Advertisement

ಕುದೂರಲ್ಲಿ ಬೀದಿ ನಾಯಿ, ಕೋತಿಗಳ ಹಾವಳಿ

06:33 PM Jul 24, 2021 | Team Udayavani |

ಕುದೂರು: ನಗರದಲ್ಲಿ ಬೀದಿನಾಯಿ ಮತ್ತು ಮಂಗಗಳು ಹೆಚ್ಚಾಗಿದ್ದು, ಸ್ಥಳೀಯರು ಅಂತಕಕ್ಕೀಡಾಗಿದ್ದಾರೆ. ನಾಯಿಗಳ ಉಪಟಳಕ್ಕೆ ಪ್ರತಿನಿತ್ಯ ಸಾರ್ವಜನಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾಗಿ ಸಾರ್ವಜನಿಕರು ಅಗ್ರಹಿಸಿದ್ದಾರೆ.

Advertisement

ಕುದೂರಿನ ವಿವಿಧ ಭಾಗದ ಬೀದಿಗಳಲ್ಲಿ ನಾಯಿಗಳ ಉಪಟಳ ದಿನೇ ದಿನೆ ಹೆಚ್ಚಾಗುತ್ತಿದೆ. ರಸ್ತೆ ಮೇಲೆ ಅಲ್ಲಲ್ಲಿ ಮಲಗಿರುತ್ತವೆ ಹಾಗೂ ಓಡಾಡುತ್ತಿರುತ್ತವೆ. ಯಾರಾದರೂ ರಸ್ತೆಯಲ್ಲಿ ಓಡಾಡುತ್ತಿದ್ದರೆ, ಅವರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚುತ್ತವೆ. ಇನ್ನು ಮಕ್ಕಳು ಮನೆಯಿಂದ ಹೊರಗೆ ಬರುವಂತಿಲ್ಲ. ಜನರಿಗೆ ನಾಯಿ ಕಚ್ಚಿರುವ ಉದಾಹರಣೆಗಳಿವೆ.

ಬೈಕ್‌ನಲ್ಲಿ ಯಾರಾದರೂ ಸಂಚರಿಸಿದರೇ ನಾಯಿಗಳು ಅವರನ್ನು ಅಟ್ಟಾಡಿಸಿಕೊಂಡು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಎಷ್ಟೋ ಚಾಲಕರು ಗಾಬರಿಗೊಂಡು ಬಿದ್ದು ಗಾಯಗಳಾಗಿವೆ. ಇನ್ನೂ ರಾತ್ರಿ ವೇಳೆ ಯಾರಾದರೂ ಒಂಟಿಯಾಗಿ ಬಂದರೆ ಸಾಕು ನಾಯಿಗಳು ಅಕ್ರಮಣ ಮಾಡುತ್ತವೆ. ಹತ್ತಾರು ನಾಯಿಗಳು ಒಟ್ಟಿಗೆ ಓಡಾಡುವುದರಿಂದ ಯಾರಾದರೂ ಹೆದರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಕಳೆದ ಎರಡು ವರ್ಷಗಳಿಂದ ಬೀದಿ ನಾಯಿಗಳ ಉಪಟಳ ಉಲ್ಬಣದಿಂದಾಗಿ ಎಲ್ಲೆಲ್ಲೂ ನಾಯಿಗಳು ಹೆಚ್ಚಾಗಿವೆ. ಇದರ ನಿಯಂತ್ರಣವನ್ನು ಅಧಿಕಾರಿಗಳು ಮಾಡದೆ ಕಣ್ಣಿದ್ದು, ಕುರುಡರಂತೆ ನಾಯಿಗಳ ದಂಡನ್ನು ವೀಕ್ಷಿಸುತ್ತಾ ನಿಯಂತ್ರಣ ಮಾಡುವಲ್ಲಿ ಮೀನಮೇಷ ಎಸಗುತ್ತಿದ್ದಾರೆ.

ಕಾಡಿಗೆ ನಾಯಿಗಳು: ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಾಯಿಗಳನ್ನು ಹಿಡಿದು ಚುಚ್ಚು ಮದ್ದು ನೀಡಿ, ನಾಯಿಗಳನ್ನುಕಾಡಿಗೆ ಬಿಡುವ ಮೂಲಕ ನಿಯಂತ್ರಣ ಮಾಡಲಾಗಿತ್ತು. ಇತ್ತೀಚೆಗೆ ನಡೆಯುತ್ತಿಲ್ಲ.

Advertisement

ರಾತ್ರಿ ನಿದ್ದೆಗೆ ತೊಂದರೆ: ಗ್ರಾಮದೆಲ್ಲೆಡೆ ನಾಯಿಗಳ ಸಂಖ್ಯೆ ಉಲ್ಬಣಗೊಂಡಿದ್ದು, ಇಡೀ ರಾತ್ರಿ ಬೊಗಳುವುದರಿಂದ ರಾತ್ರಿ ನಿದ್ದೆ ಮಾಡದೆ ಪರಿತಪಿಸುವಂತಹ ವಾತಾವರಣ ನಾಯಿಗಳಿಂದ ನಿರ್ಮಾಣವಾಗಿದೆ.

ಮಂಗಗಳ ಹಾವಳಿ: ಮನೆಗಳ ಚಾವಣಿ ಮೇಲೆ ಹಾರುವ ಮಂಗಗಳು ಅಲ್ಲಿರುವ ಡಿಟಿಎಚ್‌ ಸೆಟ್‌ ಗಳನ್ನು ಹಾಳುಮಾಡುತ್ತಿವೆ. ಮನೆ ಹೆಂಚುಗಳನ್ನು ಒಡೆದು ಹಾನಿ ಮಾಡುತ್ತಿರುವ ಈ ಮಂಗಗಳ ಉಪ ಟಳದಿಂದಲೂ ಸ್ಥಳೀಯರು ಬೇಸತ್ತು ಹೋಗಿದ್ದಾರೆ.

ಇಂತಹ ಹಲವಾರು ಸಂದರ್ಭದಲ್ಲಿ ದುರ್ಘ‌ಟನೆಗಳು ನಡೆಯುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಉದಾಸೀನ ತೋರುತ್ತಿದ್ದಾರೆ. ಇನ್ನು ನಾಯಿಗಳನ್ನು ಕೊಲ್ಲಲು ಮುಂದಾದರೆ ಅವರ ಮೇಲೆ ಪ್ರಾಣಿ ದಯಾ ಸಂಘದವರು ಪ್ರಕರಣ ದಾಖಲಿಸುತ್ತಾರೆ ಎಂದು ಇಲಾಖೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ನಾಯಿಗಳು ಮತ್ತು ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂಬುಂದು ಸಾರ್ವಜನಿಕರ ಅಗ್ರಹವಾಗಿದೆ.

ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next