Advertisement

ಏನಿದು ವಿವಿಪ್ಯಾಟ್‌? ಗೊತ್ತೇ ಇಲ್ಲ ಅಂತಾರೆ ನಮ್‌ ಜನ!

06:00 AM Apr 23, 2018 | Team Udayavani |

ಬೆಂಗಳೂರು: ಇವಿಎಂಗಳ ದುರ್ಬಳಕೆ, ತಿರುಚುವಿಕೆ ಈಗ ಸಾಧ್ಯವಿಲ್ಲ. ಏಕೆಂದರೆ ಚಲಾಯಿಸಿದ ಮತ ಕಣ್ಣಾರೆ ಕಂಡು ಖಾತರಿಪಡಿಸಿಕೊಳ್ಳಲು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವಿವಿಪ್ಯಾಟ್‌ ಬಳಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆಯಾದರೂ, ಶೇ.72ರಷ್ಟು ಮಂದಿಗೆ ವಿವಿಪ್ಯಾಟ್‌ ಏನೆನ್ನುವುದೇ ಗೊತ್ತಿಲ್ಲ. ಜತೆಗೆ ಇನ್ನೊಂದು ಗಮನಾರ್ಹ ಅಂಶ ಏನೆಂದರೆ, ಈ ಸಮೀಕ್ಷೆಯ ಪ್ರಕಾರ ಶೇ.20ರಷ್ಟು ಮಂದಿ ಮತ ಚಲಾಯಿಸಲು ಆಸಕ್ತರಾಗಿಲ್ಲ.

Advertisement

ಹೀಗೆಂದು ನಾವು ಹೇಳುತ್ತಿಲ್ಲ, ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ಸಾಮಾಜಿಕ ಸಂಘಟನೆ ಮಾಡುತ್ತಿರುವ ಆರೋಪವೂ ಅಲ್ಲ. ಸ್ವತಃ ಚುನಾವಣಾ ಆಯೋಗ ನಡೆಸಿದ ಸಮೀಕ್ಷೆಯಲ್ಲೇ ಈ ಸತ್ಯಾಂಶ ಬೆಳಕಿಗೆ ಬಂದಿದೆ.

2018ರ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಇವಿಎಂಗಳ ಬಗ್ಗೆ ಅಪಸ್ವರ, ಆಕ್ಷೇಪಗಳು ಕೇಳಿ ಬಂದಿದ್ದವು. ಬ್ಯಾಲೆಟ್‌ ಪೇಪರ್‌ ಬಳಕೆಗೆ ಆಯೋಗದ ಮುಂದೆ ಬೇಡಿಕೆ ಇಡಲಾಗಿತ್ತು. ಅಲ್ಲದೆ, ಇವಿಎಂ ಬಗೆಗಿನ ಆರೋಪಗಳನ್ನೂ ಆಯೋಗ ತಳ್ಳಿ ಹಾಕಿತ್ತು. ಏಕೆಂದರೆ, ಇವಿಎಂನಲ್ಲಿ ಹಾಕಿದ ಮತ ಖಚಿತಪಡಿಸಿಕೊಳ್ಳಲು ಈಗ ವಿವಿಪ್ಯಾಟ್‌ ಇರಲಿದೆ. ಹಾಗಾಗಿ, ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ ಬೇಡ ಎನ್ನುವುದು ಆಯೋಗದ ಅಂಬೋಣ. ಆದರೆ, ಆಯೋಗ ತಂದ ವಿವಿಪ್ಯಾಟ್‌ ಬಗ್ಗೆಯೇ ರಾಜ್ಯದ ಶೇ.72.4ರಷ್ಟು ಜನರಿಗೆ ತಿಳಿದಿಲ್ಲ.

ಬೆಳಗಾವಿ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ, ಶೇ. 89.5, ಮೈಸೂರು ವಿಭಾಗದಲ್ಲಿ ಶೇ. 84.1,  ಕಲಬುರಗಿ ವಿಭಾಗದಲ್ಲಿ ಶೇ.83.9 ಮತ್ತು ಬೆಂಗಳೂರು ವಿಭಾಗದಲ್ಲಿ ಶೇ.43.8 ಮಂದಿಗೆ ವಿವಿಪ್ಯಾಟ್‌ ಮತ್ತದರ ಅನುಕೂಲತೆಗಳ ಬಗ್ಗೆ ಗೊತ್ತಿಲ್ಲ. ಅದೇ ರೀತಿ ಗ್ರಾಮೀಣ ಭಾಗದ ಶೇ. 74.2 ಮತ್ತು ನಗರ ಭಾಗದ ಶೇ.70.4 ರಷ್ಟು ಮಂದಿಗೆ ತಿಳಿದಿಲ್ಲ. ವಿವಿಧ ಸಾಮಾಜಿಕ ಗುಂಪು ಮತ್ತು ಸಮುದಾಯಗಳಾದ ಎಸ್ಸಿಗಳಲ್ಲಿ ಶೇ.76.5, ಎಸ್ಟಿಗಳಲ್ಲಿ ಶೇ.72.2, ಓಬಿಸಿ ವರ್ಗಗಳಲ್ಲಿ ಶೇ.72.9 ಮತ್ತು ಇತರ ವರ್ಗಗಳಲ್ಲಿ ಶೇ.68.5ರಷ್ಟು ಜನರಿಗೆ ವಿವಿಪ್ಯಾಟ್‌ಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಪುರುಷರಲ್ಲಿ ಶೇ.70, ಮಹಿಳೆಯರಲ್ಲಿ ಶೇ.75 ಮತ್ತು ತೃತೀಯ ಲಿಂಗಿಗಳಲ್ಲಿ ಶೇ. 63ರಷ್ಟು ಮಂದಿ ವಿವಿಪ್ಯಾಟ್‌ ಏನೆಂದು ನಮಗೆ ಗೊತ್ತಿಲ್ಲ ಎಂದಿದ್ದಾರೆ.

ಯುವಕರಲ್ಲಿ ಅತಿ ಹೆಚ್ಚು: ವಿಪರ್ಯಾಸವೆಂದರೆ ಈಗಿನ ಐಟಿ ಯುಗದ ಸಾಕಷ್ಟು ಯುವಕರಿಗೇ ವಿವಿಪ್ಯಾಟ್‌ ಬಗ್ಗೆ ಗೊತ್ತಿಲ್ಲ. 18ರಿಂದ 25 ವರ್ಷದ ಶೇ.79, 26ರಿಂದ 35 ವರ್ಷದ ಶೇ. 75.6, 36ರಿಂದ 45 ವರ್ಷದ ಶೇ.73, 46ರಿಂದ 60 ವರ್ಷದ ಶೇ. 69 ಹಾಗೂ 60 ವರ್ಷ ಮೇಲ್ಪಟ್ಟ ಶೇ. 66 ಮಂದಿಗೆ ವಿವಿಪ್ಯಾಟ್‌ ಬಗ್ಗೆ ತಿಳಿದಿಲ್ಲ.

Advertisement

ಹೇಗೆ ನಡೆದಿದೆ ಈ ಸಮೀಕ್ಷೆ?
ಮತದಾರರ ನೋಂದಣಿ, ಮತದಾನ ಸೇರಿ ಒಟ್ಟಾರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಮತದಾರರ ಅಥವಾ ಸಾರ್ವಜನಿಕರ ತಿಳುವಳಿಕೆ, ಕುತೂಹಲ, ಅನುಮಾನಗಳು, ಸಕ್ರೀಯ ಪಾಲ್ಗೊಳ್ಳುವಿಕೆ ಮತ್ತಿತರರ ವಿಷಯಗಳ ಬಗ್ಗೆ ತಿಳಿದುಕೊಂಡು ಕೊರತೆ ಅಥವಾ ಅವಶ್ಯಕತೆ ಕಂಡು ಬರುವ ವಿಷಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ 2018ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಚುನಾವಣಾ ಆಯೋಗ ಕೆ.ಎ.ಪಿ (ನಾಲೇಜ್‌, ಆಟಿಟ್ಯೂಡ್‌ ಆ್ಯಂಡ್‌ ಪ್ರಾಕ್ಟಿಸ್‌) ಹೆಸರಿನಲ್ಲಿ ಸರ್ವೆ ನಡೆಸಿದೆ. ನಾಲ್ಕು ಕಂದಾಯ ವಿಭಾಗಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ವಯಸ್ಸು, ಭೌಗೋಳಿಕವಾರು, ಶೈಕ್ಷಣಿಕ ಅರ್ಹತೆ, ಲಿಂಗ, ಉದ್ಯೋಗ, ಶೈಕ್ಷಣಿಕ ಅರ್ಹತೆ, ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗಗಳಿಂದ ವಿವಿಧ 129 ಅಂಶಗಳ ಬಗ್ಗೆ ರಾಜ್ಯದ ಏಳು ಸಾವಿರ ಕುಟುಂಬಗಳಿಂದ ಮಾಹಿತಿ ಕಲೆ ಹಾಕಲಾಗಿದೆ.

“ನೋಟಾ’ ಡೋಂಟ್‌ ನೋ
ಅಭ್ಯರ್ಥಿಗಳ ಬಗ್ಗೆ ಅಸಮ್ಮತಿ, ಅಸಮಧಾನವಿದ್ದರೆ ಯಾರಿಗೂ ಮತಹಾಕದಿರುವಂತೆ 2013ರಲ್ಲಿ “ನೋಟಾ’ (ನನ್‌ ಆಫ್ ದಿ ಅಬೌ) ಜಾರಿಗೆ ತರಲಾಗಿದೆ. ಚುನಾವಣಾ ಆಯೋಗ ಈಗ ನಡೆಸಿರುವ ಸಮೀಕ್ಷೆಯಲ್ಲಿ ಶೇ. 55ರಷ್ಟು ಮಂದಿಗೆ ಇವಿಎಂಗಳಲ್ಲಿ ನೋಟಾಗೆ ಅವಕಾಶವಿರುವ ಬಗ್ಗೆ ಗೊತ್ತಿಲ್ಲ. ಬೆಳಗಾವಿ ವಿಭಾಗದಲ್ಲಿ ಶೇ. 68, ಕಲಬುರಗಿ ವಿಭಾಗದಲ್ಲಿ ಶೇ. 66, ಮೈಸೂರು ವಿಭಾಗದಲ್ಲಿ ಶೇ. 63 ಹಾಗೂ ಬೆಂಗಳೂರು ವಿಭಾಗದಲ್ಲಿ ಶೇ. 32ರಷ್ಟು ಮಂದಿಗೆ ನೋಟಾ ಬಗ್ಗೆ ಗೊತ್ತಿಲ್ಲ. ಪುರುಷರಲ್ಲಿ ಶೇ. 52, ಮಹಿಳೆಯರಲ್ಲಿ ಶೇ. 58, ತೃತೀಯ ಲಿಂಗಿಗಳಲ್ಲಿ ಶೇ. 22, ಗ್ರಾಮೀಣ ಭಾಗದಲ್ಲಿ ಶೇ. 55, ನಗರ ಭಾಗದಲ್ಲಿ ಶೇ. 54, ಎಸ್ಟಿಗಳಲ್ಲಿ ಶೇ. 61, ಎಸ್ಟಿಗಳಲ್ಲಿ ಶೇ. 57, ಓಬಿಸಿಗಳಲ್ಲಿ ಶೇ. 54 ಮತ್ತು ಇತರ ವರ್ಗಗಳಲ್ಲಿ ಶೇ. 50. 18ರಿಂದ 25 ವರ್ಷದ ಶೇ. 63, 26ರಿಂದ 35 ಶೇ. 57, 36ರಿಂದ 45 ವರ್ಷದ ಶೆ. 55, 46ರಿಂದ 60 ವರ್ಷದ ಶೇ. 53, 60 ವರ್ಷ ಮೇಲ್ಪಟ್ಟ ಶೇ. 50ರಷ್ಟು ಮಂದಿಗೆ ನೋಟಾ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲ. ಶೇ. 20ರಷ್ಟು ಮಂದಿಗೆ ಮುಂಬರುವ ಚುನಾವಣೆಯಲ್ಲಿ ಮತ ಹಾಕುವ ಉದ್ದೇಶ ತಮಗಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

“ಕೆಎಪಿ ಸರ್ವೆ ಎರಡು ತಿಂಗಳ ಹಿಂದೆ ನಡೆಸಿದ್ದು, ಹಾಗಾಗಿ, ವಿವಿಪ್ಯಾಟ್‌ ಬಗ್ಗೆ ಮಾಹಿತಿ ಇಲ್ಲದಿರುವ ಪ್ರಮಾಣ ಹೆಚ್ಚಾಗಿ ಕಾಣುತ್ತಿದೆ. ಆದರೆ, ಈ ಹಂತದಲ್ಲಿ ಸರ್ವೆ ನಡೆಸಿದರೆ ವಿವಿಪ್ಯಾಟ್‌ ಬಗ್ಗೆ ಹೆಚ್ಚಿನ ಜನರಲ್ಲಿ ತಿಳುವಳಿಕೆ ಇರುವುದು ಗೊತ್ತಾಗುತ್ತದೆ. ಈಗ ಜನರಿಗೆ ವಿವಿಪ್ಯಾಟ್‌ ಕುರಿತು ಮಾಹಿತಿ ಅಥವಾ ತಿಳುವಳಿಕೆಯ ಕೊರತೆ ಇಲ್ಲ’.
– ರಾಘವೇಂದ್ರ, ರಾಜ್ಯ ಉಪ ಮುಖ್ಯ ಚುನಾವಣಾಧಿಕಾರಿ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next