Advertisement

ಪೊಲೀಸರ ಕೊಲೆ ಯತ್ನ: ಆರೋಪಿಗೆ 5 ವರ್ಷ ಜೈಲು

09:43 AM Feb 08, 2022 | Team Udayavani |

ಕಲಬುರಗಿ: ಕೊಲೆ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿಗೆ 5 ವರ್ಷ ಕಠಿಣ ಜೈಲು ಮತ್ತು ದಂಡ ವಿಧಿಸಿ ಇಲ್ಲಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಇಲ್ಲಿನ ಶಿವಾಜಿ ನಗರದ ನಿವಾಸಿ, ಚಾಲಕ ನಾಗೇಶ ಅಲಿಯಾಸ್‌ ನಾಗರಾಜ ಪೂಜಾರಿ ಎಂಬಾತನೇ ಶಿಕ್ಷೆಗೆ ಗುರಿಯಾದ ಆರೋಪಿ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಈತ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. 2018ರ ಸೆ.16ರಂದು ಕೇರಿಭೋಸಗಾ ಗ್ರಾಮದ ಹೊಲದಲ್ಲಿನ ಹಾಳು ಬಿದ್ದ ಮನೆಯಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ತೆರಳಿ ಬಂಧಿಸಲು ಹೋಗಿದ್ದರು.

ಆದರೆ, ಆರೋಪಿಯ ಹರಿತವಾದ ತಲವಾರದಿಂದ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ಕೊಲೆಗೆ ಯತ್ನಿಸಿದ್ದ. ಆಗ ತನಿಖಾಧಿಕಾರಿ ಆತ್ಮ ರಕ್ಷಣೆಗಾಗಿ ಸರ್ವೀಸ್‌ ಪಿಸ್ತೂಲ್‌ನಿಂದ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದರು. ಅದರೂ, ಆರೋಪಿಯು ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗ ಅದೇ ಕಾಲಿಗೆ ಮತ್ತೂಂದು ಸುತ್ತಿನ ಗುಂಡು ಹರಿಸಿ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಾಧೀಶ ಶುಕ್ಲಾಕ್ಷ ಪಾಲನ್‌ ಅವರು ತೀರ್ಪು ನೀಡಿದ್ದಾರೆ. ಐಪಿಸಿ ಕಲಂ 352, 332ರಡಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ. ಈ ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ತಿಂಗಳು ಸಾದಾ ಶಿಕ್ಷೆ. ಅಲ್ಲದೇ, 307ರಡಿ 5 ವರ್ಷದ ಕಠಿಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್‌. ಆರ್‌.ನರಸಿಂಹಲು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next