Advertisement

ಅಚ್ಚ ಕನ್ನಡದ ಅರ್ಚನಾ

07:27 PM Mar 14, 2018 | |

“ರಮೇಶ್‌ರಂಥ ಗಂಡ ಎಲ್ಲರಿಗೂ ಸಿಗಲಿ’ ಎಂಬ ಒಂದೇ ಸಾಲು ಸಾಕು ರಮೇಶ್‌ ಅರವಿಂದ್‌ ಮತ್ತು ಅರ್ಚನಾ ರಮೇಶ್‌ರ ದಂಪತಿ ಎಷ್ಟು ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಯಲು. ಜೀವನದಲ್ಲಿ ಸರಳವಾಗಿದ್ದು, ಸಂತಸಪಡುವುದು ಹೇಗೆ ಎಂಬುದಕ್ಕೆ ಈ ದಂಪತಿಯೇ ಉದಾಹರಣೆ. ನಮಗೆ ಮೆಟೀರಿಯಲಿಸ್ಟಿಕ್‌ ಜೀವನದಲ್ಲಿ ಆಸಕ್ತಿಯಿಲ್ಲ. ಜೀವನವನ್ನು ಪ್ರೀತಿಸಲು ಐಷಾರಾಮ ಇರಲೇಬೇಕೆಂದೇನೂ ಇಲ್ಲ. ನಮ್ಮನ್ನು ಪ್ರೀತಿಸುವ ಸ್ನೇಹಿತರು, ಸಂಬಂಧಿಗಳು ಇದ್ದರೆ ಸಾಕು ಎನ್ನುವುದು ಇವರ ಜೀವನ
ಪ್ರೀತಿಯನ್ನು ತೋರಿಸುತ್ತದೆ. ಮೂಲತಃ ಮಹಾರಾಷ್ಟ್ರದವರಾದ ಅರ್ಚನಾ, ಅಚ್ಚ ಕನ್ನಡತಿಯೇ ಎನ್ನುವಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ರಮೇಶ್‌ ಜೊತೆಗಿನ ತಮ್ಮ ದಾಂಪತ್ಯದ ಕುರಿತು ಇಲ್ಲಿ ಮಾತನಾಡಿದ್ದಾರೆ… 

Advertisement

ರಮೇಶ್‌ಗೆ ಮನಸೋಲಲು ಏನು ಕಾರಣ?
ಅವರು ತುಂಬಾ ಹ್ಯಾಂಡ್ಸಮ್‌, ಚಾರ್ಮಿಂಗ್‌ ಹುಡುಗ ಆಗಿದ್ರು. ಅವರ ಹಾಸ್ಯ ಪ್ರವೃತ್ತಿ ಯಾರನ್ನಾದರೂ ಸೆಳೆಯುವಂತಿತ್ತು. 10
ಜನ ಇದ್ದಲ್ಲೂ ರಮೇಶ್‌ ಎದ್ದುಕಾಣುತ್ತಿದ್ದರು. ಆದರೆ, ಅಷ್ಟೇ ಗಾಂಭೀರ್ಯ ಇತ್ತು ಅವರಲ್ಲಿ. ಕ್ಲಾಸ್‌ ಅಪೀಲ್‌ ಅಂತಾರಲ್ಲ, ಹಾಗೆ. ನೋಡಿದ ತಕ್ಷಣ ಇವನು ಪೋಲಿ ಹುಡುಗ ಅಲ್ಲವೇ ಅಲ್ಲ ಅಂತ ಯಾರಿಗಾದರೂ ಅವರ ಬಗ್ಗೆ ಅಭಿಪ್ರಾಯ ಮೂಡುತ್ತಿತ್ತು.

ರಮೇಶ್‌ ಎಂಜಿನಿಯರಿಂಗ್‌ ಪದವೀಧರರಾದರೂ ನಟನೆಯನ್ನು ವೃತ್ತಿಯಾಗಿ ತೆಗೆದುಕೊಂಡಿದ್ದರು. ನಿಮ್ಮ ಮನೆಯಲ್ಲಿ ಸಿನಿಮಾ ನಟನನ್ನು ಮದುವೆಯಾಗಲು ಒಪ್ಪಿಕೊಂಡರಾ?
ನನ್ನ ಅಪ್ಪನಿಗೆ ರಮೇಶ್‌ ಕಂಡರೆ ವಿಪರೀತ ಅಭಿಮಾನ. ಅವರ ಕಲೆಯನ್ನು ಅಪ್ಪ ತುಂಬಾ ಮೆಚ್ಚಿದ್ದರು. ರಮೇಶ್‌ ವ್ಯಕ್ತಿತ್ವ ಅಪ್ಪನಿಗೆ ತುಂಬಾ ಮೆಚ್ಚುಗೆಯಾಗಿತ್ತು. ನಮ್ಮ ಮನೆಯಲ್ಲಿ ಖುಷಿಯಿಂದಲೇ ಮದುವೆ ಮಾಡಿಕೊಟ್ಟರು. 

ಅವರ ಸಿನಿಮಾಗಳ ಶೂಟಿಂಗ್‌ಗೆ ಹೋಗುತ್ತೀರ? ಬೇರೆ ಬೇರೆ ನಟಿಯರ ಜೊತೆ ಅವರು ಅಭಿನಯಿಸುವಾಗ ಯಾವತ್ತಾದರೂ ಅಸೂಯೆ ಪಟ್ಟಿದ್ದು ಇದೆಯೇ?
ನಾನು ಶೂಟಿಂಗ್‌ಗೆ ಅಂತ ಹೋಗಿದ್ದು “ವೀಕೆಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದಲ್ಲೇ. ಅಲ್ಲಿಯವರೆಗೂ ಶೂಟಿಂಗ್‌ ನಡೆಯುವ ಸ್ಥಳ ಹೇಗಿರುತ್ತದೆ ಎಂದೂ ನಾನು ನೋಡಿರಲಿಲ್ಲ. ನನ್ನ ಅಪ್ಪ, ಮಾವ ಆಫೀಸ್‌ಗೆ ಹೋಗುತ್ತಿದ್ದರು. ಅವರ ಜೊತೆ ನಾವು ಆಫೀಸ್‌ಗೆ ಹೋಗ್ತಾ ಇರಲಿಲ್ಲ ಅಲ್ವಾ. ಇದೂ ಹಾಗೆಯೇ, ಶೂಟಿಂಗ್‌ ಸೆಟ್‌ ಎಂದರೆ ಪಿಕ್ನಿಕ್‌ ಸ್ಥಳವಲ್ಲ. ಅದೂ ಕೆಲಸ ಮಾಡುವ ಸ್ಥಳ. ಅಲ್ಲಿ
ಕುಟುಂಬದವರು ಹೋಗಿ ಕುಳಿತುಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಇನ್ನು, ರಮೇಶ್‌ ಯಾವ ನಟಿಯ ಜೊತೆ
ನಟಿಸಿದಾಗಲೂ ನನಗೆ ಯಾವ ಕ್ಷಣದಲ್ಲೂ ಅಸೂಯೆ ಆಗಿಯೇ ಇಲ್ಲ

ನೀವು ಉತ್ತರ ಭಾರತೀಯರು. ಕರ್ನಾಟಕದ ಕುಟುಂಬಕ್ಕೆ ಹೊಂದಿಕೊಳ್ಳುವುದು ಕಷ್ಟ ಆಗಲಿಲ್ಲವಾ?
ನನಗೆ ಹೊಸತರಲ್ಲಿ ದಕ್ಷಿಣ ಭಾರತೀಯ ಅಡುಗೆ ಅಷ್ಟು ಇಷ್ಟ ಆಗುತ್ತಿರಲಿಲ್ಲ. ಆದರೆ, ಹೊಂದಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಉತ್ತರ ಭಾರತ- ದಕ್ಷಿಣ ಭಾರತ ಕಾಂಬಿನೇಷನ್‌ನಿಂದ ಹೆಚ್ಚೇ ಖುಷಿ ಸಿಕ್ಕಿದೆ. ದೀಪಾವಳಿಯಲ್ಲಿ ರಮೇಶ್‌ ಮನೆಯಲ್ಲಿ ಬೆಳಗ್ಗೆ ಲಕ್ಷ್ಮಿ ಪೂಜೆ ಮಾಡಿ ಕರ್ನಾಟಕ ಶೈಲಿಯ ಅಡುಗೆ ಮಾಡಿ ಹಬ್ಬ ಆಚರಿಸಿದರೆ, ರಾತ್ರಿಗೆಲ್ಲಾ ಮತ್ತೆ ಮನೆಮಂದಿಯೆಲ್ಲಾ ನಮ್ಮ ಮನೆಗೆ ಬಂದು ಮತ್ತೂಮ್ಮೆ ಉತ್ತರ ಭಾರತೀಯ ಶೈಲಿಯಲ್ಲಿ ಪೂಜೆ, ಅಡುಗೆ ಮಾಡಿ ಹಬ್ಬ ಆಚರಿಸುತ್ತಿದ್ದೆವು. ಯಾರದ್ದಾದರೂ ಹುಟ್ಟುಹಬ್ಬ,
ಆ್ಯನಿವರ್ಸರಿ ಇದ್ದರೆ ಎರಡೂ ಕುಟುಂಬದ ಎಲ್ಲರೂ ರೆಸ್ಟೊರೆಂಟ್‌ಗೆ ಹೋಗಿ ಪಾರ್ಟಿ ಮಾಡುತ್ತಿದ್ದೆವು. ಸಾಂಪ್ರದಾಯಿಕವಾಗಿ ನಮ್ಮ
ನಡುವೆ ಭಿನ್ನತೆ ಇದೆ ಎಂದೇ ಅನ್ನಿಸುತ್ತಿರಲಿಲ್ಲ.

Advertisement

ರಮೇಶ್‌ ಅವರು ಶೂಟಿಂಗ್‌ನಿಂದ ಬಂದರೆ…
ನಮ್ಮೆಲ್ಲರಿಗಿಂತ ಅವರಿಗೆ ಹೆಚ್ಚು ಪ್ರಪಂಚಾನುಭವ ಇದೆ. ಶೂಟಿಂಗ್‌ಗಾಗಿ ಹಲವಾರು ಜಾಗಗಳಿಗೆ ಹೋಗುತ್ತಾರೆ. ಹಲವಾರು
ರೀತಿಯ ಜನರನ್ನು ಭೇಟಿಯಾತ್ತಿರುತ್ತಾರೆ. ಅವರು ಎಷ್ಟೇ ದಣಿದು ಬಂದರೂ ನಮ್ಮ ಜೊತೆ ಇಂಟೆರೆಸ್ಟಿಂಗ್‌ ವಿಷಯಗಳನ್ನು 
ಹಂಚಿಕೊಳ್ಳುತ್ತಾರೆ. ಆದರೆ, ನಾವು ಅವರ ಬಳಿ ಪ್ರಾಬ್ಲಿಮ್ಸ್‌ ಹೇಳ್ತೀವಿ. ಅವರು ಪರಿಹಾರ ಹೇಳಲಿ ಅಂತ ಕಾಯ್ತಿàವಿ. ನಾವು
ಏನೇ ಸಮಸ್ಯೆ ಹೊತ್ತುಕೊಂಡು ಹೋದರೂ ಅವರು ತಾಳ್ಮೆಯಿಂದ ಅದನ್ನು ಕೇಳಿಸಿಕೊಳ್ತಾರೆ. ಯಾವ ಕಾರಣಕ್ಕೂ ರೇಗುವುದಿಲ್ಲ.
ಸಮಸ್ಯೆಯನ್ನು ತಣ್ಣಗೆ ಬಗೆಹರಿಸುತ್ತಾರೆ. 

ಇಷ್ಟು ಚೆಂದವಾಗಿ ಕನ್ನಡ ಮಾತಾಡುವುದನ್ನು ಹೇಗೆ ಕಲಿತಿರಿ?
ನಮ್ಮ ತಂದೆಗೆ 2-3 ವರ್ಷಗಳಿಗೊಮ್ಮ ವರ್ಗಾವಣೆ ಆಗುತ್ತಿದ್ದುದರಿಂದ ನಾನು ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ ಎಲ್ಲಾ ಕಡೆ ಇದ್ದು ಬಂದಿದ್ದೇನೆ. ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ನಮ್ಮ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿದ್ದು. ಹಾಗಾಗಿ ತೆಲುಗು, ಒರಿಯಾ, ಮರಾಠಿ, ಕನ್ನಡ ಭಾಷೆಗಳನ್ನು ಅ ಆ ಇ ಈ ಇಂದ ಕಲಿತಿದ್ದೇನೆ. ಕನ್ನಡ ನನಗೆ ಸರಾಗವಾಗಿ ಮಾತಾಡಲು ಅಷ್ಟೇ ಅಲ್ಲ, ಓದಲೂ
ಬರುತ್ತದೆ. ನಾನು ಕಲಿತ ಎಲ್ಲಾ ಭಾಷೆಗಳಲ್ಲೂ ಕನ್ನಡವೇ ಅತಿ ಇಂಪಾದ ಭಾಷೆ. ಈ ಭಾಷೆಯಲ್ಲೇ ಒಂದು ಮಾಧುರ್ಯ ಇದೆ. ನನ್ನ
ತಾಯಿಭಾಷೆ ಹಿಂದಿ. ಈಗಲೂ ನನ್ನ ಮನಸ್ಸಿನ ಭಾಷೆ ಹಿಂದಿಯೇ. ನಾನು ಯೋಚಿಸುವುದೂ ಹಿಂದಿಯಲ್ಲೇ. ಹಿಂದಿಯಲ್ಲಿ ಯೋಚಿಸಿದ್ದನ್ನು ಕನ್ನಡದಲ್ಲಿ ಹೇಳುವುದು ನನಗೆ ಅಭ್ಯಾಸವಾಗಿ ಹೋಗಿದೆ. 

ಮಕ್ಕಳ ವಿಚಾರದಲ್ಲಿ ಹೆಮ್ಮೆ ಪಟ್ಟ ಕ್ಷಣಗಳು ಯಾವುವು?
ನನ್ನ ಮಗ ತುಂಬಾ ಚಿಕ್ಕವನಿದ್ದ, ಶಾಲೆಯಲ್ಲಿ ಮೊದಲ ಬಾರಿಗೆ ಭಾಷಣ ಸ್ಪರ್ಧೆಗಾಗಿ ವೇದಿಕೆ ಹತ್ತಿ, ತುಂಬಾ ಮುದ್ದಾಗಿ ಪುಟ್ಟ ಭಾಷಣವೊಂದನ್ನು ಮಾಡಿದ್ದ. ಬಳಿಕ ಸ್ಫರ್ಧೆಯ ವಿಜೇತರನ್ನು ಘೋಷಿಸಿ ದರು. ಅದರಲ್ಲಿ ಅರ್ಜುನ್‌ ಹೆಸರಿರಲಿಲ್ಲ. ಅವನಿಗೆ ಬಹುಮಾನ ತಪ್ಪಿ ಹೋಯಿತೆಂದು ಬೇಸರವಾಯಿತು. ಆದರೆ, ಅವನ ಭಾಷಣ ಅತ್ಯುತ್ತಮವಾಗಿದ್ದರಿಂದ ವಿಶೇಷ ಪ್ರಶಸ್ತಿಯನ್ನು
ಘೋಷಿಸಿದರು. ಆಗ ಆತನ ಮುಖದಲ್ಲಿ ಅರಳಿದ ಸಂತಸ ನನಗೆ ಈಗಲೂ ಕಣ್ಣಮುಂದೆ ಬರುತ್ತದೆ. ಮಕ್ಕಳಿಬ್ಬರೂ ಮನೆಗೆ ದೂರು ತಂದವರೇ ಅಲ್ಲ. ಶಿಕ್ಷಕರು ಅವರನ್ನು ಹೊಗಳುವುದನ್ನಷ್ಟೇ ನಾವು ಕೇಳಿರುವುದು. 

ಮಕ್ಕಳ ಜೊತೆ ರಮೇಶ್‌ ಸಮಯ ಕಳೆಯುತ್ತಾರಾ?
ಮಕ್ಕಳಿಬ್ಬರಿಗೂ ಅಪ್ಪನ ಜೊತೆ ಮಾತಾಡುತ್ತಾ ಸಮಯ ಕಳೆಯುವುದೆಂದರೆ ತುಂಬಾ ಇಷ್ಟ. ಅದೆಷ್ಟು ವಿಚಾರಗಳನ್ನು ಅಪ್ಪ ಮಕ್ಕಳು
ಚರ್ಚೆ ಮಾಡುತ್ತಾರೆ ಗೊತ್ತಾ? ಅವರು ಮಾತಿಗೆ ಕುಳಿತರೆ ತಂತ್ರಜ್ಞಾನ, ಸಾಹಿತ್ಯ, ಸಂಶೋಧನೆ ಅಂತ ದಿನವಿಡೀ ಮಾತಾಡುತ್ತಾರೆ. ಯಾವುದೇ ಸಮಸ್ಯೆ, ತೊಂದರೆಗಳಿದ್ದರೂ ಅವರ ಬಳಿಯೇ ಮೊದಲು ಹೇಳುವುದು. ನಾನು ಅವರಿಗೆ ಬಾಸ್‌ ಲೇಡಿ ಅಂತೆ. ನಾನು ರೇಗುತ್ತೀನಿ. ಆದರೆ, ಅವರಪ್ಪ ಯಾವ ಕಾರಣಕ್ಕೂ ಮಕ್ಕಳ ಮೇಲೆ ರೇಗಲ್ಲ. ನಮ್ಮ ಮಕ್ಕಳಷ್ಟೇ ಅಲ್ಲ, ನಮ್ಮ ಮೈದುನರ ಮಕ್ಕಳೂ ರಮೇಶ್‌ ಹತ್ತಿರವೇ ಬಂದು ಹರಟುವುದು. ಅವರ ಬ್ರೇಕ್‌ ಅಪ್‌ ಸ್ಟೋರಿಗಳನ್ನೂ ರಮೇಶ್‌ ಬಳಿ ಹಂಚಿಕೊಳ್ಳುತ್ತಾರೆ. 

ನಿಮ್ಮದು ಕೂಡು ಕುಟುಂಬವಂತೆ? ಸಂಬಂಧಗಳನ್ನು ಹೇಗೆ ನಿಭಾಯಿಸ್ತೀರಿ?
ನಾವೆಲ್ಲರೂ ಬಹಳಾ ಪ್ರೀತಿಯಿಂದ ಇದ್ದೇವೆ. ಮನೆಯಲ್ಲಿ ನಾವು ಮೂವರು ಓರಗಿತ್ತಿಯರು. ಇದುವರೆಗೂ ನಾವು ಯಾವ ವಿಷಯಕ್ಕೂ ಜಗಳ ಮಾಡಿಕೊಂಡಿಲ್ಲ. ಚಿಕ್ಕಪುಟ್ಟ ಮನಃಸ್ತಾಪಗಳು ಬರುತ್ತವೆ. ಆದರೆ, ಯಾವತ್ತೂ ಅದನ್ನು ವಿಕೋಪಕ್ಕೆ ತೆಗೆದುಕೊಂಡು ಹೋಗಿಲ್ಲ. ನನ್ನ ಮನೆಯಲ್ಲಿ ನನ್ನ ಮಗಳಿಗೆ ಸಿಗುವ ಪ್ರೀತಿಯೇ ನನ್ನ ಮೈದುನರ ಮಕ್ಕಳಿಗೂ ಸಿಗುತ್ತದೆ. ಅವರ ಮನೆಗಳಲ್ಲಿ ಅವರ ಮಕ್ಕಳನ್ನು ಹೇಗೆ ಕಾಣುತ್ತಾರೋ ಹಾಗೆಯೇ ನಮ್ಮ ಮಕ್ಕಳನ್ನೂ ಆಧರಿಸುತ್ತಾರೆ. ನಮಗೆ ಅಣ್ಣ ತಮ್ಮ ಆಸ್ತಿಗಾಗಿ ಹೊಡೆದಾಡಿಕೊಂಡರು, ಬೇರೆಯಾದರು ಎಂಬಂಥ ಸುದ್ದಿಗಳನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ಒಡಹುಟ್ಟಿದವರು ಹೇಗೆ ಕಚ್ಚಾಡಲು ಸಾಧ್ಯ ಅಂತನ್ನಿಸುತ್ತೆ. ನಮ್ಮ ಮನೆಯಲ್ಲಿ ಅಣ್ಣ ತಮ್ಮಂದಿರು ಮುನಿಸಿಕೊಂಡಿದ್ದನ್ನೂ ನಾನು ನೋಡಿಲ್ಲ.  

ಟೂರ್‌ಗೆ ಹೋದ ಅನುಭವ ಹೇಳಿ…
ನಮ್ಮ ಮನೆಯಲ್ಲಿ ಎಲ್ಲರಿಗೂ ಪ್ರವಾಸ ಅಂದ್ರೆ ತುಂಬಾ ಇಷ್ಟ. ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಇರುವಂಥ ಜಾಗಗಳಿಗೇ
ಹೆಚ್ಚಾಗಿ ನಾವು ಪ್ರವಾಸ ಹೋಗುತ್ತೇವೆ. ಅಪ್ಪ, ಮಕ್ಕಳು ಮಾಡದೇ ಇರುವ ಸಾಹಸ ಇಲ್ಲ. ಪ್ಯಾರಾಗ್ಲೆ„ಡಿಂಗ್‌, ವಾಟರ್‌ ಸ್ಕೀಯಿಂಗ್‌, ರಿವರ್‌ ರ್ಯಾμrಂಗ್‌ನಂಥ ಥ್ರಿಲ್‌ ಕೊಡುವ ಕ್ರೀಡೆಗಳು ಇರಬೇಕು. 10 ವರ್ಷಗಳ ಕೆಳಗೆ ನಾನೂ ಎಲ್ಲಾ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಈಗೀಗ ಯಾಕೋ ಯಾವುದೂ ಥ್ರಿಲ್‌ ಕೊಡುತ್ತಿಲ್ಲ. ಹಾಗಾಗಿ, ಅವರೆಲ್ಲ ಆಡುವುದನ್ನು ನೋಡುತ್ತಾ ಖುಷಿಪಡುತ್ತೇನೆ.

ರಮೇಶ್‌ ಅಭಿನಯದ ಮತ್ತು ಅವರು ನಿರ್ದೇಶಿಸಿದ ಯಾವ ಚಿತ್ರಗಳು ನಿಮಗೆ ಇಷ್ಟ?
“ಅಮೃತ ವರ್ಷಿಣಿ’ ನನಗೆ ತುಂಬಾ ಇಷ್ಟ. ಅವರು ನಿರ್ದೇಶಿಸಿದ “ರಾಮ ಭಾಮ ಶಾಮ’, “ಆ್ಯಕ್ಸಿಡೆಂಟ್‌’ ಇಷ್ಟ. 

ತುಂಬಾ ಕೋಪ ಬಂದ್ರೆ ರಮೇಶ್‌ ಏನು ಮಾಡುತ್ತಾರೆ?
ಅವರಿಗೆ ಕೋಪ ಬರುವುದೇ ಕಡಿಮೆ. ಒಂದು ವೇಳೆ ಬಂದರೆ, ಹೋಗಿ ಒಳ್ಳೆಯ ನಿದ್ದೆ ಮಾಡುತ್ತಾರೆ. ಎದ್ದು ಬರುವಾಗ ಕೋಪವೂ
ಇಳಿದರುತ್ತದೆ. ಜೊತೆಗೆ ಅದರ ಪರಿಣಾಮವೂ ತಗ್ಗಿರುತ್ತದೆ.

ನಿಮ್ಮ ಸುಖ ಸಂಸಾರದ ಗುಟ್ಟೇನು? 
ಎಲ್ಲಾ ಹುಡುಗಿಯರಿಗೂ ರಮೇಶ್‌ ರೀತಿಯ ಗಂಡನೇ ಸಿಗಲಿ ಎಂದು ನಾನು ಹಾರೈಸುತ್ತೇನೆ. ಮದುವೆಯಾಗಿ ಇಷ್ಟು ದಿನದಲ್ಲಿ ಒಮ್ಮೆಯೂ ಅವರು ಅಡುಗೆ ಬಗ್ಗೆ ದೂರಿಲ್ಲ. ಇಂಥದ್ದೇ ಬೇಕು ಎಂದು ಹೇಳಿಲ್ಲ. ಸುಖ ಸಂಸಾರದ ಸ್ವಲ್ಪ ಮಟ್ಟಿನ ಕ್ರೆಡಿಟ್‌ ಅನ್ನು ನಾನೂ ತಗೋತೀನಿ. ಅವರಿಗೆ ಇಷ್ಟ ಇಲ್ಲದ ಕೆಲಸ ನಾನು ಮಾಡುವುದೇ ಇಲ್ಲ. ಯಾವ ವಿಷಯಕ್ಕೂ ವಾದ ಮಾಡುವುದಿಲ್ಲ.
ಇಗೊ ಒಂದನ್ನು ಪಕ್ಕಕ್ಕೆ ಇಟ್ಟರೆ ಎಲ್ಲರದ್ದೂ ಸುಖೀ ಸಂಸಾರವೇ.

ಎಂಥ ಬಟ್ಟೆ ಧರಿಸಿದ್ರೂ ಅವರು ಸೂಪರ್‌…
ನನಗೆ ಶಾಪಿಂಗ್‌ ಅಂದ್ರೆ ಬೋರ್‌. ನನಗೆ ಚಿನ್ನ ಅಂದ್ರೂ ಅಷ್ಟಕ್ಕಷ್ಟೇ. ರಮೇಶ್‌ಗೆ ಕೇಳ್ತಾ ಇರಿ¤àನಿ, “ಚಿನ್ನ ಬೇಡ, ಬಟ್ಟೆ ಬೇಡ ಅಂತ ಹೇಳ್ಳೋ ಹೆಂಡ್ತಿ ಯಾರಿಗಾದರೂ ಸಿಕ್ತಾರ?’ ಅಂತ. ಶಾಪಿಂಗ್‌ನಲ್ಲಿ ಅವರಿಗಿಂತ ಹೆಚ್ಚು ಆಸಕ್ತಿ ನನಗಿದೆ. ಅವರಿಗೂ ನಾನೇ ಶಾಪಿಂಗ್‌
ಮಾಡುತ್ತೇನೆ. ನಾನು ಏನೇ ಶಾಪಿಂಗ್‌ ಮಾಡಿದರೂ ಅವರು ಅದನ್ನು ಖುಷಿಯಿಂದ ಹಾಕಿಕೊಳ್ಳುತ್ತಾರೆ. ಅವರು ಅಷ್ಟೊಂದು ಹ್ಯಾಂಡ್ಸಮ್‌ ಆಗಿರುವುದರಿಂದ ಏನು ಧರಿಸಿದರೂ ಚೆನ್ನಾಗಿ ಕಾಣುತ್ತಾರೆ. 

ಅವರು ಆರ್ಡಿನರಿ ಆತ್ಮವಲ್ಲ, ಮಹಾತ್ಮ!
ಒಬ್ಬ ವ್ಯಕ್ತಿ ಕೆರಿಯರ್‌ನಲ್ಲಿ ಯಶಸ್ವಿಯಾಗುವುದು ಬೇರೆ. ಆದರೆ, ಒಬ್ಬ ಮಗನಾಗಿ, ಅಪ್ಪನಾಗಿ, ಗಂಡನಾಗಿ, ಸಮಾಜದಲ್ಲಿ ಒಬ್ಬ ನಾಗರಿಕನಾಗಿ ಎಲ್ಲಾ ಪಾತ್ರಗಳಲ್ಲೂ ಯಶಸ್ವಿಯಾಗುವುದು ಸಾಮಾನ್ಯ ವಿಷಯವಲ್ಲ. ಬಿಡುವಿಲ್ಲದ ಕೆಲಸದ ಮಧ್ಯೆಯೂ
ತಮ್ಮ ಜವಾಬ್ದಾರಿಯನ್ನು ರಮೇಶ್‌ ಯಾವತ್ತೂ ಮರೆತವರಲ್ಲ. ಅವರ ಸ್ವಭಾವ ನನಗೆ ಇವತ್ತಿಗೂ ಸೋಜಿಗದ ಸಂಗತಿ. ಇವತ್ತಿನವರೆಗೂ ಅವರು ಧ್ವನಿ ಎತ್ತರಿಸಿ ಮಾತಾಡಿದ್ದನ್ನು, ಯಾರನ್ನೂ ದೂರಿದ್ದನ್ನು ನಾನು ನೋಡಿಲ್ಲ. ಅದಕ್ಕೇ ಅವರನ್ನು “ಮಹಾತ್ಮ’
ಎಂದೇ ಕರೆಯುವುದು. ಅವರು ಆರ್ಡಿನರಿ ವ್ಯಕ್ತಿಯಂತೂ ಅಲ್ಲ.

ನಮ್ಮ ಲವ್‌ನಲ್ಲಿ ಥ್ರಿಲ್‌ ಇರಲಿಲ್ಲ!
ಮದುವೆಗೂ ಮೊದಲು ನಮ್ಮ ಬಹುತೇಕ ಡೇಟಿಂಗ್‌ ಗಳು ನಮ್ಮ ಮನೆಯಲ್ಲಿಯೇ ನಡೆಯುತ್ತಿದ್ದವು. ನಮ್ಮಿಬ್ಬರ ಮನೆಯವರಿಗೂ ನಮ್ಮ ಪ್ರೀತಿ ಬಗ್ಗೆ ಗೊತ್ತಿತ್ತು. ರಮೇಶ್‌ ಒಮ್ಮೊಮ್ಮೆ ಶೂಟಿಂಗ್‌ ಮುಗಿಸಿಕೊಂಡು 3 ಗಂಟೆ ರಾತ್ರಿಯೆಲ್ಲಾ ನಮ್ಮ ಮನೆಗೆ ಬರುತ್ತಿದ್ದರು.
ನಮ್ಮಪ್ಪ ಬಾಗಿಲು ತೆರೆದು ಅವರಿಗೆ ಮಲಗಲು ವ್ಯವಸ್ಥೆ ಮಾಡುತ್ತಿದ್ದರು. ನಮ್ಮ ಡೇಟಿಂಗ್‌ನಲ್ಲಿ ಥ್ರಿಲ್‌ ಇರಲಿಲ್ಲ. ಕದ್ದುಮುಚ್ಚಿ
ಸುತ್ತುವುದು, ಉಡುಗೊರೆ ಪಡೆಯುವುದು, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದರೆ ಲವ್‌ನಲ್ಲಿ ಒಂದು ಥ್ರಿಲ್‌ ಇರುತ್ತದೆ. ನಮ್ಮ ಜೀವನದಲ್ಲಿ ಅಂಥದ್ದೇನೂ ನಡೆಯಲಿಲ್ಲ ಅಂತ ಇವತ್ತಿಗೂ ಬೇಜಾರಿದೆ.

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next