Advertisement

ಪಡಿತರ ಚೀಟಿಗೆ ಆಧಾರ್‌ ಲಿಂಕ್‌; ಮತ್ತೆ ಆರಂಭವಾಗಲಿದೆ ಇ-ಕೆವೈಸಿ

12:11 AM Oct 22, 2020 | mahesh |

ಮಂಗಳೂರು: ಕೊರೊನಾದಿಂದ ಸ್ಥಗಿತಗೊಂಡಿರುವ ಪಡಿತರ ಚೀಟಿಗೆ ಆಧಾರ್‌ ಜೋಡಿಸುವ ಇ-ಕೆವೈಸಿ ನೋಂದಣಿ ಪ್ರಕ್ರಿಯೆ ರಾಜ್ಯಾದ್ಯಂತ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ. ರಾಜ್ಯದ ಒಟ್ಟು ಪಡಿತರ ಚೀಟಿಗಳ ಪೈಕಿ ಇಲ್ಲಿಯವರೆಗೆ ಅರ್ಧದಷ್ಟು ಮಾತ್ರ ಇ-ಕೆವೈಸಿ ನೋಂದಣಿ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಶೇ.59, ಉಡುಪಿ ಜಿಲ್ಲೆಯಲ್ಲಿ ಶೇ. 49ರಷ್ಟು ಇ-ಕೆವೈಸಿ ಆಗಿದೆ.

Advertisement

ಇ-ಕೆವೈಸಿಗೆ ಬಯೋಮೆಟ್ರಿಕ್‌ ಅಗತ್ಯವಿದ್ದು, ಕೊರೊನಾ ಪ್ರಸರಣವಾಗಬಹುದು ಎಂಬುದಕ್ಕಾಗಿ ನೋಂದಣಿ ಸ್ಥಗಿತ ಮಾಡಲಾಗಿತ್ತು. ಆಹಾರ ಇಲಾಖೆಯ ಮೂಲಗಳ ಪ್ರಕಾರ ಕೊರೊನಾ ತೀವ್ರತೆ ಕಡಿಮೆಯಾದ ತತ್‌ಕ್ಷಣ ನೋಂದಣಿ ಆರಂಭಿಸಲಾಗುತ್ತದೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ನೋಂದಣಿ ನಡೆಸಿ ಗಡುವು ಬಳಿಕವೂ ನೋಂದಣಿ ಮಾಡದಿದ್ದರೆ ಅಂಥ ಪಡಿತರ ಚೀಟಿಗಳನ್ನು ತಡೆಹಿಡಿಯಲು ಇಲಾಖೆ ನಿರ್ಧರಿಸಿದೆ.

ಇ-ಕೆವೈಸಿ ಏಕೆ ?
ರಾಜ್ಯಾದ್ಯಂತ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಪಡಿತರ ಚೀಟಿ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಪಡಿತರ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿಗೆ ಆಧಾರ್‌ ಜೋಡಿಸುವ ಇ-ಕೆವೈಸಿ ನಿಯಮವನ್ನು ಆಹಾರ ಇಲಾಖೆ ಜಾರಿಗೆ ತಂದಿತ್ತು. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯಲ್ಲಿಯೇ ಇದನ್ನು ಮಾಡಬೇಕಿತ್ತು. ಇದರಡಿ ಪಡಿತರ ಚೀಟಿಯಲ್ಲಿ ಇರುವ ಎಲ್ಲ ಸದಸ್ಯರೂ ಬಯೋಮೆಟ್ರಿಕ್‌ ನೀಡಬೇಕು. ವರ್ಷದ ಹಿಂದೆ ನೋಂದಣಿ ಆರಂಭವಾಗಿದ್ದರೂ ಬಳಿಕ ಸರ್ವರ್‌ ಸಮಸ್ಯೆ ಸಹಿತ ತಾಂತ್ರಿಕ ಕಾರಣಗಳಿಂದ ಕೆಲವು ಬಾರಿ ಸ್ಥಗಿತಗೊಂಡಿತ್ತು. 2020ರ ಮಾರ್ಚ್‌ ಅನಂತರ ಕೊರೊನಾದಿಂದಾಗಿ ಸ್ಥಗಿತಗೊಳಿಸಲಾಗಿತ್ತು.

ಪಡಿತರ ಚೀಟಿಗೆ ಆಧಾರ್‌ ಲಿಂಕ್‌ ಮಾಡುವ ಇ-ಕೆವೈಸಿ ನೋಂದಣಿ ಪ್ರಕ್ರಿಯೆಯನ್ನು ಕೊರೊನಾದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಕೊರೊನಾ ತೀವ್ರತೆ ಕೊನೆಗೊಂಡ ತತ್‌ಕ್ಷಣ ಮತ್ತೆ ಆರಂಭಿಸುವ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಕೆ. ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರು


ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next