Advertisement

“ಆಧಾರ್‌ ದೃಢೀಕರಣ’: 70 ಕೋಟಿ ರೂ. ಉಳಿತಾಯ!

10:26 PM Jul 16, 2019 | Lakshmi GovindaRaj |

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳ “ಆಧಾರ್‌ ದೃಢೀಕರಣ’ (ಇ-ಕೆವೈಸಿ)ದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ಕೋಟಿ ಕೋಟಿ ಹಣ ಉಳಿತಾಯ ಆಗಲಿದೆ.

Advertisement

ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳು ಸೇರಿ ರಾಜ್ಯದ ಎಲ್ಲ ಪಡಿತರ ಚೀಟಿದಾರ ಕುಟುಂಬ ಸದಸ್ಯರ “ಆಧಾರ್‌ ಜೋಡಣೆ’ ಆಗಿದೆ. ಈಗ ಜೋಡಣೆಯಾದ ಆಧಾರ ಸಂಖ್ಯೆ, ಅದೇ ವ್ಯಕ್ತಿಯದ್ದೇ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ (ನೊ ಯುವರ್‌ ಕಸ್ಟಮರ್‌) ಮೂಲಕ ಆಧಾರ್‌ ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ.

ಈ ಆಧಾರ್‌ ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡರೆ ಅನ್ನಭಾಗ್ಯ ಯೋಜನೆ ಫ‌ಲಾನುಭವಿಗಳಿಗೆ “ಜರಡಿ’ ಹಿಡಿದಂತಾಗುತ್ತದೆ. ಇದರಿಂದ ಮರಣ ಹೊಂದಿದ, ವಿಳಾಸ ಬದಲಾವಣೆಯಾದ ಫ‌ಲಾನುಭವಿಗಳು ಸೇರಿ “ನಕಲಿ’ ಎಂದು ಹೇಳಬಹುದಾದ 20ರಿಂದ 25 ಲಕ್ಷ ಪಡಿತರ ಚೀಟಿದಾರರು ಫ‌ಲಾನಭವಿ ಪಟ್ಟಿಯಿಂದ ಡಿಲಿಟ್‌ (ಅಳಸಿ ಹಾಕು) ಆಗಲಿದ್ದಾರೆಂದು ಆಹಾರ ಇಲಾಖೆ ಅಂದಾಜಿಸಿದೆ.

ಹೀಗೆ 20ರಿಂದ 25 ಲಕ್ಷ ಪಡಿತರ ಚೀಟಿದಾರರು ಕಡಿಮೆಯಾದರೆ, ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳ ಪಟ್ಟಿ “ಶುದ್ಧೀಕರಣ’ಗೊಂಡು ಪಾರದರ್ಶಕವಾಗಲಿದೆ. ಇದರಿಂದಾಗಿ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು 6ರಿಂದ 7 ಕೋಟಿ ರೂ.ಗಳಂತೆ ವರ್ಷಕ್ಕೆ ಬರೋಬ್ಬರಿ 70ರಿಂದ 80 ಕೋಟಿ ರೂ. ಉಳಿತಾಯ ಆಗಲಿದೆ. ಇದು ಹಣಕಾಸಿನ ದೃಷ್ಟಿಯಿಂದ ದೊಡ್ಡ ಉಳಿತಾಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಸದ್ಯ ರಾಜ್ಯದಲ್ಲಿ 1.44 ಕೋಟಿ ಪಡಿತರ ಚೀಟಿಗಳು ಹಾಗೂ 4.89 ಕೋಟಿ ಫ‌ಲಾನುಭವಿಗಳಿದ್ದಾರೆ. ಆಹಾರ ಭದ್ರತಾ ಕಾಯ್ದೆಯ ನಿಯಮಗಳಂತೆ ಕೇಂದ್ರ ಸರ್ಕಾರ 4 ಕೋಟಿ ಫ‌ಲಾನುಭವಿಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯ ನೀಡುತ್ತಿದೆ. ಅದರಂತೆ ಕೇಂದ್ರದಿಂದ ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್‌ ಟನ್‌ ಪಡಿತರ (ಅಕ್ಕಿ) ರಾಜ್ಯಕ್ಕೆ ಬರುತ್ತದೆ. ಆದರೆ, ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ 7 ಕೆ.ಜಿ ಅಕ್ಕಿ ಕೊಡುತ್ತಿರುವುದರಿಂದ ಹೆಚ್ಚುವರಿ 2 ಕೆ.ಜಿ ಅಕ್ಕಿಯನ್ನು ಕೆ.ಜಿಗೆ 29 ರೂ.ಗಳಂತೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಉಚಿತವಾಗಿ ನೀಡಬೇಕಾಗುತ್ತದೆ.

Advertisement

ಇದಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ 70 ರಿಂದ 80 ಕೋಟಿ ರೂ. ಖರ್ಚು ಮಾಡುತ್ತದೆ. ಒಂದೊಮ್ಮೆ ಇ-ಕೆವೈಸಿ ಮೂಲಕ ಎಲ್ಲ ಫ‌ಲಾನುಭವಿಗಳ ಆಧಾರ್‌ ದೃಢೀಕರಣವಾದರೆ ಗಣನೀಯ ಪ್ರಮಾಣದಲ್ಲಿ ಪಡಿತರ ಉಳಿತಾಯ ಆಗುವುದರ ಜೊತೆಗೆ ಕೋಟ್ಯಂತರ ರೂ. ಹಣ ಸಹ ಉಳಿತಾಯ ಆಗಲಿದೆ. ಇದರಿಂದ ರಾಜ್ಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ ಅನ್ನುವುದು ಆಹಾರ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ.

ಏನಿದು ಇ-ಕೆವೈಸಿ?: ಆನ್‌ಲೈನ್‌ ತಂತ್ರಜ್ಞಾನದ ಮೂಲಕ ಗ್ರಾಹಕರು, ಫ‌ಲಾನುಭವಿಗಳನ್ನು ಗುರುತು ಖಾತರಿಪಡಿಸಿಕೊಳ್ಳುವ ವ್ಯವಸ್ಥೆಗೆ (ಇ-ಕೆವೈಸಿ) ಎಂದು ಹೇಳಲಾಗುತ್ತದೆ. ರಾಜ್ಯದಲ್ಲಿ ಪಡಿತರ ಚೀಟಿಗಳ ಆಧಾರ್‌ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಈಗ ಆಧಾರ್‌ ಜೋಡಣೆಯಾಗಿರುವ ಪಡಿತರ ಚೀಟಿಯ ಸಾಚಾತನ ಮತ್ತು ಪಡಿತರ ಚೀಟಿಯಲ್ಲಿರುವ ಫ‌ಲಾನುಭವಿ ಅಥವಾ ಪಡಿತರ ಚೀಟಿದಾರರ ಹೆಸರು ಜೋಡಣೆಯಾದ ಆಧಾರ್‌ ಕಾರ್ಡ್‌ ಸಂಖ್ಯೆಗೆ ತಾಳೆ ಆಗುತ್ತದೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ ಮೂಲಕ ಆಧಾರ್‌ ದೃಢೀಕರಣ ಮಾಡಲಾಗುತ್ತದೆ.

ಸದ್ಯ ಇ-ಕೆವೈಸಿ ಸ್ಥಗಿತ: ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ ಆದೇಶದಂತೆ ಪಡಿತರ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರೂ ಆಧಾರ್‌ ದೃಢೀಕರಣ ಮಾಡಿಸಬೇಕೆಂದು, ಅದರಂತೆ ರಾಜ್ಯದ ಪಡಿತರ ಚೀಟಿದಾರ ಕುಟುಂಬ ಸದಸ್ಯರ ಇ-ಕೆವೈಸಿಯನ್ನು (ಆಧಾರ್‌ ದೃಢೀಕರಣ) ನ್ಯಾಯಾಬೆಲೆ ಅಂಗಡಿ ಹಂತದಲ್ಲಿ ಆನ್‌ಲೈನ್‌ ಮೂಲಕ ಜೂ.1ರಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆಯ ಫ‌ಲಾನುಭವಿಗಳ ನೋಂದಣಿ ಆರಂಭವಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿವರೆಗೆ 25 ಲಕ್ಷ ಫ‌ಲಾನುಭವಿಗಳ ಆಧಾರ್‌ ದೃಢೀಕರಣ ಆಗಿದ್ದು, ಸುಮಾರು 4 ಕೋಟಿ ಫ‌ಲಾನುಭವಿಗಳ ಆಧಾರ್‌ ದೃಢೀಕರಣ ಆಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next