Advertisement

ಚಿರು ಮೊಗದಲ್ಲಿ ದಶಕ ಸಂಭ್ರಮ

12:21 PM Apr 13, 2019 | Hari Prasad |

ಚಿರಂಜೀವಿ ಸರ್ಜಾ ಈಗ ಸಿಕ್ಕಾಪಟ್ಟೆ ಬಿಜಿ. ಅದರಲ್ಲೂ ಅವರ ಸಿನಿಜರ್ನಿಗೆ ಈಗ ಒಂದು ದಶಕ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ಚಿರಂಜೀವಿ ಸಾಕಷ್ಟು ಚಿತ್ರ ಮಾಡಿದ್ದಾರೆ. ಅಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ. ಇಂದಿಗೂ ಬೇಡಿಕೆ ಹೆಚ್ಚಿಸಿಕೊಂಡಿರುವ ಅವರು ತಮ್ಮ ಒಂದು ದಶಕದ ಪಯಣ ಹೇಗೆಲ್ಲಾ ಇತ್ತು ಎಂಬ ಬಗ್ಗೆ ಹೇಳಿದ್ದೇನು ಗೊತ್ತಾ?

Advertisement

“ಈ ಹತ್ತು ವರ್ಷ ಹೇಗೆ ಉರಳಿತು ಅನ್ನೋದು ಗೊತ್ತಾಗಲೇ ಇಲ್ಲ. ಅದಕ್ಕೆ ಕಾರಣ, ಬಿಡುವಿಲ್ಲದೆ ಸಾಗಿದ ಸಿನಿಪಯಣ. ಹಾಗೊಮ್ಮೆ ಹಿಂತಿರುಗಿ ನೋಡಿದರೆ, ಖುಷಿಯಂತೂ ಆಗುತ್ತೆ. ಇಲ್ಲಿ ಒಂದು ದಶಕ ಪೂರೈಸುವುದು ಸುಲಭವಲ್ಲ. ಪೂರೈಸಿದರೂ ನಿರಂತರ ಸಿನಿಮಾ ಕೆಲಸ ಕಷ್ಟ. ಸದಾ ನಟನೆ ಮತ್ತು ಸಿನಿಮಾ ಕೆಲಸವನ್ನು ಜೀವಂತವಾಗಿಟ್ಟುಕೊಳ್ಳುವುದು ದೊಡ್ಡ ಸಾಹಸ. ನಾನು ಇಲ್ಲಿ ಎಲ್ಲವನ್ನೂ ಕಂಡಿದ್ದೇನೆ. ಈ ಒಂದು ದಶಕದಲ್ಲಿ ಏರಿಳಿತ ನೋಡಿದ್ದೇನೆ.

ನನ್ನ ಸಿನಿಮಾ ಬದುಕಲ್ಲೂ ಸೋಲು-ಗೆಲುವು ಕಂಡಿರುವುದೂ ಉಂಟು. ನಾನಿಲ್ಲಿ ಬಹಳಷ್ಟು ಪಾಠಗಳನ್ನು ಕಲಿತಿದ್ದೇನೆ. ಹೇಗೆ ಬದುಕಬೇಕು ಎಂಬುದನ್ನೂ ಅರಿತಿದ್ದೇನೆ. ಆರಂಭದಲ್ಲಿ ಇಲ್ಲಿಗೆ ಕಾಲಿಟ್ಟಾಗ, ಒಳ್ಳೆಯ ಸ್ವಾಗತವೇ ಸಿಕ್ಕಿತ್ತು. ಹಾಗಂತ ಸಕ್ಸಸ್‌ ಎಂಬುದು ಇಲ್ಲಿ ಸುಲಭವಾಗಿ ಸಿಗಲ್ಲ. ಶ್ರಮವಿದ್ದರೆ ಮಾತ್ರ ಇಲ್ಲಿ ಯಶಸ್ಸು. ಒಬ್ಬ ನಟನಿಗೆ ಯಶಸ್ಸು ಅನ್ನುವುದು ಸಿನಿಮಾ ಮಾಡಿದ ತಕ್ಷಣ ಸಿಗಲ್ಲ. ಒಂದು ಒಳ್ಳೆಯ ಸಿನಿಮಾ ಮಾಡಬೇಕು. ಆ ಚಿತ್ರ ನೋಡಿದ ಜನರು ಒಪ್ಪಿ, ಅಪ್ಪಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಹತ್ತು ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿ, ಈಗಲೂ ಬಿಜಿಯಾಗಿದ್ದೇನೆ ಎಂಬುದೇ ಸಂತಸ’ ಎಂಬುದು ಚಿರು ಮಾತು.

ಹಾಗಾದರೆ, ಚಿರಂಜೀವಿ ಸರ್ಜಾ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ ಎಂಬುದಂತೂ ನಿಜ. “ಸಿಂಗ’ ಚಿತ್ರ ಈಗಷ್ಟೇ ಮುಗಿದಿದೆ. ಉಳಿದಂತೆ “ಭೈರವ’. “ರಾಜ ಮಾರ್ತಾಂಡ’, “ಖಾಕಿ’, “ಜುಗಾರಿ ಕ್ರಾಸ್‌’, “ಆದ್ಯ’ ಚಿತ್ರಗಳಿವೆ. ಅವರೇ ಹೇಳುವಂತೆ, “ಸಿಂಗ’ ಚಿತ್ರದಲ್ಲಿ ಇದುವರೆಗೆ ಮಾಡದೇ ಇರುವಂತಹ ಪಾತ್ರ ಮಾಡಿದ್ದಾರಂತೆ. “ಅದೊಂದು ಸ್ವಮೇಕ್‌ ಚಿತ್ರವಷ್ಟೇ ಅಲ್ಲ, ಪಕ್ಕಾ ಕಮರ್ಷಿಯಲ್‌ ಚಿತ್ರ. “ಸಿಂಗ’ ನೋಡಿದವರಿಗೆ ನನ್ನ ಬದಲಾವಣೆ ಖಂಡಿತ ಸಿಗಲಿದೆ.

“ರಾಜ ಮಾರ್ತಾಂಡ’ ಬೇರೆಯದ್ದೇ ಕಥೆ ಹೊಂದಿದೆ. ಇಡೀ ಚಿತ್ರದುದ್ದಕ್ಕೂ ಮನರಂಜನೆಯೇ ಹೈಲೈಟ್‌. “ಭೈರವ’ ಮತ್ತು “ಖಾಕಿ’ ಚಿತ್ರಗಳು ಪಕ್ಕಾ ಮಾಸ್‌ ಅಂಶಗಳನ್ನು ಹೊಂದಿವೆ. ಇದುವರೆಗೆ ಕಾಮಿಡಿ, ಆ್ಯಕ್ಷನ್‌, ಸೆಂಟಿಮೆಂಟ್‌, ಹಾರರ್‌ ಹೀಗೆ ಎಲ್ಲಾ ಬಗೆಯ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಆದರೆ, “ಭೈರವ’, “ಖಾಕಿ’ ಚಿತ್ರಗಳಲ್ಲಿ ಹೊಸ ರೀತಿಯ ಪಾತ್ರವಿದೆ. ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂಬ ಗ್ಯಾರಂಟಿ ಕೊಡ್ತೀನಿ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

Advertisement

“ಜುಗಾರಿ ಕ್ರಾಸ್‌’ ಸಿನಿಮಾ ಬಗ್ಗೆ ಮಾತನಾಡುವ ಚಿರಂಜೀವಿ ಸರ್ಜಾ, “ನನ್ನ ವೃತ್ತಿ ಬದುಕಿನ ಮತ್ತೂಂದು ಹೆಮ್ಮೆ ಅಂದರೆ, ಅದು “ಜುಗಾರಿ ಕ್ರಾಸ್‌’ ಚಿತ್ರ. ಅದೊಂದು ದೊಡ್ಡ ಚಾಲೆಂಜ್‌. ಯಾಕೆಂದರೆ, ಅದು ಈಗಾಗಲೇ ಸಾಬೀತು ಮಾಡಿರುವ ಕಾದಂಬರಿ. ಸುಮಾರು ಎರಡುವರೆ ದಶಕಗಳ ಹಿಂದೆಯೇ “ಜುಗಾರಿ ಕ್ರಾಸ್‌’ ಏನು ಎಂಬುದನ್ನು ಸಾಬೀತುಪಡಿಸಿದೆ. ಆ ಕಾದಂಬರಿಗೆ ನ್ಯಾಯ ಸಲ್ಲಿಸುವುದು ಅಷ್ಟೇ ಸವಾಲಿನ ಕೆಲಸವೂ ಹೌದು. ಅದಕ್ಕೆ ಸಾಕಷ್ಟು ತಯಾರಿ ಬೇಕು. ಈಗಿನ ಟ್ರೆಂಡ್‌ಗೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಯೋಚನೆಯೂ ಮುಖ್ಯ. ಆ ಚಿತ್ರದ ಬಗ್ಗೆ ಕಾಳಜಿ, ಪ್ರೀತಿ, ಚಾಲೆಂಜ್‌ ಎಲ್ಲವೂ ಇದೆ. ನನ್ನ ಪ್ರಕಾರ ಇಂಡಿಯನ್‌ ಸಿನಿಮಾ ಹಿಸ್ಟರಿಯಲ್ಲಿ “ಜುಗಾರಿ ಕ್ರಾಸ್‌’ ಬೇರೆಯದ್ದೇ ರೀತಿಯಲ್ಲಿ ಕಾಣಲಿದೆ ಎಂಬ ನಂಬಿಕೆ ಇದೆ.

ಹಿರಿಯ ನಿರ್ದೇಶಕ ನಾಗಾಭರಣ ಅವರೊಂದಿಗಿನ ಕೆಲಸ, ಈಗಾಗಲೇ ನಿರೀಕ್ಷೆ ಹುಟ್ಟಿಸಿರುವ ಕಾದಂಬರಿ, ಆ ಪಾತ್ರ ಎಲ್ಲವೂ ಹೊಸ ಅನುಭವ. ಪಾತ್ರ ತಯಾರಿ ಹೇಗಿರಬೇಕೆಂಬ ಬಗ್ಗೆ ನಿರ್ದೇಶಕರು ಹೇಳಿದ್ದಾರೆ. ಅದರ ಮೇಲೆ ವರ್ಕ್‌ ಮಾಡುತ್ತಿದ್ದೇನೆ ಎನ್ನುವ ಚಿರಂಜೀವಿ ಸರ್ಜಾ, ಇದುವರೆಗೆ ನನ್ನ ಪಾಲಿಗೆ ಆ್ಯಕ್ಷನ್‌, ಸೆಂಟಿಮೆಂಟ್‌, ಹಾರರ್‌, ಕಾಮಿಡಿ ಹೀಗೆ ಎಲ್ಲಾ ಬಗೆಯ ಚಿತ್ರಗಳು ಸಿಕ್ಕಿವೆ. ನಾನು ಇಷ್ಟ ಪಟ್ಟ ಪಾತ್ರ ಸಿಕ್ಕಿದೆಯಾ, ಮಾಡಿದ್ದೇನಾ, ಇಲ್ಲವಾ, ಮುಂದೆ ಮಾಡ್ತೀನಾ ಗೊತ್ತಿಲ್ಲ. ಆದರೆ, ಪ್ರತಿ ಪಾತ್ರದಲ್ಲಿ ನನ್ನತನ ಎಂಬುದು ಇರಬೇಕು ಎಂದು ಬಯಸುತ್ತೇನೆ’ ಎಂಬುದು ಅವರ ಮಾತು.

ಚಿರು ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮಾಡಲು ಕಾರಣ ಏನು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಅದಕ್ಕೆ ಉತ್ತರ ಒಳ್ಳೆಯ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂಡವಂತೆ. “ಎಲ್ಲಕ್ಕಿಂತ ಮುಖ್ಯವಾಗಿ ಕಥೆ. ಆ ಕಥೆ ಧೈರ್ಯ ತುಂಬಿದರೆ, ಖಂಡಿತ ಮಾಡ್ತೀನಿ. ಇಷ್ಟೊಂದು ಚಿತ್ರ ಮಾಡಿದರೂ ಯಶಸ್ಸು ಎಳ್ಳಷ್ಟು ಇದೆ. ಹಾಗಂತ ಬೇಸರವಿಲ್ಲ. ಆದರೆ, ಈ ಹತ್ತು ವರ್ಷಗಳಲ್ಲಿ ಕೆಲ ಚಿತ್ರಗಳು ಒಳ್ಳೆಯ ಹೆಸರು ಕೊಟ್ಟಿವೆ ಎಂಬ ತೃಪ್ತಿ ಇದೆ’ ಎನ್ನುತ್ತಲೇ ಹಾಗೊಂದು ಸ್ಮೈಲ್‌ ಕೊಟ್ಟು ಮಾತು ಮುಗಿಸುತ್ತಾರೆ ಅವರು.

— ವಿಭ

Advertisement

Udayavani is now on Telegram. Click here to join our channel and stay updated with the latest news.

Next