Advertisement

ಪ್ಲಾಸ್ಮಾದಾನಕ್ಕೆ ಮುಂದಾಗಲು ಸಲಹೆ

12:41 PM Sep 01, 2020 | Suhan S |

ಬೆಂಗಳೂರು: ಕೋವಿಡ್ ಸೋಂಕಿತರಿಗೆ ನೆರವಾಗುವಸಲುವಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿರುವ ಪೊಲೀಸರಂತೆ ನಾಗರಿಕರು ಸಹ ಪ್ಲಾಸ್ಮಾ ದಾನಮಾಡಲು ಕೈ ಜೋಡಿಸಬೇಕು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದರು. ಪ್ಲಾಸ್ಮಾ ದಾನದ ಕುರಿತ ಜಾಗೃತಿಗಾಗಿ ಕೆಎಸ್‌ಆರ್‌ಪಿ ವತಿಯಿಂದ ಭಾನುವಾರ ನಡೆದ ಸೈಕಲ್‌ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

Advertisement

ಕೋವಿಡ್ ವಿರುದ್ಧ ದೇಶವೇ ಹೋರಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ವಾರಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೂ ಸೋಂಕು ತಗುಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ ಹಲವು ಸಿಬ್ಬಂದಿ ಪ್ಲಾಸ್ಮಾ ದಾನಮಾಡಿರುವುದು ಶ್ಲಾಘನೀಯ. ಅದರಂತೆ ಪ್ಲಾಸ್ಮಾದಾನದ ಕುರಿತು ಜಾಗೃತಿ ಮೂಡಿಸಲು ಕೆಎಸ್‌ ಆರ್‌ಪಿ ಸೈಕಲ್‌ ಜಾಥಾ ನಡೆಸುತ್ತಿದ್ದು, ಪ್ಲಾಸ್ಮಾ ದಾನಕ್ಕೆ ನಾಗರಿಕರು ಕೈಜೋಡಿಸಬೇಕೆಂದರು. ಕೆಎಸ್‌ಆರ್‌ಪಿ ಎಡಿಜಿಪಿ, ಅಲೋಕ್‌ಕುಮಾರ್‌ ಮಾತನಾಡಿ, ಕೆಎಸ್‌ಆರ್‌ಪಿ ವತಿಯಿಂದ ಈಗಾಗಲೇ ಹಲವು ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಿದ್ದು ಔದಾರ್ಯ ಮೆರೆದಿದ್ದಾರೆ. ಜತೆಗೆ, 167 ಸಿಬ್ಬಂದಿ ಪ್ಲಾಸ್ಮಾದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಇದೇ ವೇಳೆ ಪ್ಲಾಸ್ಮಾ ದಾನಮಾಡಿದ ಕೆಎಸ್‌ಆರ್‌ಪಿ ಸಿಬ್ಬಂದಿಗೆ, ಡಿಜಿಪಿ ಪ್ರವೀಣ್‌ ಸೂದ್‌, ಅಭಿನಂದನಾ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ಕೆಎಸ್‌ಆರ್‌ಪಿ ಮಹಿಳಾ ಸೈಕ್ಲಿಂಗ್‌ ತಂಡ ಹಾಗೂ ಐಎಸ್‌ಡಿಯ ಕಮಾಂಡೋ ಪಡೆ ಭಾಗವಹಿಸಿದ್ದ ಸೈಕ್ಲಿಂಗ್‌ ಜಾಥಾ ಅಶೋಕ ನಗರದ ಹಾಕಿ ಕ್ರೀಡಾಂಗಣದಿಂದ ಆರಂಭಗೊಂಡು, ಎಂ.ಜಿ.ರಸ್ತೆ, ವಿಧಾನಸೌಧ, ಮಾರ್ಗವಾಗಿ ರಿಚ್‌ ಮಂಡ್‌ ವೃತ್ತದಿಂದ ಆಗಮಿಸಿ ಹಾಕಿ ಕ್ರೀಡಾಂಗಣ ತಲುಪಿತು. ಜಾಥಾದಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌, ಕಮಾಂಡೆಂಟ್‌ ಗಳಾದ ರಾಮಕೃಷ್ಣಪ್ರಸಾದ್‌, ಗಿರೀಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next