Advertisement

ಕೇಂದ್ರ ಸರ್ಕಾರದ ವಿರುದ್ಧ ವಿಶ್ವಾಸಘಾತುಕ ದಿನಾಚರಣೆ

04:15 PM May 27, 2018 | Team Udayavani |

ರಾಯಚೂರು: ದಿನಬಳಕೆ, ಅಡುಗೆ ಅನಿಲ, ತೈಲ ಬೆಲೆ ನಿಯಂತ್ರಿಸದೆ, ಕೊಟ್ಟ ಭರವಸೆ ಈಡೇರಿಸದೆ ನಾಲ್ಕನೇ ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ವಿಶ್ವಾಸಘಾತುಕ ದಿನ ಆಚರಿಸಿದರು. ನಗರದ ಅಂಬೇಡ್ಕರ್‌ ವೃತ್ತದಲ್ಲಿ ಧರಣಿ ಕುಳಿತ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ತರಕಾರಿ ಹಾರ ಹಾಕಿಕೊಂಡು, ಖಾಲಿ ಸಿಲಿಂಡರ್‌ ಮುಂದಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪ್ರಧಾನಿ ಮೋದಿ ಅಚ್ಛೆ ದಿನ್‌ ಆಯೇಗಾ ಎಂದು ನಾಲ್ಕು ವರ್ಷ ದೇಶದ ಜನರನ್ನು ವಂಚಿಸಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಯಾವೊಂದು ಭರವಸೆ ಈಡೇರಿಸಿಲ್ಲ. ಆದರೆ, ಈಗ ಯಶಸ್ವಿ ನಾಲ್ಕನೇ ವರ್ಷ ಸಂಭ್ರಮಾಚರಣೆ ಮಾಡುತ್ತಿರುವುದು ಜನರ ವಿಶ್ವಾಸಕ್ಕೆ ಮಾಡಿದ ದ್ರೋಹವಾಗಿದೆ. ಹೀಗಾಗಿ ಈ ದಿನವನ್ನು ನಾವು ವಿಶ್ವಾಸಘಾತುಕ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು.

ಅಡುಗೆ ಅನಿಲ ದರ ಗಗನಕ್ಕೇರಿದೆ. ತೈಲ ಬೆಲೆ 80 ರೂ. ತಲುಪಿದೆ. ದಿನಬಳಕೆ ವಸ್ತುಗಳು ಬಡವರ ಕೈಗೆಟುಕದಂತಾಗಿದೆ. ಆದರೆ, ಬಡವರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರಧಾನಿ, ದೇಶದ ಜನರನ್ನು ಕಷ್ಟದಲ್ಲಿರಿಸಿದ್ದಾರೆ. ನೋಟು ಅಮಾನ್ಯಿಕರಣ, ಜಿಎಸ್‌ಟಿಯಂಥ ಆರ್ಥಿಕ ನೀತಿ ಜಾರಿಗೊಳಿಸುವ ಮೂಲಕ
ದೇಶದ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ರಾಜ್ಯ ಜಲ ವಿವಾದಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸದೆ ರಾಜ್ಯದ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಹೀಗಾಗಿ ಈ ದಿನವನ್ನು ವಿಶ್ವಾಸಘಾತುಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ಪಾರಸಮಲ್‌
ಸುಖಾಣಿ, ನಗರಸಭೆ ಉಪಾಧ್ಯಕ್ಷ ಜಯಣ್ಣ, ಜಿ.ಬಸವರಾಜ ರೆಡ್ಡಿ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಅಬ್ದುಲ್‌ ಕರೀಂ, ಅಮರೇಗೌಡ ಹಂಚಿನಾಳ, ದರೂರು ಬಸವರಾಜ ಪಾಟೀಲ, ವಸಂತಕುಮಾರ್‌ ಅರೋಲಿ ಸೇರಿ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next