Advertisement

BJP-Congress ಮತ್ತೆ ಆಪರೇಷನ್‌ ಕಮಲದ ಸದ್ದು; ಬಿಜೆಪಿ ವಿರುದ್ಧ ಕೈ ನಾಯಕರ ವಾಗ್ಧಾಳಿ

08:41 PM Oct 30, 2023 | Team Udayavani |

ಬೆಂಗಳೂರು: ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷದ ಆಂತರಿಕ ವಲಯದಲ್ಲಿ ಬೇಗುದಿ ಜೋರಾಗಿರುವುದರ ಮಧ್ಯೆ ಕೆಲ ಸಚಿವರು ಹಾಗೂ ಶಾಸಕರು ಆಪರೇಷನ್‌ ಕಮಲದ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ.

Advertisement

ಈ ಎರಡೂ ಚರ್ಚೆಗಳ ಮಧ್ಯೆ ಆಪರೇಷನ್‌ ಕಮಲದ ಬಗ್ಗೆ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ. ಆದರೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿರುವ ಹೇಳಿಕೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ದಿನೇಶ್‌ ಗುಂಡೂರಾವ್‌, ಪ್ರಿಯಾಂಕ ಖರ್ಗೆ, ಸತೀಶ ಜಾರಕಿಹೊಳಿ, ಎಚ್‌.ಸಿ.ಮಹದೇವಪ್ಪ ಸೇರಿ ಹಲವರು ಆಪರೇಷನ್‌ ಕಮಲ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೌಂಟರ್‌ ನೀಡಿದ್ದು, ಕಾಂಗ್ರೆಸ್‌ ನಾಯಕರು ತಮ್ಮ ಶಾಸಕರಿಗೆ ದರ ನಿಗದಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತ್ರ ಈ ವಿಚಾರದಲ್ಲಿ ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ. “ನಾನಿದರ ಬಗ್ಗೆ ಮಾತನಾಡಿಲ್ಲ. ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡ್ತೇವೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ದೂರು ಪೆಸಿಫಿಕ್‌ ಆಗಿರಬೇಕು’ ಎಂದು ಹೇಳುವ ಮೂಲಕ ಆಪರೇಷನ್‌ ಚರ್ಚೆಯ ಉದ್ವೇಗವನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. 33 ಮಂದಿ ಸಚಿವರಿದ್ದಾರೆ. ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯವಿದೆ. ನಿಗಮ- ಮಂಡಳಿ ನೇಮಕ ಸಂದರ್ಭದಲ್ಲಿ ಕಾರ್ಯಕರ್ತರನ್ನು ಪರಿಗಣಿಸುತ್ತೇವೆ. ಈಗಾಗಲೇ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ನೇಮಕ ಮಾಡುವ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.

Advertisement

ನಮ್ಮ ಮನೆ ವಿಷಯ ಅವರಿಗ್ಯಾಕೆ?: “ಸಿಎಂ ಜತೆಗಿನ ಭೋಜನಕೂಟ ನಮ್ಮ ಮನೆಯ ವಿಚಾರ. ಆ ಬಗ್ಗೆ ಬಿಜೆಪಿಯವರಿಗ್ಯಾಕೆ ಚಿಂತೆ ? ಅದನ್ನು ತಿರುಚುವುದು, ಒಡೆದ ಬಾಗಿಲು, ಮೂರು ಬಾಗಿಲು ಎಂದು ವ್ಯಾಖ್ಯಾನಿಸಿ ಬಣ ಸೃಷ್ಟಿಸುವ ಕೆಲಸವನ್ನು ಬಿಜೆಪಿಯವರೇ ನಡೆಸುತ್ತಿದ್ದಾರೆ. ನಮ್ಮ ಮನೆ ವಿಷಯಗಳು ಇವರಿಗೆ ಯಾಕೆ ಬೇಕು? ಯಡಿಯೂರಪ್ಪ ಮನೆಯಲ್ಲಿ ಏನಾಗುತ್ತೆ. ಬೊಮ್ಮಾಯಿ ಮನೆಯಲ್ಲಿ ಏನಾಗುತ್ತದೆ ನಾವು ಕೇಳ್ತೆವಾ?’ ಎಂದು ಪ್ರಶ್ನಿಸಿದರು. ಸಚಿವರ ಮಕ್ಕಳೇ ಸಚಿವರಾಗ್ತಾರೆಂಬ ಬೇಳೂರು ಗೋಪಾಲಕೃಷ್ಣ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಜಾರಕಿಹೊಳಿ ಆರೋಪಕ್ಕೆ ಡಿಕೆ ತಿರುಗೇಟು
“ಬಿಜೆಪಿ ಆಪರೇಷನ್‌ ಮಾಡಿರಲಿಲ್ಲ. ಮೈತ್ರಿ ಸರ್ಕಾರ ಕೆಡವಿದ್ದೇ ನಾವು. ಈಗ ಬಿಜೆಪಿ ಆಪರೇಶನ್‌ ಕಮಲ ಮಾಡುತ್ತಿದೆ ಎಂಬುದು ಶಿವಕುಮಾರ್‌ ಕೃಪಾಪೋಷಿತ ನಾಟಕ ಮಂಡಳಿಯ ಸೃಷ್ಟಿ’ ಎಂಬ ರಮೇಶ್‌ ಜಾರಕಿಹೊಳಿ ಆರೋಪಕ್ಕೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ರಾಜ್ಯದ ಜನ ಚುನಾವಣೆಯಲ್ಲಿ ಏನು ತೀರ್ಪು ನೀಡಬೇಕೋ ನೀಡಿದ್ದಾರೆ. ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವಾಮ ಮಾರ್ಗದಲ್ಲಿ ಸದಾ ಅಧಿಕಾರದಲ್ಲಿರಬೇಕೆಂಬುದೇ ಬಿಜೆಪಿಯ ಉದ್ದೇಶ. ಇದಕ್ಕಾಗಿ ದೇಶಾದ್ಯಂತ ಆಪರೇಷನ್‌ ಕಮಲ ನಡೆಸುತ್ತಿದ್ದಾರೆ. ಜನ ತಿರಸ್ಕರಿಸಿದರೂ ಬುದ್ಧಿ ಬಂದಿಲ್ಲ. ದುಡ್ಡಿನ ಅಹಂ, ಐಟಿ, ಇಡಿ, ಸಿಬಿಐ ತಮ್ಮ ಜೇಬಿನಲ್ಲಿದೆ ಎಂದು ಏನು ಬೇಕಾದರೂ ಮಾಡಬಹುದೆಂದುಕೊಂಡಿದ್ದಾರೆ.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ.

ನಾವೇನು ಆಪರೇಷನ್‌ ಮಾಡುತ್ತಿಲ್ಲ. ಅವರೇ ಬಡಿದಾಡಿಕೊಂಡು ಸರ್ಕಾರ ಬೀಳಿಸಿಕೊಳ್ಳುತ್ತಾರೆ. ಕಾಂಗ್ರೆಸ್‌ ನಾಯಕರು ತಮ್ಮದೇ ಪಕ್ಷದ ಶಾಸಕರಿಗೆ ರೇಟ್‌ ಫಿಕ್ಸ್‌ ಮಾಡಿಸಿಕೊಳ್ಳುತ್ತಿದ್ದಾರೆ.
-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ

ಬಿಜೆಪಿಯವರ ದಂಧೆಯೇ ಆಪರೇಷನ್‌. ಉನ್ನತ ಸ್ಥಾನ, ಹಣದ ಆಮಿಷ ಇಡ್ತಾರೆ. ಶಾಸಕರನ್ನು ಸೆಳೆಯೋದು ಬಿಜೆಪಿ ತಂತ್ರ. ಈಗ ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬಂದಿಲ್ಲ, ಸೋತಿದ್ದಾರೆ. ಅವರನ್ನು ಹೈಕಮಾಂಡ್‌ ನಿರ್ಲಕ್ಷ್ಯ ಮಾಡಿದೆ. ರಾಜ್ಯದ ನಾಯಕರನ್ನು ನಿರ್ಲಕ್ಷ್ಯ ಮಾಡಿದೆ. ಹೈಕಮಾಂಡ್‌ ನಯಾ ಪೈಸೆ ಬೆಲೆ ಕೊಡ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ ಹೆಣಗಾಡ್ತಿದ್ದಾರೆ.
– ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

ಸರ್ಕಾರ 5 ವರ್ಷ ಸ್ಥಿರ: ಲಖನ್‌
ಗೋಕಾಕ: ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ 5 ವರ್ಷ ಸ್ಥಿರವಾಗಿರುತ್ತದೆ. ಯಾವುದೇ ಆಪರೇಷನ್‌ ಇಲ್ಲ, ಎಲ್ಲವೂ ಊಹಾಪೋಹ ಅಷ್ಟೇ ಎಂದು ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಈ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಥಿರವಾಗಿರುತ್ತದೆ. ಯಾವುದೇ ಆಪರೇಷನ್‌ ಕಮಲ ನಡೆಯುತ್ತಿಲ್ಲ. ಇದು ಕೇವಲ ಡಿ.ಕೆ ಶಿವಕುಮಾರ್‌ ಬಣದಿಂದ ಹಬ್ಬಿಸಿರುವ ಸುದ್ದಿ. ಅನುದಾನದ ಸಲುವಾಗಿ ಹೈಕಮಾಂಡ್‌ ಗಮನ ಸೆಳೆಯಲು ಡಿಕೆಶಿ ಟೀಂ ಈ ರೀತಿ ಹೇಳಿಕೆ ನೀಡುತ್ತಿದೆ. ಬಿಜೆಪಿಯಿಂದ ಆಪರೇಷನ್‌ ಕಮಲ ನಡೆಯುತ್ತಿಲ್ಲ. ಡಿ.ಕೆ ಶಿವಕುಮಾರ್‌ ಬೆಂಬಲಿತ ಶಾಸಕರಿಂದ ಹೈಕಮಾಂಡ್‌ ಗಮನ ಸೆಳೆಯಲು ಆಪರೇಷನ್‌ ಕಮಲದ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಕಾರ್ಯ ತೃಪ್ತಿಕರವಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೇ ಕಮಿಷನ್‌ ಇಲ್ಲದೇ ಕಾರ್ಯ ನಡೆಯುತ್ತಿವೆ. ಸಿದ್ದರಾಮಯ್ಯ ನಂತರದಲ್ಲಿ ಸತೀಶ್‌ ಜಾರಕಿಹೊಳಿ ಅವರೇ ಅತ್ಯುತ್ತಮ ನಾಯಕರು. ಈ ಸರ್ಕಾರ ಬರುವಲ್ಲಿ ಸತೀಶ್‌ ಜಾರಕಿಹೊಳಿ ಪಾತ್ರ ಕೂಡ ಮಹತ್ವದ್ದಾಗಿದೆ ಎಂದರು.

ಆಪರೇಷನ್‌ ಕಮಲ: ನನ್ನ ಬಳಿ ಸಾಕ್ಷಿ ಇದೆ
ಮಂಡ್ಯ: ಆಪರೇಷನ್‌ ಕಮಲಕ್ಕೆ ಕೈ ಹಾಕಿರುವ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ. ಆಪರೇಷನ್‌ ಕಮಲ ಸುಳ್ಳು ಎನ್ನುವುದಾದರೆ ಕೈ ಶಾಸಕರಿಗೆ ಆಫರ್‌ ಮಾಡಿದ್ದು ಏಕೆ ಎಂದು ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿಗೆ ತಿರುಗೇಟು ನೀಡಿದರು.

ಆಪರೇಷನ್‌ ಕಮಲ ಸುಳ್ಳು ಎಂಬ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಆ ಭಾಗದ ಶಾಸಕರಿಗೆ ಏನು ಆಫರ್‌ ಮಾಡಿದ್ದೀರಿ? ನೀವು ಆಫರ್‌ ಮಾಡಿರುವ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ. ರಮೇಶ್‌ ಜಾರಕಿಹೊಳಿ ಮಾತನಾಡಿರುವ ಅಷ್ಟೂ ಶಾಸಕರು ಮಾಧ್ಯಮದ ಮುಂದೆ ಬರುತ್ತಾರೆ. ಅವರಿಗೆ ಬಂದ ಆಫರ್‌ಗಳ ಬಗ್ಗೆ ಅವರೇ ಮಾಧ್ಯಮಗಳಿಗೆ ವಿವರಿಸುತ್ತಾರೆ ಎಂದರು.

ಆಪರೇಷನ್‌ ಕಮಲ ಮಾಡಲ್ಲ: ರಮೇಶ
ಬೆಳಗಾವಿ: ಡಿಕೆಶಿ ನಾಟಕ ಮಂಡಳಿಯು ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದೆ. ಆಪರೇಷನ್‌ ಕಮಲ ಎನ್ನುವುದು ಸುಳ್ಳು. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಯತ್ನ ನಡೆಯುತ್ತಿದ್ದು, ನಾವು ಯಾವುದೇ ಆಪರೇಷನ್‌ ಮಾಡುತ್ತಿಲ್ಲ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, 50, 100 ಕೋಟಿ ರೂ. ಕೊಟ್ಟು ಶಾಸಕರ ಖರೀದಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. 2019ರಲ್ಲಿ ಡಿಕೆಶಿಯ ಸೊಕ್ಕು, ದುರಾಡಳಿತದಿಂದ ಪûಾಂತರ ಮಾಡಿದ್ದೇವೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮೇಲೆ ನಮಗೆ ಸಿಟ್ಟಿರಲಿಲ್ಲ. ಆಪರೇಷನ್‌ ಕಮಲ ನಡೆಯುತ್ತಿಲ್ಲ. ಎಲ್ಲವೂ ಸುಳ್ಳು. ಡಿಕೆಶಿ ಅಷ್ಟೇ ಆಪರೇಷನ್‌ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಅನಿವಾರ್ಯವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next