Advertisement

ಪೋಷಕರ ಸಮ್ಮುಖದಲ್ಲಿ ಮಕ್ಕಳ ಹೇಳಿಕೆ

12:14 PM Feb 26, 2017 | Team Udayavani |

ಬೆಂಗಳೂರು: ಮಾರತ್‌ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ನರ್ಸರಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ವೈದ್ಯಕೀಯ ತಪಾಸಣೆಗೆ ಅವರ ಪೋಷಕರು ಸಹಕರಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಮನವಿ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಳೆ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ನಿಜಕ್ಕೂ ನೋವು ತಂದಿದೆ. ಪ್ರಕರಣದ ಸಂಬಂಧ 164 (ಸಿಆರ್‌ಪಿಸಿ) ಕಾಯ್ದೆಯಡಿ ಮ್ಯಾಜಿಸ್ಟ್ರೇಟ್‌ ಎದುರು ಹೇಳಿಕೆ ಬಹಳ ಮುಖ್ಯವಾಗುತ್ತದೆ. ಸಣ್ಣ ಮಕ್ಕಳಾದ ಕಾರಣ ಹೇಳಿಕೆ ನೀಡಲು ಹಿಂಜರಿಯಬಹುದು. ಹೀಗಾಗಿ ತಾಯಂದಿರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡುವಂತೆ ಮ್ಯಾಜಿಸ್ಟ್ರೇಟ್‌ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ.

ಮಕ್ಕಳೊಂದಿಗೆ ತಾಯಂದಿರು ಜತೆಯಲ್ಲಿದ್ದರೆ ಮಕ್ಕಳಿಗೆ ನೈತಿಕ ಬಲ ಬಂದಂತಾಗುತ್ತದೆ. ಘಟನೆ ಬಳಿಕ ಪ್ರತಿಯೊಬ್ಬ ಪೋಷಕರ ಬಳಿ ಮಾತನಾಡಿ ದೈರ್ಯ ಹೇಳಿರುವುದಾಗಿ ತಿಳಿಸಿದರು. ಪ್ರಕರಣದಲ್ಲಿ ಆರೋಪಿ ಮಂಜುನಾಥ್‌ ವಿರುದ್ಧ 8 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕೂಡ ಕಂಡು ಬಂದಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಕೂಡ ಕ್ರಮಜರುಗಿಸಲಾಗುವುದು ಎಂದರು.

ಮಾರತ್‌ಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಮಂಜುನಾಥ್‌ನನ್ನು ಸೋಮವಾರ ಪೊಲೀಸರ ವಶಕ್ಕೆ ಪಡೆಯಲಾಗುವುದು ಎಂದು ಡಿಸಿಪಿ ನಾರಾಯಣ್‌ ತಿಳಿಸಿದ್ದಾರೆ. ಶಿವರಾತ್ರಿ ರಜೆ ಇದ್ದ ಕಾರಣ ಆರೋಪಿಯನ್ನು ವಶಕ್ಕೆ ಪಡೆಯಲು ಆಗಿರಲಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುವುದು ಎಂದು ತಿಳಿಸಿದರು.

ಆರೋಪಿಯನ್ನು ಬಿಡುವುದಿಲ್ಲ: ಸಿಎಂ ಟ್ವೀಟ್‌ 
ಖಾಸಗಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದು, ಬೆಳ್ಳಂದೂರು ಪ್ರಕರಣದ ಶೀಘ್ರ ತನಿಖೆ ನಡೆಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿದೆ. ಪ್ರಕರಣದ ಆರೋಪಿಯನ್ನು ಸುಮ್ಮನೆ ಬಿಡುವುದಿಲ್ಲ. ಶಿಕ್ಷೆ ಕೊಡಿಸಲಾಗುವುದು ಎಂದಿದ್ದಾರೆ.

Advertisement

ಶೂಟೌಟ್‌ ಪ್ರಕರಣದ ತನಿಖೆ ಶೀಘ್ರ ಪೂರ್ಣ 
ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲೆ ಕೋಗಿಲು ಕ್ರಾಸ್‌ ಸಿಗ್ನಲ್‌ ಬಳಿ ನಡೆದಿದ್ದ ಶೂಟೌಟ್‌ ಪ್ರಕರಣ ತನಿಖಾ ಹಂತದಲ್ಲಿದೆ. ನೂರಕ್ಕೆ ನೂರು ಭಾಗ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next