Advertisement

ನವಭಾರತ ನಿರ್ಮಾಣವೇ ನನ್ನ ಟಾರ್ಗೆಟ್‌: ಮೋದಿ 

03:45 AM Mar 13, 2017 | Team Udayavani |

ನವದೆಹಲಿ: ಅಶೋಕ ರಸ್ತೆಯಲ್ಲಿ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಸಾಮ್ರಾಟನಂತೆ ಹೆಜ್ಜೆ ಇಡುತ್ತಿದ್ದರು. ಬಿಜೆಪಿ ಪ್ರಧಾನ ಕಚೇರಿ ವರೆಗೆ ಹಾಸಿದ್ದ ಕೆಂಪುಹಾಸಿನ ಮೇಲೆ ಹಾಗೆ ಸಾಗುವಾಗ ಮೇಲಿನಿಂದ ಪುಷ್ಪಮಳೆ. ಸುತ್ತಲೂ ನೆರೆದಿದ್ದ ಸಾವಿರಾರು ಕಾರ್ಯಕರ್ತರತ್ತ ಅಭಿಮಾನದಿಂದ ಕೈ ಬೀಸುತ್ತಿದ್ದರು. ಪಂಚರಾಜ್ಯ ಚುನಾವಣೆ, ಅದರಲ್ಲೂ ಉತ್ತರ ಪ್ರದೇಶ ಮತಸಮರ ಕಣವನ್ನು ಅಭೂತಪೂರ್ವವಾಗಿ ಗೆದ್ದ ಖುಷಿಯ ನಗು ಎಲ್ಲರನ್ನೂ ಸೆಳೆದಿದ್ದವು.

Advertisement

ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಂಸದೀಯ ಮಂಡಳಿ ಸಭೆಗೂ ಮುನ್ನ ಮೋದಿ ರೋಡ್‌ ಶೋ ಚೆಲುವು ಹೀಗಿತ್ತು. ಪ್ರಧಾನಿ ಮೋದಿ 35 ನಿಮಿಷಗಳ ತಮ್ಮ ಭಾಷಣದಲ್ಲಿ ಹೇಳಿದ್ದೆಲ್ಲವೂ ಹೊಸ ಭಾರತದ ಕನಸುಗಳನ್ನೇ. “ನನ್ನ ಟಾರ್ಗೆಟ್‌ 2019ರ ಚುನಾವಣೆ ಅಲ್ಲ. ಎಲೆಕ್ಷನ್ನನ್ನು ಲೆಕ್ಕವಿಡುತ್ತಾ ನಾನು ಜೀವಿಸುವುದಿಲ್ಲ. 2022ಕ್ಕೆ ಭಾರತ ಸ್ವಾತಂತ್ರÂ ಪಡೆದು 75 ವರ್ಷ. ಆ ಹೊತ್ತಿಗೆ ಹೊಸ ಭಾರತವನ್ನು ನಾನು ಕಟ್ಟಿಯೇ ಸಿದ್ಧ’ ಎಂಬ ಶಪಥ ತೊಟ್ಟರು.
“ಜನ ಕೇವಲ ಮತ ಹಾಕುವುದಕ್ಕಷ್ಟೇ ಸೀಮಿತ ಆಗಬಾರದು.

ಅಭಿವೃದ್ಧಿಯಲ್ಲಿ ಅವರೂ ಜತೆಗಿರಬೇಕು. ಯಾವಾಗ ಬಡವರಿಗೆ ಶಿಕ್ಷಣ ಹೊಂದಲು, ಕೆಲಸ ಮಾಡಲು, ಸಂಪಾದನೆ ಮಾಡಲು ಅವಕಾಶ ಸಿಗುತ್ತದೋ ಆಗ ಭಾರತ ಏಳ್ಗೆ ಆಗುತ್ತದೆ. ಮಧ್ಯಮವರ್ಗ ಇಂದು ಬೇಸತ್ತು ಹೋಗಿದೆ. ಅವರೆಲ್ಲರ ಮುಖದಲ್ಲೂ ನಗು ಹೊಮ್ಮಿಸಲು ನವಭಾರತ ನಿರ್ಮಾಣ ಅನಿವಾರ್ಯ. ಭಾರತ ಹೊಸ ಎತ್ತರವನ್ನು ತಲುಪಲಿದೆ. ಬಡ ಮತ್ತು ಮಧ್ಯಮವರ್ಗದ ಪ್ರತಿಭೆಗಳನ್ನು ಮಿಶ್ರಣ ಮಾಡಿಕೊಂಡು, ನಾವು ಎತ್ತರವನ್ನು ಮುಟ್ಟಬೇಕಿದೆ. 125 ಕೋಟಿ ಜನರನ್ನೂ ಎತ್ತರದತ್ತ ಕೊಂಡೊಯ್ಯುವ ಹೊಣೆ ನನ್ನದು’ ಎಂದು ಹೇಳಿದರು.

ಪ್ರತಿಪಕ್ಷಗಳಿಗೆ ತಿರುಗೇಟು: “ನಾವು ಹೊಸಬರು, ಕಡಿಮೆ ಅನುಭವ ಉಳ್ಳವರು. ಸಣ್ಣಪುಟ್ಟ ತಪ್ಪು ಮಾಡುವುದು ಸಹಜ. ಆದರೆ, ನಮ್ಮ ಉದ್ದೇಶ ಯಾವತ್ತೂ ದೋಷಯುಕ್ತ ಆಗಿರುವುದಿಲ್ಲ. ಪ್ರತಿಪಕ್ಷಗಳು ನನ್ನತ್ತ ನೋಡಿ, ಯಾಕೆ ಇಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತೀ ಎಂದು ಕೇಳುತ್ತವೆ. ಅದು ನನಗೆ ಹೆಮ್ಮೆ. ಹೀಗೆ ಕೇಳಿಸಿಕೊಂಡ ಭಾರತದ ಮೊದಲ ಪ್ರಧಾನಿಯೂ ನಾನೇ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮತ ಹೆಚ್ಚಳಕ್ಕೆ ಮೆಚ್ಚುಗೆ: “ಭಾರತದಲ್ಲಿಂದು ಮತದಾನ ಪ್ರಮಾಣ ಹೆಚ್ಚಳ ಕಾಣುತ್ತಿರುವುದು ಒಳ್ಳೆಯ ಸಂಗತಿ. ಚುನಾವಣೆಗೂ ಮುನ್ನ ಅಲೆ ಕಾಣಿಸುತ್ತದೆ. ಅದು ಕೇವಲ ಭಾವನಾತ್ಮಕ ಸಂಗತಿ. ಬಳಿಕ ಅದು ಅಭಿವೃದ್ಧಿಯ ಅಲೆಯಾಗಿ ಪರಿವರ್ತನೆಗೊಳ್ಳಬೇಕು. ಆದರೆ, 50 ವರ್ಷದಿಂದ ರಾಜಕೀಯ ಪಕ್ಷಗಳು ಭಾವನಾತ್ಮಕ ವಿಚಾರವನ್ನೇ ಬಳಸಿ ಚುನಾವಣೆ ಎದುರಿಸುತ್ತಿವೆ. ಈ ನೀತಿಯನ್ನು ನಾವು ಹುಸಿಮಾಡಿ, ಭಾವನಾತ್ಮಕ ಅಲೆ ಇಲ್ಲದೆಯೇ ಗೆದ್ದು ಬಂದಿದ್ದೇವೆ. ಉತ್ತರ ಪ್ರದೇಶವೂ ಸೇರಿಕೊಂಡು ಪಂಚರಾಜ್ಯಗಳ ಜನತೆ ಅಭಿವೃದ್ಧಿ ಮೆಚ್ಚಿ ಬಿಜೆಪಿಗೆ ಮತ ಹಾಕಿದ್ದಾರೆ. ಮತ ಹಾಕಿದವರನ್ನು, ಹಾಕದವರನ್ನು, ನಮ್ಮನ್ನು ವಿರೋಧಿಸುವವರನ್ನೂ ಒಟ್ಟಿಗೆ ಸೇರಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗುತ್ತೇವೆ. ಕಠಿಣ ಪರಿಶ್ರಮದಿಂದಲೇ ನಾವೀಗ ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದೇವೆ’ ಎಂದರು ಮೋದಿ.

Advertisement

“ಪ್ರತಿ ಗೆಲುವು ನಮಗೆ ವಿಶ್ವಾಸ ತುಂಬುತ್ತದೆ. ಅಧಿಕಾರ ಎನ್ನುವುದು ಸ್ಥಾನಮಾನ ಅಲ್ಲ. ಸೇವೆ ಮಾಡಲು ಸಿಗುವ ಒಳ್ಳೆಯ ಅವಕಾಶ’ ಎಂದು ಹೇಳಿದ ಅವರು, ಚುನಾವಣೆಯ ಗೆಲುವಿಗೆ ಶ್ರಮಿಸಿದ ಲಕ್ಷಾಂತರ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಮರ್ಪಿಸಿದರು.

ಅಮಿತ್‌ಶಾಗೆ ಮುಖ್ಯಮಂತ್ರಿಗಳ ಆಯ್ಕೆ ನಿರ್ಧಾರ
ನವದೆಹಲಿ
: ಪೂರ್ಣ ಬಹುಮತ ಬಂದಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಹಾಗೂ ಇತರರ ಬೆಂಬಲದೊಂದಿಗೆ ಸರ್ಕಾರ ರಚಿಸಲಿರುವ ಗೋವಾ ಮತ್ತು ಮಣಿಪುರಗಳ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ವಹಿಸಲಾಗಿದೆ.

ಭಾನುವಾರ ಸಂಜೆ ದೆಹಲಿಯಲ್ಲಿ ನಡೆದ ಬಿಜೆಪಿ ಪಾರ್ಲಿಮೆಂಟರಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಉತ್ತರ ಪ್ರದೇಶದಲ್ಲಿ ಐದು ಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದಾರೆ. ಉತ್ತರಾಖಂಡದಲ್ಲಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಇಲ್ಲಿ ಕಾಂಗ್ರೆಸ್‌ನಿಂದ ವಲಸೆ ಬಂದಿರುವ ವಿಜಯ ಬಹುಗುಣರಂಥ ನಾಯಕರಿದ್ದಾರೆ.

ಆದರೆ ಗೋವಾಗೆ ಮನೋಹರ್‌ ಪರ್ರಿಕರ್‌ ಅವರೇ ಹೋಗುವುದು ನಿಶ್ಚಿತವಾಗಿದ್ದರೂ, ಈ ಬಗ್ಗೆಯ ಅಂತಿಮ ತೀರ್ಮಾನವೂ ಅಮಿತ್‌ ಶಾ ಅವರದ್ದೇ ಆಗಿರುತ್ತದೆ. ಮಣಿಪುರದಲ್ಲಿ ಸರ್ವರಿಗೂ ಒಪ್ಪಿಗೆಯಾದಂಥ ಅಭ್ಯರ್ಥಿಯನ್ನು ಹಾಕುವ ಜವಾಬ್ದಾರಿ ಶಾ ಅವರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next