Advertisement

ಬಾಂಬ್‌ ಪ್ರಕರಣ: ಆದಿತ್ಯ ರಾವ್‌ ವಿರುದ್ಧ ಆರೋಪ ಪಟ್ಟಿ ವಿಳಂಬ

11:19 AM Apr 14, 2020 | sudhir |

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್‌ನ ತನಿಖೆಗೆ ಸಂಬಂಧಿಸಿ ಬ್ರೈನ್‌ ಮ್ಯಾಪಿಂಗ್‌ ಮಾತ್ರ ಬಾಕಿ ಇದ್ದು, ಉಳಿದಂತೆ ಇತರ ಎಲ್ಲ ತನಿಖಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಈ ಮಧ್ಯೆ ಪ್ರಕರಣದ ಆರೋಪ ಪಟ್ಟಿ (ಚಾರ್ಜ್‌ ಶೀಟ್‌) ತಯಾರಾಗಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಲಭಿಸಿದೆ. ರಾಜ್ಯ ಸರಕಾರದ ಅನುಮತಿ ಮಾತ್ರ ಬಾಕಿ ಉಳಿದಿದೆ.

Advertisement

ಬೆಂಗಳೂರಿಗೆ ಕರೆದೊಯ್ಯಬೇಕು
ಬ್ರೈನ್‌ ಮ್ಯಾಪಿಂಗ್‌ ಮಾಡಿಸಲು ಆರೋಪಿ ಆದಿತ್ಯ ರಾವ್‌ನನ್ನು ಬೆಂಗಳೂರಿಗೆ ಕರೆದೊಯ್ಯಬೇಕಾಗಿದೆ. ಆರೋಪ ಪಟ್ಟಿಗೆ ಸರಕಾರದ ಅನುಮತಿ ಪಡೆದುಕೊಳ್ಳಲು ಬೆಂಗಳೂರಿಗೆ ಹೋಗಬೇಕಿದೆ. ಆದರೆ, ಪ್ರಸ್ತುತ ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿರುವುದರಿಂದ ಈ ಎರಡು ಕೆಲಸಗಳು ವಿಳಂಬವಾಗಿವೆ. ಈ ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಕೆಗೆ ನಿಗದಿ ಪಡಿಸಿರುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಲಾಕ್‌ಡೌನ್‌ ತೆರವುಗೊಂಡ ಬಳಿಕ ಆರೋಪಿಯ ಬ್ರೈನ್‌ ಮ್ಯಾಪಿಂಗ್‌ ಹಾಗೂ ಆರೋಪ ಪಟ್ಟಿಗೆ ಸರಕಾರದ ಅನುಮತಿ ಪಡೆದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ವಿವರಿಸಿವೆ.

ಆರೋಪಿ ಆದಿತ್ಯ ರಾವ್‌ 2020ರ ಜ. 20ರಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ ಬಿಲ್ಡಿಂಗ್‌ನ ಟಿಕೆಟ್‌ ಕೌಂಟರ್‌ ಬಳಿ ಇರುವ ಪ್ರಯಾಣಿಕರ ಆಸನಗಳ ಸಮೀಪ ಬಾಂಬ್‌ ಇರುವ ಬ್ಯಾಗ್‌ ಇರಿಸಿ, ಬಳಿಕ ಪಾರ್ಕಿಂಗ್‌ ಪ್ರದೇಶದಲ್ಲಿದ್ದ ಆಟೋ ರಿಕ್ಷಾ ಏರಿ ಪರಾರಿಯಾಗಿದ್ದ. ಮಂಗಳೂರು ಪೊಲೀಸರು ಆತನನ್ನು ತನಿಖೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ತಮ್ಮ ಕಸ್ಟಡಿಗೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಗುರುತು ಪತ್ತೆ ಪರೇಡ್‌ ಪೂರ್ತಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next