Advertisement

ಆಡಳಿತ ನಡೆಸುವವರಲ್ಲೂ ಸಾಕಷ್ಟು ಲೋಪ

11:52 PM Jul 22, 2019 | Team Udayavani |

ವಿಧಾನಸಭೆ: ಆಡಳಿತ ನಡೆಸುವವರಲ್ಲೂ ಸಾಕಷ್ಟು ಲೋಪಗಳಿದ್ದು, ನಮ್ಮ ತಪ್ಪುಗಳು ಸಹ ಪ್ರತಿಪಕ್ಷಕ್ಕೆ ಸಹಕಾರಿಯಾಗಿವೆ ಎಂದ ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ, ಶಾಸಕರು ಯಾವುದೇ ಒತ್ತಡ, ಆಸೆ ಮಣಿದು ರಾಜೀನಾಮೆ ಸಲ್ಲಿಸಿಲ್ಲ ಎನ್ನುವುದಾದರೆ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಲಿ ಎಂದು ಮನವಿ ಮಾಡಿದರು.

Advertisement

ಸೋಮವಾರ ಮಧ್ಯಾಹ್ನ ಭೋಜನಾ ನಂತರ ಕಲಾಪದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಮೂರು ಪಕ್ಷಗಳು ಶಾಸಕರು ಸದ್ಯ ರೆಸಾರ್ಟ್‌ನಲ್ಲಿರುವುದು ಪ್ರಜಾಪ್ರಭುತ್ವದ ಕುಸಿತವಲ್ಲವೆ. ಎಷ್ಟೇ ಚರ್ಚೆಯಾದರೂ ಸಿದ್ಧಾಂತದ ಮೇಲೆ ಯಾವುದೂ ನಿರ್ಣಯವಾಗುವುದಿಲ್ಲ. ಸರ್ಕಾರದ ಅಳಿವು- ಉಳಿವು ಸಂಖ್ಯಾಬಲದ ಮೇಲೆ ನಿಂತಿದೆ. ಬರದಿಂದ ಜನ ತತ್ತರಿಸುತ್ತಿರುವ ಬಗ್ಗೆ ಚರ್ಚಿಸದೆ, ಅಧಿಕಾರದ ಚರ್ಚೆ ನಡೆಸಿ ಸದನ ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ತರುವುದು ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೈತ್ರಿ ಧರ್ಮ ಪ್ರಸ್ತಾಪ: ಸರ್ಕಾರದ ಲೋಪಗಳನ್ನು ಎತ್ತಿ ತೋರಿಸಿ ತುದಿಗಾಲಲ್ಲಿ ನಿಲ್ಲಿಸುವ ಸಾಮರ್ಥಯ ಪ್ರತಿಪಕ್ಷದಲ್ಲಿ ಸಾಕಷ್ಟು ಮಂದಿಗಿದ್ದರೂ ಆ ಕೆಲಸ ನಡೆಯದಿರುವ ಬಗ್ಗೆ ನೋವಿದೆ. ಆಡಳಿತ ನಡೆಸುವವರಲ್ಲೂ ಸಾಕಷ್ಟು ದೋಷವಿದೆ. ಲೋಕಸಭಾ ಚುನಾವಣೆಗೂ ಮೊದಲೇ ನಾನು ಹೇಳಿದ್ದೆ. ಮೈತ್ರಿ ಪಕ್ಷಗಳಲ್ಲಿ ಹೊಂದಾಣಿಕೆ ಕಾಣುತ್ತಿಲ್ಲ. ಮೈತ್ರಿ ಧರ್ಮ ಪಾಲಿಸದಿದ್ದರೆ ಗೌರವಯುತವಾಗಿ ಪ್ರತಿಪಕ್ಷದಲ್ಲಿರುವುದು ಸೂಕ್ತ ಎಂದು ಹೇಳಿದ್ದೆ ಎಂದು ಹೇಳಿದರು.

ಆತ್ಮಸಾಕ್ಷಿಯೇ ನ್ಯಾಯಾಲಯ: ಕೆಲ ಶಾಸಕರು ರಾಜೀನಾಮೆ ನೀಡಿದ್ದಾರೆ. ಆತ್ಮಸಾಕ್ಷಿಯೇ ದೊಡ್ಡ ನ್ಯಾಯಾಲಯ. ಅದು ನಮಗೆಲ್ಲಾ ಇದ್ದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ಒಮ್ಮೆ ಶಾಸಕರಾಗಿ ಆಯ್ಕೆಯಾದವರು ಐದು ವರ್ಷ ಆ ಪಕ್ಷದ ಸದಸ್ಯರೇ ಆಗಿರುತ್ತಾರೆ. ನೈತಿಕತೆ ಇಲ್ಲದೆ ರಾಜೀನಾಮೆ ನೀಡಿದರೆ ಜನರಿಗೆ ದ್ರೋಹ ಬಗೆದಂತೆ. 15 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದು, ಅವರಿಗೆ ಯಾವುದೇ ಒತ್ತಡ, ಆಸೆ, ಆಮಿಷವಿಲ್ಲದೆ ಸ್ವ ಇಚ್ಛೆಯಿಂದ ತೀರ್ಮಾನ ಕೈಗೊಂಡಿದ್ದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಲಿ ಎಂದು ಮನವಿ ಮಾಡಿದರು.

ಅಧಿಕಾರದ ಹಪಾಹಪಿ: ಅತೃಪ್ತರು ಸ್ವಾಭಿಮಾನಿಗಳಾಗಿದ್ದರೆ ರಾಜ್ಯದಲ್ಲೇ ಇರಬೇಕಿತ್ತು. ಅವರು ರಾಜ್ಯದ ಘನತೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಆತುರದ ನಿರ್ಧಾರ ಬೇಡ. ಈ ಹಿಂದೆ 20-20 ತಿಂಗಳ ಆಡಳಿತಾವಧಿಯಲ್ಲೇ ಅಧಿಕಾರ ಹಸ್ತಾಂತರಿಸಬೇಕು ಎಂದು ನಾನು ಹತ್ತಾರು ಬಾರಿ ಹೇಳಿದ್ದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತ ಸಂವಿಧಾನವೇ ಪರಮೋತ್ಛ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದವರು ಸಂವಿಧಾನವನ್ನು ರಕ್ಷಿಸಬೇಕಲ್ಲವೇ. ಬದಲಿಗೆ ಅಧಿಕಾರಕ್ಕೆ ಬರುವ ಹಪಾಹಪಿಯಿಂದ ಆಡಳಿತ ಪಕ್ಷದ ಶಾಸಕರ ರಾಜೀನಾಮೆ ಕೊಡಿಸುವುದು ಸುಳ್ಳೆ ಎಂದು ಪ್ರಶ್ನಿಸಿದರು.

Advertisement

ವಿಶ್ವಾಸ ಮತ ಯಾಚನೆ ಮಾಡದೆ ಕಾಲಹರಣ ಮಾಡಲಾಗುತ್ತಿದೆ ಎಂದು ಸರ್ಕಾರದ ಮೇಲೆ ಅಪವಾದವಿದೆ. ಇದು ಅರ್ಧಂಬರ್ಧ ಸತ್ಯ ಕೂಡ. ಹಾಗೆಯೇ ರಾಜ್ಯಪಾಲರು ನೀಡುವ ನೋಟಿಸ್‌ ಯಾವ ತಂತ್ರಗಾರಿಕೆ. ಅದೇನು ಒತ್ತಡ ತಂತ್ರವೇ? ಕಾರ್ಯಾಂಗದ ಮುಖ್ಯಸ್ಥರಾದವರೇ ತಂತ್ರಗಾರಿಕೆಗೆ ಮುಂದಾದರೆ ಏನು ಹೇಳುವುದು ಎಂದರು.

ಸದನದಲ್ಲಿ ಶಾಸಕರೊಬ್ಬರು ತಮ್ಮಗೆ ಕೆಲ ಶಾಸಕರು ಐದು ಕೋಟಿ ರೂ. ಹಣ ಕೊಟ್ಟು ಹೋದರು ಎಂಬ ಆರೋಪ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ, ಎಸಿಬಿ ಏನು ಮಾಡುತ್ತಿವೆ. ಈ ರೀತಿಯ ಕಪ್ಪು ಹಣವೇ ಅಕ್ರಮಕ್ಕೆ ಅವಕಾಶವಾಗಲಿದೆ. ಈ ಬಗ್ಗೆ ಸ್ವಯಂಪ್ರೇರಿತ ತನಿಖೆ ಆಗಬೇಕು. ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಕಠಿಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಹೂ ಮಧ್ಯದಲ್ಲಿ ಬಿತ್ತು: ಯಡಿಯೂರಪ್ಪನವರ ಕಡೆಯವರೊಬ್ಬರು ದೇವಸ್ಥಾನದಲ್ಲಿ ಪೂಜೆ ಮಾಡಿದಾಗ ಹೂ ಬಲಗಡೆಯಿಂದ ಬಿತ್ತಂತೆ. ಹಾಗಾಗಿ ಅವರು ಮುಖ್ಯಮಂತ್ರಿಯಾಗುತ್ತಾರೆ. ಇನ್ನೊಂದೆಡೆ ಎಚ್‌.ಡಿ.ಕುಮಾರಸ್ವಾಮಿಯವರ ಕಡೆಯವರು ಹೋಗಿ ಪೂಜೆ ಮಾಡಿಸಿದಾಗಲೂ ಬಲಗಡೆಯಿಂದ ಹೂ ಬಿತ್ತಂತೆ. ದೇವರ ಮೂರ್ತಿಯ ಬಲಭಾಗದಲ್ಲೇ ಹೆಚ್ಚು ಹೂಗಳನ್ನು ಪೇರಿಸಿದರೆ ಸಹಜವಾಗಿಯೇ ಬೀಳುತ್ತದೆ. ಏಕಕಾಲಕ್ಕೆ ಇಬ್ಬರು ಮುಖ್ಯಮಂತ್ರಿಗಳಾಗಲು ಸಾಧ್ಯವೇ. ಇದನ್ನು ಕಂಡು ದೇವರೇ ಹೆದರಿ ಓಡಿಹೋಗಿದ್ದಾನೆ ಎಂದು ಎ.ಟಿ.ರಾಮಸ್ವಾಮಿ ಹೇಳಿದರು. ಆಗ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ನನಗೆ ಎಡ, ಬಲ ಎರಡೂ ಕಡೆ ಬೀಳಲಿಲ್ಲ. ಬದಲಿಗೆ ಹೂ ಮಧ್ಯದಲ್ಲಿ ಬಿತ್ತು. ನಾನು ಎಲ್ಲಿಗೆ ಹೋಗಲಿ ಎಂದು ನಕ್ಕರು.

ಆತ್ವಾವಲೋಕನ ಮಾಡಿಕೊಳ್ಳಲಿ: ಜನತಾ ಪರಿವಾರವು ನೂರಾರು ನಾಯಕರು, ಜನಪ್ರತಿನಿಧಿಗಳನ್ನು ಹುಟ್ಟು ಹಾಕಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ರಾಜ್ಯದ ಸಮಗ್ರ ಮಾಹಿತಿ ಇದೆ. ಇಷ್ಟಾದರೂ ಪಕ್ಷ ಬೆಳೆಯದಿರುವುದಕ್ಕೆ ಕಾರಣವೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next