ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಅಪಘಾತವಾಗುವ ಸ್ಥಳಗಳನ್ನು ಕಪ್ಪು ಜಾಗಗಳೆಂದು ಗುರುತಿಸಲಾಗಿದ್ದು, ಅಪಘಾತ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಪದೇಪದೆ ರಸ್ತೆ ಅಪಘಾತವಾಗುವ ಸ್ಥಳಗಳನ್ನು ಕಪ್ಪು ಜಾಗಗಳೆಂದು ಗುರುತಿಸ ಲಾಗಿದೆ. ಮತ್ತೆ ಆ ಸ್ಥಳದಲ್ಲೇ ಅಪಘಾತ ಮರುಕಳಿಸದಂತೆ ತಡೆಯಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು. ಕಪ್ಪು ಸ್ಥಳ ಎಂದು ಗುರುತಿಸಿರುವ ಕಡೆ ಇರುವ ತಿರುವುಗಳನ್ನು ನೇರ ರಸ್ತೆಗಳಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಿ ಸರ್ಕಾರಿ ಭೂಮಿ ಇಲ್ಲವೋ ಅಂತಹ ಕಡೆ ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿ ಕೊಂಡು, ರಸ್ತೆ ಅಗಲೀಕರಣ ಮಾಡಿ, ಅಪ ಘಾತ ತಪ್ಪಿಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ವಿಸ್ತಾರ ಮತ್ತು ಗುಣಮಟ್ಟ ಹೆಚ್ಚಾಗುತ್ತಿದ್ದರೂ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಇಂತಹ ರಸ್ತೆಗಳಲ್ಲಿ ಚಾಲಕರು 160 ರಿಂದ 200 ಕಿ.ಲೋ.ಮೀಟರ್ ವೇಗ ದಲ್ಲಿ ವಾಹನ ಚಾಲನೆ ಮಾಡುತ್ತಿರುವುದೇ ಅಪಘಾತ ಸಂಖ್ಯೆ ಹೆಚ್ಚಾಗಲು ಕಾರಣ. ಈ ರಸ್ತೆಗಳಲ್ಲಿ ವೇಗದ ಮಿತಿಗೆ ಕಡಿವಾಣ ಹಾಕುವ ಬಗ್ಗೆಯೂ ಸರ್ಕಾರ ಚಿಂತನೆ ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲಿ 949 ಕಡೆ ಕಪ್ಪು ಸ್ಥಳಗಳು (ಬ್ಲ್ಯಾಕ್ ಸ್ಟಾಟ್) ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಲೋಕೋಪಯೋಗಿ ಇಲಾಖೆ ಯಡಿಯ ರಸ್ತೆಗಳಲ್ಲಿ 249, ರಾಷ್ಟ್ರೀಯ ಹೆದ್ದಾರಿಯಲ್ಲಿ 173, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಕಡೆ 392 ಕಪ್ಪು ಜಾಗಗಳು ಸೇರಿವೆ ಎಂದರು. ಬೆಂಗಳೂರಿನ ರೇಸ್ಕೋರ್ಸ್ ಜಾಗವನ್ನು ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ. ಈ ವಿಚಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.
ರೇಸ್ಕೋರ್ಸ್ನಿಂದ ಸರ್ಕಾರಕ್ಕೆ ಬರಬೇಕಾಗಿರುವ 37 ಕೋಟಿ ರೂ. ಬಾಕಿ ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲವಾಗು ವಂತೆ ದುರಸ್ತಿ ಮಾಡಲಾಗಿದೆ. ಅಲ್ಲದೆ, ಶಾಶ್ವತವಾಗಿ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ನಂತರ ಉಂಟಾಗಿರುವ ತೊಂದರೆ ಮತ್ತು ಟೋಲ್ ದರ ಕಡಿತಗೊಳಿಸುವಂತೆ ಕೇಂದ್ರದ ಗಮನ ಸೆಳೆದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚರ್ಚೆ ಅನಗತ್ಯ: ಉಪ ಮುಖ್ಯಮಂತ್ರಿ ಹುದ್ದೆ ರದ್ದು ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಆಗುತ್ತಿದೆ ಅಷ್ಟೇ. ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಅಲ್ಲಿ ನಡೆದಾಗ ಮಾತ್ರ ಅದಕ್ಕೆ ಗೌರವ. ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ, ಬಿ.ಎಲ್. ಸಂತೋಷ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಟ್ಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ತೀರ್ಮಾನವಾಗಿದೆ. ಆ ಹುದ್ದೆ ರದ್ದು ಆಗಬೇಕಾದರೆ ಅಲ್ಲೇ ಎಂದು ಉಪಮುಖ್ಯಮಂತ್ರಿಗಳೂ ಆದ ಗೋವಿಂದ ಕಾರಜೋಳ ತಿಳಿಸಿದರು.