Advertisement

ಚಿಗುರಿದ ಮೆಣಸಿಗೆ ಮುಟುರು-ಚಿಬ್ಬು

12:21 PM Nov 22, 2021 | Team Udayavani |

ಕಾಟಸುರಪುರ: ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡ ರೈತ ಸಮುದಾಯ ಕಷ್ಟ ಪಟ್ಟು ಅಷ್ಟೋ-ಇಷ್ಟೋ ಬೆಳೆ ಬೆಳೆದಿದೆ. ಈ ನಡುವೆ ಫಸಲು ಕೈ ಸೇರುವ ಹೊತ್ತಿನಲ್ಲಿ ಹಲವಾರು ಸಮಸ್ಯೆ ರೈತರ ನಿದ್ದೆಗೆಡಿಸಿವೆ. ಅಲ್ಪ ಸ್ವಲ್ಪ ಬೆಳೆದ ಬೆಳೆ ಕೈ ಸೇರಿದರೆ ಮೊದಲು ಕೊರೊನಾ ಮಹಾಮಾರಿಯಿಂದ ಸೂಕ್ತ ಮಾರುಕಟ್ಟೆ, ಬೆಲೆ ಸಮಸ್ಯೆ ಎದುರಾದರೆ, ಇದೀಗ ಹಲವು ರೋಗಬಾಧೆಗಳು ಬೆಳೆಗಳಿಗೆ ಮಗ್ಗಲು ಮುಳ್ಳಾಗಿವೆ.

Advertisement

ತಾಲೂಕಿನಲ್ಲಿ 1000 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಆದರೆ ಬೆಳೆಗೆ ಮುಟುರು ಮತ್ತು ಚಿಬ್ಬು ರೋಗ ಕಾಣಿಸಿದ್ದು ಬೆಳೆ ಸಂಪೂರ್ಣ ಹಾಳಾಗುವ ಹಂತ ತಲುಪಿದೆ. ರೋಗ ನಿಯಂತ್ರಣಕ್ಕೆ ಬಾರದಿರುವುದು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಸುರಪುರದ ಯಡ್ಡಳ್ಳಿ, ನಾಗರಾಳ, ಕಲ್ಲದೇವನಳ್ಳಿ, ವಜ್ಜಲ್‌, ಮುದ್ನೂರ, ನಗನೂರ, ಹದನೂರ, ಏವುರ, ಮಲ್ಲಾ ಶಹಾಪುರದ ಗೋಗಿ, ಮದ್ರಕಿ, ರಸ್ತಾಪುರ, ಹಯ್ನಾಳ ಸೇರಿ ಇತರೆ ಗ್ರಾಮಗಳಲ್ಲಿ ಮೆಣಸಿನಕಾಯಿಯೇ ಬೆಳೆಯಾಗಿದ್ದು, ಇದೀಗ ರೋಗಗಳು ಬೆಳೆಯನ್ನು ಹಿಂಡಿ ಹಿಪ್ಪೆ ಮಾಡಿವೆ.

ಅತಿವೃಷ್ಟಿ, ಅತಿಯಾದ ರಸಗೊಬ್ಬರ ಬಳಕೆ, ಮಿತಿಮೀರಿ ನೀರು ಹಾಯಿಸುವುದು, ಜಮೀನಿನಲ್ಲಿಯೇ ಒಣಗಿಸುವುದು ರೋಗಕ್ಕೆ ಪ್ರಮುಖ ಕಾರಣ. ಮೋಡ ಕವಿದ ವಾತಾವರಣ, ತೇವಾಂಶ ರೋಗ ಹರಡುವಿಕೆಗೆ ಸಹಕಾರಿಯಾಗಿದ್ದು, ರೋಗಗ್ರಸ್ತ ಬೀಜವೂ ಕಾರಣ ಇರಬಹುದು ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.

ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಇಳಿಕೆ; ನಷ್ಟ ಕಂಡ ರಿಲಯನ್ಸ್ ಷೇರು

Advertisement

ರೋಗದ ಲಕ್ಷಣ

ರೋಗಬಾಧೆಯಿಂದ ಮೆಣಸಿನಕಾಯಿ ಬೆಳೆಯ ಎಲೆ ಮೊದಲು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ. ನಂತರ ಎಲೆಗಳು ವಕ್ರಾಕಾರವಾಗಿ ಮುಟುರುಗೊಂಡು ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಮೇಲೆ ವೃತ್ತಾಕಾರದ, ತಗ್ಗಾದ, ಕಪ್ಪನೆ ಚುಕ್ಕೆ ಕಂಡುಬರುತ್ತವೆ. ನಂತರ ಎಲೆಗಳು ಉಂಗುರಾಕಾರವಾಗಿ ಪರಿವರ್ತನೆಯಾಗುತ್ತವೆ. ಕಂದು ಅಥವಾ ಬೂದಿ ಬಣ್ಣಕ್ಕೆ ತಿರುಗಿ ಟೊಂಗೆಗಳು ತುದಿಯಿಂದ ಒಣಗಲು ಆರಂಭಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

ನುಸಿ ಆಕಾರದ ಕೀಟಗಳು ಎಲೆಗಳಿಂದ ರಸ ಹೀರುತ್ತವೆ. ಇದರಿಂದ ಎಲೆಗಳ ಮೇಲ್ಭಾಗ-ಕೆಳಭಾಗ ಮುಟುರುಗೊಳ್ಳುತ್ತವೆ. ಮೊಗ್ಗುಗಳು, ಎಲೆ ಭಾಗಗಳು ವಿಕಾರವಾಗುತ್ತವೆ. ನುಸಿಗಳ ಹಾವಳಿ ಹೆಚ್ಚಾದಾಗ ಕಪ್ಪು ಬೂಸ್ಟ್‌ ಬೆಳವಣಿಗೆಯಾಗುತ್ತದೆ. ಕೀಟಗಳು ವೈರಸ್‌ ಹರಡಲು ಶಕ್ತಿಶಾಲಿಯಾಗಿವೆ ಎನ್ನುತ್ತಾರೆ. ಬೆಳೆ ನಾಟಿ ಮಾಡಿದ 2 ಅಥವಾ 5 ವಾರಗಳ ನಂತರ ರೋಗ ತಡೆಗಟ್ಟಲು ರೈತರು ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಸೀಮೆ ಎಣ್ಣೆ ಬೆರೆಸಿ ಕಷಾಯ ಮಾಡಿಕೊಳ್ಳಬೇಕು. ಇದನ್ನು ಬೇವು, ಜನ್ಯ ಕೀಟನಾಶಕದೊಂದಿಗೆ 2.5 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಣೆ ಮಾಡಿದ್ದಲ್ಲಿ ರೋಗ ಹತೋಟಿಗೆ ಬರುತ್ತದೆ. ಇಲ್ಲವೇ ಹೆಕ್ಸಾಕೊನಾಜೋಲ್‌, 70 ಡಬ್ಲೂಪಿ ಅಥವಾ ಡಿಫೆನೊಕೊನಾಜೋಲ್‌ ಕ್ರಿಮಿನಾಶಕ ಸಿಂಪಡಿಸುವಂತೆ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಸತೀಶ ಕಾಳೆಕರ್‌ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕೊರೊನಾ, ಬೆಲೆ ಕುಸಿತ, ಖರ್ಚು-ವೆಚ್ಚದ ಹೊಡೆತದೊಂದಿಗೆ ಬೆಳೆಗೆ ಆವರಿಸಿದ ಹಲವು ರೋಗಗಳು ಅನ್ನದಾತರನ್ನು ಅಕ್ಷರಶಃ ನಲುಗಿಸಿವೆ.

-ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next