Advertisement

ಜಯ ಮನ ದನಿ

06:00 AM Nov 28, 2018 | |

ರಂಗಭೂಮಿ, ಕಿರುತೆರೆ, ಬರವಣಿಗೆ, ಸಾಮಾಜಿಕ ಚಟುವಟಿಕೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಜಯಲಕ್ಷ್ಮೀ ಪಾಟೀಲ್‌. “ಮುಕ್ಕು ಚಿಕ್ಕಿಯ ಕಾಳು’, “ನೀಲಕಡಲ ಬಾನು’ ಸೇರಿ 4 ಪುಸ್ತಕಗಳನ್ನು ಬರೆದಿದ್ದಾರೆ. “ಮುಕ್ತ ಮುಕ್ತ’, “ಮಹಾಪರ್ವ’, “ಕಿಚ್ಚು’ ಧಾರಾವಾಹಿಗಳಲ್ಲಿ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ “ಜನದನಿ’ ಎಂಬ ಸಂಘಟನೆ ಮೂಲಕ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದ್ದಾರೆ. ಓವರ್‌ ಟು ಜಯಲಕ್ಷ್ಮೀ ಪಾಟೀಲ್‌…

Advertisement

– ಬಾಲ್ಯ ದಿನಗಳು ಹೇಗಿದ್ದವು? 
ಸಿಂಧಗಿ ಬಳಿಯ ಪುಟ್ಟ ಹಳ್ಳಿಯಲ್ಲಿ ಬೆಳೆದಿದ್ದು. ನನ್ನ ತಂದೆ ಮೆಡಿಕಲ್‌ ಆಫೀಸರ್‌ ಆಗಿದ್ದರು. ಹಾಗಾಗಿ ಬಿಜಾಪುರದಲ್ಲಿ ನೆಲೆಸಿದೆವು. ನಾನು ಶಾಲೆ ಕಾಲೇಜು ಕಲಿತಿದ್ದೆಲ್ಲಾ ಬಿಜಾಪುರದಲ್ಲೇ. ಮದುವೆಯಾಗಿ ಹೋಗಿದ್ದೂ ಸಿಂಧಗಿ ತಾಲೂಕಿಗೇ. ಮನೆಯಲ್ಲಿ ನಾವು ಐವರು ಮಕ್ಕಳು. ನಾನೇ ಹಿರಿಯಳು. ನಮ್ಮದು ವಿದ್ಯಾವಂತರ ಕುಟುಂಬ. ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವುದು ವ್ಯರ್ಥ ಎಂಬಂಥ ಕಾಲದಲ್ಲಿ ನಮ್ಮ ಮನೆಯಲ್ಲಿ ಆ ವಾತಾವರಣವಿರಲಿಲ್ಲ. ಹೀಗಾಗಿ ನಾನು ಓದಿದೆ.

– ಓದಿನ ಗೀಳು ಅಂಟಿದ್ದು ಯಾವಾಗ?
ಅಪ್ಪ, ಅಮ್ಮ ಇಬ್ಬರೂ ಸಾಹಿತ್ಯಾಸಕ್ತರು. ಮನೆಯಲ್ಲಿ ದಿನಪತ್ರಿಕೆ ಜೊತೆ, ಆಗಿನ ಎಲ್ಲಾ ಪ್ರಸಿದ್ಧ ವಾರಪತ್ರಿಕೆಗಳು, ನಿಯತಕಾಲಿಕೆಗಳನ್ನು ಅಪ್ಪ ಮನೆಗೆ ತರಿಸುತ್ತಿದ್ದರು. ನಮ್ಮ ಊರಿನ ವಿರಕ್ತ ಮಠದಲ್ಲಿ ದೊಡ್ಡ ಲೈಬ್ರರಿ ಇತ್ತು. ಅಪ್ಪ, ಅಮ್ಮ ಅಲ್ಲಿಂದಲೂ ಪುಸ್ತಕಗಳನ್ನು ತಂದು ಓದುತ್ತಿದ್ದರು. ನಮಗಾಗಿ ಕಾಟೂìನ್‌ ಪುಸ್ತಕ, ವ್ಯಕ್ತಿ ಚಿತ್ರಣ ಪುಸ್ತಕಗಳನ್ನು ತರಿಸುತ್ತಿದ್ದರು. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಓದಿನ ಗೀಳು ಅಂಟಿತು. ನಾನು ಮೊದಲು ಓದಿದ ಕಾದಂಬರಿ ಜಿ.ವಿ. ಅಯ್ಯರ್‌ ಅವರ “ರೂಪದರ್ಶಿ’. ಆಗೆಲ್ಲ ನನಗೆ ಓದುವುದು ಎಂದರೆ ತಂದೆ, ತಾಯಿಯನ್ನು ಅನುಕರಿಸುವುದು ಎಂದೇ ಆಗಿತ್ತು. ಕಾಲೇಜು ಮುಗಿಸುವುದರೊಳಗೆ ಅದೆಷ್ಟು ಕಥೆ, ಕಾದಂಬರಿ ಓದಿದ್ದೇನೆ ಎಂಬುದಕ್ಕೆ ಲೆಕ್ಕವಿಲ್ಲ.

– ಬರವಣಿಗೆ ಕೃಷಿ ಆರಂಭಿಸಿದ್ದು ಯಾವಾಗ?
ಕಾಲೇಜಿನಲ್ಲಿರುವಾಗ ಚುಟುಕು ಕವಿತೆಗಳನ್ನು ಬರೆಯುತ್ತಿದ್ದೆ. ಆದರೆ ಬರಹವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಮದುವೆಯಾಗಿ 7-8 ವರ್ಷಗಳ ಬಳಿಕವೇ. ಮುಂಬೈನಲ್ಲಿದ್ದಾಗ ಸಾಹಿತಿಯೊಬ್ಬರು ನನ್ನಿಂದ ಒಂದು ಲೇಖನ ಬರೆಸಿದರು. ಬಳಿಕ ನಾನು ಕಥೆ, ನಾಟಕಗಳನ್ನು ಬರೆಯಲು ಪ್ರಾರಂಭಿಸಿದೆ. ಹಲವಾರು ಲೇಖನಗಳು ಪ್ರಕಟಗೊಂಡವು. “ನೀಲ ಕಡಲ ಬಾನು’ ಕವನ ಸಂಕಲನ, “ಹೇಳತೀನ ಕೇಳ’ ಲೇಖನಗಳ ಸಂಗ್ರಹ, ಹಿಂದಿ ಲೇಖಕ ವಿಜಯ್‌ ತೆಂಡೂಲ್ಕರ್‌ ಅವರ ಅನುವಾದಿತ ನಾಟಕ “ಬೇಬಿ’, “ಮುಕ್ಕು ಚುಕ್ಕಿಯ ಕಾಳು’ ಕಥಾ ಸಂಕಲನ ಬಿಡುಗಡೆಯಾಗಿವೆ. ಹೊಸದೊಂದು ಕವನ ಸಂಕಲನ ಬಿಡುಗಡೆಯಾಗಲಿಕ್ಕಿದೆ. 

– ಓದು ಬರಹದ ಜೊತೆ ಅಭಿನಯ ಹೇಗೆ ಶುರುವಾಯಿತು? 
ಅಮ್ಮ ಹೇಳ್ತಾ ಇದ್ರು, ನಾನು ಚಿಕ್ಕವಳಿದ್ದಾಗ ಅಳುವುದನ್ನೂ ಕನ್ನಡಿ ಮುಂದೆಯೇ ಮಾಡುತ್ತಿದ್ದೆ ಎಂದು. ಆಗ ರಾಜ್‌ಕುಮಾರ್‌, ಭಾರತಿಯನ್ನು ತುಂಬಾ ಇಷ್ಟ ಪಡುತ್ತಿದ್ದೆ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದೆ. ಒಳಗೆ ನಟನೆಯ ಕಿಚ್ಚು ಇತ್ತು. ಗೌರವಾನ್ವಿತ ಮನೆಯ ಹೆಣ್ಣು ಮಕ್ಕಳಿಗೆ ನಾಟಕಗಳಲ್ಲಿ ಅಭಿನಯಿಸಲು ಬಿಡುತ್ತಿರಲಿಲ್ಲ. ನನ್ನ ಮಾವ ಆಶೋಕ ಬಾದರದಿನ್ನಿ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಅವರ ತಂಡದಲ್ಲಿ ನಟಿಸಲೂ ನನಗೆ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ನಾವು ಮುಂಬೈನಲ್ಲಿದ್ದಾಗ ಅಲ್ಲಿ ರಂಗಭೂಮಿ ಕುರಿತ ಕಾರ್ಯಾಗಾರ ಏರ್ಪಾಡಾಗಿತ್ತು. ಅದರಲ್ಲಿ ಭಾಗವಹಿಸಿದೆ. ಅಲ್ಲಿ ನಟನೆ ತರಗತಿಯಲ್ಲಿ ನನ್ನ ನಟನೆ ನೋಡಿದ ಹೆಸರಾಂತ ರಂಗಭೂಮಿ ಕಲಾವಿದ ಸಾದಯ “ನನಗೆ ನಾ ಕೊಂದ ಹುಡುಗ’ ನಾಟಕದಲ್ಲಿ ನಟಿಸಲು ಅವಕಾಶ ಕೊಟ್ಟರು. ಅದರಲ್ಲಿ ನನ್ನದು ಮೂಕಿ ಪಾತ್ರ. ನನ್ನ ಅಭಿನಯ ನೋಡಿದವರಲ್ಲಿ ಹಲವರು ನಾನು ನಿಜವಾಗಿಯೂ ಮೂಕಿ ಎಂದುಕೊಂಡಿದ್ದರಂತೆ. ಅದಾದ ಬಳಿಕ ಮುಂಬೈನಲ್ಲಿ ಹಲವಾರು ನಾಟಕಗಳಲ್ಲಿ ನಟಿಸಿದ್ದೇನೆ. ಸ್ವತಃ ನಾನೇ ನಾಟಕ ಬರೆದು ನಿರ್ದೇಶನವನ್ನೂ ಮಾಡಿದ್ದೇನೆ. 

Advertisement

– ಮುಂಬೈನಿಂದ ಬೆಂಗಳೂರಿಗೆ ಬಂದ ಮೊದಮೊದಲ ದಿನಗಳು ಹೇಗಿದ್ದವು. ಇಲ್ಲಿಯ ಸಾಂಸ್ಕೃತಿಕ ರಂಗದಲ್ಲಿ ಹೇಗೆ ಒಬ್ಬರಾದಿರಿ? 
ಬೆಂಗಳೂರಿಗೆ ಬಂದ ದಿನಗಳಲ್ಲಿ ಜಯಂತ್‌ ಸರ್‌ ಬೆನಕ ರಂಗತಂಡಕ್ಕಾಗಿ “ಆಕಾಶ ಬುಟ್ಟಿ’ ನಾಟಕ ಬರೆಯುತ್ತಿದ್ದರು. ಅದರಲ್ಲಿ ನನಗೊಂದು ಪಾತ್ರ ಕೊಡಿಸಿದರು. ಸಿ. ಬಸವಲಿಂಗಯ್ಯ ನಾಟಕವನ್ನು ನಿರ್ದೇಶಿಸಿದ್ದರು. ನಾಟಕ ನೋಡಿದ ನಿರ್ದೇಶಕ ಪಿ. ಶೇಷಾದ್ರಿ ಅವರು ತಮ್ಮ “ಮೌನರಾಗ’ ಧಾರಾವಾಹಿಯಲ್ಲಿ ಉತ್ತಮ ಪಾತ್ರವನ್ನು ನನಗೆ ನೀಡಿದರು. ಹೀಗೆ ಧಾರಾವಾಹಿ ನಂಟೂ ಶುರುವಾಗಿತ್ತು. ಟಿ.ಎನ್‌. ಸೀತಾರಾಂ ಅವರ “ಮುಕ್ತಮುಕ್ತ’, “ಮಹಾಪರ್ವ’, ರವಿ ಕಿರಣ್‌ ಅವರ “ಬದುಕು’, “ಬೆಳಕು’, ಕೆ.ಎಂ. ಚೈತನ್ಯ ಅವರ “ಮುಗಿಲು’ ಸೇರಿ ಹಲವಾರು ಧಾರಾವಾಹಿ ಅವಕಾಶಗಳು ಹುಡುಕಿಕೊಂಡು ಬಂದವು. ಈಗ ಮೂರು ವರ್ಷಗಳಿಂದ ಆನ್‌ಲೈನ್‌ ವೇದಿಕೆ “ಜನ ದನಿ’, “ಈ ಹೊತ್ತಿಗೆ’ಯಲ್ಲಿ ಬ್ಯುಸಿ ಆಗಿದ್ದೇನೆ. ಅಲ್ಲದೇ ಮುಗಿಲು ಧಾರಾವಾಹಿಯಲ್ಲಿ ನಾನು ಅಜ್ಜಿ ಪಾತ್ರ ಮಾಡಿದ್ದೆ. ಅದಾದ ಬಳಿಕ ಹಲವಾರು ಅಜ್ಜಿ ಪಾತ್ರಗಳೇ ಬಂದವು. ನಾನು ನಟಿಸುವುದು ನನ್ನ ಖುಷಿಗಾಗಿ. ಹಾಗಾಗಿ ಖುಷಿ ನೀಡದ ಪಾತ್ರಗಳನ್ನು ಒಪ್ಪಿಕೊಳ್ಳುವುದು ಬೇಡ ಎಂದು ನನ್ನ ತೀರ್ಮಾನ. 

– ಜನದನಿಯ ಕಾರ್ಯಕ್ರಮಗಳು ಹೇಗೆ ನಡೆಯುತ್ತಿವೆ? 
ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಾಗ ಬಹುತೇಕ ಮನೆಗಳಲ್ಲಿ, ಸಂಸ್ಥೆಗಳಲ್ಲಿ ಮಾಡುವ ಮೊದಲ ಕೆಲಸ ಹೆಣ್ಣು ಮಕ್ಕಳಿಗೆ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿಕೊಡುವುದು. ಅದು ಮುಖ್ಯವೇ ಆದರೆ ನಾವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಯಾವೆಲ್ಲಾ ಆಯಾಮದಲ್ಲಿ ಲೈಂಗಿಕ ಕಿರುಕುಳದಂಥ ಪಿಡುಗನ್ನು ಸಮಾಜದಿಂದ ಹೊರಹಾಕಬಹುದು ಎಂದು ಚಿಂತಿಸಿದೆವು. ನಗರದ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಗಂಡು ಮಕ್ಕಳಿಗೆ ಮನೆಗಳಲ್ಲಿ ಎಂಥ ನಡವಳಿಕೆ ಕಲಿಸಬೇಕು ಎಂಬ ಕುರಿತು ತಿಳಿ ಹೇಳುತ್ತೇವೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಲಾಯರ್‌, ಪೊಲೀಸ್‌, ಆಪ್ತ ಸಮಾಲೋಚಕರಿಂದ ಮಾಹಿತಿ ಕೊಡಿಸುತ್ತೇವೆ. ಶಾಲೆ ಮಕ್ಕಳಿಗೆ ಗುಡ್‌ ಟಚ್‌ ಬ್ಯಾಡ್‌ ಟಚ್‌ ಬಗ್ಗೆ ತಿಳಿಸುತ್ತೇವೆ. ಈ ಕುರಿತಾದ ಜಾಗೃತಿಯನ್ನು ಮನೆಮನೆಗೂ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. 

– ಕುಟುಂಬ ಮತ್ತು ನಿಮ್ಮ ಈಗಿನ ಟೈಮ್‌ ಟೇಬಲ್‌ ಬಗ್ಗೆ ಹೇಳ್ತೀರಾ? 
ಪತಿ ಎನ್‌.ವಿ. ಪಾಟೀಲ್‌, ಖಾಸಗಿ ಸಿವಿಲ್‌ ಎಂಜಿನಿಯರಿಂಗ್‌ ಕಂಪನಿಯೊಂದರಲ್ಲಿ ಜನರಲ್‌ ಮ್ಯಾನೇಜರ್‌ ಆಗಿದ್ದಾರೆ. ನನಗೆ ಅವಳಿ ಜವಳಿ ಮಕ್ಕಳು ಅದಿತಿ, ಅಮೋಲ್‌ ಅಂತ. ಅದಿತಿ ಗ್ರಾಫಿಕ್‌ ಡಿಸೈನರ್‌. ಅಮೋಲ್‌ ಸಿನಿಮಾ ರಂಗದಲ್ಲಿದ್ದಾನೆ, ಜೊತೆಗೆ 3ಡಿ ಗ್ರಾಫಿಕ್ಸ್‌ ಡಿಸೈನರ್‌ ಕೂಡಾ. ಮಕ್ಕಳು ವಿಭಿನ್ನ ಹಾದಿ ಹಿಡಿದಿದ್ದಕ್ಕೆ ಖುಷಿ ಇದೆ. ನನಗೆ ಬಿಡುವಿನ ವೇಳೆ ಅಂತ ಇಲ್ಲ. ನನ್ನನ್ನು ನಾನು ಸದಾ ಬ್ಯುಸಿಯಾಗಿಟ್ಟುಕೊಳ್ಳುತ್ತೇನೆ. ಬೆಂಗಳೂರಿಗೆ ಬರುವುದಕ್ಕೂ ಮೊದಲು ಟೈಲರಿಂಗ್‌ ಕೆಲಸ ಮಾಡಿದ್ದೇನೆ, ಶಾವಿಗೆ ಮಾಡಿದ್ದೇನೆ, ಬಟ್ಟೆ ಮಾರಿದ್ದೇನೆ, ಬ್ಯೂಟಿ ಪಾರ್ಲರ್‌ ನಡೆಸಿದ್ದೇನೆ. ಈಗ ಹೆಚ್ಚಿನ ಸಮಯ ಸಾಮಾಜಿಕ ಚಟುವಟಿಕೆಗಳಲ್ಲಿ ಕಳೆಯುತ್ತೇನೆ. ಕಾರ್ಯಕ್ರಮಗಳ ಸಂಘಟನೆ, ಚರ್ಚೆ, ಆಯೋಜನೆ ಎಲ್ಲವೂ ಬಹುತೇಕ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲೇ ನಡೆಯುತ್ತದೆ. ತಿಂಗಳಿಗೊಮ್ಮೆ “ಇ ಹೊತ್ತಿಗೆ’ ತಂಡದಿಂದ ಪುಸ್ತಕ ಚರ್ಚೆ ಏರ್ಪಡಿಸುತ್ತೇವೆ. ಓದುವುದು ಬರೆಯುವುದಂತೂ ನಡೆದೇ ಇದೆ.

ಮೀಟೂ ಬರೋ ಮುಂಚೆಯೇ ನಾವು ಅಭಿಯಾನ ಆರಂಭಿಸಿದ್ದವು…
ನಿರ್ಭಯಾ ಪ್ರಕರಣ ನಡೆಯುವುಕ್ಕೂ ಮೊದಲು, ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಪ್ರಕರಣಗಳು ಕಿವಿಮೇಲೆ ಬಿದ್ದಾಗ ಬೇಸರವಾಗುತ್ತಿತ್ತು ಒಂದೆರಡು ದಿನಗಳ ನಂತರ ಅದನ್ನು ಮರೆಯುತ್ತಿದೆವು. ಆದರೆ ನಿರ್ಭಯಾ ಪ್ರಕರಣ ನನ್ನನ್ನು ಇನ್ನಿಲ್ಲದಂತೆ ಕಾಡಿತು. ಆಗ ಹುಟ್ಟಿಕೊಂಡಿದ್ದೇ “ಜನದನಿ’ ಎಂಬ ಆನ್‌ಲೈನ್‌ ವೇದಿಕೆ. ಹಲವಾರು ಸ್ಥರಗಳ ಮಹಿಳೆಯರಿಗೆ ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಬರೆಯಲು ಅಥವಾ ನಮ್ಮೊಂದಿಗೆ ಹಂಚಿಕೊಳ್ಳಲು ಕೇಳಿಕೊಂಡೆವು. ಭಾರತದಂಥ ದೇಶದಲ್ಲಿ ಮಹಿಳೆಯರು ತಮಗಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹೇಳಿಕೊಳ್ಳಲು ಮನಸ್ಸು ಮಾಡುವುದಿಲ್ಲ ಎಂಬ ಪೂರ್ವಾಗ್ರಹ ನಮಗೂ ಇತ್ತು. ಆದರೆ ನಮಗೆ ಸಿಕ್ಕ ಪ್ರತಿಕ್ರಿಯೆ ನೋಡಿ ನಾವೇ ದಂಗಾದೆವು. ವೈದ್ಯರಿಂದ ಕೂಲಿ ಮಾಡುವ ಮಹಿಳೆಯವರೆಗೆ ಹಲವರು ತಮ್ಮ ಅನುಭವ ಬಿಚ್ಚಿಟ್ಟರು. ಅವೆಲ್ಲವೂ “ಹೇಳತೀನಿ ಕೇಳ’ ಎಂಬ ಅಂಕಣ ರೂಪದಲ್ಲಿ ವೆಬ್‌ ಪತ್ರಿಕೆಯೊಂದರಲ್ಲಿ ಪ್ರಕಟವಾದವು. ನಾವು ಮಾಡಿದ್ದು ಕೂಡ “ಮೀಟೂ’ನಂಥ ಅಭಿಯಾನವೇ. ಆಗ ಅದಕ್ಕೆ “ಮೀಟೂ’ ಎಂಬ ಹೆಸರಿರಲಿಲ್ಲ ಅಷ್ಟೇ.

ಮನಸ್ಸು ವಾಪಸ್ಸು ಮುಂಬೈಗೆ ಎಳೆಯುತ್ತಿತ್ತು…
ನಾನು ಸಾಂಸ್ಕೃತಿಕ ಪ್ರಪಂಚಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದು ಮುಂಬೈನಲ್ಲೇ. ಅಲ್ಲಿ ಕನ್ನಡ ಸಂಘಟನೆಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಸಾಹಿತ್ಯ, ಕಲೆ ಅಂತ ತೊಡಗಿಕೊಂಡಿದ್ದೆ. ಅಲ್ಲಿ “ಕನ್ನಡಿಗರು’ ಎಂಬ ಅಭಿಮಾನವೊಂದೇ ಸಾಕಿತ್ತು, ಕರೆದು ಅವಕಾಶ ಕೊಡುತ್ತಿದ್ದರು. ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದೆ. ನಾವು ಮುಂಬೈ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದಾಗ ಶುರುವಿನಲ್ಲಿ ಅನಾಥಪ್ರಜ್ಞೆ ಕಾಡಿತ್ತು. ಇಲ್ಲಿಯ ಸಾಂಸ್ಕೃತಿಕ ವಲಯದಲ್ಲಿ ನನಗೆ ಯಾರೂ ಪರಿಚಯವಿರಲಿಲ್ಲ. ಆಗ ಜಯಂತ್‌ ಕಾಯ್ಕಿಣಿ ಅವರಿಗೆ ಕರೆ ಮಾಡಿ ನನಗೆ ವಾಪಸ್ಸು ಮುಂಬೈಗೆ ಹೋಗಬೇಕೆನಿಸುತ್ತಿದೆ. ಬೆಂಗಳೂರಿಗೆ ಒಗ್ಗಿಕೊಳ್ಳಲು ಆಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದೆ. ಬಳಿಕ ಅವರು ನನಗೆ ನಾಟಕವೊಂದರಲ್ಲಿ ಅಭಿನಯಿಸಲು ಅವಕಾಶ ಕೊಡಿಸಿದರು. ಅಲ್ಲಿಂದ ಇಲ್ಲಿಯವರೆಗೆ ಮತ್ತೆ ಯಾವತ್ತೂ ಅನಾಥಭಾವ ಕಾಡಿಲ್ಲ. 

– ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next