ಚಿತ್ರರಂಗದಲ್ಲಿ ಸೋಲಿರಲಿ, ಗೆಲುವಿರಲಿ, ದೊಡ್ಡ ಚಿತ್ರವಿರಲಿ, ಸಣ್ಣದೇ ಇರಲಿ ನಿರಂತರವಾಗಿ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಲೇ ಒಂದು ಬ್ರೇಕ್ಗಾಗಿ ಕಾಯುತ್ತಿರುವ ಅನೇಕ ಹೀರೋಗಳಿದ್ದಾರೆ. ಅಂತಹವರ ಸಾಲಿಗೆ ಯಶಸ್ ಸೂರ್ಯ ಕೂಡ ಒಬ್ಬರು. ಯಶಸ್ ಸೂರ್ಯ ಇದುವರೆಗೆ ಸುಮಾರು ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ತಮ್ಮದ್ದೊಂದು ಛಾಪನ್ನೂ ಮೂಡಿಸಿದ್ದಾರೆ.
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸ್ವೀಕರಿಸಿ, ಕೆಲಸ ಮಾಡಿದ ಚಿತ್ರಗಳ ಮೇಲೆ ಅತೀವ ನಂಬಿಕೆ ಇಟ್ಟವರು. ನಂಬಿಕೆ ಹುಸಿಯಾದಾಗ, ಮತ್ತದೇ ನಂಬಿಕೆಯಲ್ಲೆ ಕೆಲಸ ಮಾಡುತ್ತ ಬಂದವರು. ಅವರೀಗ ಖುಷಿಯಲ್ಲಿದ್ದಾರೆ. ಆ ಖುಷಿಗೆ ಕಾರಣ, ಈ ವರ್ಷ ಅವರು ಅಭಿನಯಿಸಿರುವ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಕುರಿತು ಯಶಸ್ ಸೂರ್ಯ “ಉದಯವಾಣಿ’ ಜೊತೆ ಮಾತನಾಡಿದ್ದು ಹೀಗೆ.
“ನನ್ನ ಸಿನಿಮಾ ಕೆರಿಯರ್ನಲ್ಲಿ ಬಹು ನಿರೀಕ್ಷೆಯ ಚಿತ್ರವೆಂದರೆ ಅದು “ರಾಮಧಾನ್ಯ’. ಈಗಾಗಲೇ ಚಿತ್ರೀಕರಣ ಮುಗಿದು, ಬಿಡುಗಡೆಗೆ ಸಜ್ಜಾಗಿದೆ. ಇದರ ಹಿಂದೆಯೇ, “ಚಿಟ್ಟೆ’ ಕೂಡ ಬಿಡುಗಡೆಯಾಗಲಿದೆ. ಇನ್ನು, ದರ್ಶನ್ ಅವರ “ಕುರುಕ್ಷೇತ್ರ’ ಚಿತ್ರದಲ್ಲೂ ನಕುಲ ಪಾತ್ರ ನಿರ್ವಹಿಸಿದ್ದು, ಅದು ಕೂಡ ಜೂನ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಮಧ್ಯೆ ಒಂದಷ್ಟು ಕಥೆಗಳನ್ನೂ ಕೇಳಿದ್ದೇನೆ. ಅದರಲ್ಲಿ “ಲಂಕಾಪುರ’ ಎಂಬ ಚಿತ್ರ ಓಕೆ ಆಗಿದ್ದು, ಬಹುಶಃ ಜೂನ್ ಇಲ್ಲವೇ ಜುಲೈನಲ್ಲಿ ಆ ಪ್ರಾಜೆಕ್ಟ್ ಶುರುವಾಗಲಿದೆ. ನಾನು ಒಳ್ಳೆಯ ಚಿತ್ರದಲ್ಲೇ ಕೆಲಸ ಮಾಡಬೇಕು ಅಂತ ಕಾದಿದ್ದುಂಟು. ಬಂದ ಅವಕಾಶವನ್ನು ಒಪ್ಪಿಕೊಂಡು, ಮಾಡಿದಾಗ, ತಪ್ಪಿನ ಅರಿವಾಗುತ್ತಾ ಹೋಯ್ತು. ಇನ್ನು ಮುಂದೆ ತುಂಬಾ ಎಚ್ಚರದಿಂದ ಹೆಜ್ಜೆ ಇಡಬೇಕು ಅಂದುಕೊಂಡಿದ್ದೇನೆ. ಒಳ್ಳೆಯ ಕಥೆ, ಪಾತ್ರ ಹಾಗೂ ಒಳ್ಳೆಯ ತಂಡ ಇದ್ದರೆ ಮಾತ್ರ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಅಂತಹ ಚಿತ್ರ ಮಾಡುವುದಕ್ಕಾಗಿಯೇ ನಾನು ಕಳೆದ ಎರಡು ವರ್ಷದಿಂದ ಯಾವುದೇ ಸಿನಿಮಾ ಮಾಡದೆ ಒಂದು ಸಿನಿಮಾಗೆ ಕಾದೆ.
“ಲೆಜೆಂಡ್’ ಎಂಬ ಚಿತ್ರಕ್ಕಾಗಿ ನಾನು ಎರಡು ವರ್ಷಗಳ ಕಾಲ ಕೂದಲು ಬಿಟ್ಟಿದ್ದೆ. ಎಲ್ಲವೂ ಪಕ್ಕಾ ಆಗಿತ್ತು. ಅದಕ್ಕಾಗಿಯೇ ನಾನು ಎರಡು ವರ್ಷ ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಆದರೆ, “ಲೆಜೆಂಡ್’ ಎಂಬ ಶೀರ್ಷಿಕೆ ಕೊನೆಗೆ ಶಿವಣ್ಣ ಅವರ ಚಿತ್ರಕ್ಕೆ ಹೋಯ್ತು. ಆ ಟೀಮ್ ಕೂಡ ಯಾಕೋ, ಸುಮ್ಮನಾಯ್ತು. ನಾನು ಎರಡು ವರ್ಷ ಕಾದಿದ್ದೂ ವೇಸ್ಟ್ ಆಗೋಯ್ತು. ಅದರಿಂದ ನಾನು ಬಹಳಷ್ಟು ಪಾಠ ಕಲಿತಿದ್ದೂ ಉಂಟು. ಆ ಬಳಿಕ “ಚಕ್ರವರ್ತಿ’, “ಸೈಕೋ ಶಂಕ್ರ’,” “ಜಿಲೇಬಿ’ ಸೇರಿದಂತೆ ಒಂದಷ್ಟು ಚಿತ್ರ ಮಾಡಿದೆ. ಅವ್ಯಾವೂ ಸದ್ದು ಮಾಡಲಿಲ್ಲ. ಇನ್ನು ಮುಂದೆಯಾದರೂ ಸದ್ದು ಮಾಡವ ಚಿತ್ರದಲ್ಲಿ ನಾನಿರಬೇಕು ಅಂತ ನಿರ್ಧರಿಸಿದ್ದೇನೆ ಎಂಬುದು ಯಶಸ್ ಸೂರ್ಯ ಮಾತು.
“ರಾಮಧಾನ್ಯ’ ಚಿತ್ರದ ಬಿಡುಗಡೆಗೆ ಕಾದಿರುವ ಅವರು, “ಅದು ನನ್ನ ಪಾಲಿನ ವಿಶೇಷ ಎನ್ನಬಹುದು. ಯಾಕೆಂದರೆ, ಅದರಲ್ಲಿ ನನ್ನದು ನಾಲ್ಕು ಶೇಡ್ ಇರುವ ವಿಭಿನ್ನ ಪಾತ್ರ. ಈ ಹಿಂದೆ ಬೇರೆ ಜಾನರ್ನ ಕಥೆವುಳ್ಳ ಚಿತ್ರದಲ್ಲಿ ಮಾಡಿದ್ದೆ. ಇಲ್ಲಿ ಕನಕದಾಸರು, ರಾಮ ಕುರಿತ ವಿಷಯವಿದೆ. ಅಭಿನಯಕ್ಕೆ ಹೆಚ್ಚ ಒತ್ತು ಇರುವಂತಹ ಪಾತ್ರ ಇಲ್ಲಿದೆ.
ಇನ್ನು, “ಚಿಟ್ಟೆ’ ನನಗೊಂದು ವಿಶೇಷ ಚಿತ್ರ. ಅದೊಂದು ಗಂಡ-ಹೆಂಡತಿ ನಡುವಿನ ಸಾಮರಸ್ಯ ಸಾರುವ ಚಿತ್ರ. ಲವ್ಸ್ಟೋರಿ ಇದೆ, ರೊಮ್ಯಾನ್ಸ್ ಇದೆ. ಅದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಂದೇಶವೂ ಇದೆ. ಈ ಚಿತ್ರ ಬಿಡುಗಡೆ ಎದುರು ನೋಡುತ್ತಿದ್ದೇನೆ. ನಂತರ “ಲಂಕಾಪುರ’ ಎಂಬ ಚಿತ್ರ ಸೆಟ್ಟೇರಲಿದೆ. ಒಂದಂತೂ ನಿಜ. ನನಗೊಂದು ಬ್ರೇಕ್ ಬೇಕು. ಅದಕ್ಕಾಗಿ ಕಾಯುತ್ತಿರುವುದಂತೂ ಸತ್ಯ.
ಇದುವರೆಗೆ ಮಾಡಿದ ಚಿತ್ರಗಳೆಲ್ಲವೂ ಹೇಗೋ ಗೊತ್ತಿಲ್ಲ. ಇನ್ನು ಮುಂದೆ ಗಟ್ಟಿ ಇರುವ ಕಥೆ, ಪಾತ್ರ ಒಪ್ಪಿ ಮಾಡುತ್ತೇನೆ. ಪ್ರತಿಯೊಬ್ಬ ನಟನಿಗೂ ತಾನು ಮಾಡಿದ ಚಿತ್ರದ ಮೇಲೆ ನಿರೀಕ್ಷೆ ಇರುತ್ತೆ. ಆರಂಭದಲ್ಲಿ ಕಥೆ ಹೇಳುವ ನಿರ್ದೇಶಕರು ಹಾಗೇ ಚಿತ್ರ ಮಾಡಿದರೆ, ಎಲ್ಲವೂ ಸರಿ ಇರುತ್ತೆ. ಆದರೆ, ಹಾಗೆ ಆಗಲ್ಲ. ನಾನೂ ಕೆಲವೊಮ್ಮೆ ಎಡವಿದ್ದೇನೆ. ಮುಂದೆ ಹಾಗೆ ಆಗುವುದಿಲ್ಲ ಎನ್ನುತ್ತಾರೆ ಯಶಸ್ ಸೂರ್ಯ.