Advertisement
ಕೆಕೆಆರ್ 3ನೇ ಸ್ಥಾನದಲ್ಲಿದ್ದರೂ ಪ್ಲೇ-ಆಫ್ ಇನ್ನೂ ಅಧಿಕೃತವಾಗಿಲ್ಲ. ಅಲ್ಲದೇ ರನ್ರೇಟ್ ಕೂಡ ಮೈನಸ್ನಲ್ಲಿದೆ. ಅಕಸ್ಮಾತ್ ದಿನೇಶ್ ಕಾರ್ತಿಕ್ ಪಡೆ ಈ ಪಂದ್ಯವನ್ನು ಸೋತರೆ ನಿರ್ಗಮನದ ಅಪಾಯ ಎದುರಾಗುವ ಸಾಧ್ಯತೆ ಇದ್ದೇ ಇದೆ. 12 ಅಂಕದೊಂದಿಗೆ ಅನಂತರದ 4 ಸ್ಥಾನದಲ್ಲಿರುವ ತಂಡಗಳು, ಮುಖ್ಯವಾಗಿ ಮುಂಬೈ ಹಾಗೂ ಆರ್ಸಿಬಿ ಭಾರೀ ಅಂತರದಿಂದ ಗೆದ್ದರೆ ಕೋಲ್ಕತಾ ಕತೆ ಮುಗಿಯುವುದು ಬಹುತೇಕ ಖಚಿತ. ಹೀಗಾಗಿ ಹೈದರಾಬಾದ್ನಲ್ಲಿ ದೊಡ್ಡದೊಂದು ಗೆಲುವನ್ನು ಸಾಧಿಸಿದರಷ್ಟೇ ಕೆಕೆಆರ್ಗೆ ಉಳಿಗಾಲ!
ಇತ್ತ ಹೈದರಾಬಾದ್ಗೂ ಗೆಲುವಿನ ಮುಕ್ತಾಯವೊಂದರ ಅಗತ್ಯವಿದೆ. ಸತತ 2 ಪಂದ್ಯಗಳನ್ನು ಸೋತ ಸಂಕಟದಲ್ಲಿರುವ ತಂಡ ತವರಿನಂಗಳದ ಈ ಅಂತಿಮ ಅವಕಾಶವನ್ನು ಬಿಟ್ಟುಕೊಡುವ ಸಾಧ್ಯತೆ ಬಹಳ ಕಡಿಮೆ. ಆಗ ಅಗ್ರಸ್ಥಾನದೊಂದಿಗೆ ಲೀಗ್ ಹಂತವನ್ನು ಮುಗಿಸಿದಂತೆಯೂ ಆಗುತ್ತದೆ. ಈ ಪಂದ್ಯಕ್ಕಾಗಿ ಹೈದರಾಬಾದ್ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸುವುದರಲ್ಲಿ ಅನುಮಾನವಿಲ್ಲ. ಆಗ ಐಪಿಎಲ್ನ “ದುಬಾರಿ ಬೌಲರ್’ ಬಾಸಿಲ್ ಥಂಪಿ ಬದಲು ಭುವನೇಶ್ವರ್ ಕುಮಾರ್ ದಾಳಿಗಿಳಿಯುತ್ತಾರೆ.