Advertisement

ಸಕಲೇಶಪುರದಲ್ಲಿ ಪತ್ತೆಯಾದ ಯುವಕ ಅಪಘಾತದಿಂದಲೇ ಸಾವು

11:15 PM Jun 23, 2023 | Team Udayavani |

ಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದ ವಿದ್ಯಾನಗರ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್‌ ಅವರ ಮೃತದೇಹವು ಸಕಲೇಶಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಂಪುಹೊಳೆ ಬಳಿ ಜೂ. 22 ರಂದು ಬೈಕ್‌ ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅನುಮಾನಗಳಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪೊಲೀಸ್‌ ಮೂಲಗಳು ಅಪಘಾತದಿಂದಾಗಿಯೇ ನಾಗಪ್ರಸಾದ್‌ ಅವರ ಸಾವು ಸಂಭವಿಸಿದೆ ಎಂದು ಸ್ಪಷ್ಟಪಡಿಸಿವೆ.

Advertisement

ಜೂ. 22ರಂದು ಮರ್ದಾಳದಲ್ಲಿ ತನ್ನ ಮಾಲಕತ್ವದ ಚಿನ್ನದಂಗಡಿಯ ಉದ್ಘಾಟನೆಯ ಸಿದ್ಧತೆಯಲ್ಲಿದ್ದ ನಾಗಪ್ರಸಾದ್‌ ಅದೇ ದಿನ ಮುಂಜಾನೆ ಕೆಂಪುಹೊಳೆ ಬಳಿ ಶವವಾಗಿ ಪತ್ತೆಯಾಗಿದ್ದರು. ಘಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಜಖಂಗೊಂಡಿರುವ ಬೈಕ್‌ ಹಾಗೂ ಮೃತದೇಹ ಪತ್ತೆಯಾಗಿರುವ ಜಾಗದಲ್ಲಿನ ರಸ್ತೆಯ ಪಕ್ಕದ ಕಾಂಕ್ರೀಟ್‌ ಕಟ್ಟೆಗೆ ಬೈಕ್‌ ಢಿಕ್ಕಿ ಹೊಡೆದು ಬಳಿಕ ಚರಂಡಿಗೆ ಉರುಳಿ ಬಿದ್ದ ರೀತಿಯಲ್ಲಿ ಕುರುಹುಗಳು ಕಂಡುಬಂದಿರುವುದು ಮತ್ತು ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಅಪಘಾತದಿಂದಾಗಿಯೇ ಮರಣ ಸಂಭವಿಸಿದೆ ಎಂದು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅಪಘಾತದಿಂದಾಗಿಯೇ ನಾಗಪ್ರಸಾದ್‌ ಅವರ ಸಾವು ಸಂಭವಿಸಿದೆ ಎಂದು ಖಚಿತಗೊಂಡಿದೆ.

ಯಾವುದೋ ವಾಹನವನ್ನು ಓವರ್‌ಟೇಕ್‌ ಮಾಡುವ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಂಗಡಿ ಉದ್ಘಾಟನೆಯ ಆಮಂತ್ರಣ ವಿತರಿಸುವ ಸಲುವಾಗಿ ಹಿಂದಿನ ದಿನ (ಜೂ. 21) ಬೆಳಗ್ಗೆ 2 ಹೆಲ್ಮೆಟ್‌ಗಳ ಜತೆ ಒಬ್ಬರೇ ತನ್ನ ಬೈಕ್‌ನಲ್ಲಿ ಹೋಗಿರುವುದು ಸ್ಪಷ್ಟವಾಗಿದೆ. ಅಪಘಾತದ ಸ್ಥಳದಲ್ಲಿಯೂ 2 ಹೆಲ್ಮೆಟ್‌ಗಳು ಪತ್ತೆಯಾಗಿತ್ತು.

ಹಲವು ಸಂಶಯಗಳು ಇನ್ನೂ ಜೀವಂತ!
ಆಮಂತ್ರಣ ನೀಡಲು ಇಚ್ಲಂಪಾಡಿಗೆ ತೆರಳಿದ್ದ ನಾಗಪ್ರಸಾದ್‌ ಅಲ್ಲಿಂದ ಬೆಳ್ತಂಗಡಿಗೆ ಹೋಗಲಿರುವುದಾಗಿ ಹೇಳಿ ಸಕಲೇಶಪುರದತ್ತ ಹೋಗಿರುವುದು ಯಾಕೆ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗೆಯೇ 2 ಹೆಲ್ಮೆಟ್‌ ಕೊಂಡೊಯ್ದಿದ್ದೇಕೆ? ಅವರ ಮೊಬೈಲ್‌ ಫೋನ್‌ ಅಪಘಾತ ಸ್ಥಳದಿಂದ ನಾಪತ್ತೆಯಾಗಿದ್ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಮೊಬೈಲ್‌ ಫೋನ್‌ನ ಕಾಲ್‌ಲಿಸ್ಟ್‌ ಮಾಹಿತಿ ಲಭಿಸಿದ ಮೇಲಷ್ಟೇ ಪ್ರಕರಣಕ್ಕೆ ಸಂಬಂಧಿಸಿದ ಸಂಶಯಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next