Advertisement

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

05:27 PM Sep 23, 2023 | Team Udayavani |

ಕೆಲವು ಸಾಹಿತ್ಯಗಳು ಅಚ್ಚಳಿಯದಂತೆ ನಮ್ಮ ಮನದಲ್ಲಿ ಉಳಿದು ಬಿಡುತ್ತವೆ. ಜನರು ಹೆಚ್ಚು ಹೆಚ್ಚು ಮೆಚ್ಚಿಕೊಂಡ ಸಾಹಿತ್ಯದ ಕಥೆ, ಕಾದಂಬರಿಗಳು ಸಿನೆಮಾಗಳಾಗಿ ತೆರೆಯ ಮೇಲೂ ವಿಜೃಂಭಿಸಿ ಗೆದ್ದಿದ್ದಿದೆ. ಸಾಹಿತ್ಯದ ಓದು ಹೇಗೆ ನಮಗೆ ಕಲ್ಪನೆಯನ್ನು ನೀಡುತ್ತವೆಯೋ ಹಾಗೇ ದೃಶ್ಯ ರೂಪವು ಆ ಕಲ್ಪನೆಗಳಿಗೆ ಬಣ್ಣವನ್ನು ತುಂಬುತ್ತವೆ. ಇಂತಹ ಕಥೆಗಳನ್ನು ದೊಡ್ಡದಾದ ರಂಗಮಂದಿರದಲ್ಲಿ ನೋಡಿ ಕಣ್ತುಂಬಿಕೊಳ್ಳುವುದೇ ರಸಾನುಭವ. ರಂಗಭೂಮಿ, ರಂಗನಾಟಕಗಳ ವಿಶೇಷತೆಯೇ ಅದ್ಭುತ ಅನುಭವ.

Advertisement

ರಂಗಭೂಮಿ, ನಾಟಕ ಮೊದಲಿನಿಂದಲೂ ನನ್ನನ್ನು ಆಕರ್ಷಿಸುತ್ತಲೇ ಬಂದಿವೆ. ಹಾಗಾಗಿ ಮೊದಲಿನಿಂದಲೂ ನಾಟಕಗಳನ್ನು ನೋಡುತ್ತ ಬೆಳೆದವಳು ನಾನು. ಹೊನ್ನಪ್ಪ ಭಾಗವತರ ಪುರಾಣಗಳನ್ನು ಆಧರಿಸಿದ ನಾಟಕಗಳು, ಮಾಸ್ಟರ್‌ ಹಿರಣ್ಣಯ್ಯ ಅವರ ಲಂಚಾವತಾರ ಎಲ್ಲವೂ ನನ್ನ ಎಳೆ ಮನಸ್ಸಿನ ಮೇಲೆ ಗಾಢವಾದ ಅಚ್ಚು ಒತ್ತಿದ್ದವು. ಆದರೆ ಭಾರತವನ್ನು ಬಿಟ್ಟು ಅಮೆರಿಕದಲ್ಲಿ ಬಂದು ನೆಲೆಸಿದ ಅನಂತರ ಇನ್ನೆಲ್ಲಿ ಅಂಥ ರಸಾನುಭವ! ಅದೂ ಅಮೆರಿಕದಲ್ಲಿ! ಮುಗಿದೇ ಹೋದವು ಆ ದಿನಗಳು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೇ ನನ್ನಲ್ಲಿ ಆ ಖುಷಿಯನ್ನು ಬಿತ್ತಿದ್ದು ಕರಿಮಾಯಿ ಎಂಬ ನಾಟಕ.

ಸೆ.10ರಂದು ರಾಜಧಾನಿ ವಾಷಿಂಗ್ಟನ್‌ ಡಿಸಿ ಪ್ರದೇಶದಲ್ಲಿ ಎರಡನೆಯ ಬಾರಿ ಈ ನಾಟಕದ ಪ್ರದರ್ಶನವಿತ್ತು. ಇದು ರಂಗವರ್ತುಲ ತಂಡದವರ ಪ್ರಸ್ತುತಿ. ಇಲ್ಲಿನ ಅದ್ಭುತ ಪ್ರತಿಭೆ ನೀತೀಶ್‌ ಶ್ರೀಧರ ಅವರ ಸಮರ್ಥ ನಿರ್ದೇಶನದಲ್ಲಿ. ಮೂರು ತಿಂಗಳ ಹಿಂದೆ ಜೂನ್‌ನಲ್ಲಿ ಈ ನಾಟಕವನ್ನು ಮೊತ್ತಮೊದಲ ಬಾರಿ ಈ ತಂಡದವರು ಇಲ್ಲಿನ ರಂಗಮಂದಿರವೊಂದರಲ್ಲಿ ಪ್ರದರ್ಶಿಸಿದ್ದರಂತೆ. ಆದರೆ ಅಂದು ಕಾರಣಾಂತರಗಳಿಂದ ನನಗೆ ಅದನ್ನು ವೀಕ್ಷಿಸುವ ಸುಯೋಗ ಸಿಕ್ಕಿರಲಿಲ್ಲ. ಆದ್ದರಿಂದ ಈ ಪ್ರದರ್ಶನವನ್ನು ತಪ್ಪಿಸಿಕೊಳ್ಳಬಾರದೆಂದು ಕಾತುರದಿಂದ ಕಾಯುತ್ತಿದ್ದಾರೆ.

ಅಬ್ಬಾ! ಎಂಥ ರಸಾನುಭವ! ಯಾವುದೂ ಕಳೆದು ಹೋಗಿಲ್ಲ. ಅಭಿನಯ ಶಾರದೆ ಇನ್ನೂ ಇಲ್ಲೇ ಇದ್ದಾಳೆ- ಅಮೆರಿಕದಲ್ಲೂ ಎಂಬ ಭರವಸೆ ನೀಡಿತ್ತು ಈ ನಾಟಕ. ರಂಗಸಜ್ಜಿಕೆ, ವೇಷ ಭೂಷಣ, ಮುಖ ಭಾವ, ದನಿಯ ಏರಿಳಿತ, ನೃತ್ಯ, ಯಾವುದು ಹೇಳಲಿ? ಯಾವುದನ್ನು ಬಿಡಲಿ? ಅದ್ಭುತ ನಾಟಕ ಪ್ರದರ್ಶನ! ಆಶ್ಚರ್ಯವೆಂದರೆ ಇವರೆಲ್ಲರೂ ಹವ್ಯಾಸಿ ಕಲಾವಿದರೆಂಬುದು.

Advertisement

ನಾಟಕದಲ್ಲಿದ್ದ ಪ್ರತಿಯೊಬ್ಬ ಕಲಾವಿದನೂ ಅಭಿನಯವನ್ನು ವೃತ್ತಿಯನ್ನಾಗಿಸಿಕೊಂಡವರಲ್ಲ, ಆದರೆ ಅಭಿನಯವನ್ನೇ ಉಸಿರಾಗಿಸಿಕೊಂಡವರು. ಅದೂ ಅಲ್ಲದೇ ರಂಗದ ಮೇಲಿದ್ದ ಮೂವತ್ತಕ್ಕೂ ಹೆಚ್ಚು ಪಾತ್ರಧಾರಿಗಳಲ್ಲಿ ಕೆಲವರಷ್ಟೇ ಈ ಹಿಂದೆಯೂ ಹವ್ಯಾಸಿ ನಾಟಕಗಳಲ್ಲಿ ಅಭಿನಯ ಅನುಭವವುಳ್ಳವರಂತೆ. ಮಿಕ್ಕವರನ್ನೆಲ್ಲ ಈ ನಾಟಕಕ್ಕಾಗಿಯೇ ಪಳಗಿಸಿ ತರಬೇತಿ ನೀಡಲಾಗಿದೆ.

ನಾಟಕದ ಸಂಭಾಷಣೆಯೆಲ್ಲ ಉತ್ತರ ಕರ್ನಾಟಕದ ಸೊಗಡಿನದು. ಆಶ್ಚರ್ಯವೆನಿಸಿದ್ದು ಕಲಾವಿದರ ತಂಡದಲ್ಲಿದ್ದ ಕೆಲವರು ಮಾತ್ರ ಉತ್ತರ ಕರ್ನಾಟಕದ ಮೂಲವನ್ನು ಹೊಂದಿದ್ದರು. ಉಳಿದವರೆಲ್ಲ ಬೇರೆ ಬೇರೆ ಪ್ರದೇಶಗಳಿಗೆ ಸೇರಿದವರು. ಆದರೆ ಅವರೆಲ್ಲರ ಸಂಭಾಷಣೆಯ ಶೈಲಿಯನ್ನು ಕೇಳಿದಾಗ ಎಲ್ಲರ ಮಾತೃಭಾಷೆಯಿದು ಎಂದು ಅನಿಸಿದ್ದು ನಿಜ. ಅಷ್ಟರ ಮಟ್ಟಿಗೆ ಎಲ್ಲರೂ ಆ ಭಾಷೆಯನ್ನು ರೂಢಿಸಿಕೊಂಡಿದ್ದರು. ಪ್ರೇಕ್ಷಕರಾಗಿ ನಮಗೆ ಒಂಚೂರೂ ವ್ಯತ್ಯಾಸ ಗೊತ್ತಾಗಲಿಲ್ಲವೆಂದರೆ ಅದು ನಿಜಕ್ಕೂ ಅವರೆಲ್ಲರ ಉತ್ಸಾಹ, ಛಲದ ಯಶಸ್ಸು.

ಮೊದಲಿಗೆ ಗಜಮುಖನ ಪ್ರಾರ್ಥನೆಯೊಂದಿಗೆ ಮೂರು ಬೆಲ್‌ಗ‌ಳು ಬಾರಿಸುತ್ತಿದ್ದಂತೆ ತೆರೆದುಕೊಂಡ ಅಂಕದ ಪರದೆ! ಮೈ ನವಿರೆದ್ದಿತ್ತು, ಮನಸ್ಸು ನವಿಲಾಗಿತ್ತು. ಕಂಬಾರರ ಕರಿಮಾಯಿ ಕಾದಂಬರಿಯನ್ನು ಈ ಮುಂಚೆ ನಾನು ಓದಿರಲಿಲ್ಲ. ಬಿ.ಜಯಶ್ರೀಯವರು ನಾಟಕರೂಪಕ್ಕೆ ಅಳವಡಿಸಿ ಎಲ್ಲೆಡೆ ಪ್ರದರ್ಶಿಸಿದ್ದನ್ನೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ಆ ದೃಷ್ಟಿಯಿಂದ ನನಗೆ ಇದೆಲ್ಲವೂ ಹೊಸತೇ. ನಿಜಕ್ಕೂ ರೋಮಾಂಚಕಾರಿ ಅನುಭವ. ಕೊನೆಯಲ್ಲಿ ದೇವರಸಿಯು ಹೊಟ್ಟೆಗೆ ಇರಿದುಕೊಂಡಾಗ ಮೈ ಝಮ್ಮೆಂದಿತ್ತು. ಮನಸ್ಸು ಅಯ್ಯೋ ಎಂದು ಚೀರಿತ್ತು. ಇದು ಅವನೊಬ್ಬನ ಸಾವಲ್ಲ, ಶಿವಾಪುರದಂಥ ಹಳ್ಳಿ ಜನರ ಮುಗ್ಧತೆಯ ಸಾವು ಎಂದು ಮಮ್ಮಲ ಮರುಗಿತು. ಕಾಪಾಡು ಕುರಿಗಳನ್ನು ಸಾಲು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸುತ್ತಿದ್ದಂತೆ, ಕರಿಮಾಯಿ ನನ್ನ ಭಾವಕೋಶದಲ್ಲಿ ಹಸುರಾಗಿ ಉಳಿದು ಬಿಟ್ಟಳು.

*ನಳಿನಿ ಮೈಯ, ವಾಷಿಂಗ್ಟನ್‌ ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next