Advertisement

ವರ್ತಕರು ಸಹಕರಿಸಿದರೆ ಸ್ವಚ್ಛ ಮಾರುಕಟ್ಟೆ

06:12 AM Feb 01, 2019 | Team Udayavani |

ಬೆಂಗಳೂರು: ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ತ್ಯಾಜ್ಯ ರಾಶಿ, ಮೂಗು ಮುಚ್ಚಿಕೊಂಡು ವ್ಯಾಪಾರ ನಡೆಸುತ್ತಿರುವ ಗ್ರಾಹಕರು, ಕೊಳೆತ ತ್ಯಾಜ್ಯದ ಕೊಳಕು ನೀರು ರಸ್ತೆಯಲ್ಲಿ ಹರಿದ ಪರಿಣಾಮ ಹರಡಿರುವ ದುರ್ವಾಸನೆ, ಜನರಿಗೆ ಓಡಾಡಲೂ ಜಾಗವಿಲ್ಲದಂತೆ ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳು, ಒಮ್ಮೆಲೆ ಜನರ ಕಡೆ ನುಗ್ಗಿ ಹೆದರಿಸುವ ಬೀಡಾಡಿ ಹಸುಗಳು…

Advertisement

ವ್ಯಾಪಾರಿಗಳ ಅಸಡ್ಡೆ ಹಾಗೂ ಅಧಿಕಾರಿಗಳ ವೈಫ‌ಲ್ಯದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮೈಸೂರು ಮಹಾರಾಜರು ನಿರ್ಮಿಸಿದ ಪಾರಂಪರಿಕ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಪ್ರವೇಶಿಸಿದಾಗ ಕಂಡುಬರುವ ದೃಶ್ಯಗಳಿವು…

ಬಿಬಿಎಂಪಿ ಮೇಯರ್‌ ಆಗಿ ಆಯ್ಕೆಯಾಗುವ ಪ್ರತಿಯೊಬ್ಬರೂ ಕೆ.ಆರ್‌.ಮಾರುಕಟ್ಟೆ ಸ್ವಚ್ಛಗೊಳಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಮಾರುಕಟ್ಟೆ ಮಾತ್ರ ಕೆಟ್ಟ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕಾರಣ ಸಮರ್ಪಕ ತ್ಯಾಜ್ಯ ವಿಲೇವಾರಿಯ ಕುರಿತು ಹಲವಾರು ಬಾರಿ ಜಾಗೃತಿ ಮೂಡಿಸಿದರೂ ವ್ಯಾಪಾರಿಗಳು ಮಾತ್ರ ಅಸಡ್ಡೆ ಮನೋಭಾವ ಹೊಂದಿದ್ದಾರೆ. ಇನ್ನೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ, ಸ್ವಚ್ಛತೆಗೆ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಕೆ.ಆರ್‌.ಮಾರುಕಟ್ಟೆ ಕಸದ ಮಾರುಕಟ್ಟೆ ಎಂಬ ಕುಖ್ಯಾತಿ ಪಡೆಯುವಂತಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ವಹಿವಾಟು ಆರಂಭವಾಗಿ, ಬೆಳಗ್ಗೆ 9ರವರೆಗೆ ಸಗಟು ವ್ಯಾಪಾರ ನಡೆಯುತ್ತದೆ. ಅಲ್ಲಿಂದ ರಾತ್ರಿ 11ರವರೆಗೂ ಮಳಿಗೆ ವ್ಯಾಪಾರ ನಡೆಯುತ್ತದೆ. ಆದರೆ, ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ನಡೆಯುವುದು ಕೇವಲ ಒಂದೇ ಬಾರಿ. ಹೀಗಾಗಿ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗುತ್ತಿದೆ.

ಸಿಬ್ಬಂದಿ, ಕಾಂಪ್ಯಾಕ್ಟರ್‌ ಕೊರತೆ!?: ಮಾಜಿ ಮೇಯರ್‌ಗಳು ಹೇಳುವ ಪ್ರಕಾರ ತ್ಯಾಜ್ಯ ಸಮಸ್ಯೆಗೆ ಕಾರಣ ನಿಗದಿತ ಪ್ರಮಾಣದಲ್ಲಿ ಪೌರಕಾರ್ಮಿಕರು ಹಾಗೂ ಕಾಂಪ್ಯಾಕ್ಟರ್‌ ಕಾರ್ಯನಿರ್ವಹಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ನಿತ್ಯ 35-40 ಟನ್‌ ತ್ಯಾಜ್ಯ ಸೃಷ್ಟಿಯಾಗುತ್ತದೆ. ಆದರೆ, ಗುತ್ತಿಗೆದಾರರು ಕೇವಲ ಒಂದು ಕಾಂಪ್ಯಾಕ್ಟರ್‌ನಿಂದ ವಿಲೇವಾರಿ ಕಾರ್ಯ ನಡೆಸುತ್ತಿರುವುದರಿಂದ ಅಗಾಧ ಪ್ರಮಾಣದ ತ್ಯಾಜ್ಯ ಮಾರುಕಟ್ಟೆಯಲ್ಲೇ ಉಳಿಯುವಂತಾಗಿದೆ.

Advertisement

ಸ್ವಚ್ಛತೆಗೆ ವ್ಯಾಪಾರಿಗಳ ಅಸಡ್ಡೆ: ಪಾಲಿಕೆಯಿಂದ ಮಾರುಕಟ್ಟೆ ಸ್ವಚ್ಛಗೊಳಿಸಲು ಹಲವಾರು ಬಾರಿ ಅಭಿಯಾನ ಕೈಗೊಂಡು, ವ್ಯಾಪಾರಿಗಳು ತಾವಿರುವ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಆದರೆ, ವ್ಯಾಪಾರಿಗಳು ಮಾತ್ರ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇನ್ನು ತರಕಾರಿ ವ್ಯಾಪಾರಿಗಳು ಕೊಚ್ಚೆಯ ನಡುವೆಯೇ ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಿರುವುದು ಮಾರುಕಟ್ಟೆ ಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿದೆ.

ವಾರ್ಷಿಕ 2.40 ಕೋಟಿ ಆದಾಯ: ಮಾರುಕಟ್ಟೆಯಲ್ಲಿ ಪಾಲಿಕೆಯಿಂದ ಅನುಮತಿ ಪಡೆದಿರುವ 1,510 ಮಳಿಗೆಗಳಿದ್ದು, ಇವುಗಳಿಂದ ಹಳೆಯ ದರದಂತೆ ಮಾಸಿಕ 18ರಿಂದ 20 ಲಕ್ಷ ರೂ.ವರೆಗೆ, ವಾರ್ಷಿಕ ಸುಮಾರು 2.40 ಕೋಟಿ ರೂ. ಬಾಡಿಗೆ ಸಂಗ್ರಹವಾಗುತ್ತಿದೆ. ಆದರೆ, ಮಳಿಗೆಗಳ ಮುಂದೆ ಹಾಗೂ ಪಾದಚಾರಿ ಮಾರ್ಗದಲ್ಲಿ ಸಾವಿರಾರು ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು, ಆದಾಯ ಮಾತ್ರ ಅಧಿಕಾರಿಗಳು ಹಾಗೂ ಕಾಣದ ಕೈಗಳ ಪಾಲಾಗುತ್ತಿದೆ. ಇನ್ನು ನಿವೃತ್ತರಾಗಿರುವ ಪಾಲಿಕೆ ಅಧಿಕಾರಿಗಳು ಸಹ ಇಂದಿಗೂ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುವುದು ವಿಪರ್ಯಾಸ ಎಂಬುದು ಮಾಜಿ ಮೇಯರ್‌ ಒಬ್ಬರ ಆರೋಪ.

ತ್ಯಾಜ್ಯ ಸುರಿವ ಜಾಗದಲ್ಲೂ ಮಳಿಗೆ!: ನಿಯಮದಂತೆ ಪೌರಕಾರ್ಮಿಕರು ನಿತ್ಯ 11 ಗಂಟೆಯೊಳಗೆ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಆ ನಂತರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಾಕಲು ಪಾಲಿಕೆಯಿಂದ ಮೂರು ಜಾಗಗಳನ್ನು ಗುರುತಿಸಲಾಗಿತ್ತು. ವ್ಯಾಪಾರಿಗಳು 11ರ ನಂತರ ಸೃಷ್ಟಿಯಾಗುವ ತ್ಯಾಜ್ಯವನ್ನು ಆ ಜಾಗಗಳಲ್ಲಿ ಹಾಕಿದರೆ ಪೌರಕಾರ್ಮಿಕರು ಮರು ದಿನ ಬೆಳಗ್ಗೆ ತೆರವು ಮಾಡುತ್ತಾರೆ. ಆದರೆ, ತ್ಯಾಜ್ಯ ಹಾಕಲು ಗುರುತಿಸಿದ್ದ ಮೂರೂ ಜಾಗಗಳಲ್ಲಿ ಮಳಿಗೆಗಳು ನಿರ್ಮಾಣವಾಗಿವೆ. ಪರಿಣಾಮ, ತ್ಯಾಜ್ಯ ರಸ್ತೆಗೆ ಬೀಳುತ್ತಿದೆ.

ಅಧಿಕಾರಿಗಳು ಮಾಲ್‌ಗೆ, ಮೇಯರ್‌ ಮಾರುಕಟ್ಟೆಗೆ: ಪಾಲಿಕೆ ಅಧಿಕಾರಿಗಳು ಮಾಲ್‌ಗ‌ಳಿಗೆ ಹೋಗಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಆದರೆ, ಗ್ರಾಹಕರು ಸಹ ಮಾರುಕಟ್ಟೆಗಳಿಗೆ ಅಷ್ಟೇ ಖುಷಿಯಿಂದ ಬರಲಿ ಎಂದು ಮಾರುಕಟ್ಟೆ ಸ್ವಚ್ಛತೆಗೆ ಮುಂದಾಗುವುದಿಲ್ಲ. ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಸಂಸ್ಕರಣೆಗೆ ಬಯೋಮಿಥನೈಸೇಷನ್‌ ಘಟಕ ನಿರ್ಮಿಸಲು ಅಧಿಕಾರಿಗಳಿಗೆ ಅದನ್ನು ನಿರ್ಮಿಸಲು ಕಷ್ಟವಾಗಿದೆ ಎಂದು ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಆರೋಪಿಸಿದರು.

ಮೈಸೂರು ಮಹಾರಾಜರು ನಿರ್ಮಿಸಿದ ಮಾರುಕಟ್ಟೆ ಸ್ವಚ್ಛಗೊಳಿಸಬೇಕೆಂದು 42 ವಾರ ಮಾರುಕಟ್ಟೆಗೆ ಭೇಟಿ ನೀಡಿದ್ದೇನೆ. ಆದರೆ, ಇಂದು ಮಾರುಕಟ್ಟೆ ನೋಡಲಾಗದಂತಹ ದುಸ್ಥಿತಿಯಲ್ಲಿದೆ. ಮಾರಕಟ್ಟೆ ಸ್ವಚ್ಛತೆ ಕಾಪಾಡಬೇಕಾದ ಅಧಿಕಾರಿಗಳು ಬೇರೆಯದೇ ಕೆಲಸದಲ್ಲಿ ನಿರತರಾಗಿರುತ್ತಾರೆ. ಮಾರುಕಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗಬೇಕಾದರೆ, ದಕ್ಷ ಅಧಿಕಾರಿಗಳು ಉಪ ಆಯುಕ್ತರು, ಕಂದಾಯ ಅಧಿಕಾರಿ ಹಾಗೂ ಸಹಾಯಕ ಇಂಜಿನಿಯರ್‌ಗಳನ್ನು ನೇಮಿಸಬೇಕು ಎಂದಿದ್ದಾರೆ.

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next