Advertisement

ಗ್ರಾಮೀಣ ಭಾಗದಲ್ಲಿ ಕಳೆಗಟ್ಟಿದ ಸಂಕ್ರಾಂತಿ ಹಬ್ಬ

08:49 PM Jan 16, 2022 | Team Udayavani |

ಧಾರವಾಡ: ಕೋವಿಡ್‌ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ನಗರ ಪ್ರದೇಶಗಳು ಬಿಕೋ ಅಂದರೆ ಗ್ರಾಮೀಣ ಭಾಗದಲ್ಲಿ ಮಕರ ಸಂಕ್ರಮಣ ಹಬ್ಬ ಕಳೆಗಟ್ಟಿತ್ತು. ನಗರ ಪ್ರದೇಶದಲ್ಲಿ ಕರ್ಫ್ಯೂ ಹಿನ್ನೆಲೆಯಲ್ಲಿ ಜನಸಂಚಾರ ವಿರಳವಾಗಿತ್ತು. ಹೀಗಾಗಿ ಹಬ್ಬದ ಕರಿ ದಿನವನ್ನು ಸರಳವಾಗಿ ಆಚರಿಸಲಾಯಿತು.

Advertisement

ಆದರೆ ಗ್ರಾಮೀಣ ಭಾಗದಲ್ಲಿ ಕರ್ಫ್ಯೂ ಮಧ್ಯೆ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದ್ದು, ನಗರ ಪ್ರದೇಶದವರೂ ಗ್ರಾಮೀಣ ಭಾಗದ ತಮ್ಮ ಸ್ನೇಹಿತರು, ಸಂಬಂಧಿಗಳ ಮನೆಗಳತ್ತ ಮುಖ ಮಾಡಿದ್ದರು. ತಾಲೂಕಿನ ಅಮ್ಮಿನಭಾವಿ, ಮರೇವಾಡ, ಲಕಮಾಪುರ, ಯಾದವಾಡ, ಉಪ್ಪಿನ ಬೆಟಗೇರಿ, ಕೋಟೂರು, ಲೋಕೂರು ಸೇರಿದಂತೆ ಬೆಳವಲದ ಹಳ್ಳಿಗಳಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿತ್ತು.

ಕೆಲವು ಗ್ರಾಮಗಳಲ್ಲಿ ಎತ್ತುಗಳನ್ನು ಶೃಂಗರಿಸಿ ಕೊಲ್ಲಾರಿ ಚೆಕ್ಕಡಿ ಹೂಡಿ ಹೊಲಕ್ಕೆ ಹೋಗಿ ಚರಗ ಚೆಲ್ಲಿ, ಕುಟುಂಬ ಸದಸ್ಯರು ಸಹಪಂಕ್ತಿ ಭೋಜನ ಮಾಡಿ ಬಂದರು. ಇನ್ನು ನಿಗದಿ, ಮನಗುಂಡಿ, ಮನಸೂರು, ದೇವರಹುಬ್ಬಳ್ಳಿ, ದೇವಗಿರಿ, ಲಾಳಗಟ್ಟಿ, ಮುರಕಟ್ಟಿ ಗ್ರಾಮಗಳಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಗ್ರಾಮಸ್ಥರು ಆಚರಿಸಿ ಸಂಭ್ರಮಿಸಿದರು.

ದೇವಗಿರಿಯಲ್ಲಿ ವಿಶೇಷ: ದೇವಗಿರಿ ಗ್ರಾಮದ ಸಮೀಪದ ಕಾಡಿನಲ್ಲಿರುವ ಸೋಮಲಿಂಗೇಶ್ವರ ಕ್ಷೇತ್ರಕ್ಕೆ ಈ ಭಾಗದ ಹಳ್ಳಿಗರು ಪೂಜೆ ಸಲ್ಲಿಸಿ ಸಂಕ್ರಮಣ ಆಚರಿಸುವುದು ಸಂಪ್ರದಾಯ. ದಟ್ಟ ಅರಣ್ಯದಲ್ಲಿರುವ ಸೋಮಲಿಂಗೇಶ್ವರನ ದೇವಸ್ಥಾನದ ಹತ್ತಿರ ಇರುವ ನೀರಿನ ಸೆಲೆಗೆ (ಗಂಗಾಜಲ) ಮುತ್ತೆ çದೆಯರು ಪೂಜೆ ಸಲ್ಲಿಸಿ, ಚರಗ ಸಮರ್ಪಿಸಿ ಅಲ್ಲಿಯೇ ಭೋಜನ ಸವಿದರು. ನಂತರ ಸಂಕ್ರಮಣ ಆಚರಣೆ ನಿಮಿತ್ತ ದೇವಸ್ಥಾನದಲ್ಲಿ ಪರಸ್ಪರ ಎಳ್ಳುಬೆಲ್ಲ ಕೊಟ್ಟು ಸಂಕ್ರಾಂತಿ ಆಚರಿಸಿದರು.

ಸರಳ ರಥೋತ್ಸವ: ಶಾಲ್ಮಲಾ ಉಗಮ ಸ್ಥಾನವಾದ ಸೋಮೇಶ್ವರ ಕ್ಷೇತ್ರದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಸೋಮೇಶ್ವರ ದೇವರ ರಥೋತ್ಸವ ಸರಳವಾಗಿ ಶನಿವಾರ ಜರುಗಿತು. ದೇವಸ್ಥಾನ ಟ್ರಸ್ಟ್‌ನ ಪ್ರಮುಖರು ದೇವಸ್ಥಾನದ ಆವರಣದಲ್ಲಿ ನಾಲ್ಕೈದು ಹೆಜ್ಜೆಯಷ್ಟು ರಥೋತ್ಸವ ಕೈಗೊಂಡರು. ಸಂಪ್ರದಾಯದಂತೆ ಪಲ್ಲಕ್ಕಿ ಉತ್ಸವವನ್ನು ಆವರಣದೊಳಗೆ ನೆರವೇರಿಸಲಾಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next