Advertisement

ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ

07:41 PM Aug 05, 2021 | Team Udayavani |

ಆಲಮಟ್ಟಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಶಾಸ್ತ್ರಿ ಜಲಾಶಯ ಭರ್ತಿಯಾಗಲು 0.78 ಮೀಟರ್‌ ಮಾತ್ರ ಬಾಕಿಯಿದ್ದು ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.

Advertisement

ತೌಕ್ತೆ ಚಂಡಮಾರುತದ ಪರಿಣಾಮ ವಾಡಿಕೆಗಿಂತಲೂ ಮುಂಚಿತವಾಗಿಯೇ ಮೇ 22ರಿಂದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಒಳಹರಿವು ಆರಂಭಗೊಂಡಿದ್ದು, ಜುಲೈ ತಿಂಗಳಿನ ಕೊನೆ ವಾರದಲ್ಲಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದು ಬಂತು. ಪರಿಣಾಮವಾಗಿ ಜಲಾಶಯದ ಎಲ್ಲ 26 ಗೇಟುಗಳು, ಜಲಾಶಯದ ಬಲ ಬದಿಯಲ್ಲಿರುವ ಕೆಪಿಸಿಎಲ್‌ನ ಆಳಮಟ್ಟಿ ಜಲವಿದ್ಯುತ್‌ ಉತ್ಪಾದನಾ ಘಟಕ, ಜಲಾಶಯ ವ್ಯಾಪ್ತಿಯ ಕಾಲುವೆ ಹಾಗೂ ವಿವಿಧ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಲಕ್ಷಾಂತರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ.

ಮಳೆಗಾಲದ ಆರಂಭದ ಜೂನ್‌ ತಿಂಗಳಿನಿಂದ ಜುಲೈ 31ರವರೆಗೆ ಸುಮಾರು 320 ಟಿಎಂಸಿ ಅಡಿ ನೀರನ್ನು ಹೊರಬಿಡಲಾಗಿದೆ. ಜಲಾಶಯಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಹಾಗೂ ಅದರ ಉಪ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಜಲಾಶಯಕ್ಕೆ ಹರಿದು ಬರುವ ಪ್ರಮಾಣ ವ್ಯಾಪಕವಾಗಿದ್ದು, ಜಲಾಶಯದ ಹಿನ್ನೀರು ಪ್ರದೇಶ ಮತ್ತು ಜಲಾಶಯದ ಮುಂಭಾಗದಲ್ಲಿ ಹಾನಿಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಸರ್ಕಾರಗಳ ಹಿರಿಯ ಅಧಿಕಾರಿಗಳ ಸಮನ್ವಯತೆಯ ಪರಿಣಾಮ ಕೃಷ್ಣಾಭಾಗ್ಯ ಜಲ ನಿಗಮದಿಂದ ನೀರನ್ನು ಹೊರಬಿಡಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಪ್ರಮಾಣ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಮುಂಗಾರು, ಹಿಂಗಾರಿನ ರೈತರ ಬೆಳೆ, ಕುಡಿಯುವ ನೀರಿನ ವಿವಿಧ ಘಟಕಗಳಿಗಾಗಿ, ಕೂಡಗಿಯಲ್ಲಿರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ಘಟಕಕ್ಕೆ ಹೀಗೆ ವಿವಿಧ ಮೂಲಗಳಿಗೆ ನೀರು ಪೂರೈಸಲು ಜಲಾಶಯದಲ್ಲಿ ನೀರು ಸಂಗ್ರಹಿಸಲಾಗುತ್ತಿದೆ.

ಜಲಾಶಯದ ಜಲವಿದ್ಯುತ್‌ ಘಟಕ ಮತ್ತು ಗೇಟುಗಳ ಮೂಲಕ ನೀರು ಹೊರಬಿಡದಿದ್ದರೆ ಕಲೆ ಗಂಟೆಗಳಲ್ಲಿಯೇ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. 519.60 ಮೀ. ಎತ್ತರವಾಗಿ 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ ಸಂಜೆ ವೇಳೆ 518.82 ಮೀ. ಎತ್ತರದಲ್ಲಿ 110.067 ಟಿಎಂಸಿ ಅಡಿ ನೀರು ಸಂಗ್ರಹವಾಗಿ ಜಲಾಶಯಕ್ಕೆ 1,93,333 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನ 517.52 ಮೀ. ಎತ್ತರದಲ್ಲಿ 91.13 ಟಿಎಂಸಿ ಅಡಿ ನೀರು ಸಂಗ್ರಹವಾಗಿ 10,000 ಕ್ಯೂಸೆಕ್‌ ನೀರು ಒಳಹರಿವಿತ್ತು. ಇದರಿಂದ ವಾಡಿಕೆಗಿಂತಲೂ ಮುಂಚಿತವಾಗಿ ಜಲಾಶಯ ಭರ್ತಿಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next