Advertisement

ಪ್ರೇಮಿಗಳ ಮರ್ಯಾದಾ ಹತ್ಯೆ?

06:50 AM Nov 17, 2018 | Team Udayavani |

ಮಂಡ್ಯ: ಅಂತರ್ಜಾತಿ ಮದುವೆ ಮಾಡಿಕೊಂಡಿದ್ದನ್ನು ಸಹಿಸದ ಹುಡುಗಿಯ ಸಂಬಂಧಿಕರು ತಮಿಳುನಾಡಿನ ಪ್ರೇಮಿಗಳ ಕೈ-ಕಾಲು ಕಟ್ಟಿ, ಕೆರೆಗೆ ಎಸೆದು ಕೊಲೆ ಮಾಡಿರುವ ಘಟನೆ ಮಳವಳ್ಳಿ ಸಮೀಪದ ಶಿವನಸಮುದ್ರ ಬಳಿ ನಡೆದಿದೆ.

Advertisement

ಇದೊಂದು ಮರ್ಯಾದಾ ಹತ್ಯೆ ಎಂದು ಮೇಲ್ನೋಟಕ್ಕೆ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ತಮಿಳುನಾಡಿನ ಹೊಸೂರು ತಾಲೂಕು ಚೂಡಗೌಂಡನಹಳ್ಳಿ ಗ್ರಾಮದ ನಂದೀಶ್‌ (26) ಹಾಗೂ ಅದೇ ಗ್ರಾಮದ ಸ್ವಾತಿ(19) ಕೊಲೆಯಾದ ಪ್ರೇಮಿಗಳು.

ನಂದೀಶ್‌, ಹಾರ್ಡ್‌ವೇರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸ್ವಾತಿ, ಕೃಷ್ಣಗಿರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಳು.

ಮೂರು ತಿಂಗಳ ಹಿಂದೆ ಸ್ವಾತಿ, ಮನೆಯಿಂದ ನಾಪತ್ತೆಯಾಗಿದ್ದಳು. ನಂತರ, ನಂದೀಶನೊಂದಿಗೆ ಮದುವೆಯಾಗಿ ಹೊಸೂರಿನಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ವಾಸವಾಗಿದ್ದರು. ನ.10ರಂದು ಹೊಸೂರಿನಲ್ಲಿ ಚಿತ್ರನಟ ಕಮಲ್‌ಹಾಸನ್‌ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ, ವಿಷಯ ಪೋಷಕರಿಗೆ ತಿಳಿಯಿತು.

ಇದರಿಂದ ಕೋಪಗೊಂಡ ಸ್ವಾತಿಯ ತಂದೆ ಶ್ರೀನಿವಾಸ್‌, ದೊಡ್ಡಪ್ಪ ವೆಂಕಟೇಶ್‌,ಅಶ್ವಥ್‌, ವೆಂಕಟರಾಜು ಅದೇ ದಿನ ಹೊಸೂರಿಗೆ ಹೋಗಿ, ಪುಸಲಾಯಿಸಿ ಇಬ್ಬರನ್ನೂ ಟಾಟಾ ಸುಮೋದೊಳಗೆ ಹತ್ತಿಸಿಕೊಂಡು ಶಿವನಸಮುದ್ರಕ್ಕೆ ಬಂದರು. ಮುಂಜಾನೆ 3 ಗಂಟೆ ಸುಮಾರಿಗೆ ನಂದೀಶನ ಕುತ್ತಿಗೆ ಬಿಗಿದು,ಕೈ-ಕಾಲು ಕಟ್ಟಿ ಕೆರೆಗೆ ಎಸೆದರು. ನಂತರ ಸ್ವಾತಿಗೂ ಮನಸೋ ಇಚ್ಛೆ ಥಳಿಸಿ ವೇಲ್‌ನಿಂದ ಆಕೆಯ ಕಾಲನ್ನು ಬಿಗಿದು, ಅದೇ ಕೆರೆಗೆ ಎಸೆದು, ಅಲ್ಲಿಂದ ಹೊಸೂರಿಗೆ ವಾಪಸ್ಸಾಗಿದ್ದರು. ನ.13ರಂದು ಕತ್ತು ಬಿಗಿದು, ಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಮತ್ತು ನ.15ರಂದು ಕಾಲುಕಟ್ಟಿದ ರೀತಿಯಲ್ಲಿಯುವತಿಯ ಮೃತದೇಹ ಶಿವನಸಮುದ್ರ  ಬಳಿಯ ಕೆರೆಯಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು, ಯುವತಿಯ ತಂದೆಯನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಬಂಧಿಸಿದ್ದಾರೆ. ಬೆಳಕವಾಡಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next