Advertisement

Life Lesson: ಜಾತ್ರೆಯಲ್ಲಿ ಸಿಕ್ಕಾಕೆ ಕಲಿಸಿದ ಪಾಠ

12:01 PM May 02, 2024 | Team Udayavani |

ಹಳ್ಳಿ ಪ್ರದೇಶಗಳಲ್ಲೇ ಊರ ಹಬ್ಬ ಬಂತೆಂದರೆ ಅದೇನೋ ಗಮ್ಮತ್ತು. ಅದು ಇಡೀ ಊರಿಗೆ  ಹಬ್ಬವೇ ಸರಿ. ದೇವರ ಶೃಂಗಾರವನ್ನು ನೋಡಿ ಕಣ್ತುಂಬಿಕೊಳ್ಳುವುದು ಒಂದೆಡೆಯಾದರೆ ಸಂತೆ ಸುತ್ತುವುದು ಇನ್ನೊಂದು ಖುಷಿ. ನಾವೆಲ್ಲರೂ ಜಾತ್ರೆಯಲ್ಲಿ ಬಂದ ಸಂತೆಗೆ ಹೋಗಿಯೇ ಇರುತ್ತೇವೆ. ನಮಗೆ ಇಷ್ಟವೆನಿಸಿದ ವಸ್ತುಗಳನ್ನೂ ಕೊಂಡುಕೊಂಡಿರುತ್ತೇವೆ.

Advertisement

ಚೌಕಾಸಿ ಮಾಡಿ ಹತ್ತೋ ಇಪ್ಪತ್ತೋ ಕಡಿಮೆಯೂ ಕೊಟ್ಟು, ಮಾರಾಟಮಾಡಿದವರಿಗೆ ಪುಟ್ಟ ನಗುವನ್ನೂ ಬೀರದೆ ಅಲ್ಲಿಂದ ಹೊರಟು ಹೋಗಿರುತ್ತೇವೆ. ಆದ್ರೆ ಯಾವತ್ತಾದ್ರೂ ಅವರ ಕಷ್ಟಗಳಿಗೆ ಸ್ಪಂದಿಸಿದ್ದೇವೆಯೇ? ಅವರ ನೋವು ಸಂಕಟವನ್ನು ಆಲಿಸಿದ್ದೇವೆಯೇ? ಮನುಷ್ಯನಾದವನು ಇನ್ನೊಬ್ಬ ಮನುಷ್ಯನಿಗೆ ದುಡ್ಡು ಕಾಸಿನ ವಿಚಾರದಲ್ಲಿ ಅಲ್ಲವಾದರೂ ನೋವುಗಳನ್ನು ಆಲಿಸುವಲ್ಲಿ ನೆರವಾಗಬೇಕೆಂಬುವುದನ್ನು ನಾವು ಮರೆತೇ ಬಿಟ್ಟಿದೇವೆ ಅಲ್ಲವೇ? ಅವರ ಕಷ್ಟಗಳನ್ನು ಆಲಿಸಿದರೆ ನಾವು ಕಳೆದುಕೊಳ್ಳುವುದಾದರೂ ಏನು? ಜೀವನದಲ್ಲಿ  ನಾವು ಭೇಟಿ ಮಾಡುವ ಪ್ರತಿಯೊಬ್ಬನಿಂದಲೂ ಕಲಿಯುವ ಜೀವನ ಪಾಠ ಬೇಕಾದಷ್ಟಿರುತ್ತದೆ.

ಹೀಗೆ ನಮ್ಮೂರ ಜಾತ್ರೆಗೆ ಬಹಳ ಹುಮ್ಮಸ್ಸಿನಿಂದ ಹೋಗಿದ್ದೆ. ಸಂತೆ ಸುತ್ತಿದ್ದೋ ಸುತ್ತಿದ್ದು, ಸಿಕ್ಕಿದ್ದನ್ನೆಲ್ಲಾ ತಿಂದಿದ್ದೋ ತಿಂದಿದ್ದು. ಸಂತೋಷದಿಂದ  ಜಾತ್ರೆ ಸುತ್ತುತ್ತಿದ್ದಾಗ ಆಕೆ ನನ್ನ ಕಣ್ಣಿಗೆ ಬಿದ್ದಳು. ಅವಳೇ ಹೆಣ್ಣಿನ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವವಳು, ಅವಳೇ ಬರಿದಾದ ಕೈಗೊಂದು ರೂಪ ಕೊಡುವವಳು, ಅವಳೇ ಹೆಂಗಳೆಯರ ಮೊಗದಲ್ಲಿ ನಗು ತರಿಸುವವಳು. ಅವಳೇ ಬಳೆ ಮಾರುವವಳು.

ಅವಳ ಬಳಿ ಇದ್ದ ಬಣ್ಣಬಣ್ಣದ ಬಳೆಗಳು ನನ್ನನ್ನು ಅದರೆಡೆಗೆ ಸೆಳೆಯುತ್ತಲೇ ಇತ್ತು. ಯಾಕೆ ಸುಮ್ನೆ ಬಳೆ ಕೊಳ್ಳೋದು. ಹಾಗೂ ಬೇಕಂತಲೇ ಇದ್ರೆ ಅಂಗಡಿಯಲ್ಲಿ ಹೋಗಿ ಕೊಂಡುಕೊಂಡರಾಯಿತು  ಎಂದು ಸುಮ್ಮನಾದೆ.  ಆದ್ರೂ ನನ್ನ ನಯನಗಳು ಅತ್ತ ಕಡೆಯೇ ನೋಡುತ್ತಿತ್ತು.

ಗಿರಾಕಿಗಳಿಲ್ಲದೆ ತನ್ನ ಪುಟ್ಟ ಕೂಸಿನೊಂದಿಗೆ ಕುಳಿತಿದ್ದ ಆಕೆ ಬಾರವ್ವ. ಯಾವ್‌ ಬಣ್ಣದ್‌ ಬಳೆ ಕೊಡ್ಲಿ ಅಂದ್ಲು. ಇಷ್ಟಾದ್ಮೇಲೂ ಬಳೆ ಕೊಂಡುಕೊಳ್ಳಲಿಲ್ಲವಾದರೆ ಮನಸ್ಸಿಗೆ ಸಮಾಧಾನವಾಗದು ಎಂದುಕೊಂಡು ಆಕೆಯ ಅಂಗಡಿ ಮುಂದೆ ಹೋಗಿ ನಿಂತು ಬಿಟ್ಟೆ. ಆಕೆಯ ಪರಿಸ್ಥಿತಿ ನೋಡಿ ಒಂದು ಕ್ಷಣ ದಂಗಾಗಿ ಬಿಟ್ಟೆ. ಕೈಯ್ಯಲ್ಲೊಂದು ಮಗು. ಜತೆಗೆ ಪಕ್ಕದಲ್ಲೇ ಇನ್ನೊಂದು ಪುಟ್ಟ ಕೂಸು. ಆಕೆಯ ಸೀರೆಯಿಂದ ತೊಟ್ಟಿಲು ಕಟ್ಟಿ ಅಂಗಡಿ ಬಳಿಯೇ ಮಲಗಿಸಿದ್ದಳು.

Advertisement

ಕೈಯಲ್ಲಿದ್ದ ಮಗು ಒಂದೇ ಸಮನೆ ಅಳುತ್ತಿತ್ತು. ತನ್ನ ಅಂಗಡಿಗೆ ಬಂದ ಗಿರಾಕಿಗಳಿಗೆಲ್ಲಾ ಬಣ್ಣ ಬಣ್ಣದ ಬಳೆಗಳನ್ನು ತೊಡಿಸುವ ಆಕೆಯ ಕೈಯ್ಯಲ್ಲಿ ಒಂದೂ ಬಳೆಯಿಲ್ಲ. ನಮ್ಮ ಕೈಗಳನ್ನು ಅಂದಗಾಣುವಂತೆ ಮಾಡಿದ ಆಕೆಯ ಕೈಯಲ್ಲಿ ಮಣ್ಣು, ಗಾಯದ ಕಲೆಗಳು ಬಿಟ್ಟರೆ ಬೇರೇನಿಲ್ಲ. ಕುತೂಹಲದಿಂದ ಅಕ್ಕಾ ನಮ್ಗೆಲ್ಲಾ ಬಳೆ ಮಾರೋ ನಿಮ್ಮ ಕೈಯ್ಯಲ್ಯಾಕೆ ಒಂದೂ ಬಳೆ ಇಲ್ಲ ಎಂದು ಕೇಳಿಯೇ ಬಿಟ್ಟೆ. ಅದಕ್ಕೆ ಆಕೆ ನಗುತ್ತಾ ನಂಗ್ಯಾಕ್ಕವ್ವ ಬಳೆ ಯಾರ್‌ ನೋಡಕ್ಕೆ ಅನ್ನುತ್ತಾ ಆಕೆಯ ಕಥೆಯನ್ನು ಒಂದೊಂದಾಗಿಯೇ ಬಿಚ್ಚಿಟ್ಟಳು. ಅದನ್ನು ಕೇಳುತ್ತಾ ನನ್ನ ಮನಸ್ಸು ಅಯ್ಯೋ ಅಂದಿತು.

ಅಷ್ಟೊಂದು ಕಷ್ಟಗಳನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡು ಹೊರಗಿನಿಂದ ನಗುತ್ತಾ ಬಳೆ ಮಾರುವ ಆಕೆಗೆ ಬದುಕುವ ಛಲ, ಎಂದಾದರೂ ತನ್ನ ಬದುಕು ಸರಿ ಹೋಗಬಹುದೆಂಬ ದೃಢನಂಬಿಕೆ. ಅಲ್ಲಿಂದ ಒಂದು ಡಜನ್‌ ಬಳೆ ಕೊಂಡವಳೇ ಅಮ್ಮನ ಬಳಿ ಬಂದು ಎಲ್ಲವನ್ನೂ ಹೇಳಿದೆ. ಅದಕ್ಕೆ ಆಕೆ ಹೇಳಿದ್ದು ಒಂದೇ. ಅದೇ ಜೀವನ ಮಗ. ನಾವು ಅಳುತ್ತಾ, ನಮ್ಮ ನೋವನ್ನು ಇನ್ನೊಬ್ಬರಲ್ಲಿ ಪದೇ ಪದೇ ಹೇಳುತ್ತಾ ಇದ್ದರೆ ಯಾರೂ ಕೇಳುವವರಿಲ್ಲ. ಇವಳದ್ದು ಯಾವಾಗಲೂ ಇದ್ದಿದ್ದೇ ಎಂದು  ಸುಮ್ಮನಾಗುತ್ತಾರೆ.

ಅದೇ ಕಷ್ಟಗಳನ್ನೆಲ್ಲಾ ಬದಿಗಿಟ್ಟು ಎಲ್ಲರೆದುರು ನಗುತ್ತಾ ಜೀವನ ಸಾಗಿಸಿ ನೋಡು,  ಬದುಕು ಬಂಗಾರದಂತಿರುತ್ತದೆ ಎಂದಳು. ಆಕೆಯ ಮಾತು ಹೌದು ಅನಿಸಿತು. ಅಮ್ಮನೂ ಆಕೆಯ ಜೀವನದಲ್ಲಿ ನಡೆದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಳು.

ಚಿಕ್ಕ ಪುಟ್ಟ ಕಷ್ಟಗಳಿಗೆ ಕುಗ್ಗುತ್ತಿದ್ದ ನನಗೆ ನಾನೇ ಧೈರ್ಯ ಹೇಳಿಕೊಂಡೆ. ಇವರೆಲ್ಲರ ಕಷ್ಟಗಳಿಗೆ ಹೋಲಿಕೆ ಮಾಡಿದರೆ ನನ್ನದೇನೂ ದೊಡ್ಡ ಕಷ್ಟವೇ ಅಲ್ಲ. ಜೀವನದಲ್ಲಿ ಛಲ, ಧೈರ್ಯ ಹಾಗೂ ನಗುವೊಂದಿದ್ದರೆ ಎಂಥಾ ಕಷ್ಟಗಳಿಂದಲೂ ಪಾರಾಗಬಹುದು ಎಂದು ತಿಳಿದುಕೊಂಡೆ. ಹಾಗಾಗಿ ನಾವೆಲ್ಲಾ ಜೀವನದಲ್ಲಿ ನಗ್ತಾ, ನಗಿಸ್ತಾ ಕಷ್ಟಗಳನ್ನು ಬದಿಗೆ ಸರಿಸೋಣ.

 -ಲಾವಣ್ಯಾ ಎಸ್‌.

ವಿವೇಕಾನಂದ ಸ್ವಾಯತ್ತ ಕಾಲೇಜು

ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next