Advertisement

New scam ಬೆಳಕಿಗೆ; ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ

11:20 PM Jul 13, 2024 | Team Udayavani |

ಬಾಗಲಕೋಟೆ: ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಹಣ ಅಕ್ರಮವಾಗಿ ಅನ್ಯ ಖಾತೆಗಳಿಗೆ ವರ್ಗಾವಣೆಯಾಗಿ ರುವ ನಡುವೆಯೇ ಬಾಗಲಕೋಟೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲೂ ಅಂತಹದ್ದೇ ಹಗರಣ ಪತ್ತೆಯಾಗಿದೆ. ಸಮಿತಿಯ 3 ಬ್ಯಾಂಕ್‌ ಖಾತೆಗಳಿಂದ ಬರೋಬ್ಬರಿ 2.47 ಕೋಟಿ ರೂ. ಅನ್ಯರ ಖಾತೆಗೆ ವರ್ಗವಾಗಿದೆ. 4 ವರ್ಷಗಳಲ್ಲಿ 54 ಬಾರಿ ಹಣ ವರ್ಗಾವಣೆಯಾಗಿದೆ ಎಂಬ ಸಂಗತಿ ಬಯಲಾಗಿದೆ. ಇದಕ್ಕೆ ಸ್ಥಳೀಯ ನಿರ್ಮಿತಿ ಕೇಂದ್ರವೇ ಕಾರಣ ಎನ್ನಲಾಗಿದೆ.

Advertisement

ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ಜಿಲ್ಲಾಧಿಕಾರಿಗಳು, ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಒಟ್ಟು 3 ಖಾತೆಗಳಿವೆ. ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯ ಕ್ರಮ, ಫಲಾನುಭವಿಗಳಿಗೆ ಸಹಾಯಧನ ವಿತರಣೆ ಸೇರಿ ವಿವಿಧ ಯೋಜನೆಗಳಿಗೆ ವ್ಯಯಿಸಲು ಈ ಮೂರು ಖಾತೆಗಳಲ್ಲಿ 2,47,73,999 ರೂ. ಹಣವಿತ್ತು. ಆ ಮೊತ್ತ 2021ರ ಅ. 28ರಿಂದ 2024ರ ಫೆ. 22ರ ಅವಧಿಯಲ್ಲಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಗೊಂಡಿದೆ.

54 ಬಾರಿ ಹಣ ವರ್ಗ
ಈ ಹಗರಣದ ಕುರಿತು ಬಾಗಲ ಕೋಟೆಯ ಸೆನ್‌ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯ ಬಳಿಕ ಮೂರು ಖಾತೆಗಳಿಂದ ಒಟ್ಟು 54 ಬಾರಿ ಹಣ ವರ್ಗಾವಣೆಯಾಗಿರುವುದು ಖಚಿತ ವಾಗಿದೆ. ಒಂದು ಖಾತೆಯಿಂದ 28 ಬಾರಿ, ಮತ್ತೂಂದು ಖಾತೆಯಿಂದ 25 ಬಾರಿ ಹಾಗೂ ಇನ್ನೊಂದು ಖಾತೆಯಿಂದ ಒಮ್ಮೆ ಹಣ ವರ್ಗವಾಗಿದೆ. ಮುಖ್ಯವಾಗಿ ಪ್ರವಾಸೋದ್ಯಮ ಸಮಿತಿಯ ಖಾತೆಯಿಂದ ಸಮಾಜ ಕಲ್ಯಾಣ ಇಲಾಖೆಗೆ, ಅಲ್ಲಿಂದ ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಖಾತೆಗೆ ಒಮ್ಮೆ 50 ಲಕ್ಷ ರೂ. ವರ್ಗಾವಣೆಯಾಗಿದೆ. ಹೀಗಾಗಿ ಈ ಹಗರಣದಲ್ಲಿ ನಿರ್ಮಿತಿ ಕೇಂದ್ರದ ಪಾಲೂ ಇರಬಹುದು ಎಂದು ಶಂಕಿಸಲಾಗಿದೆ.

ಜಿಲ್ಲಾಧಿಕಾರಿಗಳೇ ಅಧ್ಯಕ್ಷರು
ಗಮನಾರ್ಹ ಸಂಗತಿಯೆಂದರೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ನಿರ್ಮಿತಿ ಕೇಂದ್ರ ಎರಡಕ್ಕೂ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ. 2021ರಿಂದಲೂ ಸರಕಾರಿ ಇಲಾಖೆ ಹಣ ವರ್ಗಾವಣೆಗೊಳ್ಳುತ್ತಿದ್ದರೂ ಜಿಲ್ಲಾಧಿಕಾರಿ ಅಥವಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಗಮನಕ್ಕೆ ಬರಲಿಲ್ಲವೇ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಪ್ರವಾಸೋದ್ಯಮ ಇಲಾಖೆಗೆ ಸದ್ಯ ಗೋಪಾಲ ಹಿತ್ತಲಮನಿ ಪ್ರಭಾರ ಉಪ ನಿರ್ದೇಶಕರಾಗಿದ್ದಾರೆ. ಇಲಾಖೆಯ ನಿರ್ದೇಶನದಂತೆ ಸಮಿತಿಯ ಖಾತೆಯಲ್ಲಿರುವ ಅನುದಾನದ ವಿವರ ಪಡೆಯಲು ಐಡಿಬಿಐ ಬ್ಯಾಂಕ್‌ಗೆ ಹೋಗಿದ್ದಾರೆ. ಆಗ ಮೊದಲು 1.47 ಕೋಟಿ ರೂ. ಬ್ಯಾಲೆನ್ಸ್‌ ತೋರಿಸಿದ್ದರು. ವಾಸ್ತವದಲ್ಲಿ 2.47 ಕೋಟಿ ರೂ. ಇರಬೇಕಿತ್ತು. ಈ ಕುರಿತು ಖಾತೆಯ ಸಂಪೂರ್ಣ ವಿವರ ಪಡೆದಾಗ ಕೇವಲ 2,925 ರೂ. ಇರುವುದು ಪತ್ತೆಯಾಗಿದೆ. ಇದರಿಂದ ಗಾಬರಿಗೊಂಡ ಅಧಿಕಾರಿಯು ಐಡಿಬಿಐ ಬ್ಯಾಂಕ್‌ನ ವ್ಯವಸ್ಥಾಪಕರು ಹಾಗೂ ಸಿಬಂದಿ ವಿರುದ್ಧ ಸೆನ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಮೂವರು ಡಿ.ಸಿ.ಗಳು
ಈ ಹಣ ವರ್ಗಾವಣೆಗೊಂಡ ಅವಧಿಯಲ್ಲಿ ಮೂವರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಪ್ರವಾಸೋದ್ಯಮ ಇಲಾಖೆಗೆ ಪ್ರಭಾರ ಅಧಿಕಾರಿಗಳು ಹಲವು ಬಾರಿ ಬದಲಾವಣೆಗೊಂಡಿದ್ದಾರೆ.

ಲೆಕ್ಕ ಪರಿಶೋಧಿತ ವರದಿ ಇಲ್ಲ
ಪ್ರತಿಯೊಂದು ಇಲಾಖೆಯಲ್ಲಿ ಪ್ರತೀ ವರ್ಷ ಮಾರ್ಚ್‌ನಲ್ಲಿ ಲೆಕ್ಕ ಪರಿಶೋಧನೆ ಮಾಡಿಸಲಾಗುತ್ತದೆ. ಆ ವೇಳೆ ಯಾವ ಇಲಾಖೆಯಲ್ಲಿ ಎಷ್ಟು ಅನುದಾನ ಉಳಿದಿದೆ, ಎಷ್ಟು ಖೋತಾ ಆಗಿದೆ, ಯಾವ ಯೋಜನೆ ಅಥವಾ ಉದ್ದೇಶಕ್ಕೆ ಎಷ್ಟು ಅನುದಾನ ಬಳಕೆಯಾಗಿದೆ ಎಂಬುದರ ವಿವರ ಕೊಡಲೇಬೇಕು. ಆದರೆ ಪ್ರವಾಸೋದ್ಯಮ ಇಲಾಖೆಯಲ್ಲಿ ಲೆಕ್ಕ ಪರಿಶೋಧಿತ ವರದಿ ಕೇಳಿದರೆ, ಮಾಡಿಸಿಲ್ಲ ಎಂಬ ಉತ್ತರ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು, ಬಾಗಲಕೋಟೆಯ ಬೇರೆ ಬೇರೆ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನವಿದೆ ಎನ್ನಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸರಕಾರದ ಹಣ ದುರ್ಬಳಕೆ ಮಾಡಿದವರನ್ನು ಉಗ್ರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಬ್ಯಾಂಕ್‌ನಲ್ಲಿರಿಸಿದ್ದ ಮೊತ್ತವನ್ನು ಬ್ಯಾಂಕ್‌ನವರೇ ತೆಗೆದುಕೊಂಡಿದ್ದಾರೆ.
-ಎಚ್‌.ಕೆ. ಪಾಟೀಲ್‌, ಪ್ರವಾಸೋದ್ಯಮ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next