Advertisement

ಕೆಂಜಾರು ಕಣಿವೆಯಲ್ಲಿ ಕಮರಿದ ಕನಸುಗಳ ನೆನೆದು

12:30 AM May 22, 2018 | |

ತುಂಡು ಬ್ರೆಡ್ಡನ್ನು ಬೇರೆಯವರಿಂದ ಬಾಯಿಗೆ ಹಾಕಿಸಿಕೊಳ್ಳುತ್ತಿದ್ದ ಕಾರ್ಯಾಚರಣೆಯ ಮಂದಿಯ ಮುಖ ಈಗಲೂ ಕಣ್ಣಿಗೆ ಕಟ್ಟುತ್ತದೆ. ಅರೆಬೆಂದ ದೇಹಗಳ ಸಾಗಿಸುವುದನ್ನು ನೋಡುವುದೇ ಅಸಹನೀಯವಾಗಿತ್ತು. ಆದರೆ ಕಾರ್ಯಾಚರಣೆಯಲ್ಲಿದ್ದವರಿಗೆ ಮುಸ್ಸಂಜೆಯಲ್ಲಿ ಮತ್ತೂಂದು ಅಚ್ಚರಿ. ನೆಲದಲ್ಲಿ ಹೂತುಹೋಗಿದ್ದ ರೆಕ್ಕೆಯ ಕೆಳಭಾಗದಲ್ಲಿ ಮತ್ತೆ ಮೂರುಮಂದಿ ಬದುಕಿ ಉಳಿದಿದ್ದರು.

Advertisement

ಸುಲಭವಾಗಿ ಮರೆಯುವ ಘಟನೆ ಆಗಿದ್ದರೆ ಮರೆಯ ಬಹುದಿತ್ತು, ಆದರೆ ಹೇಗೆ ಮರೆಯಲು ಸಾಧ್ಯ? ಕೆಂಜಾರು ಕಣಿವೆಯಲ್ಲಿ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ದಟ್ಟವಾದ ಹೊಗೆ, ಧಗಧಗಿಸುವ ಬೆಂಕಿಯ ಜ್ವಾಲೆ, ಬಚಾವೋ… ಬಚಾವೋ ಎನ್ನುವ ಆಕ್ರಂದನ, ಮತ್ತೆ ಮತ್ತೆ ಸಂಭವಿಸಿದ ಸ್ಫೋಟವನ್ನು. ಮುಗಿಲು ಸುರಿಸಿದ ಹನಿಮಳೆ, ಅಗ್ನಿಶಾಮಕ ದಳಗಳ ಕಾರ್ಯಾ ಚರಣೆ, ಸಾಗರದಂತೆ ಹರಿದು ಬಂದ ನೂರಾರು ಸಾರ್ವಜನಿಕರ ದಂಡು ಕಣಿವೆಗೆ ಲಗ್ಗೆಯಿಟ್ಟಿತು. ಆಗ ಕೆಂಜಾರು ಕಣಿವೆಯಲ್ಲಿ ಮೌನ ಆವರಿಸಿಕೊಂಡಿತ್ತು. ಆ ಕಣಿವೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ದೂರದ ದುಬೈನಿಂದ 166 ಮಂದಿಯನ್ನು ಹೊತ್ತುತಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ.

ಮೇ 22, 2010 ಮುಂಜಾನೆ 6.40ರ ಹೊತ್ತಿಗೆ ಮಂಗಳೂರು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿಬಿಟ್ಟಿತು. ರಾಷ್ಟ್ರ ಮಟ್ಟದ ಟಿ.ವಿ ಚಾನೆಲ್‌ಗ‌ಳು ಬ್ರೇಕಿಂಗ್‌ ನ್ಯೂಸ್‌ ಸಿಡಿಸಿದವು. ಅಂತರ್ಜಾಲದಲ್ಲಿ ಕೆಂಜಾರು ಕಣಿವೆಯ ದೃಶ್ಯಗಳು ಮೂಡಿಬಂದವು. ಇಷ್ಟಾದರೂ ಮಂಗಳೂರು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು ದೂರದ ದುಬೈನಿಂದ ಕನಸು, ಧನ, ಕನಕ, ಎದೆ ತುಂಬಿಸಿ ಕೊಡುವಷ್ಟು ಬತ್ತದ ಪ್ರೀತಿಯ ಮೂಟೆ ಹೊತ್ತು ಬರುವವರಿಗಾಗಿ. ವಿಮಾನ ಆಗಸದಿಂದ ಹಾರಿಕೊಂಡು ಕೆಳಮುಖವಾಗುತ್ತಿದ್ದುದನ್ನು ಕಂಡಿದ್ದರು. ಬರಬಹುದು ಆ ತುದಿಗೆ ಹೋಗಿ ಈ ತುದಿಗೆ ವಿಮಾನ, ಅದರೊಳಗಿರುವ ನಮ್ಮವರು ಹೀಗೆ ಮನಸ್ಸಿನೊಳಗೆ ಅದಮ್ಯ ಸಂತಸದ ಹೊನಲು. ಮತ್ತೂ ಬರಲಿಲ್ಲ ವಿಮಾನ, ಆದರೆ ವಿಮಾನ ನಿಲ್ದಾಣದ ಸಿಬ್ಬಂದಿಗಳು, ಅವರ ವಾಹನಗಳು ತವಕ ಪಡುತ್ತಿದ್ದರು, ಸೈರನ್‌ ಮೊಳಗುತ್ತಿತ್ತು. ಸ್ವಾಗತಿಸಲು ಬಂದಿದ್ದವರ ಮೊಬೈಲ್‌ಗ‌ಳು ಕಿರುಚ ಲಾರಂಭಿಸಿದವು. ಬ್ರೇಕಿಂಗ್‌ ನ್ಯೂಸ್‌ ಹೆಡ್‌ಲೈನ್‌ಗಳು ಎಸ್‌ಎಂಎಸ್‌ ಸಂದೇಶಗಳಾಗಿ ಹರಿದಾಡಿದವು, ಆ ಕ್ಷಣ ವಿಮಾನ ನಿಲ್ದಾಣದಲ್ಲಿ ಚೀತ್ಕಾರ, ಅಳುವಿನೊಂದಿಗೆ ಕೆಂಜಾರಿನ ಕಣಿವೆಯತ್ತ ವಾಹನಗಳಲ್ಲಿ ಬಂಧುಗಳ ದಂಡೇ ಬಂತು. ಹೀಗೆಂದು ಬಾಡಿಗೆ ಕಾರಿನ ಚಾಲಕ ಹೇಳುವಾಗ ಅವನ ಬಂಧುಗಳಾರು ಆ ವಿಮಾನ ದಲ್ಲಿರದಿದ್ದರೂ ಅವನು ಆ ಹೊತ್ತಿಗೆ ತನಗೇ ಗೊತ್ತಿಲ್ಲದಂತೆಯೇ ಸಂತ್ರಸ್ತ ಕುಟುಂಬದರ ಸದಸ್ಯನಾಗಿಬಿಟ್ಟಿದ್ದ.

ಇತ್ತ ಕಡಿದಾದ ಕಣಿವೆಗೆ ದಾರಿಯಿಲ್ಲ, ಗಿಡಗಂಟಿ, ಮುಳ್ಳಿನ ಪೊದೆಯನ್ನು ಮೆಟ್ಟಿಕೊಂಡೇ ಜನರು ನುಗ್ಗಿದರು. ಜೆಸಿಬಿ ಯಂತ್ರ ಗಳು ಬಂದು ಮರಗಳನ್ನು ಉರುಳಿಸಿದವು, ನೆಲ ಬಗೆದು ಇಳಿ ಜಾರಿನಲ್ಲಿ ಕಾಲುದಾರಿ ಮಾಡಿದವು. ಎಲ್ಲಿ ನೋಡಿದರೂ ಜನ ಜಾತ್ರೆ. ಹೊಗೆಯಾಡುತ್ತಿರುವ ವಿಮಾನದ ಹತ್ತಿರಕ್ಕೆ ಹೋಗಲು ಹೆದರಿಕೆ ದೂರ ನಿಂತವರಿಗೆ, ಆದರೆ ಸಾಹಸಿಗರು ಉರಿದು ಉಳಿದ ವಿಮಾನದ ಅವಶೇಷಗಳನ್ನು ಜಾಲಾಡಿದರು. ನರಪಿಳ್ಳೆಯೂ ಕಣ್ಣಿಗೆ ಕಾಣಿಸುತ್ತಿಲ್ಲ. ಅವಶೇಷಗಳನ್ನು ಸರಿಸಿದಾಗ ಕಂಡದ್ದು ಮರ ಅರ್ಧ ಉರಿದು ಉಳಿದ ಕೊರಡುಗಳಂತೆ ಜೀವಗಳು.

ಸ್ಟ್ರೆಚರ್‌ಗಳು ಒಂದೊಂದಾಗಿ ಕಡಿದಾದ ಕಣಿವೆಯಿಂದ ಮೇಲಕ್ಕೆ ಬರುತ್ತಿದ್ದಂತೆಯೇ ನೆರೆದವರು ತಮ್ಮವರು ಬದುಕಿರಲೆಂದು ಹಾರೈಸುತ್ತಿದ್ದರು ರೋದನದ ನಡುವೆಯೂ. ಆದರೆ ಆ ಸ್ಟ್ರೆಚರ್‌ನಲ್ಲಿದ್ದದ್ದು ಗಾಯಾಳುವಲ್ಲ ಅಥವಾ ಬದುಕುಳಿದ ಜೀವವೂ ಅಲ್ಲ. ಕರಟಿಹೋದ ಕರಕಲು ದೇಹ. ಯಾರದಿರಬಹುದು ಎನ್ನುವುದಷ್ಟೇ ಆ ಕ್ಷಣದ ಕುತೂಹಲ. ಸುಳ್ಯದ ನೆಟ್ಟಣ ಪರಿಸರದ ಕಾಡಿಗೆ ಬೆಂಕಿ ಬಿದ್ದಿತ್ತು 1985- 86ರಲ್ಲಿ, ಭಾರೀ ಕಾಡ್ಗಿಚ್ಚು ಎನ್ನುವ ಸುದ್ದಿಯಾಯಿತು. ಪತ್ರಕರ್ತ ನಾಗಿ ನೆಟ್ಟಣದ ಕಾಡಿನೊಳಗೆ ಸುತ್ತಾಡಿದಾಗ ಮರಗಳನ್ನು ಕಡಿದು ಕುತ್ತಿಗಳೂ ಗೊತ್ತಾಗಬಾರದೆಂದು ಕಾಡುಗಳ್ಳರು ಬೆಂಕಿ ಹಚ್ಚಿದ್ದರು. ಆದರೂ ಆ ದಟ್ಟಡವಿಯಲ್ಲಿ ಉರಿದು ಉಳಿದ ಕೊರಡುಗಳಿದ್ದವು ಇದ್ದಿಲಿನಂತೆ. ಗಂಧದ ಮರವೇ, ಸಾಗು ವಾನಿಯೇ, ಹೆಬ್ಬಲಸೇ ಎನ್ನುವುದನ್ನು ಗುರುತಿಸಲೂ ಅಸಾಧ್ಯ ವಾಗಿತ್ತು. ಅಂದು ಕಂಡ ನೆಟ್ಟಣದ ಕಾಡಿನ ಕೊರಡುಗಳಂತೆ ದುರಂತಕ್ಕೀಡಾದ ವಿಮಾನದಲ್ಲಿದ್ದವರ ದೇಹಗಳು ಕಂಡವು. ಅದು ಹೆಣ್ಣೇ ಅಥವಾ ಗಂಡೇ ಎನ್ನುವುದೂ ಕೂಡಾ ಗೊತ್ತಾಗುತ್ತಿರಲಿಲ್ಲ ಅಂದಮೇಲೆ ಊಹೆಮಾಡಿಕೊಳ್ಳಿ ಹೇಗೆ ಬೇಕಾದರೂ.

Advertisement

ಆ್ಯಂಬುಲೆನ್ಸ್‌ಗಳು ದೇಹಗಳನ್ನು ತುಂಬಿಸಿ ಕೊಳ್ಳುವಾಗ ಅಲ್ಲಿ ನೆರೆದಿದ್ದವರ ಕಣ್ಣುಗಳು ಬದುಕಿರುವವರಿಗಾಗಿ ತಡಕಾಡುತ್ತಿದ್ದವು, ಹಾಗೆ ಬದುಕಿದವರಲ್ಲಿ ನಮ್ಮವರಿರಲಿ ಎನ್ನುವ ಆಸೆ, ಆದರೆ ಕಣಿವೆಯಿಂದ ಮೇಲಕ್ಕೆ ಬರುತ್ತಿದ್ದುದು ಸುಟ್ಟು ಹೋದ ದೇಹಗಳು ಮಾತ್ರ. ಬದುಕಿನಲ್ಲಿ ಇದಕ್ಕಿಂತ ಭಯಾನಕವಾದ ದೃಶ್ಯಗಳನ್ನು ಕಾಣಲು ಸಾಧ್ಯವೇ ಇಲ್ಲ ಅನ್ನಿಸಿತು ಆ ಕರಕಲು ದೇಹಗಳನ್ನು ಕಂಡಾಗ. ಅದು ಮಗುವಿನ ದೇಹವೋ, ಇಳಿವಯಸ್ಸಿನ ಗಂಡಸೋ ಅಥವಾ ಹೆಂಗಸೋ? ಒಂದೂ ಗೊತ್ತಾಗುತ್ತಿರಲಿಲ್ಲ ಆ ಸಂದರ್ಭ ದಲ್ಲಿ. ರುಂಡದ ಭಾಗವೇ ಇಲ್ಲ, ಕೆಲವಕ್ಕೆ ಒಂದೇ ಕಾಲು, ಕಾಲು ಬೇರೆ-ಕೈ ಬೇರೆ ಅದು ಆ ದೇಹದ್ದೇ ಕಾಲು-ಕೈ ಇರಬಹುದೇ ಸಂಶಯ ಮಾತ್ರ, ಉತ್ತರಕ್ಕೆ ಯಾರನ್ನು ಕೇಳಬೇಕು?.

ವಿಮಾನ ದುಬೈನಿಂದ ಹಾರುತ್ತ ಮಂಗಳೂರು ವಿಮಾನ ನಿಲ್ದಾಣ ತಲಪುತ್ತಿದೆ ಎನ್ನುವಾಗ “ಪ್ರಯಾಣಿಕರ ಗಮನಕ್ಕೆ-ಏರ್‌ ಇಂಡಿಯಾ ಎಕ್ಸಪ್ರಸ್‌ ಪ್ರಯಾಣ ಸುಖಕರವಾಗಿತ್ತು. ಕೆಲವೇ ಕ್ಷಣಗಳಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ, ಎಲ್ಲರೂ ನಿಮ್ಮ ಸೀಟ್‌ ಬೆಲ್ಟ್‌ಗಳನ್ನು ಕಟ್ಟಿಕೊಳ್ಳಿ’ ಎನ್ನುವ ಸಂದೇಶವನ್ನು ಪ್ರಯಾಣಿಕರಿಗೆ ಕೊಟ್ಟಿದ್ದಾರೆ. ಆಗ ಎಲ್ಲರೂ ಸೀಟ್‌ ಬೆಲ್ಟ್ ಕಟ್ಟಿಕೊಂಡಿದ್ದಾರೆ. ಆದ್ದರಿಂದಲೇ ವಿಮಾನಗಳ ಅವಶೇಷಗಳಿಂದ ಹೊರತೆಗೆಯಲಾದ ಕರಕಲು ದೇಹಗಳು ಸೀಟ್‌ ಬೆಲ್ಟ್ ಕಟ್ಟಿಕೊಂಡು ಕುಳಿತಂಥ ಸ್ಥಿತಿಯಲ್ಲಿದ್ದವು. ಕುಳಿತಲ್ಲೇ ಉರಿದು ಹೋಗಿದ್ದ ದೇಹಗಳನ್ನು ಸೀಟುಗಳಿಂದ ಬಿಡಿಸಿ ತೆಗೆಯುವುದೇ ದೊಡ್ಡ ಸಾಹಸವಾಗಿತ್ತು, ಅವಸರ ಮಾಡಿ ಎಳೆದರೆ ಉಳಿದ ದೇಹದ ಭಾಗಗಳೂ ಬಿಡಿ ಬಿಡಿಯಾಗುತ್ತಿದ್ದವು.

ಈ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಅಚ್ಚರಿಕರ ಸುದ್ದಿ ಗಳೂ ಬರತೊಡಗಿದವು. ವಿಮಾನ ಅವಘಡಕ್ಕೀಡಾದಾಗ ಕೆಲವರು ವಿಮಾನದಿಂದ ಹಾರಿ ಬದುಕುಳಿದಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲು ಮುರಿದುಕೊಂಡಿದೆಯಂತೆ, ಸುಟ್ಟ ಗಾಯಗಳಾಗಿವೆಯಂತೆ. ಯಾರಿರಬಹುದು ಕುತೂಹಲ, ಆಸ್ಪತ್ರೆಗಳಿಗೆ ದೌಡು.  ನಿಜ ಐದು ಮಂದಿ ಬದುಕಿ ಉಳಿದಿದ್ದರು. ಸುಟ್ಟ ಗಾಯಗಳಾ ಗಿಳಿದ್ದವು. ಮೂಳೆಮುರಿತವೂ ಇತ್ತು. ಗಾಯಾಳುಗಳಿಗೆ ಚಿಕಿತ್ಸೆ ಯಾಗುತ್ತಿತ್ತು. ಬದುಕಿ ಉಳಿದವರ ಬಂಧುಗಳ ಮುಖದಲ್ಲಿ ಧನ್ಯತೆಯಿತ್ತು. ಧನಕನಕ ಇಲ್ಲದಿದ್ದರೂ ಪರವಾಗಿಲ್ಲ ಬದುಕಿ ಉಳಿದರಲ್ಲಾ ಅದೇ ಸಾಕು ಎನ್ನುವ ಸಂತೃಪ್ತಿಯ ಮಾತುಗಳೂ ಕೇಳಿಸಿದವು.

ಮತ್ತೆ ಕೆಂಜಾರಿನ ಕಣಿವೆಯತ್ತ ಬಂದಾಗ ಇಳಿಹೊತ್ತು. ಜನಜಾತ್ರೆಯಲ್ಲಿ ಅಳುವವರು, ಗೋಳಾಡುವವರು, ಮೈಯೆಲ್ಲಾ ಕೆಸರು ಮಾಡಿಕೊಂಡು ದೇಹಗಳನ್ನು ಸಾಗಿಸುವುದರಲ್ಲಿ ನಿರತರಾಗಿದ್ದರು. ತುಂಡು ಬ್ರೆಡ್ಡನ್ನು ಬೇರೆಯವರಿಂದ ಬಾಯಿಗೆ ಹಾಕಿಸಿಕೊಳ್ಳುತ್ತಿದ್ದ ಕಾರ್ಯಾಚರಣೆಯ ಮಂದಿಯ ಮುಖ ಈಗಲೂ ಕಣ್ಣಿಗೆ ಕಟ್ಟುತ್ತದೆ. ದುರ್ನಾತ ಬೀರುವ ಅರೆಬೆಂದ ದೇಹಗಳನ್ನು ಸಾಗಿಸುವುದನ್ನು ದೂರದಲ್ಲಿ ನಿಂತು ನೋಡುವುದೇ ಅಸಹನೀಯವಾಗಿತ್ತು. ಆದರೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ ಧರಿಸಿ ಕಾರ್ಯಾಚರಣೆಯಲ್ಲಿದ್ದವರಿಗೆ ಮುಸ್ಸಂಜೆಯಲ್ಲಿ ಮತ್ತೂಂದು ಅಚ್ಚರಿ. ತುಂಡಾಗಿ ಸಿಡಿದು ನೆಲದಲ್ಲಿ ಹೂತು ಹೋಗಿದ್ದ ರೆಕ್ಕೆಯ ಕೆಳಭಾಗದಲ್ಲಿ ಮತ್ತೆ ಮೂರುಮಂದಿ ಬದುಕಿ ಉಳಿದಿದ್ದರು. ಅವರ ಧ್ವನಿ ಕ್ಷೀಣಿಸಿತ್ತು. ಮೇಲಕ್ಕೆ ತಂದು ಪ್ರಥಮ ಚಿಕಿತ್ಸೆ ಕೊಡುತ್ತಲೇ ಆ್ಯಂಬುಲೆನ್ಸ್‌ ಸೈರನ್‌ ಮೊಳಗಿಸಿ ಕೊಂಡು ಆಸ್ಪತ್ರೆಗೆ ದೌಡಾಯಿಸಿತು. ಹೀಗೆ ಈ ದುರಂತದಲ್ಲಿ ಬದುಕಿ ಉಳಿದವರು ಎಂಟು ಮಂದಿ. ಸಂಜೆ ಏಳು ಗಂಟೆ ಹೊತ್ತಿಗೆ 158 ಮಂದಿಯ ಸುಟ್ಟದೇಹಗಳು ಸಿಕ್ಕವು, ಆದ್ದರಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಯಾದಿಯಂತೆ ಒಟ್ಟು ಪ್ರಯಾಣಿಕರು 166, ಬದುಕಿ ಉಳಿದವರು ಎಂಟು ಮಂದಿ, ರಕ್ಷಣಾ ಕಾರ್ಯಾಚರಣೆ ಸ್ಥಗಿತ.

ಸುಟ್ಟ ದೇಹಗಳನ್ನು ಮಂಗಳೂರಿನ ವೆನಾಕ್‌ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಮಾಡಲಾಗುತ್ತಿತ್ತು. ದೇಹಗಳನ್ನು ಸಂಬಂಧಿಕರು ಗುರುತಿಸಲು ಹೆಣಗುತ್ತಿದ್ದರು. ಮೈಮೇಲೆ ಬಟ್ಟೆಯ ತುಂಡೂ ಇಲ್ಲ. ಅದೆಷ್ಟೋ ದೇಹಗಳ ಲಿಂಗ ತಿಳಿಯಲೇ ಆಗುತ್ತಿರಲಿಲ್ಲ ಅಂದ ಮೇಲೆ ಹೇಳುವುದೇನು. ಆಸ್ಪತ್ರೆ ಸಿಬ್ಬಂದಿಗಳು ಸತ್ತವರ ಸಂಬಂಧಿಕರು ಗುರುತಿಸಿದ ದೇಹಗಳಿಗೆ ಹೆಸರು ಬರೆದು ಟ್ಯಾಗ್‌ ಹಾಕುತ್ತಿದ್ದರು. ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ಚೀರಾಟ, ಗೋಳಾಟ ಮುಗಿಲುಮುಟ್ಟಿತ್ತು. ದೇಹಗಳನ್ನು ಆ್ಯಂಬುಲೆನ್ಸ್‌ಗಳಲ್ಲಿ ಒಯ್ಯುವಾಗಿನ ದೃಶ್ಯಗಳು ಹೃದಯ ವಿದ್ರಾವಕ. ಗುರುತಿಸಲಾಗದ ದೇಹಗಳು, ಗುರುತಿಸಿದ ದೇಹಗಳು, ಗಂಡು, ಹೆಣ್ಣು ವಿಂಗಡಿಸಿ ಇಡಲಾಗಿತ್ತು. ಹಾಗೆ ಅಲ್ಲಿ ಬಿದ್ದುಕೊಂಡಿದ್ದ ದೇಹ ಭಾಗಗಳನ್ನು  ನೋಡಿದಾಗ ಒರಿಜಿನಲ್‌ ಮುಖ, ರೂಪ ಹೇಗಿತ್ತು? ಅದು ಅವನೇ? ಅವಳೇ? ನನ್ನನ್ನೇ ನಾನು ಕೇಳಿಕೊಂಡೆ. ಆ ನಗು ಮುಖ, ಸುಂದರ ರೂಪ, ಶ್ರೀಮಂತಿಕೆ ಕಲ್ಪಿಸಿಕೊಂಡೆ. ನಿಜಕ್ಕೂ ನಾನು ಇಂತಹ ಬರಹ ಬರೆಯುತ್ತೇನೆಂದು ಕೂಡಾ ಅಂದು ಕೊಂಡಿರಲಿಲ್ಲ, ಇದು ನಮ್ಮ ನಡುವೆಯೇ ನಡೆದ ಟ್ರ್ಯಾಜಿಡಿ.

ಚಿದಂಬರ ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next