾಖಲೆಗಳನ್ನು ಕೇಳಿದಾಗ ಆಯಾಯ ಶಾಲೆಯ ಅಧಿಕಾರಿಗಳು ನೀಡುತ್ತಿಲ್ಲ. ಕಾಸರಗೋಡು ಕನ್ನಡ ನಾಡೆಂಬುದಕ್ಕೆ ಈ ದಾಖಲೆಗಳು ಸಾಕ್ಷಿಗಳಾಗಿದ್ದು, ಇದನ್ನು ಮರೆಮಾಚುವ ಉದ್ದೇಶದಿಂದಲೇ ದಾಖಲೆಗಳನ್ನು ನೀಡುವುದಿಲ್ಲ ಎಂಬುದಾಗಿ ಕಾಸರಗೋಡು ಸರಕಾರಿ ಕಾಲೇಜಿನ   ನಿವೃತ್ತ ಉಪನ್ಯಾಸಕ ಡಾ| ಯು.ಶಂಕನಾರಾಯಣ ಭಟ್‌ ಅವರು ಹೇಳಿದರು.

Advertisement

ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ಐದನೇ ದಿನವಾದ ಆದಿತ್ಯವಾರದ  ಚಳವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿದಂದಿನಿಂದ ಅಂದರೆ 1957ರಿಂದಲೇ ಕನ್ನಡಿಗರ ಹೋರಾಟ ಆರಂಭಗೊಳ್ಳುತ್ತದೆ. ಈ ಹೋರಾಟ ಇನ್ನೂ ನಿಂತಿಲ್ಲ. ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ದಿನಾ ಹೋರಾಟ ಮಾಡ
ಬೇಕಾದ ಅನಿವಾರ್ಯತೆ ಕಾಸರಗೋಡಿನಲ್ಲಿದೆ. ಹಿಂದಿನ ಜಿ. ಪಂಚಾಯತ್‌ ಬಿಡುಗಡೆಗೊಳಿಸಿದ ಕಾಸರಗೋಡಿನ ಸಮಾಜ ಚರಿತ್ರೆ ಎಂಬ ಪುಸ್ತಕದಲ್ಲಿ ಎಲ್ಲೂ ಕನ್ನಡ ಹೋರಾಟದ ಬಗ್ಗೆ ಮಾಹಿತಿಗಳೇ ಸಿಗುತ್ತಿಲ್ಲ. ಈ ಗ್ರಂಥದಲ್ಲಿ
ರಾಜಕೀಯ ಹೋರಾಟಗಳೇ ತುಂಬಿಕೊಂಡಿವೆ. ಕನ್ನಡಕ್ಕೆ ಸಂಬಂಧಿಸಿದ ಬಹುತೇಕ ಮಾಹಿತಿಗಳನ್ನು ಮರೆಮಾಚಲಾಗಿದೆ. ಇದನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂದ ಅವರು ಈ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೆ ಸಂಬಂಧಪಟ್ಟ ಕೆಲವು ಪಂಚಾಯತ್‌ ಕಚೇರಿಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಕೆಲವು ಲೈಬ್ರೆರಿಗಳಲ್ಲಿ ಕಾಣಬಹುದು. ಈ ಗ್ರಂಥ ಕನ್ನಡಿಗರ ಕೈಗೆ ಲಭಿಸದಂತೆ ಕಪಿಮುಷ್ಠಿಯಲ್ಲಿಡಲಾಗಿದೆ.

ಕಾಸರಗೋಡು ಜಿಲ್ಲೆಯ ನೀಲೇಶ್ವರದ ವರೆಗೆ ಪಟೇಲರಾಗಿದ್ದವರೆಲ್ಲರೂ ಕನ್ನಡಿಗರೆ. ಅಂದರೆ ಅಂದು ಅಧಿಕಾರಗಳೆಲ್ಲ ಕನ್ನಡಿಗರ ಕೈಯಲ್ಲೆ ಇತ್ತು. ಆದರೆ ಭಾಷಾವಾರು ಪ್ರಾಂತ್ಯ ರಚನೆಯ ಬಳಿಕ ಕನ್ನಡಿಗರು ಅಧಿಕಾರಗಳೆಲ್ಲವನ್ನು ಕಳೆದುಕೊಂಡಿದ್ದಾರೆ. ಇದೀಗ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಇದರ ವಿರುದ್ಧ ತೀವ್ರ ಹೋರಾಟ ಅನಿವಾರ್ಯವಾಗಿದ್ದು, ಒಗ್ಗಟ್ಟಿನ ಹೋರಾಟಕ್ಕೆ ಕನ್ನಡಿಗರೆಲ್ಲ ಮುಂದಾಗೋಣ ಎಂದು ಅವರು ಹೇಳಿದರು.

ಕನ್ನಡ ಸಮಾಜವನ್ನು ಅಲುಗಾಡಿಸಲು ಹೊರಟಿದೆ 
ಮಲಯಾಳ ಕಲಿಕೆ ಕಡ್ಡಾಯ ಆದೇಶದ ಮೂಲಕ ಕನ್ನಡ ಸಮಾಜವನ್ನು ಅಲುಗಾಡಿಸಲು ಕೇರಳ ಸರಕಾರ ಹೊರಟಿದೆ. ಸ್ಲೋ ಪಾಯಿಸನ್‌ ನೀಡುವ ಮೂಲಕ ಕನ್ನಡಿಗರನ್ನು ಹತ್ತಿಕ್ಕುವ ಕನಸು ಕಾಣುತ್ತಿದೆ. ಇದರ ವಿರುದ್ಧ ಕನ್ನಡಿಗರು ಇನ್ನಷ್ಟು ತೀವ್ರ ತರಹದ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಅರವಿಂದ ಅಲೆವೂರಾಯ ಅವರು ಹೇಳಿದರು.

Advertisement

ಕನ್ನಡ ಅಭಿಮಾನ ಉಳಿಸಿಕೊಳ್ಳಬೇಕು  
ಕಾಸರಗೋಡಿನ ಕನ್ನಡಿಗರು ಇಂದೂ ಹೋರಾಟದ ಕೆಚ್ಚನ್ನು ಬಿಟ್ಟುಕೊಡದಿರುವುದು ಶ್ಲಾಘನೀಯ. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಹೋರಾಟ ಅನಿವಾರ್ಯ ಎಂಬಂತಹ ಪರಿಸ್ಥಿತಿ ಇಲ್ಲಿದ್ದು, ಇದಕ್ಕಾಗಿ ಕನ್ನಡಿಗರೆಲ್ಲ ಒಂದೇ ಛತ್ರದಡಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದು ಪೊಲೀಸ್‌ ಗುಂಡಿಗೆ ಬಲಿಯಾದ ಕನ್ನಡದ ಕಂದ ಸುಧಾಕರ ಅಗ್ಗಿತ್ತಾಯ ಅವರ ಸಹೋದರ ಸತೀಶ್ಚಂದ್ರ ಅಗ್ಗಿತ್ತಾಯ ಅವರು ಹೇಳಿದರು. ತನ್ನ ವಿದ್ಯಾರ್ಥಿ ದೆಸೆಯಲ್ಲಿ ನಡೆದ ಕನ್ನಡ ಹೋರಾಟದ ಚಿತ್ರಣವನ್ನು ಮುಂದಿರಿಸಿದರು.

ಕಾಸರಗೋಡಿನ ಕನ್ನಡಿಗರಿಗೆ ಸಲಾಂ  
ಕಳೆದ ಆರು ದಶಕಗಳಿಂದ ಭಾಷೆ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಕಾಸರಗೋಡಿನ ಕನ್ನಡಾಭಿಮಾನಿಗಳಿಗೆ, ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ ಸಲಾಂ ಎಂದು ಬಿಜಾಪುರ ಜಿಲ್ಲಾ ಯುವ ಬರಹಗಾರರ ಸಂಘದ ಸೋಮಶೇಖರ ಹಿಪ್ಪರಗಿ ಹೇಳಿದರು.

ಅನ್ಯಾಯವಾಗಿ ಕಾಸರಗೋಡು ಕೇರಳಕ್ಕೆ ಸೇರಿದಂದಿನಿಂದ ಇಲ್ಲಿಯವರೆಗೆ ಹೋರಾಟದ ಕೆಚ್ಚನ್ನು ಬಿಟ್ಟು ಕೊಡದ ಕಾಸರಗೋಡಿನ ಕನ್ನಡಿಗರೆಲ್ಲರೂ ನಮಗೆ ಮಾದರಿಯಾಗಿದ್ದಾರೆ. ಇಲ್ಲಿನ ಜನರಲ್ಲಿ ಕನ್ನಡದ ಬಗೆಗೆ ಇರುವ ಪ್ರೀತಿ  ಕನ್ನಡಿಗರಿಗೆ ಆದರ್ಶವಾಗಿದೆ. ಕೆಚ್ಚೆದೆಯ  ಕೂಗಿಗೆ ಯಶಸ್ಸು ಸಿಗುವುದರಲ್ಲಿ ಸಂಶಯವಿಲ್ಲ ಎಂದರು.

ಡಾ| ಅನಂತ ಕಾಮತ್‌, ಜಲಜಾಕ್ಷಿ ಟೀಚರ್‌, ಸೀತಾರಾಮ ಕುಂಜತ್ತಾಯ, ಪ್ರೊ| ಸಿ.ಎಚ್‌.ರಾಮ ಭಟ್‌, ಸುಮಂಗಲಾ ಅಗ್ಗಿತ್ತಾಯ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್‌ ಭಟ್‌ ಎಡನೀರು, ಶಂಕರ ಕೆ. ಮಾತನಾಡಿದರು.
ಸರಣಿ ಧರಣಿ ಸಪ್ತಾಹದಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು. ಪದ್ಮಾವತಿಯಮ್ಮ, ಮಂಜುನಾಥ ಕಾಮತ್‌, ವಾಮನ ಆಚಾರ್ಯ ಬೋವಿಕ್ಕಾನ, ಶಂಕರನಾರಾಯಣ ಭಟ್‌ ಕಿದೂರು, ಗಣಪತಿ ಕೋಟೆಕಣಿ, ಮನಾಫ್‌ ನುಳ್ಳಿಪ್ಪಾಡಿ, ಬಿ.ರಾಮಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಎಂ.ವಿ.ಮಹಾಲಿಂಗೇಶ್ವರ ಭಟ್‌ ಪ್ರಾಸ್ತಾವಿಕ ಮಾತನಾಡಿದರು. ವಾಮನ್‌ ರಾವ್‌ ಬೇಕಲ್‌ ಸ್ವಾಗತಿಸಿದರು. ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ಧರಣಿ :
ಮೇ 28 ರಂದು 6ನೇ ದಿನದ ಸರಣಿ ಧರಣಿ ಸತ್ಯಾಗ್ರಹವನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳೇ ನಡೆಸಿಕೊಡಲಿದ್ದಾರೆ. ಕಾಸರಗೋಡುಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಂಘಟನೆಯಾದ ಸ್ನೇಹರಂಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಗಿಳಿವಿಂಡು ಸಂಘಟನೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸರಣಿ ಧರಣಿ ನಡೆಯುವುದು.

ಹೋರಾಟಕ್ಕೆ ಸಂಪೂರ್ಣ ಬೆಂಬಲ 
ನಾಲ್ಕು ಲಕ್ಷಕ್ಕೂ ಅಧಿಕ ಕನ್ನಡಿಗರಿಗೆ ಆತಂಕದ ಕ್ಷಣಗಳು ಎದುರಾಗಿವೆೆ. ಕೇರಳ ಸರಕಾರ ಮಲಯಾಳ ಹೇರಿಕೆಯ ಮೂಲಕ ಕನ್ನಡಿಗರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಅದರ ವಿರುದ್ಧ ನಡೆಯುತ್ತಿರುವ ಕನ್ನಡಿಗರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌ ಅವರು ಹೇಳಿದರು. ಜೂನ್‌ 4 ರಿಂದ ವಿಧಾನಸಭಾ ಅಧಿವೇಶನ ಆರಂಭವಾಗುತ್ತದೆ. ಈ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವಂತೆ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅವರ ಗಮನ ಹರಿಸುತ್ತೇನೆ. ಐಕ್ಯರಂಗದ ಸಂಸದರ ಗಮನಕ್ಕೂ ತರುವುದಾಗಿ ಭರವಸೆ ನೀಡಿದರು.

ವೋಟ್‌ ಅಲ್ಲ,ಭಾಷೆ ಮುಖ್ಯ 
ಸಂವಿಧಾನಬದ್ಧ ಹಕ್ಕಿಗಾಗಿ, ಸವಲತ್ತುಗಳಿಗಾಗಿ ಆರು ದಶಕಗಳಿಂದ ಕಾಸರಗೋಡಿನ ಕನ್ನಡಿಗರು ನಿರಂತರ ಹೋರಾಟ ನಡಸುತ್ತಲೇ ಬಂದಿದ್ದಾರೆ. ಭಾಷಾವಾರು ಪ್ರಾಂತ್ಯ ವಿಭಜನೆಯಿಂದ ಕನ್ನಡಿಗರಿಗೆ ಅನ್ಯಾಯವಾಗಿದೆ. ಇದೀಗ ಮಲಯಾಳ ಕಲಿಕೆ ಕಡ್ಡಾಯ ಎಂಬ ಅಸ್ತ್ರವನ್ನು ಸರಕಾರ ಪ್ರಯೋಗಿಸಿದೆ. ಇದರ ವಿರುದ್ಧ ಹೋರಾಟ ನಡೆಯುತ್ತಿದ್ದು, ಇದು ಇನ್ನಷ್ಟು ತೀವ್ರಗೊಳ್ಳಬೇಕಾಗಿದೆ. ನಾನು ರಾಜಕಾರಣಿಯಾಗಿದ್ದರೂ ನನಗೆ ವೋಟ್‌ಗಿಂತ ಭಾಷೆ ಮುಖ್ಯ, ನನ್ನ ಪ್ರಥಮ ಆಯ್ಕೆ ಕನ್ನಡ. ಆ ಬಳಿಕವೇ ಉಳಿದವು. ಈ ಹೋರಾಟವನ್ನು ಸಂಪೂರ್ಣ ಬೆಂಬಲದೊಂದಿಗೆ ತೀವ್ರ ಗೊಳಿಸಬೇಕಾಗಿದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next