Advertisement

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ

04:18 PM Dec 11, 2021 | Shwetha M |

ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎನ್‌ಇಪಿ-2020 ಜಾರಿಗೆ ತಂದಿರುವ ಕ್ರಮವನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅನುಷ್ಠಾನಗೊಳಸಿದೆ. ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ, ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕವಾಗಿ ಮತ್ತು ಅತ್ಯಂತ ತರಾತುರಿಯಲ್ಲಿ ಎನ್‌ಇಪಿ-2020 ಅನ್ನು ಜಾರಿಗೊಳಿಸಿದೆ. ಜನತೆಯ, ಶಿಕ್ಷಕ ವರ್ಗದ ಮತ್ತು ವಿದ್ಯಾರ್ಥಿಗಳ ವ್ಯಾಪಕ ವಿರೋಧಕ್ಕೆ ಕಾರಣಗಳೇನು ಎಂಬುದನ್ನು ಸರ್ಕಾರ ಅರಿಯದೇ ಆತುರದ ಹೇರಿಕೆ ಮಾಡಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ ಎಂದು ದೂರಿದರು.

4 ವರ್ಷದ ಪದವಿ ಕೋರ್ಸ್‌ನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೆ ಪ್ರಥಮ ಡಿಗ್ರಿ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ಕೋರ್ಸ್‌ ತರಗತಿಗಳು ಆರಂಭವಾಗಿ, ಇನ್ನೇನು ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುತ್ತವೆ. ಆದರೆ, ಇಷ್ಟು ದೂರ ಕ್ರಮಿಸಿದರು, ಪಠ್ಯಕ್ರಮ ತಯಾರಾಗಿಲ್ಲ. ಅಂದರೆ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಇಲ್ಲ, ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆ ಇದೆ. ಇದರಿಂಧಾಗಿ ತರಗತಿ ಸಮಯ ಆರಂಭವಾದರೂ ಏನು ಮಾಡಬೇಕು ತಿಳಿಯದೇ ಕಳೆದ 2 ತಿಂಗಳಿನಿಂದ ಯಾವುದೇ ಸಮಗ್ರ ರೀತಿಯ ಪಠ್ಯ-ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ. ಇದರೊಂದಿಗೆ, ಎನ್‌ಇಪಿ 4 ವರ್ಷದ ಪದವಿ ಕೋರ್ಸ್‌ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮೂಲ ವಿಷಯದ ಜೊತೆಗೆ ಸಿಬಿಸಿಎಸ್‌-ಚಾಯ್ಸ ಬೇಸ್ಡ್ ಕ್ರೆಡಿಟ್‌ ಸಿಸ್ಟಂ ಅಡಿಯಲ್ಲಿ ಮತ್ತೂಂದು ವಿಭಾಗದ ವಿಷಯ ಓದಬೇಕು ಎಂಬುದನ್ನು ಹೇಳುತ್ತದೆ ಇದು ವಿದ್ಯಾರ್ಥಿಗಳಿಗೆ ಹೊರೆಯಗಲಿದೆ ಎಂದರು ದೂರಿದರು.

ಅಂದರೆ, ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನ್ನ ವಿಷಯಕ್ಕೆ ಸಂಬಂಧವೇ ಇರದ ವಾಣಿಜ್ಯ/ಕಲಾ ವಿಭಾಗದ ಒಂದು ವಿಷಯ ಓದಲೇಬೇಕು. ಇತ್ತೀಚೆಗೆ ಕಲಾ ವಿಭಾಗದ ವಿದ್ಯಾರ್ಥಿಗಳು ಕಡ್ಡಾಯವಾಗಿ ವಿಜ್ಞಾನ ವಿಭಾಗದ ಒಂದು ವಿಷಯ ಓದಲೇಬೇಕು ಎಂಬ ಹೇರಿಕೆಯ ಸುತ್ತೋಲೆಯನ್ನು ಖಂಡಿಸಿ ನಡೆದ ಚಳವಳಿ ನೋಡಿದ್ದೇವೆ. ಅಂದರೆ, ಓದುವ, ಅಭ್ಯಸಿಸುವ ಪ್ರಕ್ರಿಯೆ ವೈಯುಕ್ತಿಕ ಆಯ್ಕೆ ಬದಲಾಗಿ, ಹೇರಿಕೆಯಾಗಿ ಎನ್‌ ಇಪಿ 4 ವರ್ಷದ ಪದವಿ ಕೋರ್ಸ್‌ನಲ್ಲಿ ಮಾರ್ಪಟ್ಟಿದೆ ಎಂದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ಮಾತನಾಡಿ, ಯಾವುದೇ ನೂತನ ಶಿಕ್ಷಣ ನೀತಿ ಜಾರಿ ಆದಾಗ, ಅದರ ಆಧಾರದ ಮೇಲೆ ಶಿಕ್ಷಣ ತಜ್ಞರು, ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಠ ಒಂದೆರಡು ವರ್ಷಗಳು ಬೇಕಾಗುತ್ತದೆ. ಆದರೆ, ಎನ್‌ಇಪಿ-2020 ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ತಾನೇ ಮೊದಲು ಅನುಷ್ಠಾನಕ್ಕೆ ತಂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ ಎಂದು ಹರಿಹಾಯ್ದರು.

Advertisement

ಸದರಿ ನೂತನ ಶಿಕ್ಷಣ ನೀತಿ ಜಾರಿಗೆ ಪೂರ್ವ ಸಿದ್ಧತೆ ಇಲ್ಲದೇ ಕೇವಲ 15-20 ದಿನಗಳ ತಯಾರಿಯಲ್ಲಿ ನೀತಿ ಜಾರಿ ಮಾಡಿದೆ. ಸರ್ಕಾರದ ಇಂತಹ ಅವೈಜ್ಞಾನಿಕ ನಡೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣ ಶೇ. 50 ಏರಿಕೆ ಆಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಸುಮಾರು ಎರಡುವರೆ ಲಕ್ಷದಷ್ಟು ಅಧಿಕ ವಿದ್ಯಾರ್ಥಿಗಳು ಡಿಗ್ರಿ ಪ್ರವೇಶಾತಿಗೆ ಅರ್ಹರಾಗಿದ್ದಾರೆ. ಈ ಸಂದರ್ಭದಲ್ಲಿ, ಸರ್ಕಾರ ಶೇ. 50 ಅಧಿಕ ಉಪನ್ಯಾಸಕರನ್ನು ನೇಮಿಸಬೇಕು. ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಬೇಕು. ತರಗತಿಗಳ ಸಂಖ್ಯೆಯನ್ನು ಏರಿಸಬೇಕು, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಶೇ. 70 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಮಂಜು ಹತ್ತರಕಿ, ಗಣೇಶ ನಡುವಿನಕೇರಿ, ಅವಿನಾಶ, ಸಾಗರ, ಸಿಂಧೂರ ರಾಠೊಡ, ವೀರೇಶ, ಅನಿಲ ಕೋರಿ, ಶ್ರೀನಾಥ ಮತ್ತು ಇನ್ನಿತರ ವಿಧ್ಯಾರ್ಥಿಗಳು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next