Advertisement

ಮತ್ತೂಮ್ಮೆ ಮೌನ 

06:00 AM Aug 19, 2018 | |

ಅದೊಂದನ್ನು ಕ್ಷಮಿಸಬೇಕಿತ್ತು. ಕಾಲೇಜು ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ಅವಘಡದಲ್ಲಿ ಸಿಲುಕಿರುತ್ತಾನೆ ಎಂಬ ತಿಳುವಳಿಕೆ ಪ್ರಾಧ್ಯಾಪಕರಾದ ನಿಮ್ಮಲ್ಲಿ ಇರದಿದ್ದುದು ಒಂದು ರೀತಿಯ ಆಶ್ಚರ್ಯ”- ಕಾಫಿ ಹೀರುತ್ತ ದಿಟ್ಟ ದನಿಯಲ್ಲಿ ಅವಳು ಹೇಳುತ್ತಿದ್ದಳು. ಊರ ಹೊರಗಿನ ಒಂದು ಕಾಫಿ ಡೇನಲ್ಲಿ ಎದುರುಬದುರು ಇವನು ಹಾಗೂ ಅವಳು ಕುಳಿತು ಕಾಫಿ ಹೀರುತ್ತಿದ್ದರೂ ಇಬ್ಬರ ಕಣ್ಣಂಚಿನಲ್ಲಿ ನೀರಾಡುತ್ತಿದ್ದುದು ಸೂಕ್ಷ್ಮವಾಗಿ ಕಾಣುತ್ತಿತ್ತು. ಆಗಾಗ ಮೌನ. ಕೆಲವೊಮ್ಮೆ ಅತಿಯಾದ ಭಾವೋದ್ವೇಗ. ಎಲ್ಲವೂ ಅವಳಿಂದ ಮಾತ್ರ ಹೊರಹೊಮ್ಮುತ್ತಿತ್ತು. ಇವನು ಮಾತ್ರ ರಿಸೀವಿಂಗ್‌ ಎಂಡ್‌ನ‌ಲ್ಲಿದ್ದ.  ಸಂಭ್ರಮದ ಮೊದಲಶಾಸ್ತ್ರ ನಡೆದು, ನಿಶ್ಚಿತಾರ್ಥದ ಅಂಚಿನಲ್ಲಿದ್ದು ಈ ರೀತಿಯ ಕಟುವಾದ ತಿರಸ್ಕಾರ ಬೇಕಿರಲಿಲ್ಲ. ಫೇಸ್‌ಬುಕ್‌ನಲ್ಲಿ ತಮಾಷೆಗಾಗಿ ಅಪ್‌ಲೋಡ್‌ ಆಗಿದ್ದ ಫೋಟೋ ನನ್ನ ಜೀವನವನ್ನು ಸರ್ವನಾಶ ಮಾಡಬಲ್ಲುದು ಎಂದು ತಿಳಿದುಕೊಂಡಿರಲಿಲ್ಲ. ಅವನ ತೊಡೆಯ ಮೇಲೆ ಕುಳಿತುಕೊಂಡದ್ದು ಕೇವಲ ಒಂದು ಆಕಸ್ಮಿಕವಾಗಿತ್ತು.

Advertisement

“”ನಾನು ಮೊದಲ ಎಂ.ಎಸ್ಸಿಯಲ್ಲಿದ್ದಾಗಿನ ಕಾಲೇಜು ಪ್ರವಾಸದಲ್ಲಿದ್ದಾಗ ಎಲ್ಲ ವಿದ್ಯಾರ್ಥಿಗಳಂತೆ ನಾನೂ ಕೂಡ ಚಲಿಸುತ್ತಿದ್ದ ಬಸ್ಸಿನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದೆ. ಬಸ್‌ ಡ್ರೈವರ್‌ ಒಂದು ತಿರುವಿನಲ್ಲಿ ಬಲವಾಗಿ ತಿರುಗಿಸಿದ. ಆಯತಪ್ಪಿ ಅಲ್ಲೇ ಕುಳಿತಿದ್ದ ನನ್ನ ಕ್ಲಾಸಿನ ಪ್ರಶಾಂತ್‌ ತೊಡೆಯ ಮೇಲೆ ಕುಳಿತಿದ್ದೆ. ನನ್ನ ಗೆಳತಿ ಫೋಟೊ ತೆಗೆದಿದ್ದಳು. ಅದನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಳು. ಅದು ನಿಮ್ಮ ಕುಟುಂಬದ ಸದಸ್ಯರ ಗಮನಕ್ಕೆ ಬಂದು ನನ್ನನ್ನು ಅತ್ಯಂತ ಕೀಳುಮಟ್ಟದವಳೆಂದು ಪರಿಗಣಿಸಿದ್ದು ನನ್ನ ಜೀವನದ ಬಹುದೊಡ್ಡ ವಿಪರ್ಯಾಸ. ಆ ಫೋಟೊವನ್ನು ಕ್ರೀಡಾಮನೋಭಾವದಿಂದ ನೋಡುವ ವಿಶಾಲ ಮನಃಸ್ಥಿತಿ ನಿಮ್ಮವರಲ್ಲಿರಲಿಲ್ಲ” ಕಣ್ಣಂಚಿನಲ್ಲಿದ್ದ ಹನಿ ನೀರಾಗಿ ಹರಿಯಿತು. ಮತ್ತೂಂದು ಸುತ್ತು ಕಾಫಿ ಆಗಮನವಾಯಿತು. ಮತ್ತೂಮ್ಮೆ ಮೌನ ಆವರಿಸಿತು. ಕೊಂಚ ಹೊತ್ತು ಕಾಫಿ ಹೀರುವ ಕಡೆ ಗಮನ. ಇವನು ಮಾತ್ರ ನಿರ್ಲಿಪ್ತ ಮನಸ್ಥಿತಿಯಲ್ಲಿದ್ದ. ಅವಳೇ ಮುಂದುವರೆದಳು. 

“”ನಿಶ್ಚಿತಾರ್ಥ ಹತ್ತಿರವಿದ್ದ ಕಾರಣ ನಮ್ಮಿಬ್ಬರಿಗೂ ಸಾಕಷ್ಟು ಸ್ವಾತಂತ್ರ್ಯವಿತ್ತು. ಅದರಡಿಯಲ್ಲಿ ನಮ್ಮಿಬ್ಬರ ನಡುವಿನ ರಸಗಳಿಗೆಗಳೂ ಕೂಡ ನಿನ್ನ ಆತ್ಮಸಾಕ್ಷಿಯನ್ನು ಕೆದಕಲಿಲ್ಲವೆಂಬುದೇ ಸೋಜಿಗ. ನಿನ್ನಂಥವರೂ ಇರುತ್ತಾರೆ ಎಂಬುದು ಅಂದೇ ನನಗೆ ಮನದಟ್ಟಾಗಿದ್ದು. ಮಲ್ಟಿಪ್ಲೆಕ್ಸ್‌ ಗಳು, ಮಾಲ್‌ಗ‌ಳು, ರೆಸಾರ್ಟ್‌ಗಳು ಮುಂತಾದೆಡೆಗಳೆಲ್ಲ ಭವಿಷ್ಯದ ಕನಸುಗಳನ್ನು ಕಣ್ಣಲ್ಲಿ ಕಟ್ಟಿಕೊಂಡು ಓಡಾಡಿದ್ದು ನಿನ್ನನ್ನು ಕಾಡಲಿಲ್ಲವೆ? ನಿಶ್ಚಿತಾರ್ಥ ಮುರಿದು ಬಿದ್ದ ನಂತರದ ಒಂದು ವಾರ ಕೂಡ ನಮ್ಮ ಕ್ಯಾಂಪಸ್‌ನಲ್ಲಿರಲು ನನಗೆ ಸಾಧ್ಯವಾಗಲಿಲ್ಲ. ಅಲ್ಲಿನ ಮರಗಿಡಗಳು, ಕಲ್ಲು ಬೆಂಚುಗಳು, ಕ್ಯಾಂಟೀನ್‌ ಕಾಫಿಗಳು ತುಂಬ ಕಾಡಿದವು. ನೀನು ಇನ್ನೂ ಅಲ್ಲೇ ಇದ್ದೀಯಾ, ನಿನಗೆ ಯಾವುದೇ ನೆನಪು ಕಾಡುತ್ತಿಲ್ಲವೆ?” ಕಣ್ಣೀರು ಒರೆಸಿಕೊಂಡು ಮತ್ತೂಂದು ಸಿಪ್‌ ಕಾಫಿ ಹೀರಿದಳು. ಇವನು ತಲೆ ತಗ್ಗಿಸಿದವನು ಮೇಲೆತ್ತಲಿಲ್ಲ. ಅವನ ಈ ನಿರ್ಲಿಪ್ತ ಸ್ಥಿತಿ ಅವನ ಪಾಪಪ್ರಜ್ಞೆ ಕಾಡುತ್ತಿರುವ ತೊಳಲಾಟದಂತಿತ್ತು.

“”ನನಗೆ ಪ್ರಶಾಂತನ ಮೇಲೆ ಮೋಹವಿದ್ದು, ನಿನ್ನ ಜೊತೆಗಿನ ಮದುವೆ ಬಲವಂತದ್ದೆಂದು ನನ್ನ ಮೇಲೆ ಗೂಬೆ ಕೂರಿಸಿದ ನಿಮ್ಮ ಕುಟುಂಬದ ಸದಸ್ಯರ ನಡವಳಿಕೆಯಿಂದ ನಾನೊಬ್ಬ ಕುಲಗೆಟ್ಟ ಹೆಣ್ಣು ಎಂಬ ಅಪಪ್ರಚಾರ ಜಗಜ್ಜಾಹೀರಾಗಿ ಹೋಯಿತು. ಅಮ್ಮನ ಕಣ್ಣೀರಿಗೆ ಬೆಲೆ ಕೊಟ್ಟು ಬೇರೆ ಮದುವೆಗೆ ಒಪ್ಪಿ ಬಂದ ಗಂಡುಗಳ ಮುಂದೆ ಆಲಂಕಾರಿಕ ಬೊಂಬೆಯಂತೆ ಪ್ರದರ್ಶನಗೊಂಡು ನಂತರ ತಿರಸ್ಕರಿಸಲ್ಪಟ್ಟಿದ್ದು ಕೂಡ ನೀವು ಹರಡಿದ ಸುದ್ದಿಯ ಕಾರಣದಿಂದ. ನಿಶ್ಚಿತಾರ್ಥದ ಅಂಚಿನಲ್ಲಿ ಮದುವೆ ನಿಂತುಹೋದ ಹೆಣ್ಣಿಗೆ ಈ ಸಮಾಜ ನೀಡುವ ಪುರಸ್ಕಾರ ಇದೇ ಅಲ್ಲವೆ? ನಾನು ನಿಜಕ್ಕೂ ಕೆಟ್ಟವಳಾಗಿರಲಿಲ್ಲ. ನೀನು ಅರ್ಥ ಮಾಡಿಕೊಳ್ಳಬೇಕಿತ್ತು. ನನ್ನಲ್ಲೂ ಪ್ರೀತಿ, ಮಾನವೀಯತೆ, ಆದರ್ಶಗಳು ಮನೆಮಾಡಿಕೊಂಡಿವೆ. ನಿನಗೆ ಗೊತ್ತಾ? ನನ್ನ ಈಗಿನ ಪ್ರಾಧ್ಯಾಪಕ ವೃತ್ತಿಯ ಪ್ರತಿಯೊಂದು ಪೈಸೆಯೂ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗುತ್ತಿದೆ. ನನ್ನ ದುಡಿಮೆ ಈಗ ಯಾರಿಗಾಗಿ?” ತನ್ನ ದೃಷ್ಟಿಯನ್ನು ಬೇರೆಡೆಗೆ ಹೊರಳಿಸುತ್ತಾ ತನ್ನಲ್ಲಾಗುತ್ತಿರುವ ತಳಮಳ ಅವನ ಗಮನಕ್ಕೆ ಬಾರದಂತೆ ಎಚ್ಚರವಹಿಸಿ ಮತ್ತೆ ಮೌನಕ್ಕೆ ಶರಣಾದಳು. 

ಇವನು ತತ್ತರಿಸಿಹೋಗಿದ್ದ. ಅವಳಲ್ಲಾದ ನೋವಿನ ತಳಮಳವನ್ನು ಗಮನಿಸಿದ್ದ. ಅವಳ ಕೆನ್ನೆಯ ಮೇಲೆ ಹರಿಯುತ್ತಿದ್ದ ಕಣ್ಣೀರನ್ನು ಕಂಡಿದ್ದ. ತಟ್ಟನೆ ಎದ್ದು ಅವಳಿಗೆ ಯಾವುದೇ ಸೂಚನೆ ನೀಡದೆ ಕಾಫಿ ಡೇಯಿಂದ ಸರಸರನೆ ಹೊರಬಂದು ತನ್ನ ಕಾರನ್ನೇರಿ ಹೊರಟುಬಿಟ್ಟ. ಈ ನಡವಳಿಕೆಯನ್ನು ನಿರೀಕ್ಷಿಸಿದ್ದ ಅವಳಿಗೆ ಇದು ಆಶ್ಚರ್ಯಕರವಾಗಿರಲಿಲ್ಲ. “ಹೇಡಿ’ ಎಂದು ಉದ್ಗರಿಸುತ್ತ¤ ತಾನು ಅಲ್ಲಿಂದ ಹೊರಬಂದು ತನ್ನ ಕಾರನ್ನೇರಿ ಹೊರಟಳು.
.
.
ಇವನ ಭಾವೋದ್ವೇಗದ ಬಿರುಸು, ಇವನ ಕಾರಿನ ಎಕ್ಸ್‌ಲೇಟರ್‌ ಮೇಲೆ ಬೀಳುತ್ತಿತ್ತು. ಅವನಿಗರಿವಿಲ್ಲದಂತೆ ವಿಪರೀತ ವೇಗವಾಗಿ ಚಲಿಸುತ್ತಿದ್ದ. ಅತಿಯಾದ ಸೂಕ್ಷ್ಮಮತಿಗಳಾದ ತನ್ನ ಕುಟುಂಬದ ಸದಸ್ಯರ ಪ್ರತಿಷ್ಠೆಗೆ ಬಲಿಯಾಗಿದ್ದು ತಾನು ಎಂಬ ಅರಿವು ಇವನಲ್ಲಿ ಅತಿಯಾಗಿ ಕಾಡುತ್ತಿತ್ತು. ಅವಳು ಮದುವೆಯಾದಮೇಲೆ  ನಿನ್ನನ್ನ ಬಿಟ್ಟು ಓಡಿಹೋಗುತ್ತಾಳೆ ಅಂತಾನೋ, ಮದುವೆ ಮಂಟಪದಿಂದಲೇ ಪರಾರಿಯಾದರೆ ಏನು ಮಾಡೋದು ಅಂತನೋ ನೂರಾರು ಕೆಟ್ಟ ಚಿಂತನೆಗಳಿದ್ದ ಕುಟುಂಬದ ಸದಸ್ಯರು ಇವನನ್ನು ಘಾಸಿಗೊಳಿಸಿದ್ದರು.

Advertisement

ಇವನು ಮತ್ತು ಅವಳು ಇಬ್ಬರೂ ಒಂದೇ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದವರು. ಪ್ರೀತಿ-ಪ್ರೇಮವೇನಿಲ್ಲದಿದ್ದ ಒಳ್ಳೆಯ ಸಹಪಾಠಿಗಳಂತಿದ್ದರು. ಯಾವುದೇ ರೀತಿಯ ವೈರುಧ್ಯಗಳು, ಅಡಚಣೆಗಳಿಲ್ಲದಿದ್ದ ಪ್ರಯುಕ್ತ ಇಬ್ಬರೂ ಮಾತುಕ‌ತೆಯ ಮೂಲಕ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಎರಡೂ ಕಡೆಯಿಂದಲೂ ಒಪ್ಪಿಗೆ ಪಡೆದು ಈ ನಿರ್ಧಾರಕ್ಕೆ ಬಂದಿದ್ದರು. ಅರ್ಹತೆ, ಅಂತಸ್ತುಗಳಲ್ಲಿ ಸರಿಸಮನಾಗಿದ್ದು, ಜಾತಕಫ‌ಲವಂತೂ ಸ್ವರ್ಗವನ್ನೇ ಇಳಿಸಿಬಿಡುವಷ್ಟು ಪ್ರಶಸ್ತವಾಗಿದ್ದು ತಡಮಾಡದೆ ವೀಳ್ಯಶಾಸ್ತ್ರವನ್ನೂ ಮುಗಿಸಿ ನಿಶ್ಚಿತಾರ್ಥ ದಿನಾಂಕವನ್ನು ನಿಗದಿಪಡಿಸಿದ್ದರು. ದುಬಾರಿ ಎನ್ನುವಷ್ಟರ ಮಟ್ಟಿಗೆ ಖರೀದಿಯೂ ನಿರಾತಂಕವಾಗಿ ನಡೆದಿತ್ತು. ಆದರೇನು, ಫೇಸ್‌ಬುಕ್‌ನ ಹಳೆಯ ಒಂದು ಫೊಟೊ ಅದೂ ವಿದ್ಯಾರ್ಥಿ ಜೀವನದ ಒಂದು ಬಾಲಿಶ ಫೋಟೋವನ್ನು ಅವನ ಕುಟುಂಬದವರಿಂದ ಜೀರ್ಣಿಸಿಕೊಳ್ಳಲಾಗಲಿಲ್ಲ. ಸಂಕುಚಿತ ಮನಸ್ಸುಗಳು ಒಂದು ಮುಗ್ಧ ಹೆಣ್ಣನ್ನು ತಿರಸ್ಕರಿಸುವಂತೆ ಮಾಡಿದ್ದವು. ಅವಳು ಬದುಕಿನ ನಡುದಾರಿಯಲ್ಲಿ ನಿಂತು ಕಂಗಾಲಾಗಿದ್ದಳು.

ಅವಳು ಎಲ್ಲ ಸಂಬಂಧಿಕರಿಂದ ದೂರವಾದಳು. ನೊಂದ ಮನಸ್ಸು ಆ ಕಾಲೇಜಿನ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ, ಕೊಂಚ ದಿನ ತೊಳಲಾಟದಲ್ಲಿತ್ತು. ನಂತರ ಬೇರೆ ಕಾಲೇಜಿನಲ್ಲಿ ತನ್ನ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರೆಸಿದ್ದಳು. ಇದರೊಂದಿಗೆ ಒಂದು ಅನಾಥಾಶ್ರಮದ  ಕಾರ್ಯಕಾರಿಣಿಯಲ್ಲಿ ಒಬ್ಬಳಾಗಿ ಅನಾಥಮಕ್ಕಳ ಶಿಕ್ಷಣದ ಹೊಣೆಹೊತ್ತು ನೆಮ್ಮದಿ ಜೀವನ ಸಾಗಿಸುತ್ತಿದ್ದಳು. ಪ್ರಾಧ್ಯಾಪಕ ವೃತ್ತಿಯಿಂದ ಬರುತ್ತಿದ ಯಥೇತ್ಛ ಸಂಬಳವನ್ನೂ ಈ ಉದ್ದೇಶಕ್ಕಾಗಿ ವಿನಿಯೋಗಿಸುತ್ತ ನೆಮ್ಮದಿಯ ಸಾರ್ಥಕತೆ ಕಂಡುಕೊಂಡಿದ್ದಳು. ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ತನ್ನ ಜೀವನದಲ್ಲಿ ನಡೆದುಹೋದ ಕಹಿಘಟನೆ ಮಾಸದೆ ಹಸಿಯಾಗುಳಿದು ಕಾಡುತ್ತಿತ್ತು.

ಮುರಿದು ಬಿದ್ದ ಮದುವೆಯ ಕೆಲವೇ ದಿನಗಳಲ್ಲಿ ಇವನಿಗೆ ಮನೆಯವರೇ ಅಳೆದು ತೂಗಿ ಒಬ್ಬ ದೊಡ್ಡ ಮನೆತನದ ಸೌಂದರ್ಯವತಿ ಹುಡುಗಿಯ ಜೊತೆ ಮದುವೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದರು. ಆ ವೈಭವ ಅವನ ಹಿಂದಿನ ಕತೆಯನ್ನು ಸರಾಗವಾಗಿ ಮರೆಸಿಬಿಟ್ಟಿತ್ತು. ಮದುವೆಯಾದ ದಿನದಿಂದಲೂ ಸರ್ವಸ್ವವನ್ನು ತನ್ನ ಹೆಂಡತಿಗೆ ಮುಡಿಪಾಗಿಟ್ಟನು. ಅವಳ ಆವಶ್ಯಕತೆಗಳಿಗೆ ಇನ್ನಿಲ್ಲದಂತೆ ಸ್ಪಂದಿಸುತ್ತ ತನ್ನ ಎಲ್ಲ ದುಡಿಮೆಯನ್ನೂ ಅರ್ಪಿಸಿ ಅವಳ ಪ್ರೀತಿಗೋ ಅಥವಾ ಕೃಪೆಗೋ ಹಾತೊರೆಯುತ್ತಿದ್ದನು. ಮದುವೆಗೆ ಮುಂಚೆಯಿದ್ದ ಇವನ ದೊಡ್ಡ ಕುಟುಂಬದ ಸೌಹಾದ‌ìಯುತ ಒಡನಾಟಕ್ಕೆ ಕತ್ತರಿಬಿದ್ದಿತ್ತು. ಎಲ್ಲವೂ ಯಾಂತ್ರಿಕವಾಗಿದ್ದ ಜೀವನ ಮನುಷ್ಯ ಸಹಜವಾದ ಪ್ರೀತಿಗೆ ಹಾತೊರೆಯುವಂತೆ ಮಾಡಿತ್ತು. 
.
.
ಇಂದು ಆಕಸ್ಮಿಕವಾಗಿ ತನ್ನ ಹಳೆಯ ಗೆಳತಿಯ ಮುಖಾಮುಖಿಯಾಗಿತ್ತು. ಆಕಸ್ಮಾತ್‌ ಭೇಟಿಯಾದ ಇವನು ಅವಳನ್ನು ಹಿಂದೆ ತಮ್ಮಿಬ್ಬರಲ್ಲಿ ಏನೂ ನಡೆದೇ ಇಲ್ಲವೇನೋ ಎಂಬಂತೆ, ಈಗಲೂ ತಾವಿಬ್ಬರು ಒಳ್ಳೆಯ ಸ್ನೇಹಿತರೆಂಬ ತೋರಿಕೆಯಿಂದ ಕಾಫಿ ಡೇನಲ್ಲಿ ಕಾಫಿಗೆ ಆಮಂತ್ರಿಸಿದ್ದ. ಭಾರವಾದ ಹೃದಯ ಹೊತ್ತು ಕಾಫಿಗೆ ಹೋದ ಅವಳು ಅಲ್ಲಿಂದ ಹೊರಬರುವುದರೊಳಗಾಗಿ ಕೊಂಚವಾದರೂ ಹೃದಯದ ಭಾರವನ್ನು ಇಳಿಸಿಕೊಂಡಿದ್ದಳು. ಎಲ್ಲವನ್ನೂ ಕಳೆದುಕೊಂಡರೂ ಅವಳು ನೆಮ್ಮದಿಯನ್ನು ಹೊಂದಿದರೆ, ಅವನು ಎಲ್ಲವನ್ನೂ ಪಡೆದುಕೊಂಡೆ ಎಂಬ ಭ್ರಮೆಯಲ್ಲಿ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಅನಾಥನಾಗಿದ್ದ.

ಜೆ. ಬಿ. ಶಿವಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next