Advertisement

ಹೊಸ ರೀತಿಯ ಪರೀಕ್ಷೆ ಬರೆದು ಜಯಿಸಿದ ವಿದ್ಯಾರ್ಥಿಗಳು

11:16 PM Aug 09, 2021 | Team Udayavani |

ದ.ಕ. ಜಿಲ್ಲೆಯ 9 ವಿದ್ಯಾರ್ಥಿಗಳು ಟಾಪರ್ :

Advertisement

ಮಂಗಳೂರು: ಕೊರೊನಾ ಕಾರಣದಿಂದ 2 ದಿನ ನಡೆದ ಹೊಸ ಮಾದರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 9 ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆಯುವ ಮೂಲಕ ಗಮನಸೆಳೆದಿದ್ದಾರೆ. ಜಿಲ್ಲೆಯು “ಎ’ ಗ್ರೇಡ್‌ ಪಡೆದುಕೊಂಡಿದೆ.

ಸುಳ್ಯ ಹಾಗೂ ಪುತ್ತೂರು ವಲಯದಿಂದ ತಲಾ ಇಬ್ಬರು, ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ ವಲಯಗಳ ತಲಾ ಒಬ್ಬರು 625 ಅಂಕ ಗಳಿಸಿದ್ದಾರೆ. ಈ ಪೈಕಿ ಒಬ್ಬರು ಕನ್ನಡ ಮಾಧ್ಯಮ ಹಾಗೂ ಉಳಿದ 8 ವಿದ್ಯಾರ್ಥಿಗಳು ಆಂಗ್ಲಮಾಧ್ಯಮ ವಿದ್ಯಾರ್ಥಿಗಳು.

ದ.ಕ. ಜಿಲ್ಲೆಯಲ್ಲಿ ರೆಗ್ಯುಲರ್‌, ಖಾಸಗಿ ಹಾಗೂ ಪುನರಾವರ್ತಿತ ಸೇರಿ ಒಟ್ಟು 32,657 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಎಸೆಸಲ್ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯು ಎರಡನೇ ಸ್ಥಾನ (ಶೇ. 82.39) ಪಡೆದಿತ್ತು. 2017-18ರಲ್ಲಿ ನಾಲ್ಕನೇ (ಶೇ. 85.56) ಸ್ಥಾನ, 2018-19ರಲ್ಲಿ ಏಳನೇ ಸ್ಥಾನ (ಶೇ. 86.85) ಪಡೆದಿತ್ತು. ಆದರೆ ಕಳೆದ ಬಾರಿ ಕೊರೊನಾ ಕಾರಣದಿಂದ ಶೇಕಡಾವಾರು ಫಲಿತಾಂಶದ ಬದಲು ಗ್ರೇಡ್‌ ನೀಡಲಾಗಿತ್ತು. ಕಳೆದ ಬಾರಿ ಜಿಲ್ಲೆಗೆ “ಬಿ’ ಗ್ರೇಡ್‌ ಲಭಿಸಿದ್ದರೆ, ಈ ಬಾರಿ “ಎ’ ಗ್ರೇಡ್‌ ದೊರಕಿದೆ.

Advertisement

44ನೇ ವಯಸ್ಸಿನಲ್ಲಿ ಎಸೆಸೆಲ್ಸಿ ಪಾಸ್‌! :

ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿ ಟೆಂಪರರಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿರುವ ಜಯಶ್ರೀ ಅವರು ಎಸೆಸೆಲ್ಸಿ ಪರೀಕ್ಷೆ ಯಲ್ಲಿ  ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಅವರಿಗೆ ವಯಸ್ಸು 44. 5ನೇ ತರಗತಿವರೆಗೆ ಕಲಿತಿದ್ದರು. 10ನೇ ತರಗತಿಗೆ ನೇರವಾಗಿ ಪರೀಕ್ಷೆ ಬರೆದಿದ್ದರು.

ಉಡುಪಿ ಜಿಲ್ಲೆಯ 11 ವಿದ್ಯಾರ್ಥಿಗಳು ಟಾಪರ್  :

ಉಡುಪಿ: ಲಾಕ್‌ಡೌನ್‌ ಹಾಗೂ ಕೋವಿಡ್‌ ನಡುವೆಯೂ ನಡೆದ ಪರೀಕ್ಷೆ ಫ‌ಲಿತಾಂಶದಲ್ಲಿ ಉಡುಪಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ 11 ಮಂದಿ ಪೂರ್ಣ 625 ಅಂಕ ಗಳಿಸಿದ್ದಾರೆ.

1,339 ಮಂದಿ ಎ+ಶ್ರೇಣಿ, 2,260 ಮಂದಿ ಎ ಶ್ರೇಣಿ, 5,863 ಮಂದಿ ಬಿ ಶ್ರೇಣಿ, 3,858 ಮಂದಿ ಸಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 289 ಪ್ರೌಢ ಶಾಲೆಗಳಿಂದ ಒಟ್ಟು 14,380 ಮಕ್ಕಳು ಪರೀಕ್ಷೆ ಎದುರಿಸಿದ್ದರು.

ರೆಗ್ಯೂಲರ್‌ 6,836 ಬಾಲಕರು ಹಾಗೂ 6,484 ಬಾಲಕಿಯರು ಸಹಿತ 13,320 ಮಂದಿ, ರೆಗ್ಯೂಲರ್‌ ಪುನರಾವರ್ತಿತ 133 ಬಾಲಕರು, 70 ಬಾಲಕಿಯರು ಸಹಿತ ಒಟ್ಟು 203, ಖಾಸಗಿಯಾಗಿ 136 ಬಾಲಕರು ಹಾಗೂ 47 ಬಾಲಕಿಯರು ಸಹಿತ ಒಟ್ಟು 183 ಮಂದಿ, ಖಾಸಗಿ ಪುನರಾವರ್ತಿತ 482 ಬಾಲಕರು, 168 ಬಾಲಕಿಯರು ಸಹಿತ ಒಟ್ಟು 650 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸರಕಾರಿ ಶಾಲೆಗಳಲ್ಲಿ 389 ವಿದ್ಯಾರ್ಥಿಗಳು ಎ+, 875 ಮಂದಿ ಎ, 2,742 ಮಂದಿ ಬಿ, 2029 ಮಂದಿ ಸಿ ಗ್ರೇಡ್‌ ಪಡೆದುಕೊಂಡಿದ್ದಾರೆ.

ಅನುದಾನಿತ ಶಾಲೆಗಳ ಪೈಕಿ 195 ಮಂದಿ ಎ+, 421 ಮಂದಿ ಎ, 1,294 ಮಂದಿ ಬಿ, 1,140 ಮಂದಿ ಸಿ ಗ್ರೇಡ್‌ ಪಡೆದಿದ್ದಾರೆ. ಅನುದಾನ ರಹಿತ ಶಾಲೆಗಳ ಪೈಕಿ 755 ಮಂದಿ ಎ+, 964 ಮಂದಿ ಎ, 1,827 ಮಂದಿ ಬಿ, 689 ಮಂದಿ ಸಿ ಗ್ರೇಡ್‌ ಪಡೆದುಕೊಂಡಿದ್ದಾರೆ.

ಪೂರ್ಣ ಅಂಕ ನಿರೀಕ್ಷಿತ: ಶ್ರೀಶ ಶರ್ಮ :

ಪುತ್ತೂರು: ನೆಲ್ಯಾಡಿ ಸಂತ ಜಾರ್ಜ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ, ಕೌಕ್ರಾಡಿ ಗ್ರಾಮದ ಕೊಡೆಂಕೇರಿ ನಿವಾಸಿ ಶ್ರೀಶ ಶರ್ಮ 625 ಅಂಕ ಪಡೆದಿದ್ದಾರೆ.

ಪೂರ್ಣ ಅಂಕ ಸಿಗುವ ಬಗ್ಗೆ ವಿಶ್ವಾಸ ಹೊಂದಿದ್ದೆ. ದಿನಂಪ್ರತಿ ರಾತ್ರಿ ಓದುತ್ತಿದ್ದೆ. ಟ್ಯೂಷನ್‌ಗೆ ಹೋಗಿಲ್ಲ. ತಂದೆ, ತಾಯಿ, ಶಿಕ್ಷಕರ ಪ್ರೋತ್ಸಾಹ ಸಾಧನೆ ಮಾಡಲು ಕಾರಣವಾಗಿದೆ. ಮುಂದೆ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಕಂಪ್ಯೂಟರ್‌ ಎಂಜಿನಿಯರಿಂಗ್‌ ಅಭ್ಯಾಸ ಮಾಡುವ ಯೋಜನೆ ಹೊಂದಿ ದ್ದೇನೆ. ಈತ ಕೃಷ್ಣಮೂರ್ತಿ ಕೆ. ಮತ್ತು ಅನುಪಮಾ ದಂಪತಿಯ ಪುತ್ರ.

625/ 625

ತನಿಶಾಗೆ ಮೆಡಿಕಲ್‌ ಓದುವ ಗುರಿ :

ಪುತ್ತೂರು: ನಗರದ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಸಂಪ್ಯ ನಿವಾಸಿ  ತನಿಶಾ ರೈ 625 ಅಂಕ ಗಳಿಸಿದ್ದಾರೆ.

ದಿನದ ಪಠ್ಯ ಅಭ್ಯಾಸವನ್ನು ಆಯಾ ದಿನ ಸಂಜೆ ಮಾಡುತ್ತಿದ್ದೆ. ಪೂರ್ಣ ಅಂಕ ದೊರೆಯುವ ನಿರೀಕ್ಷೆ ಹೊಂದಿದ್ದೆ. ಫಲಿತಾಂಶದಿಂದ ಸಂತಸವಾಗಿದೆ. ನನ್ನ ಸಾಧನೆಗೆ ತಂದೆ, ತಾಯಿ, ಗುರುಗಳು ಕಾರಣ. ಮುಂದೆ ವಿಜ್ಞಾನ ವಿಷಯ ಅಭ್ಯಾಸ ಮಾಡಿ ಮೆಡಿಕಲ್‌ ಓದುವ ಗುರಿ ಇರಿಸಿಕೊಂಡಿದ್ದೇನೆ ಎನ್ನುತ್ತಾರೆ ಅವರು. ಈಕೆ ಸಂಪ್ಯದ ಪ್ರಸನ್ನ ಕುಮಾರ್‌ ರೈ ಹಾಗೂ ಜ್ಯೋತಿ ಪಿ. ರೈ ದಂಪತಿಯ ಪುತ್ರಿ.

625/ 625

ಬಡಗಿಯ ಪುತ್ರ ಶ್ರೀನಿಧಿ ಸಾಧನೆ :

ಕೋಟ: ಇಲ್ಲಿನ ವಿವೇಕ ವಿದ್ಯಾ ಸಂಸ್ಥೆಯ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿ, ಕೊರವಾಡಿ ನಿವಾಸಿ ಶ್ರೀನಿಧಿ ಆಚಾರ್‌ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಗಳಿಸಿದ್ದಾರೆ.

ಹೊಸ ವಿಧಾನದಲ್ಲಿ ಪರೀಕ್ಷೆ ನಡೆಸಿದ್ದರಿಂದ ಪೂರ್ಣ ಅಂಕಗಳಿಸುವ ಬಗ್ಗೆ ಅನುಮಾನವಿತ್ತು. ಆದರೆ ನನ್ನ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದು ಶ್ರೀನಿಧಿ ಸಂತಸ ಹಂಚಿಕೊಂಡರು ಈ ಸಾಧನೆಗೆ ಶಿಕ್ಷಕರ ಸಹಕಾರ, ಹೆತ್ತವರ ಉತ್ತೇಜನ ಕಾರಣ ಎಂದಿದ್ದಾರೆ. ಭವಿಷ್ಯದಲ್ಲಿ ಎಂಜಿನಿಯರ್‌ ಆಗುವಾಸೆ ವ್ಯಕ್ತಪಡಿಸಿದ್ದಾರೆ. ಈತನ ತಂದೆ ರಮೇಶ್‌ ಆಚಾರ್‌ ಬಡಗಿ ವೃತ್ತಿಯವ ರಾಗಿದ್ದು, ತಾಯಿ ಸುಜಾತಾ ಗೃಹಿಣಿ.

625/ 625

ಸಾತ್ವಿಕಗೆ ರಕ್ಷಣಾ ಅಕಾಡೆಮಿ ಸೇರುವಾಸೆ :

ಮಲ್ಪೆ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿರುವ ಇಲ್ಲಿನ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಸಾತ್ವಿಕ ಪಿ. ಭಟ್‌ ಅವರಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಸಂಶೋಧಕನಾಗುವ ಆಸೆ.

ಪಿಯುಸಿಯಲ್ಲಿ ಪಿಸಿಎಂಬಿ ಕಲಿತು ಎನ್‌ಡಿಎ ಪರೀಕ್ಷೆ ಬರೆಯ ಬೇಕೆಂದಿದ್ದೇನೆ. ಫಲಿತಾಂಶ ಖುಷಿ ತಂದಿದೆ. ಶಾಲಾ ಶಿಕ್ಷಕರ ಹಾಗೂ ಹೆತ್ತವರ ಪ್ರೋತ್ಸಾಹ ಕಾರಣ ಎಂದಿದ್ದಾರೆ. ಯಕ್ಷಗಾನ, ನಾಟಕ, ನೃತ್ಯದಲ್ಲಿ ಆಸಕ್ತಿ ಹೊದಿದ್ದಾರೆ. ಅವರ ತಂದೆ ಶಶಿಕುಮಾರ್‌ ಮುಖ್ಯ ಶಿಕ್ಷಕರು ಮತ್ತು ತಾಯಿ ತ್ರಿವೇಣಿ ಅಂಚೆ ಕಚೇರಿಯಲ್ಲಿ ಉದ್ಯೋಗಿ.

625/ 625

ಪ್ರತೀಕ್‌ಗೆ ಉದ್ಯಮಿಯಾಗುವ ಆಸೆ :

ಬಂಟ್ವಾಳ: ಎಸ್‌ವಿಎಸ್‌ ದೇವಸ್ಥಾನ ಆಂಗ್ಲ ಮಾಧ್ಯಮ ಶಾಲೆಯ ಎನ್‌. ಪ್ರತೀಕ್‌ ಮಲ್ಯ ಅವರು 625 ಪೂರ್ಣ ಅಂಕಗಳನ್ನು ಗಳಿಸಿ ದ್ದಾರೆ. ಇವರು ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆ ನಿವಾಸಿ ಎನ್‌. ವೆಂಕಟೇಶ ಮಲ್ಯ- ರಾಧಿಕಾ ಮಲ್ಯ ದಂಪತಿಯ ಪುತ್ರ.

ತಾನು ಹಿಂದಿನ ಪರೀಕ್ಷಾ ವ್ಯವಸ್ಥೆ ಯನ್ನೇ ಇಷ್ಟಪಟ್ಟು ಅಭ್ಯಾಸ ಮಾಡಿದ್ದೇನೆ. ಆಡಳಿತ ಮಂಡಳಿಯವರು 625 ಅಂಕ ಪಡೆದವರಿಗೆ 1 ಲಕ್ಷ ರೂ. ಬಹುಮಾನವಿದೆ ಎಂದು ಹೇಳಿದಾಗ ಛಲದಿಂದ ಓದಿ ದ್ದೇನೆ. ಮುಂದೆ ವಾಣಿಜ್ಯ ವಿಭಾಗ ದಲ್ಲಿ ಪಿಯುಸಿ ಮಾಡಬೇಕು ಎಂಬ ಗುರಿಯಿದೆ ಎನ್ನುತ್ತಾರೆ ಪ್ರತೀಕ್‌.

625/ 625

ಪರಿಶ್ರಮದ ಫ‌ಲ: ಸಂಯುಕ್ತ :

ಬೆಳ್ತಂಗಡಿ: ಲಾೖಲ ಸೈಂಟ್‌ ಮೇರಿಸ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಂ. ಸಂಯುಕ್ತ ಡಿ. ಪ್ರಭು 625ರಲ್ಲಿ 625 ಅಂಕ ಗಳಿಸಿದ್ದಾರೆ.

ಪರಿಶ್ರಮ, ಹೆಚ್ಚಿನ ಸಮಯ ಓದಿಗಾಗಿ ಮೀಸಲಿಟ್ಟಿದ್ದರಿಂದ ಉತ್ತಮ ಫಲಿತಾಂಶದ ಸಾಧನೆ ಸಾಧ್ಯವಾಗಿದೆ. ಶಿಕ್ಷಕರು ಕ್ಲಪ್ತಸಮಯದಲ್ಲಿ ಪಿಡಿಎಫ್‌ ಮಾಹಿತಿ ಸಹಿತ ಕ್ವಿಝ್ ನಡೆಸುತ್ತಿದ್ದರು. ಮುಂದೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯಿದ್ದು ಪೂರಕ ಶಿಕ್ಷಣ ಪಡೆಯಬೇಕೆಂದಿದ್ದೇನೆ. ಈಕೆ ಬೆಳ್ತಂಗಡಿಯ ಡಾ| ಅರ್ಚನಾ ಪ್ರಭು, ಎಂ. ದಾಮೋದರ್‌ ಪ್ರಭು ದಂಪತಿಯ ಪುತ್ರಿ.

625/ 625

ಸೃಜನ್‌ಗೆ ಎಂಬಿಬಿಎಸ್‌ ಮಾಡುವಾಸೆ :

ಕುಂದಾಪುರ: ಟ್ಯೂಶನ್‌ ಪಡೆ ಯದೇ ಮನೆ ಹಾಗೂ ಶಾಲೆಯ ಪಾಠದಿಂದಲೇ ಪೂರ್ಣ ಅಂಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಕುಂದಾಪುರ ಎಜುಕೇಶನ್‌ ಟ್ರಸ್ಟ್‌ನ ವಿಕೆಆರ್‌ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸೃಜನ್‌ ಭಟ್‌.

ಪ್ರಾಚಾರ್ಯ ಬಾಲಕೃಷ್ಣ ಭಟ್‌ ಕೆ.- ಶಿಕ್ಷಕಿ ಪದ್ಮಲತಾ ಎನ್‌. ಅವರ ಪುತ್ರನಾಗಿರುವ ಸೃಜನ್‌ ಭಟ್‌ ಪಿಸಿಎಂಬಿ ಮಾಡಿ ಎಂಬಿಬಿಎಸ್‌ ಅಥವಾ ಫಾರ್ಮಸಿ ಮಾಡುವ ಇರಾದೆ ಹೊಂದಿದ್ದಾರೆ. ಇವರ ಸೋದರ ಕಿಶನ್‌ ಭಟ್‌ 2014ರಲ್ಲಿ ಇದೇ ಶಾಲೆಯಲ್ಲಿ 2ನೇ ಟಾಪರ್‌ ಆಗಿದ್ದರು.

625/ 625

ಪ್ರಣೀತಾಗೆ ಎಂಜಿನಿಯರ್‌ ಆಗುವಾಸೆ :

ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಪರೀಕ್ಷೆ ಇಲ್ಲವಾಗುತ್ತದೆ ಎಂದೇ ಶೈಕ್ಷಣಿಕ ವರ್ಷಾರಂಭದಲ್ಲಿ ಉದಾಸೀನ ತಾಳಿದ್ದೆ. ಪರೀಕ್ಷೆ ಇದೆ ಎಂದಾದಾಗ ಹಳೆ ಪ್ರಶ್ನೆ ಪತ್ರಿಕೆಗಳನ್ನು ಓದಿ ಸಿದ್ಧಳಾದೆ. ಪರೀಕ್ಷೆ ಮುಗಿದ ಬಳಿಕ ಪೂರ್ಣಾಂಕದ ಖಾತ್ರಿ ಹೊಂದಿದ್ದೆ ಎನ್ನುತ್ತಾರೆ ಕುಂದಾಪುರ ಎಜುಕೇಶನ್‌ ಟ್ರಸ್ಟ್‌ನ ವಿಕೆಆರ್‌ ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಣೀತಾ.

ಬಸ್ರೂರು ಕೊಳ್ಕೆರೆ ನಿವಾಸಿ, ಮುಖ್ಯೋಪಾಧ್ಯಾಯ ಮಾಧವ ಅಡಿಗ-ಲಕ್ಷ್ಮೀ ಎಂ. ಅಡಿಗ ಅವರ ಪುತ್ರಿ ಪ್ರಣೀತಾ, ಅಣ್ಣನಂತೆ ಎಂಜಿನಿಯರ್‌ ಆಗುವ ಕನಸು ಹೊಂದಿದ್ದಾರೆ.

625/ 625

ರಿತಿಕಾಗೆ ಬಣ್ಣಿಸಲಾಗದ ಖುಶಿ :

ಮಂಗಳೂರು: ಟಾಪರ್‌ ಆಗು ತ್ತೇನೆ ಅನ್ನುವ ನಿರೀಕ್ಷೆ ಇರಲಿಲ್ಲ. ನಿಜಕ್ಕೂ ಈ ಖುಷಿಯನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ ಎನ್ನುತ್ತಾರೆ ಎಸೆಸೆಲ್ಸಿಯಲ್ಲಿ 625 ಅಂಕ ಪಡೆದಿರುವ ಜಪ್ಪು ವಿನ ಸೈಂಟ್‌ ಜೆರೊಸಾ ಗರ್ಲ್ಸ್‌ ಹೈಸ್ಕೂಲ್‌ನ ರಿತಿಕಾ.

ಬೆಂದೂರ್‌ವೆಲ್‌ನಲ್ಲಿ ಉದ್ಯಮ ಸಂಸ್ಥೆ ನಡೆಸುತ್ತಿರುವ ಜನಾರ್ದನ ಹಾಗೂ ಜೋಶಿಕಾ ದಂಪತಿಯ ಪುತ್ರಿ. ಹೆತ್ತವರು, ಶಿಕ್ಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಪಿಯುಸಿ ಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿ, ಮುಂದಕ್ಕೆ ಪ್ಯಾರಾ ಮೆಡಿಕಲ್‌ ಆಯ್ಕೆ ಮಾಡಬೇಕು ಅಂದುಕೊಂಡಿದ್ದೇನೆ ಎಂದವರು ಹೇಳಿದರು ರಿತಿಕಾ.

625/ 625

ಕೀರ್ತನಾಗೆ ಎಂಜಿನಿಯರ್‌ ಆಗುವ ಗುರಿ :

ಮಂಗಳೂರು: ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿ ಡಾಟಾ ಎಂಜಿನಿಯರ್‌ ಆಗಬೇಕು ಎನ್ನುವ ಗುರಿ ಇದೆ ಎನ್ನುತ್ತಾರೆ ಎಸೆಸೆಲ್ಸಿಯಲ್ಲಿ 625 ಅಂಕ ಪಡೆದಿರುವ ಉರ್ವದ ಕೆನರಾ ಹೈಸ್ಕೂಲ್‌ನ ಕೀರ್ತನಾ ಶೆಣೈ.

ಈಕೆ ಅಶೋಕನಗರ ನಿವಾಸಿ ಗುರುದತ್‌ ಶೆಣೈ ಹಾಗೂ ಪ್ರಿಯಾ ಶೆಣೈ ಅವರ ಪುತ್ರಿ. ಹೆತ್ತವರ, ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.

“ಉದಯವಾಣಿ’ “ಉದಯವಾಣಿ ಸುದಿನ’ ದಲ್ಲಿ ಪ್ರಕಟವಾಗುತ್ತಿದ್ದ ಎಸೆಸೆಲ್ಸಿ ಮಾಹಿತಿ ಕೋಶ ಅಂಕ ತರಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿತು ಎಂದಿದ್ದಾರೆ.

625/ 625

ಅನುಶ್ರೀಗೆ ಪ್ರಯತ್ನ ಫ‌ಲಿಸಿದ ಖುಶಿ :

ಕುಂದಾಪುರ: ಉತ್ತರ ಎಲ್ಲ ಸರಿ ಇದೆ, ಆದರೆ ತಾಂತ್ರಿಕ ಕಾರಣ ದಿಂದ ಅಂಕ ಹೋದರೂ ಹೋಗ ಬಹುದು ಎಂಬ ಆತಂಕ ಇತ್ತು. ಆದರೆ ಪ್ರಯತ್ನ ಫ‌ಲಕೊಟ್ಟಿತು ಎನ್ನುತ್ತಾರೆ ಕುಂದಾಪುರ ಎಜುಕೇಶನ್‌ ಟ್ರಸ್ಟ್‌ನ ವಿಕೆಆರ್‌ ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಶ್ರೀ ಶೆಟ್ಟಿ.

ಆಸೋಡು  ನಿವಾಸಿ ಬಾಬು ಶೆಟ್ಟಿ ಮತ್ತು ಗೃಹಿಣಿ ಸುಲೋಚನಾ ಅವರ ಪುತ್ರಿ ಅನುಶ್ರೀ ಶೆಟ್ಟಿ ಐಐಟಿಯಲ್ಲಿ ಎಂಜಿನಿಯರ್‌ ಆಗುವ ಕನಸು ಹೊತ್ತಿದ್ದಾರೆ. ಶಾಲೆ ಮತ್ತು ಮನೆಯಲ್ಲಿ ಉತ್ತೇಜನ ನೀಡಿದ್ದಾರೆ. ಹಳೆ ಪ್ರಶ್ನೆಪತ್ರಿಕೆ ಓದಿ ಸಿದ್ಧಳಾದೆ ಎನ್ನುತ್ತಾರೆ ಅನುಶ್ರೀ.

625/ 625

ಶ್ರೇಯಾಗೆ ವೈದ್ಯೆಯಾಗುವ ಆಸೆ :

ಗಂಗೊಳ್ಳಿ: ಹೊಸ ಮಾದರಿ ಪರೀಕ್ಷೆಯಾಗಿದ್ದರೂ ನಿರಂತರವಾಗಿ ಓದುತ್ತಿದ್ದುದರಿಂದ ನನಗೆ ಅಷ್ಟೇನು ಕಷ್ಟ ಎಂದು ಅನ್ನಿಸಿರಲಿಲ್ಲ. ಪೂರ್ಣ ಅಂಕದ ನಿರೀಕ್ಷೆ ಮೊದಲೇ ಇತ್ತು. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಪ್ರತಿ ದಿನ ಓದುತ್ತಿದ್ದೆ. ರಾತ್ರಿ ಹೊತ್ತು ಹೆಚ್ಚು ಓದುತ್ತಿದ್ದೆ. ತಂದೆ- ತಾಯಿ, ಶಿಕ್ಷಕರು ಎಲ್ಲ ಸಹಕಾರ ನೀಡಿದರು. ಮುಂದೆ ಎಂಬಿಬಿಎಸ್‌ ಮಾಡಿ ವೈದ್ಯೆಯಾಗಿ, ಹಳ್ಳಿ ಜನರ ಸೇವೆ ಮಾಡಬೇಕು ಎನ್ನುವುದು ಶ್ರೇಯಾ ಅವರ ಅಭಿಲಾಷೆ.

ಶ್ರೇಯಾ ಖಾರ್ವಿಕೇರಿಯ ನಿವಾಸಿ, ಕೂಲಿ ಕಾರ್ಮಿಕ ಪುರು ಷೋತ್ತಮ ಮೇಸ್ತ ಹಾಗೂ ಗೃಹಿಣಿ ಪವಿತ್ರಾ ಮೇಸ್ತ ದಂಪತಿಯ ಪುತ್ರಿ.

625/ 625

ಗಣೇಶ್‌ಗೆ ವೈದ್ಯನಾಗುವ ಕನಸು :

ಮೂಡುಬಿದಿರೆ: ಆಳ್ವಾಸ್‌ ಎಜು ಕೇಶನ್‌ ಫೌಂಡೇಶನ್‌ ಪ್ರವರ್ತಿತ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಣೇಶ್‌ ಹನುಮಂತಪ್ಪ ವೀರಪುರ್‌ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿರುವ ಪ್ರತಿಭಾನ್ವಿತ.

ಆಳ್ವಾಸ್‌ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ 5 ವರ್ಷದಿಂದ ಉಚಿತ ಶಿಕ್ಷಣ ಪಡೆ ಯುತ್ತಿರುವ ಗಣೇಶ್‌  ಮೂಲತಃ ಬಾಗಲಕೋಟೆಯ ಇಳಕಲ್‌ನ ಹನುಮಂತಪ್ಪ-ಯಶೋದಾ ದಂಪತಿಯ ಪುತ್ರ.

“ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ. ವೈದ್ಯನಾಗುವ ಕನಸಿದೆ’ ಎಂದಿದ್ದಾರೆ.

625/ 625

ಅನನ್ಯಾಗೆ ಐಎಎಸ್‌ ಮಾಡುವಾಸೆ :

ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅನನ್ಯಾ ಎಂಡಿ ಎಸೆಸೆಲ್ಸಿಯಲ್ಲಿ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಪ್ರತೀ ದಿನ ಹೆಚ್ಚಿನ ಪ್ರಯತ್ನದೊಂದಿಗೆ ಅಭ್ಯಾಸ ಚಟುವಟಿಕೆ ಮಾಡುತ್ತಿದ್ದೆ, ಶಿಕ್ಷಕರು ಹಾಗೂ ಮನೆಯಲ್ಲೂ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿತು, ಐಎಎಸ್‌ ಮಾಡುವಾಸೆ ಇದೆ ಎಂದು ಅನನ್ಯಾ ತಿಳಿಸಿದ್ದಾರೆ.

ಅನನ್ಯ ಅವರು ಸುಳ್ಯ ತಾಲೂಕಿನ ಗುತ್ತಿಗಾರು ದುಗೇìಶ್‌ ಮತ್ತು ವೇದಾವತಿ ದಂಪತಿಯ ಪುತ್ರಿ.

625/ 625

ಅನುಶ್ರೀಗೆ ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ :

ಸಿದ್ದಾಪುರ: ಶಂಕರನಾರಾಯಣ ಮದರ್‌ ತೆರೇಸಾ ಮೆಮೋರಿಯಲ್‌ ಸ್ಕೂಲ್‌ನ ಅನುಶ್ರೀ ಶೆಟ್ಟಿ ಎಸೆಸೆಲ್ಸಿಯಲ್ಲಿ ಪೂರ್ಣ 625 ಅಂಕ ಗಳಿಸಿದ್ದಾರೆ.

ಅವರು ಶೇಡಿಮನೆ ಅರಸಮ್ಮ ಕಾನು ಭುಜಂಗ ಶೆಟ್ಟಿ ಹಾಗೂ ಗೃಹಿಣಿ ವಿಮಲಾ ಶೆಟ್ಟಿ ದಂಪತಿಯ ಪುತ್ರಿ.

ಶಿಕ್ಷಕ ವೃಂದ, ತಂದೆ, ತಾಯಿಯ ಸಹಕಾರದಲ್ಲಿ ನಿರಂತರ ಅಭ್ಯಾಸದೊಂದಿಗೆ ಉತ್ತಮ ಅಂಕಗಳೊಂದಿಗೆ ಶ್ರೇಷ್ಠ ಸ್ಥಾನ ವನ್ನು ಗಳಿಸಲು ಸಾಧ್ಯವಾಗಿದೆ. ಪಿಸಿಎಂಬಿ ಕೋರ್ಸ್‌ ಮೂಲಕ ವೈದ್ಯಕೀಯ ವೃತ್ತಿಯಲ್ಲಿ ತೊಡ ಗಿಸಿಕೊಳ್ಳುವ ಆಸೆಯಿದೆ ಎಂದು ಅನುಶ್ರೀ ತಿಳಿಸಿದ್ದಾರೆ.

625/ 625

ಅಭಿಷೇಕ್‌ಗೆ ಪೂರ್ಣ ಅಂಕದ ಸಂಭ್ರಮ :

ಉಡುಪಿ: ವಳಕಾಡು ಸರಕಾರಿ ಶಾಲೆಯ ಅಭಿಷೇಕ್‌ ಜಯಂತ್‌ ಹೊಳ್ಳ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ 625 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇವರು ಜಯಂತ್‌ ಹೊಳ್ಳ ಮತ್ತು ಅರುಣಾ ಎಸ್‌.ಜಿ. ದಂಪತಿಯ ಪುತ್ರ. ಈ ಫ‌ಲಿತಾಂಶವನ್ನೇ ನಿರೀಕ್ಷೆ ಮಾಡಿದ್ದೆ. ಮುಂದೆ ಕಂಪ್ಯೂಟರ್‌ ಸಯನ್ಸ್‌ ತೆಗೆದುಕೊಳ್ಳಲಿದ್ದೇನೆ. ಕೊರೊನಾ, ಲಾಕ್‌ಡೌನ್‌ನಿಂದಾಗಿ ವಿದ್ಯಾ ಭ್ಯಾಸಕ್ಕೆ ಅಡಚಣೆಯಾಗಲಿಲ್ಲ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೂಡ ಓದಿಕೊಂಡು ತಿಳಿದಿದ್ದೆವು. ಶಿಕ್ಷಕರು ಕೂಡ ಆನ್‌ಲೈನ್‌ ಮೂಲಕ ಪೂರಕ ಮಾಹಿತಿಗಳನ್ನು ಒದಗಿಸುತ್ತಿದ್ದರು ಎಂದಿದ್ದಾರೆ.

625/ 625

ವೆನೆಸಾಗೆ ವೈದ್ಯೆಯಾಗಿ ಸಾಧಿಸುವಾಸೆ :

ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ವೆನೆಸಾ ಶರಿನಾ ಡಿ’ಸೋಜಾ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ್ದಾರೆ.

ಶಿಕ್ಷಣ ಸಂಸ್ಥೆ ಹಾಗೂ ಮನೆಯವರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಪೂರ್ಣ ಅಂಕದ ನಿರೀಕ್ಷೆ ಇತ್ತು. ಕಠಿನ ಪರಿಶ್ರಮದ ಫ‌ಲ ಇದು. ಕೊವೀಡ್‌ ಸಂದರ್ಭದಲ್ಲೂ ಶಿಕ್ಷಕರು ಪ್ರೋತ್ಸಾಹಿಸಿದ್ದಾರೆ. ಮುಂದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವಾಸೆ ಇದೆ ಎಂದಿದ್ದಾರೆ. ವೆನೆಸಾ ಸುಬ್ರಹ್ಮಣ್ಯದ ವೆಲೇರಿ ಯನ್‌ ಡಿ’ಸೋಜಾ ಮತ್ತು ತೆರೆಸಾ ಡಿ’ಸೋಜಾ ದಂಪತಿಯ ಪುತ್ರಿ.

625/ 625

ಲಾಕ್‌ಡೌನ್‌ನಿಂದ ಲಾಭ: ನವನೀತ್‌ :

ಉಡುಪಿ ಕುಂಜಿಬೆಟ್ಟಿನ ಟಿಎ ಪೈ ಆಂಗ್ಲ ಮಾಧ್ಯಮ ಶಾಲೆ ನವನೀತ್‌ ಎಸ್‌. ರಾವ್‌ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಇವರು ಶಿವಾನಂದ ರಾವ್‌ ಮತ್ತು ದೀಪಾಲಿ ರಾವ್‌ ದಂಪತಿಯ ಪುತ್ರ.

ಲಾಕ್‌ಡೌನ್‌ನಿಂದಾಗಿ ವಿದ್ಯಾ ಭ್ಯಾಸ ಮಾಡಲು ತುಂಬಾ ಉಪಯೋಗ ವಾಯಿತು. ಎಂಬಿಬಿಎಸ್‌ ತೆಗೆದು ಕೊಂಡು ವೈದ್ಯರಾಗಬೇಕು ಅಂದುಕೊಂಡಿದ್ದೇನೆ. 625 ಅಂಕ ಗಳಿಸುವ ಉದ್ದೇಶವನ್ನೇ ಇಟ್ಟುಕೊಂಡಿದ್ದೆ. ಅದು ಈಡೇರಿದ್ದು, ನನಗೆ ತುಂಬಾ ಸಂತಸ ನೀಡಿದೆ.

625/ 625

ಪ್ರತೀಕ್ಷಾಗೆ ಕಂಪ್ಯೂಟರ್‌ ಶಿಕ್ಷಣ ಗುರಿ :

ಉಡುಪಿ: ಶ್ರೀ ಅನಂತೇಶ್ವರ ಶಾಲೆಯ ಪ್ರತೀಕ್ಷಾ ಪೈ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಇವರು ಯೋಗೇಶ್‌ ಪೈ ಜಿ.ಆರ್‌. ಮತ್ತು ವನಿತಾ ವೈ. ಪೈ ಅವರ ಪುತ್ರಿ.

ಶಿಕ್ಷಕರು ಸೂಕ್ತ ಸಮಯದಲ್ಲಿ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದ್ದರು. ತರಗತಿಗಳು ಇಲ್ಲದಿದ್ದರೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು. ಈ ಕಾರಣ ದಿಂದ ಫ‌ಲಿತಾಂಶದಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಮುಂದೆ ಕಂಪ್ಯೂಟರ್‌ ಸಯನ್ಸ್‌ ಕಲಿತು ಉತ್ತಮ ಸಾಧನೆ ಮಾಡಬೇಕೆಂದು ಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

625/ 625

ಸರಕಾರಿ ಶಾಲೆಯ ಸಾಧಕಿ ಸಮತಾ :

ಉಡುಪಿ: ಇಲ್ಲಿನ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಸಮತಾ ಎಚ್‌.ಎಸ್‌. ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಇವರು ಸತೀಶ ಭಟ್‌ ಮತ್ತು ಮಾಲಿನಿ ಭಟ್‌ ದಂಪತಿಯ ಪುತ್ರಿ. ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣ ನೀಡುತ್ತಾರೆ ಎಂಬುದಕ್ಕೆ ನಾನೇ ಉದಾ ಹರಣೆಯಾಗಿದ್ದೇನೆ. ಶಿಕ್ಷಕರೂ ಕೂಡ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದ್ದಾರೆ.  ಮುಂದೆ ಪಿಸಿಎಂಬಿ ವಿಷಯ ತೆಗೆದುಕೊಂಡು ವಿಜ್ಞಾನ ಉಪನ್ಯಾಸಕಿ ಆಗಬೇಕು ಅಂದುಕೊಂಡಿದ್ದೇನೆ.

625/ 625

Advertisement

Udayavani is now on Telegram. Click here to join our channel and stay updated with the latest news.

Next