Advertisement

ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ

08:51 PM Feb 16, 2020 | Lakshmi GovindaRaj |

ತುಮಕೂರು: ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.

Advertisement

ನಗರದ ಬಾಲಭವನ ಸಭಾಂಗಣದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ನೆಹರು ಯುವಕೇಂದ್ರದ ಸಹಯೋಗದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತಾಗಬೇಕು. ಬಲಹೀನ ದೌರ್ಬಲ್ಯಗಳಿಂದ ಕೂಡಿದ ವ್ಯಕ್ತಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪವಿತ್ರ ಜೀವನ ನೆಮ್ಮದಿಯ ಬದುಕಿಗೆ ಮುಖ್ಯ. ಧೂಮಪಾನ, ಮದ್ಯಪಾನ ಹಾಗೂ ಡ್ರಗ್ಸ್‌ನಂತಹ ದುಶ್ಚಟಗಳಿಂದ ದೂರವಿದ್ದು, ಯುವಶಕ್ತಿ ನೈತಿಕತೆಯ ಬದುಕು ಆಯ್ದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಆರೋಗ್ಯಯುತ ಬದುಕಿಗೆ ಯೋಗ, ಧ್ಯಾನ ಮತ್ತು ನಿರ್ಮಲ ಪರಿಸರ ಮುಖ್ಯ. ಪ್ರೀತಿಯ ಮಾತುಗಳಿಂದ ತಪ್ಪು ಮಾಡಿದವರಿಗೆ ಅರಿವು ಮೂಡಿಸಿದಾಗ ಒಳ್ಳೆಯವರಾಗಲು ಸಾಧ್ಯ. ಸ್ವಾಮಿ ವಿವೇಕಾನಂದ “ಲವ್‌ ಇಸ್‌ ಲಾ’ ನಾಣ್ಣುಡಿಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದರು.

ಮಹಾನಗರ ಪಾಲಿಕೆ ಮೇಯರ್‌ ಫ‌ರಿದಾ ಬೇಗಂ ಮಾತನಾಡಿ, ಒಂದು ಕುಟುಂಬ ನಿರ್ವಹಿಸುವಲ್ಲಿ ಸ್ತ್ರೀ-ಪುರುಷರ ಪಾತ್ರ ಬಹಳ ಮಹತ್ವದ್ದು, ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಇಬ್ಬರೂ ಸಂಸ್ಕಾರಯುತ ಜೀವನ ಸಾಗಿಸಿ, ಆತ್ಮಾವಲೋಕನದ ಮೂಲಕ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.

Advertisement

ಭಾರತ ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳ ದೇಶ. ಪಾಶ್ಚಾತ್ಯ ದೇಶದ ಅನುಕರಣೆಯಿಂದ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳ ದಾಸರಾಗಿದ್ದೇವೆ. ಸಂತೋಷ ಮತ್ತು ದುಃಖಗಳ ಸಂದರ್ಭಗಳಲ್ಲೂ ಮದ್ಯಪಾನ ಮಾಡಿ ಸಂಭ್ರಮಿಸುವುದು ಪಾಶ್ಚತ್ಯ ದೇಶದ ಸಂಸ್ಕೃತಿಯಾಗಿದೆ.

ಈ ಸಂಸ್ಕೃತಿ ನಮ್ಮದಲ್ಲ. ಇದನ್ನು ಯುವ ಶಕ್ತಿ ಅರಿತು ನೈತಿಕ ಬದುಕಿನ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದರು. ಮದ್ಯಪಾನ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಕ್ರಾಂತಿಕಾರಿ ಬದಲಾವಣೆ ಮೂಲಕ ಶುದ್ಧ ಜೀವನದ ಹಾದಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಲತಾ ಮಾತನಾಡಿದರು. ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅಚರ್ಡ್‌ ಸಂಸ್ಥೆಯ ಡಾ.ಎಚ್‌.ಜಿ.ಸದಾಶಿವಯ್ಯ ಉಪನ್ಯಾಸ ನೀಡಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ.ರೋಹಿಣಿ, ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ದುಡಿದಿದ್ದನ್ನು ಕುಡಿತಕ್ಕೆ ಹಾಕಿ ದೇಹ, ಮನಸ್ಸು ಮತ್ತು ಮನೆ ಹಾಳು ಮಾಡಿಕೊಂಡು ಬೀದಿಪಾಲಾಗಿರುವ ಎಷ್ಟೋ ಕುಟುಂಬಗಳಿವೆ. ಇದು ಗೊತ್ತಿದ್ದರೂ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮೂರ್ಖತನದ ಪರಮಾವಧಿ. ಇದನ್ನು ಅರಿತು ಪ್ರತಿಯೊಬ್ಬರೂ ಜೀವನ ಸುಂದರವಾಗಿಸಿಕೊಳ್ಳುವುದು ಅಥವಾ ವಿಕೃತಗೊಳಿಸಿಕೊಳ್ಳುವುದು ಅವರವರ ಕೈಯಲ್ಲಿದೆ ಎಂದು
-ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next