Advertisement

ಹರೀಶ್‌ ರಾಜ್ ಜರ್ನಿಗೆ 25 ವರ್ಷ: ಸಿನಿಯಾನ ಹಂಚಿಕೊಂಡ ನಟ

10:25 AM Aug 04, 2022 | Team Udayavani |

ವೃತ್ತಿ ಜೀವನದ 25ನೇ ವರ್ಷ ಎನ್ನುವುದು ಚಿತ್ರರಂಗದ ಪ್ರತಿಯೊಬ್ಬ ಕಲಾವಿದ, ನಿರ್ದೇಶಕ, ತಂತ್ರಜ್ಞನ ಪಾಲಿಗೆ ಸಾಕಷ್ಟು ಮಹತ್ವದ್ದಾಗಿರುತ್ತದೆ. ಇಂಥದ್ದೇ ವೃತ್ತಿ ಜೀವನದ ಮಹತ್ವದ ಘಟ್ಟದಲ್ಲಿದ್ದಾರೆ ನಟ ಕಂ ನಿರ್ದೇಶಕ ಹರೀಶ್‌ ರಾಜ್‌. ಹೌದು, ಹರೀಶ್‌ ರಾಜ್‌ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಮಾಧ್ಯಮಗಳ ಮುಂದೆ ಬಂದಿದ್ದ ಹರೀಶ್‌ ರಾಜ್‌, ತಮ್ಮ ಸಿನಿಯಾನದ ಅನುಭವಗಳನ್ನು, ನೆನಪುಗಳನ್ನು ಮೆಲುಕು ಹಾಕಿದರು.

Advertisement

“ಶೇಷಾದ್ರಿಪುರಂ ಕಾಲೇಜಿನಲ್ಲಿ ಮೊದಲ ಬಾರಿಗೆ ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ಅಭಿನಯ ಶುರುವಾಯ್ತು. ಅಲ್ಲಿಂದ ಸಿನಿಮಾ, ಸೀರಿಯಲ್‌, ಬಿಗ್‌ ಬಾಸ್‌ ವರೆಗೂ ಮುಂದುವರೆದುಕೊಂಡು ಬಂದಿದೆ. ಆರಂಭದ ದಿನಗಳಲ್ಲಿ ಗಿರೀಶ್‌ ಕಾಸರವಳ್ಳಿ, ಗಿರೀಶ್‌ ಕಾರ್ನಾಡ್‌, ಪಣಿ ರಾಮಚಂದ್ರ ಹೀಗೆ ಅನೇಕ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ವೃತ್ತಿ ಜೀವನದಲ್ಲಿ ಎಲ್ಲರೂ ನೀಡಿದ ಸಹಕಾರದಿಂದ 25 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯ್ತು. ನನ್ನ ವೃತ್ತಿ ಜೀವನದ ಬೆಳವಣಿಗೆಯಲ್ಲಿ ಪ್ರೋತ್ಸಾಹಿಸಿ, ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು, ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶ. ಈ ಸಂದರ್ಭದಲ್ಲಿ ನನ್ನ ಬೆಳವಣಿಗೆಗೆ ಕಾರಣರಾದ ಪ್ರತಿಯೊಬ್ಬರನ್ನು ನೆನಪಿಸಿಕೊಳ್ಳುತ್ತೇನೆ’ ಎಂದರು.

“ಸಾಮಾನ್ಯವಾಗಿ ಯಾವುದೇ ನಟನ ಅಭಿನಯದ ಬಗ್ಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಮರ್ಶೆಗಳು ಬರುವುದು ಸಹಜ. ಆದ್ರೆ ಈ ವಿಷಯದಲ್ಲಿ ನಾನು ತುಂಬ ಅದೃಷ್ಟಶಾಲಿ ಎಂದೇ ಹೇಳಬಹುದು. ಇಲ್ಲಿಯವರೆಗೆ ನಾನು ಅಭಿನಯಿಸಿದ ಸಿನಿಮಾಗಳು, ಸೀರಿಯಲ್‌, ನಿರ್ವಹಿಸಿದ ಪಾತ್ರಗಳು ಎಲ್ಲರದ ಬಗ್ಗೆಯೂ ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚುಗೆಯನ್ನೇ ಸೂಚಿಸುತ್ತ ಬಂದಿದ್ದಾರೆ. ಚಿತ್ರರಂಗದಲ್ಲಿ ಹಿರಿಯದಿಂದ ಕಿರಿಯರವರೆಗೂ ಎಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿದ್ದಾರೆ. ಇಲ್ಲಿಯವರೆಗೆ ಚಿತ್ರರಂಗದಲ್ಲಿ ಯಾರಿಂದಲೂ ಬೇಸರವಾಗಲಿ, ನೋವಾಗಲಿ ಆಗಿಲ್ಲ. ನನ್ನನ್ನು ಜೊತೆಯಾಗಿಸಿಕೊಂಡು ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಿರ್ಮಾಪಕರು ಮತ್ತು ಸಹ ಕಲಾವಿದರಿಗೂ ಈ ವಿಷಯದಲ್ಲಿ ನಾನು ಋಣಿಯಾಗಿದ್ದೇನೆ’ ಎಂದರು.

ಇದೇ ವೇಳೆ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, “ಹರೀಶ್‌ ರಾಜ್‌ ನಾನು ನೋಡಿದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು. ಸಾಮಾನ್ಯವಾಗಿ ನನ್ನ ಸಿನಿಮಾಗಳಲ್ಲಿ ಯಾವುದೇ ಕಲಾವಿದರನ್ನು ಎರಡನೇ ಬಾರಿಗೆ ಪಾತ್ರಕ್ಕೆ ಆಯ್ಕೆಮಾಡಿ ಕೊಳ್ಳುವುದು ತೀರಾ ವಿರಳ. ಉಮಾಶ್ರೀ ಅವರನ್ನು ಬಿಟ್ಟರೆ, ಎರಡನೇ ಬಾರಿಗೆ ನನ್ನ ಸಿನಿಮಾದಲ್ಲಿ ಅಭಿನಯಿಸಿದ ನಟ ಹರೀಶ್‌ ರಾಜ್‌. ಚಿತ್ರರಂಗದಲ್ಲಿ ಹರೀಶ್‌ ರಾಜ್‌, 25 ವರ್ಷಗಳನ್ನು ಪೂರೈಸಿದ್ದು ನಿಜಕ್ಕೂ ಖುಷಿಯ ವಿಷಯ. ಅವರ ಸಿನಿಮಾ ಜರ್ನಿ ಹೀಗೆ ಯಶಸ್ವಿಯಾಗಿ ಮುಂದುವರೆಯಲಿ’ ಎಂದು ಶುಭ ಹಾರೈಸಿದರು.

ಇದನ್ನೂ ಓದಿ:ಸ್ಕೇಟಿಂಗ್ ಬೋರ್ಡ್​ನಲ್ಲೆ ಕಾಶ್ಮೀರಕ್ಕೆ ಹೊರಟಿದ್ದ ಕೇರಳದ ಯುವಕ ರಸ್ತೆ ಅಪಘಾತದಲ್ಲಿ ಸಾವು!

Advertisement

ಈ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್‌, ನಿರ್ಮಾಪಕ ಮಧುಸೂದನ್‌ ಗೌಡ, ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಮತ್ತು ನಟ-ನಿರ್ದೇಶಕ ಸುನೀಲ್‌ ಪುರಾಣಿಕ್‌ ಮತ್ತಿತರರು ಹಾಜರಿದ್ದು, ಹರೀಶ್‌ ರಾಜ್‌ ಅವರೊಂದಿನಿಗ ಸಿನಿಮಾ ನಂಟಿನ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next