Advertisement

ನಕ್ಷತ್ರ ತೋರಿಸುವ ಹುಡುಗ

06:00 AM Jun 27, 2018 | |

ಮೆಹೆಂದಿ ಹಚ್ಚದಿದ್ದರೆ, ಯಾವುದೇ ಶುಭ ಸಮಾರಂಭ ಪೂರ್ಣಗೊಳ್ಳುವುದಿಲ್ಲ ಎಂಬ ಮಾತೊಂದು ಇದೆ. ಆದರೆ, ಇಂದಿನ ಬಹುತೇಕ ಯುವತಿಯರು ಮಂದರಂಗಿಯನ್ನು ಹಚ್ಚಿಕೊಳ್ಳಲು ಹಬ್ಬ, ಹರಿದಿನಗಳನ್ನು ಕಾಯುತ್ತಲೂ ಇಲ್ಲ. ಬೀದಿ ಬದಿಯ ಮೆಹೆಂದಿ ಕಲಾವಿದರಿಂದ ಕೈಮೇಲೆ ಚಿತ್ತಾರ ಬಿಡಿಸಿಕೊಳ್ಳುವುದು ಈಗಿನ ಟ್ರೆಂಡ್‌…

Advertisement

ನವಿಲುಗರಿಯನ್ನು ಸವರಿದ ಹಾಗೆ ಆಗುತ್ತಿತ್ತೇನೋ, ಆ ಚೆಂದುಳ್ಳಿ ನಸುನಗುತ್ತಿದ್ದಳು. ಅವಳ ಕಂಗಳು ಆ ಹುಡುಗನ ಮೇಲೆಯೇ ನೆಟ್ಟಿದ್ದವು. ಆದರೆ, ಆ ಹುಡುಗ ಮಾತ್ರ ಅವಳ ಕೈಗಳನ್ನೇ ದಿಟ್ಟಿಸಿ ನೋಡುತ್ತಿದ್ದ. ಬಿಳುಪಾಗಿ, ನುಣುಪಾಗಿದ್ದ ಕೈಗಳು ಅವನ ಪಾಲಿಗೆ ಕ್ಯಾನ್ವಾಸ್‌ ಇದ್ದಂತೆ. ಅದರ ಮೇಲೆ ಚೆಂದದ ಚಿತ್ತಾರ ಬಿಡಿಸುತ್ತಿದ್ದ. ದೂರದಿಂದ ನೋಡಿದರೆ, ಅಂಗೈ ನೋಡಿ ಭವಿಷ್ಯ ಹೇಳುತ್ತಿದ್ದಾನೇನೋ ಅನ್ನಿಸುವ ಹಾಗೆ ಅವರಿಬ್ಬರು ಧ್ಯಾನಸ್ಥರಾಗಿದ್ದರು. ಇವಳು ಕನ್ನಡದಲ್ಲಿ ಏನೋ ಹೇಳುತ್ತಿದ್ದಳು, ಅವನು ಹಿಂದಿಯಲ್ಲಿ ಅದಕ್ಕೆ ಸ್ಪಷ್ಟನೆ ಕೊಡುತ್ತಿದ್ದ. ಭಾಷೆ ಗೊತ್ತಿಲ್ಲದ ಇಬ್ಬರ ನಡುವೆ ಮದರಂಗಿ ಹೂವಿನಂತೆ ಅರಳುತ್ತಿತ್ತು. ಅಪರಿಚಿತರನ್ನು ಬೆಸೆದ ಮಧುರ ಸೇತುವೆಯಾಗಿತ್ತು.


  ಮೈಸೂರಿನ ಅರಸು ರಸ್ತೆಗೆ ಕಾಲಿಟ್ಟರೆ, ಅಲ್ಲಿನ ಅಂಗಡಿ ಮುಂಗಟ್ಟುಗಳ ಮುಂದೆ ಈ ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತದೆ. ದೂರದ ಗುಜರಾತ್‌, ರಾಜಾಸ್ಥಾನದಿಂದ ಬಂದ ಮದರಂಗಿ ಹುಡುಗರು ಆ ಬೀದಿಗೊಂದು ವಿಶೇಷ ಮೆರುಗು ತುಂಬಿದ್ದಾರೆ. ಕೇವಲ ಮೈಸೂರೇ ಅಲ್ಲ, ಬೆಂಗಳೂರಿನ ಮಲ್ಲೇಶ್ವರಂ, ಜಯನಗರ, ಶಿವಮೊಗ್ಗದ ಗಾಂಧಿ ಬಜಾರಿನಲ್ಲೂ ಇಂಥದ್ದೇ ದೃಶ್ಯಗಳು ಸೆಳೆಯುತ್ತವೆ. ಬೀದಿಬದಿಯಲ್ಲಿ ಕುಳಿತ ಆ ಹುಡುಗರು ಮದರಂಗಿ ಬಿಡಿಸಿದರೇನೇ, ಅದು ಹೆಚ್ಚು ರಂಗುಬಿಟ್ಟುಕೊಳ್ಳುವುದು ಎನ್ನುವ ನಂಬಿಕೆಯೂ ಈಗಿನ ಯುವತಿಯರಲ್ಲಿ ಟ್ರೆಂಡಾಗಿದೆ.

  “ಮೆಹಂದಿ ಒಂದು ಬಣ್ಣದ ಚಿತ್ತಾರವಷ್ಟೇ ಅಲ್ಲ. ಅದು ಮನಸ್ಸಿನ ಭಾವದ ಬಣ್ಣ’ ಎಂದು ನಂಬಿರುವ ಈ ಯುವಕರಿಗೆ ಮದುವೆಯ ಸೀಸನ್‌ನಲ್ಲಿ ಬಲುಬೇಡಿಕೆ. ಖುದ್ದಾಗಿ ಮನೆಯ ಬಾಗಿಲಿಗೆ ಬಂದು, ವಧುವಿನ ಅಂಗೈಯನ್ನು ರಂಗುಗೊಳಿಸಿ, ಒಂದೆರಡು ಸಾವಿರ ರೂ. ಪಡೆದು, ವಾಪಸಾಗುತ್ತಾರೆ. ರಂಜಾನ್‌ ಇದ್ದಾಗಲೂ ಇವರ ಕೈಗಳಿಗೆ ಪುರುಸೊತ್ತೇ ಇರುವುದಿಲ್ಲ. ಮೊಘಲ್‌ ಶೈಲಿಯ ಮದರಂಗಿ ಬಿಡಿಸುವಲ್ಲಿಯೂ ಇವರು ನಿಸ್ಸೀಮರು.

  ಮೆಹೆಂದಿ ಹಚ್ಚದಿದ್ದರೆ, ಯಾವುದೇ ಶುಭ ಸಮಾರಂಭ ಪೂರ್ಣಗೊಳ್ಳುವುದಿಲ್ಲ ಎಂಬ ಮಾತೊಂದು ಇದೆ. ಆದರೆ, ಇಂದಿನ ಬಹುತೇಕ ಯುವತಿಯರು ಮಂದರಂಗಿಯನ್ನು ಹಚ್ಚಿಕೊಳ್ಳಲು ಹಬ್ಬ, ಹರಿದಿನಗಳನ್ನು ಕಾಯುತ್ತಲೂ ಇಲ್ಲ. ಮದುವೆ ದಿನ ಹತ್ತಿರ ಬಂದಾಗಲೇ ಮೆಹೆಂದಿ ಹಚ್ಚಿಕೊಳ್ಳುವುದು ಎನ್ನುವ ಕಾತರಿಕೆಯಲ್ಲೂ ಆಕೆಯಿಲ್ಲ. ಬೇರೆ ದಿನಗಳಲ್ಲೂ ತಾನು ಮದುವಣಗಿತ್ತಿಯಂತೆ ಮಿನುಗಬೇಕು, ಸಾಂಪ್ರದಾಯಿಕ ಹೆಣ್ಣಿನಂತೆ ಕಂಗೊಳಿಸಬೇಕು ಎನ್ನುವ ತುಡಿತದಲ್ಲಿ ಆಕೆಯಿದ್ದಾಳೆ. ಹಾಗಾಗಿ, ಅವಳ ಕೈಗಳೀಗ ಯಾವಾಗ ಬೇಕಾದರೂ, ಮೆಹೆಂದಿಯನ್ನು ಚುಂಬಿಸಬಹುದು.

  ಬೀದಿ ಬದಿ ಹುಡುಗರು ಹಾಕುವ ಈ ಮೆಹೆಂದಿಯನ್ನು ಅವಳು ಇಷ್ಟಪಡುವುದಕ್ಕೆ ಇನ್ನೊಂದು ಕಾರಣ, ಅವು ಪಕ್ಕಾ ನೈಸರ್ಗಿಕವೆನ್ನುವುದು. ಇವರ ಶುಲ್ಕವೂ ದುಬಾರಿಯೇನಲ್ಲ. ಕೇವಲ ನೂರು ರೂಪಾಯಿಯಷ್ಟೇ. ನೀವು ಅವರ ಮುಂದೆ ಕೈಚಾಚಿದಾಗ, ಅವರ ಭಾಷೆಯಲ್ಲಿಯೇ ಏನನ್ನೋ ಗುನುಗುತ್ತಾ, ಮುಖದಲ್ಲಿ ಪುಟ್ಟ ನಗುವೊಂದನ್ನು ಹೊಮ್ಮಿಸುತ್ತಾ, ತಮ್ಮ ಕೆಲಸವನ್ನು ತನ್ಮಯದಿಂದ ಮಾಡುತ್ತಿರುತ್ತಾರೆ.

Advertisement

ಮೆಹೆಂದಿ, ಬ್ಯೂಟಿ ವಿತ್‌ ಡಾಕ್ಟರ್‌!
1. ಶರೀರದ ತಾಪ ಇಳಿಸುವಲ್ಲಿ ಮದರಂಗಿ ಸಹಕಾರಿ. ಕೂಲ್‌ ಆದಂಥ ಅನುಭವ ಸಿಗುತ್ತೆ. “ಹೀಟ್‌ ಸ್ಟ್ರೋಕ್‌’ಗಳನ್ನು ದೂರ ಮಾಡುತ್ತೆ.

2. ಚರ್ಮ ಸುಕ್ಕುಗಟ್ಟುವಿಕೆಯನ್ನು ನಿಯಂತ್ರಿಸಿ, ಯವ್ವನದ ಹೊಳಪು ತರುತ್ತದೆ.

3. ಉಗುರುಗಳ ಆರೋಗ್ಯಕ್ಕೆ ಮಹೆಂದಿ ಬಹಳ ಒಳ್ಳೆಯದು. ಸೊಂಪಾಗಿ ಬೆಳೆಯಲು ಸಹಕಾರಿ.

4. ಮೆಹೆಂದಿ ಇಡುವಾಗ ಕಚಗುಳಿ ಇಟ್ಟಂತಾಗುವುದರಿಂದ, ನರವ್ಯೂಹದ ಮೇಲಿನ ಒತ್ತಡವೂ ಕಡಿಮೆಯಾಗಿ, ರಕ್ತಚಲನೆ ಸರಾಗವಾಗುತ್ತೆ.

5. ಅಂಗೈ ಸೌಂದರ್ಯ ಕಳೆಗುಂದಿದ್ದರೆ, ಅದಕ್ಕೆ ತಾಜಾ ಕಳೆ ತುಂಬಿಸುವ ಶಕ್ತಿ ಮೆಹೆಂದಿಗೆ ಇದೆ. ಪುಟ್ಟಗಾಯ, ಸುಟ್ಟಕಲೆಗಳೇನಾದರೂ ಇದ್ದರೆ, ಅದನ್ನು ಮುಚ್ಚಿಹಾಕಲೂ ಇದು ಸರಳ ಮಾರ್ಗ.

6. ಅಂಗೈ ಮೇಲೆ ಅಲರ್ಜಿ ಆಗುವುದು, ತುರಿಕೆ ಸಮಸ್ಯೆ ಇದ್ದವರು ಆಗಾಗ್ಗೆ ಮದರಂಗಿ ಹಚ್ಚಿಕೊಂಡರೆ, ಒಳ್ಳೆಯ ಫ‌ಲಿತಾಂಶ ಸಿಗುತ್ತದೆ.

7. ಪಾದಗಳ ಬಿರುಕುಗಳನ್ನು ಮುಚ್ಚಲು, ಪಾದದ ಚರ್ಮವನ್ನು ಮೃದು ಮಾಡುವಲ್ಲಿಯೂ ಮದರಂಗಿ ಸಹಕಾರಿ.

8. ಫ‌ಂಗಲ್‌ ಇನ್ಫೆಕ್ಷನ್‌, ಸನ್‌ಬರ್ನ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಮದರಂಗಿ ಲೇಪನ ಒಳ್ಳೆಯ ಮದ್ದು.

– ರುಬಿನ ಅಂಜುಮ್‌, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next