Advertisement

ಭಾರತಾಂಬೆಗೊಂದು ಅಕ್ಕರೆಯ ಪತ್ರ

09:04 PM Aug 14, 2020 | Karthik A |

ನೆತ್ತಿಯಲ್ಲಿ ಹಿಮಾಲಯವ ಧರಿಸಿ, ನರ ನರದಲ್ಲೂ ನದಿ ಹರಿವಿನಿಂದ ಹಳ್ಳಿ ಹಳ್ಳಿಗೂ ತಂಪುಣಿಸಿ, ಸುತ್ತ ಸಾಗರ ವಸ್ತ್ರವ ಧರಿಸಿ ಸಹನೆಯ ತೇರಂತೆ ನಿಂತಿರುವ ನಿನ್ನ ಪಾದ ಕಮಲಗಳಿಗೆ ಸಾಷ್ಟಾಂಗ ಪ್ರಣಾಮಗಳು.

Advertisement

ನಾನು ಕ್ಷೇಮ ಅನ್ನುವುದಕ್ಕಿಂತಲೂ ನಾನು ನಿನ್ನಿಂದಲೇ ಕ್ಷೇಮ ಅನ್ನುವುದು ಅರ್ಥಗರ್ಭಿತ ಅನಿಸುತ್ತಿದೆ.

ಫ‌ಲವತ್ತಾದ ನಿನ್ನ ಮಡಿಲಲ್ಲಿ ಉತ್ತು ಬಿತ್ತು ಬೆಳೆದಂಥ ಬೆಳೆಯನ್ನೇ ರುಚಿ ರುಚಿಯ ಆಹಾರವಾಗಿಸಿ ತಿಂದುಂಡು ನೀನು ಬೀಸಿದ ಗಾಳಿಯನ್ನೇ ಉಸಿರಾಡಿ, ನಿನ್ನೊಡಲ ಸಿಹಿನೀರ ಕುಡಿದು ಸುಂದರವಾದ ನಿನ್ನ ಸೌಂದರ್ಯವನ್ನು ನೋಡುತ್ತಲೇ ಬೆಳೆದಿದ್ದೇವೆ.

ಅಮ್ಮ, ನಿನಗೆ ಪತ್ರ ಬರೆಯಲಾರಂಭಿಸಿದಾಗಿ ನಿಂದಲೂ ಮನಸ್ಸು ಒಂದೇ ಹಾಡನ್ನು ಗುನುಗುತ್ತಿದೆ. ಈ ಮಣ್ಣು, ಈ ಗಾಳಿ ನಮ್ಮದು, ಕಣಕಣದೊಳು ಹರಿಯುತಿಹ ನೀರು ನಮ್ಮದು, ಕಣಕಣದೊಳು ಭಾರತೀಯ ರಕ್ತ ನಮ್ಮದು.

ಹೌದು ಇವೆಲ್ಲವೂ ನಮ್ಮದೇ, ಅದು ನೀನು ಕೊಟ್ಟ ವರದಾನ. ಅದೆಷ್ಟು ವರ್ಷಗಳಾಯಿತು ನಿನ್ನ ಜನುಮವಾಗಿ ತಿಳಿದಿಲ್ಲ.ಆದರೂ ಅವರಿವರ ಆಕ್ರಮಣ, ಹಗೆತನ, ಭಂಡತನಗಳಿಂದ ಒಂದು ರೀತಿಯಲ್ಲಿ ಮುಕ್ತಿ ಹೊಂದಿ 73 ವರ್ಷಗಳೇ ಸಂದವು. ರಾಮನ ಆದರ್ಶಕ್ಕೆ, ಕೃಷ್ಣನ ನೀತಿಗೆ, ಬುದ್ಧ-ಬಸವರ ಶಾಂತಿಗೆ, ವಿವೇಕಾನಂದರ ವಿವೇಕಯುತ ಮಾತುಗಳಿಗೆ, ಗಾಂಧೀಜಿಯ ಸತ್ಯ, ಅಹಿಂಸೆ, ಶಾಂತಿ, ತ್ಯಾಗಕ್ಕೆ ಅಷ್ಟೇ ಅಲ್ಲದೆ ಕಲಾಂರ ಕಲ್ಪನೆಗಳಿಗೂ ಜೀವ ನೀಡಿ ತಣ್ತೀಗಳಿಗೊಂದು ನೆಲೆಕೊಟ್ಟವಳು ನೀನು.

Advertisement

ಈಗತಾನೆ ಅಕ್ಷರಾಭ್ಯಾಸ ಪ್ರಾರಂಭಿಸಿದ ಮಗುವಂತಾ ಡುತ್ತಿದೆ ಮನಸ್ಸು. ಅಮ್ಮ! ನಿನಗೆ ಎಷ್ಟೆಲ್ಲ ತಿಳಿದಿದೆ. ನಿನಗೆ ತಿಳಿಯದಿರುವುದೇನು? ಧರ್ಮ ಶಾಸ್ತ್ರಗಳೇ ಸಂಸ್ಕೃತಿ ಆಚರಣೆಗಳೇ? ನಿನ್ನ ಅಂತರಾಳದಲ್ಲಿರುವುದು ಹಿಂದೂ, ಜೈನ, ಪಾರ್ಸಿ, ಬೌದ್ಧ, ಮುಸಲ್ಮಾನ, ಸಿಕ್ಖ್, ಕ್ರೈಸ್ತ ಹೀಗೆ ಅದೆಷ್ಟೋ ಧರ್ಮಗಳ ತಣ್ತೀಗಳು. ಆ ತಣ್ತೀಗಳು ಬೋಧಿಸಿದ ನ್ಯಾಯ, ನೀತಿ, ಸತ್ಯ, ಶಾಂತಿ, ಪ್ರೇಮಗಳ ಮೌಲ್ಯ, ವಸುಧೈವ ಕುಟುಂಬಕಂ, ಲೋಕಾ ಸಮಸ್ತಾ ಸುಖೀನೋ ಭವಂತು ಮುಂತಾದ ಆದರ್ಶಗಳು.

ನೀನು ಗಂಗರು, ಕದಂಬರು, ಚಾಲುಕ್ಯರು ರಾಷ್ಟ್ರಕೂಟರು, ಹೊಯ್ಸಳರು ಹೀಗೆ ಹಲವರ ಆಡಳಿತವನ್ನು ಕಂಡವಳೇ. “ಶೂನ್ಯ’ ನಿನ್ನ ಕೊಡುಗೆ ತಾಯಿ. ಆದರೆ ವಿಶ್ವಕ್ಕೆ ಶೂನ್ಯವಲ್ಲ; ಅದು ಪರಿಪೂರ್ಣತೆ. ಹೌದಮ್ಮ! ನಿನ್ನ ಕಂದರಿಗೆ ಸೊನ್ನೆ ಹಾಕಲು ಕಲಿಸಿದವಳು ನೀನು ಅದರೊಂದಿಗೆ ಬ್ರಾಹ್ಮಿà ಸಂಖ್ಯೆಗಳ ಕೊಡುಗೆ ಕೊಟ್ಟವಳು.

ಖಗೋಳಶಾಸ್ತ್ರ, ಜೋತಿಷ್ಯ, ಯೋಗ, ಆಯುರ್ವೇದ, ವೇದಗಣಿತ, ಬೀಜಗಣಿತಗಳ ಮೂಲ ನೀನು.
ನಿನ್ನೊಡಲು ನಾಗರಿಕತೆಗಳ ಬೀಡು. ಹರಪ್ಪಾ ಮೊಹೆಂಜೋದಾರೋ ನಗರದ ಅವಶೇಷಗಳು ಇತಿಹಾಸಕಾರರಿಗೆ ಅಲ್ಲಿಯ ಜನರ ಜೀವನ ಪ್ರಜ್ಞೆೆ, ಕಟ್ಟಡ ಪಟ್ಟಣಗಳ ರಚನೆ, ವಿನ್ಯಾಸಗಳಿಗೆ ಅವುಗಳ ಅಚ್ಚುಕಟ್ಟಾದ ರಚನಾ ಕ್ರಮಗಳಿಗೆ ಸಾಕ್ಷಿ ಹೇಳುತ್ತದೆ. ಅದೆಷ್ಟು ರಹಸ್ಯಗಳು ನಿನ್ನ ಮಡಿಲಿನಲ್ಲಿವೆ! ಕಲಾ ಶ್ರೀಮಂತಿಕೆ, ವಾಸ್ತು ಶಿಲ್ಪ ಪ್ರಕಾರಗಳಿಗೆ ಅಜಂತಾ, ಎಲ್ಲೋರ, ಹಳೆಬೀಡು, ಬೇಲೂರು.

ಜತೆಗೆ ಅಚ್ಚರಿಯ ಆಗರವಾಗಿರುವ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಸ್ಥಾನ, ಕೋನಾರ್ಕ ಸೂರ್ಯ ದೇವಾಲಯ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ವೀರಭದ್ರ ದೇವಾಲಯ ಹೀಗೆ ಹಲವಾರು ದೇವಾಲಯಗಳೊಂದಿಗೆ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಕೂಡ ನಿನ್ನ ಮಡಿಲನ್ನು ಶೃಂಗರಿಸುತ್ತಿದೆ.

ಭಾಷೆ ಸಾಹಿತ್ಯ ಸಂಗೀತಗಳಿಗೇನು ಕೊರತೆ? ನೀನು ಅರಿತಿರುವ ಭಾಷೆಗಳೆಷ್ಟೋ? ಸವಿದಿರುವ ಸಾಹಿತ್ಯ ಪ್ರಕಾರಗಳೆಷ್ಟೋ! ಭಾವ, ರಾಗ, ತಾಳಗಳ ಮಿಲನವಲ್ಲವೇ ಭಾರತದ ಸಂಗೀತ. ವಿಶ್ವ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಎರಡು ಪ್ರಕಾರಗಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ; ಅದು ನಿನ್ನದೇ. ಸಂಸ್ಕೃತಿ, ಕಲೆ, ಸಾಹಿತ್ಯಗಳ ತವರು ನೀನೆನ್ನಲು ಇಷ್ಟು ಸಾಕ್ಷಿಗಳು ಸಾಲದೇ.

ತಾಯಿ, ನೀನು ಜಗತ್ತಿನ ಎಲ್ಲ ಸಮಸ್ಯೆಗೂ ಪರಿಹಾರ. ಬಡತನ ದಾರಿದ್ರ್ಯವಲ್ಲ; ನೀನು ಮುಗಿಯದ ಅನಂತ ಕಲ್ಪನೆ ತೋರಿದ ಅನಂತ ಸಂಪತ್ತು. ಬದಲಾಗಬೇಕಿದೆ ಜ್ಞಾನದ ದೃಷ್ಟಿ. ಕಣ್ಣು ದೃಷ್ಟಿಯಿಂದ ನೋಡ ಬೇಕಾದದನ್ನು ಅದಾರೋ ಮತಿಗೆೆಡಿಸಲು ತಯಾರಿಸಿರುವ ಅಜ್ಞಾನದ ಕನ್ನಡಕದಿಂದ ನೋಡುತ್ತಿದ್ದೇವೆ. ಹಿತ್ತಲ ಗಿಡ ಮದ್ಧಾಗಿ ಕಾಣುತ್ತಿಲ್ಲ, ಬದಲಾಗಿ ಮೌಡ್ಯತೆಯಂತೆ ಭಾಸವಾಗುತ್ತಿದೆ. ಒಳಗಿನ ರೋಗ ಕಳೆಯಲು ಆತ್ಮ ಶುದ್ಧಿಯ ಆವಶ್ಯಕತೆ ಇದೆ. ಆದರೆ ನಮ್ಮವರು ವಿದೇಶಿ ಔಷಧದ ಮೊರೆ ಹೋಗುತ್ತಿದ್ದಾರೆ.

ಕೇವಲ ಶಾರೀರಿಕ ರೋಗಗಳಿಗೆ ಮಾತ್ರವಲ್ಲ, ಮಾನಸಿಕ ದೈಹಿಕ ಆವಶ್ಯಕತೆಗಳಿಗೂ ಇದನ್ನೇ ಅವಲಂಬಿಸಿಕೊಳ್ಳುತ್ತಿದ್ದಾರೆ! ಸರಿಯಾದುದನ್ನು ಅನುಕರಿಸುವುದರಲ್ಲಿ ಅಥವಾ ಅನುಸರಿಸುವುದರಲ್ಲಿ ತಪ್ಪಿಲ್ಲ. ಆದರೆ ಅದು ಇನ್ನೊಂದು ಅವಾಂತರಕ್ಕೆ ಎಡೆಮಾಡಿ ಕೊಡಬಾರದಷ್ಟೇ.

ಕಾವ್ಯಾ ರಾವ್‌, ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next