Advertisement

ಗ್ರಾಮೀಣ ಕಥೆಗಿದೆ ಬದುಕು ರೂಪಿಸುವ ಶಕ್ತಿ; ಕುಂ. ವೀರಭದ್ರಪ್ಪ

04:41 PM Feb 06, 2023 | Team Udayavani |

ಬಾಗಲಕೋಟೆ: ಬರಹ ಓದಿಸಿಕೊಂಡು ಹೋಗುವಂತಿರಬೇಕು, ಮನಸ್ಸು ಅರಳಿಸಬೇಕು. ಗ್ರಾಮೀಣ ಸಂವೇದನೆಯಂತಹ ಕತೆಗಳು ಬದುಕನ್ನು ರೂಪಿಸುತ್ತವೆ ಎಂದು ಹಿರಿಯ ಕಾದಂಬರಿಗಾರ ಹಾಗೂ ಕಥೆಗಾರ ಕುಂ. ವೀರಭದ್ರಪ್ಪ ಹೇಳಿದರು.

Advertisement

ನವನಗರದ ಬಿಡಿಸಿಸಿ ಬ್ಯಾಂಕ್‌ ಸಭಾಭವನದಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ ಕಾಚಕ್ಕಿ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಿಟಿಡಿಎ ಸಿಎಒ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ “ದೀಡೆಕರೆ ಜಮೀನು’ ಕಥಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಶೆಲ್ಲಿಕೇರಿಯವರ ಕತೆಗಳಲ್ಲಿ ಮಾನವೀಯ ತುಡಿತವಿದೆ. ಬದುಕಿನ ಕಷ್ಟದ ಸಂದರ್ಭಗಳನ್ನು ಎಳೆಎಳೆಯಾಗಿ ಕತೆಗಳ ಮೂಲಕ ಅಕ್ಷರ ರೂಪಕ್ಕೆ ಧ್ವನಿ ನೀಡಿದ್ದಾರೆ. “ದಿಡೇಕರೆ ಜಮೀನು’ ಕತೆ ಸಿನಿಮಾ ಆಗಬಹುದಾದ ಎಲ್ಲ ಲಕ್ಷಣ ಹೊಂದಿದೆ. ಇವರು ಬರೆದ ಕಥೆಗಳಲ್ಲಿ ಗ್ರಾಮೀಣ ಸಂವೇದನೆಯಿದೆ. ಕೆಎಎಸ್‌ ಅಧಿಕಾರಿಯಾಗಿದ್ದರೂ ಬಿಡುವಿಲ್ಲದ ಕೆಲಸದಲ್ಲಿ ಸಾಹಿತ್ಯ ರಚನೆ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದು ಅವರ ಸಾಮಾಜಿಕ ಕಳಕಳಿ ಅಭಿವ್ಯಕ್ತಪಡಿಸುತ್ತದೆ ಎಂದರು.

ದಿಡೇಕರೆ ಜಮೀನು, ತಲ್ಲಣ, ಆಲದ ಮರ, ಭಜಿ ಅಂಗಡಿ ಮಲ್ಲಕ್ಕ ಮುಂತಾದ ಕತೆಗಳಲ್ಲಿಯ ಸಂವೇದನೆ, ಅಭಿವ್ಯಕ್ತಿ, ಪಾತ್ರಗಳು, ಸನ್ನಿವೇಶ, ಕತೆಯ ಮೂಲ ಆಶಯ, ನೆಲ ಮೂಲ ಸಂಸ್ಕೃತಿಯ ಒಳನೋವುಗಳನ್ನು ಎಳೆಎಳೆಯಾಗಿ ಬಿಚ್ಚಿ ಹೇಳಿದರು. ಶೆಲ್ಲಿಕೇರಿಯವರ ಕತೆಗಳು ಓದಿಸಿಕೊಂಡು ಹೋಗುತ್ತವೆ. ಈ ಸಂಕಲನ ಅವರನ್ನು ಸಾಹಿತ್ಯ ಲೋಕಕ್ಕೆ ಬರಮಾಡಿಕೊಂಡಿದೆ. ಪುಸ್ತಕ ಕೊಂಡು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕ ಮಾತನಾಡಿ, ನಮ್ಮ ಜಿಲ್ಲೆಯ ಬರಹಗಾರರು ಮತ್ತು ಸಾಹಿತಿಗಳಿಂದ ಬಾಗಲಕೋಟೆ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿದೆ. ಜಿಲ್ಲೆಯ ಸಾಹಿತಿಗಳು, ಕಲಾವಿದರನ್ನು ಗೌರವಿಸುವ ಅವರ ಕೃತಿಗಳು, ಕಲೆಯನ್ನು ಸಮಾಜಕ್ಕೆ ತಲುಪಿಸುವ ಉದ್ದೇಶ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ ಎಂದರು. ಹುಬ್ಬಳ್ಳಿ ಹಿರಿಯ ಪತ್ರಕರ್ತೆ ರಶ್ಮಿ ಮಾತನಾಡಿ, ಬರೆದ ಕಥೆಗಳಿಗಿಂತ ಕಥೆಗಳ ಹಿಂದಿನ ವಾಸ್ತವಿಕತೆ ನಮ್ಮನ್ನು ಕೆರಳಿಸುತ್ತದೆ. ಅದು ನಮ್ಮನ್ನು ಬರೆಯುವಂತೆ ಮಾಡುತ್ತದೆ. ನಮ್ಮೊಳಗೆ ತುಂಬಿದ ನೋವು ಈ ಮೂಲಕ ಖಾಲಿ ಮಾಡುವುದೇ ಬರವಣಿಗೆಯಾಗಿರುತ್ತದೆ.
ಕಥೆಗಾರರ ಎಲ್ಲ ಕತೆಗಳನ್ನು ಪರಿಚಯಿಸಿ ಕತೆಗಳ ಒಳಗಿನ ತಲ್ಲಣವು ಕತೆಯಾಗಿ ಹೊರಬಂದಿವೆ.

Advertisement

ಈ ಸಂಕಲನದ ಕತೆಗಳು ಹತಾಶ ಭಾವ ಮೂಡಿಸುತ್ತವೆ. ನಮ್ಮೊಳಗಿನ ಬದುಕನ್ನು ಅನಾವರಣಗೊಳಿಸುತ್ತವೆ. ನಮ್ಮೊಳಗಿರುವ ಎರಡು ಪಾತ್ರಗಳನ್ನು ಮುಖಾಮುಖಿ ಮಾಡುವ ಕೆಲಸ ಕತೆಗಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಆ ಗುಣಗಳು ನಮ್ಮನ್ನು ಬದಲಿಸುತ್ತವೆ. ಕತೆಗಳಲ್ಲಿನ ಪಾತ್ರಗಳ ಬದುಕು ನಮ್ಮನ್ನು ಹಿಡಿದಿಡುತ್ತವೆ. ಕತೆ ಕಟ್ಟುವ ಬಗೆ  ಹೇಗಿರಬೇಕೆಂದರೆ ಓದುಗರನ್ನು ಓದಿಸಿಕೊಂಡು ಹೋಗಬೇಕು. ಕಣ್ಣನ್ನು ಒದ್ದೆಯಾಗಿಸಬೇಕು. ಅಂತಹ ಶಕ್ತಿ ಇಲ್ಲಿನ ಕತೆಗಳಲ್ಲಿ ಮೂಡಿಬಂದಿದೆ ಎಂದರು.

ಗೌರವ ಉಪಸ್ಥಿತರಿದ್ದ ಧಾರವಾಡದ ವಿಶ್ರಾಂತ ಅಪರ ಜಿಲ್ಲಾಧಿಕಾರಿ ಎಚ್‌.ಪಿ. ಶೆಲ್ಲಿಕೇರಿ, ಶಿಕ್ಷಣ ಇಲಾಖೆ ವಿಶ್ರಾಂತ ಅಧಿಕಾರಿ ಸಿದ್ದರಾಮ ಮನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಥಾ ಸಂಕಲನದ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ, ಕಾಚಕ್ಕಿ ಪ್ರಕಾಶನದ ಪ್ರಕಾಶಕ ಚೇತನ ನಾಗರಾಳ ಮಾತನಾಡಿದರು.

ನಾದಬಿಂದು ಕಲಾ ತಂಡದ ಸಂಗಮೇಶ ಪಾನಶೆಟ್ಟಿ ಹಾಗೂ ಕಲ್ಯಾಣಕುಮಾರ ಗೋಗಿ ನಾಡಗೀತೆ ಹಾಡಿದರು. ಈ ಸಂದರ್ಭದಲ್ಲಿ ಡಾ| ಯೋಗಪ್ಪನ್ನವರ, ಡಾ| ಸಿ.ಎಂ. ಜೋಶಿ, ಡಾ| ವಿಜಯಕುಮಾರ ಕಟಗಿಹಳ್ಳಿಮಠ, ಲಕ್ಷ್ಮಣ ಬಾದಾಮಿ, ತಾತಾಸಾಹೇಬ ಬಾಂಗಿ, ಕತೆಗಾರ ಕಲ್ಲೇಶ ಕುಂಬಾರ, ವೀರಭದ್ರ ಕೌದಿ, ವಿ.ಸಿ. ಹೆಬ್ಬಳ್ಳಿ, ಡಾ| ಪ್ರಕಾಶ ಖಾಡೆ, ಕಿರಣ ಬಾಳಾಗೋಳ ಸೇರಿದಂತೆ ಇತರರಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ| ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಬಾಗಲಕೋಟೆ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ವಂದಿಸಿದರು.

ಬಿಡುವಿಲ್ಲದ ವೇಳೆಯಲ್ಲೂ ಸಾಹಿತ್ಯ ಅಭಿರುಚಿ
ಶಾಸಕ ಡಾ| ವೀರಣ್ಣ ಚರಂತಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದು ಅತ್ಯಂತ ಮಹತ್ವದ್ದು. ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಅಧಿಕಾರಿಯಾಗಿ ಬಿಡುವಿಲ್ಲದ ವೇಳೆಯಲ್ಲಿಯೂ ಮಲ್ಲಿಕಾರ್ಜುನ ಶೆಲ್ಲಿಕೇರಿ ಸಾಹಿತ್ಯ ಬರವಣಿಗೆ ರೂಢಿಸಿಕೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next