Advertisement

ಏಕಾಂಗಿ ಸಂಚಾರಿ ಎಲ್ಲಾ ಜಾನರ್‌ಗಳಿಗೂ ಸಲ್ಲುವ

06:00 AM Apr 20, 2018 | |

“ನಾನು ಯಾವ ಜಾನರ್‌ಗೆ ಸೇರುತ್ತೇನೋ ನನಗೇ ಗೊತ್ತಿಲ್ಲ …’

Advertisement

– ಹೀಗೆ ಹೇಳಿ ನಕ್ಕರು ಸಂಚಾರಿ ವಿಜಯ್‌. ಅವರೆದುರು “ಕೃಷ್ಣ ತುಳಸಿ’ ಸಿನಿಮಾ ಪೋಸ್ಟರ್‌ ಇತ್ತು. “ನೋಡಿ, ಆ ಸಿನಿಮಾದಲ್ಲಿ ನಾನು ಅಂಧನಾಗಿ ನಟಿಸಿದ್ದೇನೆ. ಇದು ಕೂಡಾ ಒಂದು ಪ್ರಯೋಗಾತ್ಮಕ ಸಿನಿಮಾ. ಆದರೆ, ಕಮರ್ಷಿಯಲ್‌ ಆಗಿ ತೋರಿಸಿದ್ದಾರೆ. ಇದಕ್ಕೂ ಮುನ್ನ ಬಿಡುಗಡೆಯಾದ “ವರ್ತಮಾನ’ದಲ್ಲಿ ನಾನು ವರ್ತಮಾನದಲ್ಲಿ ಬದುಕುವ ವ್ಯಕ್ತಿ. “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದಲ್ಲಿ ನನ್ನದು ಸ್ಕಿಜೋಫ್ರೆನಿಯ ರೋಗ ಇರುವ ವ್ಯಕ್ತಿ … ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳು ಸಿಗುತ್ತಿವೆ. ಈಗ ನೀವೇ ಹೇಳಿ ನಾನು ಯಾವ ಜಾನರ್‌ಗೆ ಸೇರುವ ನಟ’ ಸಂಚಾರಿ ವಿಜಯ್‌ ಮರುಪ್ರಶ್ನೆ ಹಾಕಿದರು. 

ಅವರು ಹೇಳಿದ್ದರಲ್ಲೂ ಅರ್ಥವಿತ್ತು. “ನಾನು ಅವನಲ್ಲ ಅವಳು’ ಚಿತ್ರದ ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಬಂದ ನಂತರವಂತೂ ಪ್ರಯೋಗಾತ್ಮಕ ಚಿತ್ರ ಮತ್ತು ಪಾತ್ರ ಎಂದರೆ ಸಂಚಾರಿ ವಿಜಯ್‌ ಎಂಬಂತಾಗಿದೆ. ಸಾಮಾನ್ಯವಾಗಿ ಪ್ರಯೋಗಾತ್ಮಕ ಸಿನಿಮಾ ಎಂದರೆ ಹೀರೋಗಳು ಬೆಚ್ಚಿಬೀಳುತ್ತಾರೆ. ಆದರೆ, ವಿಜಯ್‌ ಮಾತ್ರ ಹೆಚ್ಚುಹೆಚ್ಚು ಪ್ರಯೋಗಾತ್ಮಕ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಮಟ್ಟಿಗೆ ಅವರು ಪ್ರಯೋಗಾತ್ಮಕ ಚಿತ್ರಪಥದಲ್ಲಿ ಏಕಾಂಗಿ ಸಂಚಾರಿ ಎಂದರೆ ತಪ್ಪಿಲ್ಲ. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರು ಮೊದಲು ಬಡಿಯೋದು ಸಂಚಾರಿ ವಿಜಯ್‌ ಮನೆಬಾಗಿಲು. ಅದಕ್ಕೆ ಸರಿಯಾಗಿ ಸಂಚಾರಿ ವಿಜಯ್‌ ಕೂಡಾ ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅವರ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. “ಕೆಲವರು ನನ್ನನ್ನು ಕೇಳುತ್ತಾರೆ, ಏನ್‌ ಸಾರ್‌ ಈ ತರಹ ಪಾತ್ರಗಳು ಸಿಗುತ್ತಿವೆ ಎಂದು. ಇದಕ್ಕೆ ನನ್ನ ಅದೃಷ್ಟ ಎನ್ನಬೇಕೋ ಗೊತ್ತಿಲ್ಲ. ಆದರೆ, ನನ್ನನ್ನು ಸವಾಲಿಗೆ ಒಡ್ಡುವಂತಹ ಪಾತ್ರಗಳು ಸಿಗುತ್ತಿರೋದಂತೂ ನಿಜ’ ಎನ್ನುತ್ತಾರೆ.

ಪ್ರಯೋಗಾತ್ಮಕ ಸಿನಿಮಾಗಳು ನಿರ್ದೇಶಕನ, ನಟನಾ ಕ್ರಿಯಾಶೀಲತೆಯನ್ನು ಎತ್ತಿತೋರಿಸುತ್ತವೆ ನಿಜ. ಆದರೆ, ಅದರ ಜೊತೆಗೆ ಅಂತಹ ಸಿನಿಮಾಗಳಿಗೆ ಯಶಸ್ಸು ಸಿಗದೇ ಹೋದಾಗ ಪ್ರಯೋಗ ಜನರಿಗೆ ತಲುಪುವುದಿಲ್ಲ. ಆದರೆ, ಸಂಚಾರಿ ವಿಜಯ್‌ಗೆ ಮುಂದೊಂದು ದಿನ ಪ್ರಯೋಗಾತ್ಮಕ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುವ, ಅದಕ್ಕೆ ಆದ ಒಂದು ಪ್ರೇಕ್ಷಕ ವರ್ಗ ಸೃಷ್ಟಿಯಾಗುವ ವಿಶ್ವಾಸವಿದೆ. “ಒಂದಲ್ಲ ಒಂದು ದಿನ ನಾವು ಗೆಲ್ಲುತ್ತೇವೆ, ಪ್ರಯೋಗಾತ್ಮಕ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತದೆ. ಅದಕ್ಕೆ ಉದಾಹರಣೆಯಾಗಿ “ಗುಳು’, “ಒಂದು ಮೊಟ್ಟೆಯ ಕಥೆ’ಯಂತಹ ಸಿನಿಮಾಗಳು ಯಶಸ್ವಿಯಾಗಿವೆ. ಜನರನ್ನು ತನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹೇಗೆ ಮಲಯಾಳಂ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತವೋ ಅದೇ ರೀತಿ ಮುಂದೆ ಕನ್ನಡದಲ್ಲೂ ಸಿನಿಮಾಗಳು ಬರುತ್ತವೆ ಎಂಬ ವಿಶ್ವಾಸವಿದೆ’ ಎನ್ನುವ ಸಂಚಾರಿ ವಿಜಯ್‌ ಒಂದು ಮಾತು ಹೇಳಲು ಮರೆಯುವುದಿಲ್ಲ. ಅದು ಪ್ರಯೋಗಾತ್ಮಕ ಸಿನಿಮಾ ಮಾಡುತ್ತೇನೆ ಎಂದು ಹೊರಡುವ ನಿರ್ದೇಶಕರಿಗೆ. “ಯಾವುದೇ ಒಂದು ಸಿನಿಮಾದ ಸೋಲಿಗೆ ನಾವು ಪ್ರೇಕ್ಷಕರನ್ನು ದೂರುವುದು ಸರಿಯಲ್ಲ. ಸಿನಿಮಾ ಜನರಿಗೆ  ಯಾಕೆ ಇಷ್ಟವಾಗಿಲ್ಲ ಎಂಬುದನ್ನು ವಿಶ್ಲೇಷಿಸಬೇಕು. ಇನ್ನು ಪ್ರಯೋಗಾತ್ಮಕ ಸಿನಿಮಾ ಮಾಡುತ್ತೇನೆ ಎಂದು ಅರ್ಥವಿಲ್ಲದೇ ಏನೋ ಮಾಡಿದರೆ ಜನ ಸ್ವೀಕರಿಸುವುದಿಲ್ಲ. ಜನರಿಗೆ ಸುಲಭವಾಗಿ ಅರ್ಥವಾಗುವ ಜೊತೆಗೆ ನಿರ್ದೇಶಕ ಕ್ರಿಯಾಶೀಲತೆಯನ್ನು ತೋರಿಸುವ ರೀತಿಯ ಸಿನಿಮಾ ಮಾಡಬೇಕು’ ಎನ್ನುವುದು ವಿಜಯ್‌ ಮಾತು. 

ಇತ್ತೀಚೆಗೆ ಬಿಡುಗಡೆಯಾದ ಸಂಚಾರಿ ವಿಜಯ್‌ ನಟನೆಯ “ವರ್ತಮಾನ’ ಚಿತ್ರದ ವಿಮರ್ಶಕರಿಂದ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಮಾತನಾಡುವ ಸಂಚಾರಿ ವಿಜಯ್‌, “ಸಿನಿಮಾ ಬಿಡುಗಡೆಗೆ ಮುನ್ನ ಆ ಸಿನಿಮಾವನ್ನು ತೋರಿಸುವಂತೆ ನಾನು ನಿರ್ದೇಶಕರನ್ನು ಕೇಳಿಕೊಂಡೆ. ಆದರೆ ಅವರು ನನಗೆ ತೋರಿಸಿಲ್ಲ. ಆ ಚಿತ್ರದ ಬಗ್ಗೆ ಟೀಕೆಯ ಜೊತೆಗೆ ಇನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳನ್ನು ಇಷ್ಟಪಡುವ ಒಂದು ವರ್ಗಕ್ಕೆ ಆ ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿದೆ’ ಎನ್ನುತ್ತಾರೆ ಅವರು. 

Advertisement

ಸಂಚಾರಿ ವಿಜಯ್‌ ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಂಡು ಎಲ್ಲೋ ಒಂದು ಕಡೆ ಎಡವುತ್ತಿದ್ದಾರಾ ಎಂಬ ಮಾತೂ ಕೂಡಾ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಆದರೆ, ವಿಜಯ್‌ಗೆ ಆ ಬಗ್ಗೆ ಯಾವುದೇ ಬೇಸರವಿಲ್ಲ. ಅದಕ್ಕೆ ಕಾರಣ ಅವರಿಗೆ ಸಿಗುತ್ತಿರುವ ಪಾತ್ರಗಳು. “ನಾನು ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂಬ ಭಾವ ನನ್ನನ್ನೂ ಕಾಡುತ್ತಿತ್ತೇನೋ. ಆದರೆ, ನನಗೆ ಸಿಗುತ್ತಿರುವ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ನಿರ್ದೇಶಕರು ಕೂಡಾ ಈ ಪಾತ್ರವನ್ನು ನೀವೇ ಮಾಡಬೇಕು ಎಂದು ಬರುತ್ತಾರೆ. ಈ ತರಹದ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಹೊಸ ಬಗೆಯ ಪಾತ್ರಗಳು ಸಿಗುತ್ತಿರುವುದರಿಂದ ನಾನು ಒಪ್ಪಿಕೊಳ್ಳುತ್ತಿದ್ದೇನಷ್ಟೇ’ ಎನ್ನುವುದು ವಿಜಯ್‌ ಮಾತು. ಇದೇ ವೇಳೆ ವಿಜಯ್‌ ತಾನು ನಿರ್ದೇಶಕರ ನಟ ಎನ್ನುತ್ತಾರೆ. “ನಾನು ನಿರ್ದೇಶಕರ ಕಲ್ಪನೆಗೆ ಜೀವ ತುಂಬಲು ಪ್ರಯತ್ನಿಸುತ್ತೇನೆ. ಅದು ಮಾಡಲ್ಲ, ಇದು ಮಾಡಲ್ಲ, ನನ್ನಿಂದ ಆಗೋದೇ ಇಷ್ಟು ಎಂದಾಗ ನಿರ್ದೇಶಕರ ಆತ್ಮಸ್ಥೈರ್ಯ ಇನ್ನು, ವಿಜಯ್‌ ಅವರ ಮೊದಲ ಆದ್ಯತೆ ಯಾವತ್ತಿದ್ದರೂ ಪ್ರಯೋಗಾತ್ಮಕ ಚಿತ್ರಗಳಿಗಂತೆ. ಹಾಗಂತ ಅವರು ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಲ್ಲ ಎಂದಲ್ಲ. ಈಗಾಗಲೇ “ಪಾದರಸ’, “ಆರನೇ ಮೈಲಿ’, “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಹಾಗೂ ಈ ವಾರ ತೆರೆಕಾಣುತ್ತಿರುವ “ಕೃಷ್ಣ ತುಳಸಿ’ ಚಿತ್ರಗಳು ವಿಭಿನ್ನ ಅಂಶದೊಂದಿಗಿನ ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂಬುದು ವಿಜಯ್‌ ಮಾತು.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next