Advertisement

ನಡಿಗೆ ವೇಗದಲ್ಲಿ ಮುಂದೆ 95ರ ಈ ತಂದೆ!

06:28 PM Jun 26, 2021 | Team Udayavani |

ಅಪ್ಪ ಮತ್ತು ಮಗ ಬೆಳಗ್ಗೆದ್ದು ವಾಕಿಂಗ್‌ ಹೊರಟರೆ ಅಪ್ಪನ ವೇಗಕ್ಕೆ ಮಗನಿಗೆ ಹೆಜ್ಜೆ ಹಾಕಲು ಕಷ್ಟವಾಗುವುದಿದೆಯೋ? ಮೇಲ್ನೋಟದ ದುರ್ಬಲರು ವಾಸ್ತವದಲ್ಲಿ ಸಬಲರು, ಸಬಲರೆಂದೆನಿಸಿಕೊಂಡವರು ವಾಸ್ತವದಲ್ಲಿ ದುರ್ಬಲರು.
ಅಂತಿಮ ದಿನದವರೆಗೂ ಬೆಳಗ್ಗೆದ್ದು ವಾಕಿಂಗ್‌ ಮಾಡುತ್ತಿದ್ದರು. 95ನೆಯ ವಯಸ್ಸಿನವರೆಗೂ ಮಗನ ಜತೆ ಹೆಜ್ಜೆ ಹಾಕುವಾಗ ತಾನು ಮುಂದೆ ಹೋದಂತೆ ನಿಲುಗಡೆ ಕೊಡುತ್ತಿದ್ದರು. 65 ವರ್ಷದ ಮಗ ಬಂದ ಬಳಿಕ ಮತ್ತೆ ನಡಿಗೆ ಆರಂಭ. ತೀರ್ಥಹಳ್ಳಿ ರಂಜದಕಟ್ಟೆಯಲ್ಲಿ ಏರು ಹತ್ತುವಾಗಲೂ ಹಿಂದೆ ಬೀಳುತ್ತಿರಲಿಲ್ಲ.

Advertisement

ಉಡುಪಿ ಶ್ರೀಕೃಷ್ಣಮಠದಲ್ಲಿ 2000 -02ರಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ 4ನೇ ಪರ್ಯಾಯದಲ್ಲಿ ಇವರನ್ನು ಸಮ್ಮಾನಿಸಲಾಗಿತ್ತು. ಆಗಷ್ಟೆ ಇವರು ಶತಕ ಬಾರಿಸಿದ್ದರು. ಬಸ್‌ ನಿಲ್ದಾಣದಿಂದ ಮಗನ ಜತೆ ನಡೆದು ಬಂದಿದ್ದರು.

ಕ್ಯಾಲರಿ ಬರ್ನ್ ಎಷ್ಟು?: ಎಷ್ಟು ಕ್ಯಾಲರಿಗಳನ್ನು ತಿಂದು ಬರ್ನ್ ಮಾಡುತ್ತಿದ್ದಿರಬಹುದು? ಅವರು ತಿನ್ನುವುದು ನಾವು ನೀವೆಲ್ಲ ತಿನ್ನುವ ಮೂರನೆಯ ಒಂದು ಭಾಗ, 100-150 ಗ್ರಾಂ ಆಗುವಷ್ಟು ಅನ್ನ. ಇಷ್ಟು ಅನ್ನದಲ್ಲಿ ಸಾರು, ಸಾಂಬಾರು, ಪಲ್ಯ, ಮಜ್ಜಿಗೆ ಎಲ್ಲ ಮುಗಿಯಬೇಕು. ಆದರೆ ಫ‌ುಲ್‌ ಊಟ ಮಾಡುವವರದ್ದು ಮುಗಿದರೂ ಇವರ ಊಟ ಮಾತ್ರ ಮುಗಿಯುವುದಿಲ್ಲ, ಅಗಿದೂ ಅಗಿದು ಊಟ ಮಾಡುತ್ತಿದ್ದರು. ಏನೇ ತಿನ್ನಲು ಕೊಟ್ಟರೂ ಇದೇ ಅನುಪಾತ.

ಕೊರೊನಾ ಕಾಲಘಟ್ಟದಲ್ಲಿ ಎಲ್ಲರಿಗೂ ಆರೋಗ್ಯದ ಮೇಲೆ ವಿಶೇಷ ಕಾಳಜಿ ಹುಟ್ಟುತ್ತಿದೆ. ವಾಕಿಂಗ್‌ ಕೂಡ ಜನಪ್ರಿಯವಾಗಿದೆ. ಹೆಚ್ಚಿಗೆ ತಿಂದದ್ದನ್ನು ಕರಗಿಸಲು ಇಷ್ಟೆಲ್ಲ ಸರ್ಕಸ್‌ ಅನಿವಾರ್ಯ. ಕ್ಯಾಲರಿಗಳನ್ನು ಬರ್ನ್ ಮಾಡುವುದು ಎಂದಾಗ ಏನೋ ದೊಡ್ಡ ಅನ್ವೇಷಣೆ ಎಂಬ ಮನಃಸಂತೃಪ್ತಿ ಸಿಗುತ್ತದೆ, ಶರೀರಕ್ಕೆ ಹೆಚ್ಚು ಕೆಲಸ ಕೊಡುತ್ತಿದ್ದೇವೆಂಬ ಅರಿವು ಇರುವುದಿಲ್ಲ. ಹೆಚ್ಚು ಹೆಚ್ಚು ತಿನ್ನುವ ಕೊಳ್ಳು(ಬ್ಬು)ಬಾಕತನ ಕಲಿಸುವವರಿಗೂ ಕಡಿಮೆ ತಿನ್ನಿ ಎನ್ನುವವರಿಗೂ ಗುರಿಯೋಂದೇ, ಗ್ರಾಹ ಕರ ಆಕರ್ಷಣೆ. ಎಷ್ಟು ಹಲ್ಲಿದೆಯೋ ಅಷ್ಟು ಬಾರಿ ತುತ್ತು ಅಗಿದು ತಿನ್ನಬೇಕು ಎಂದು ಹಿಂದಿನ ಶಿಕ್ಷಕರು ಬೋಧಿಸುತ್ತಿದ್ದರು. ಇದಕ್ಕೆ ಅಂಕ ಸಿಗುತ್ತಿರಲಿಲ್ಲ. ಈಗ ಅಂಕದ ಪಾಠ. ಆಗ ಶಿಕ್ಷಕರಿಗೆ ಈ ಪಾಠ ಮಾಡಿ ಲಾಭವಿರಲಿಲ್ಲ, ಮಕ್ಕಳಿಗೆ ಸಾಯುವವರೆಗೂ ಲಾಭವಾಗುತ್ತಿತ್ತು.

ಹಾಸ್ಯಪ್ರಜ್ಞೆ: ಇಷ್ಟು ಶಾರೀರ ದಾಡ್ಯìತೆ ಇದ್ದರೂ ಹಾಸ್ಯಪ್ರವೃತ್ತಿ ಮನೋಜ್ಞ. ಒಬ್ಬರು “ಆರು ಕಿ.ಮೀ. ನಡೆಯುತ್ತೀರಂತೆ’ ಎಂದು ಕೇಳಿದರು. “ಛೇ, ಛೇ! ಎಲ್ಲಿಯಾದರೂ ಉಂಟೆ? ಈ ವಯಸ್ಸಿನಲ್ಲಿ ಅಷ್ಟು ನಡೆಯಲು ಸಾಧ್ಯವೆ? ಕೇವಲ ಮೂರು ಕಿ.ಮೀ. ಮಾತ್ರ ಹೋಗುತ್ತೇನೆ’ ಎಂದರು. “ಮತ್ತೆ?’ ಎಂದಾಗ “ಹಿಂದಿರುಗಿ ಬರುತ್ತೇನೆ’ ಎಂದುತ್ತರಿಸಿದರು. 98ನೆಯ ಜನ್ಮದಿನವನ್ನು ಬೆಂಗಳೂರಿನಲ್ಲಿ ಸರಳವಾಗಿ ಆಚರಿಸಲಾಗಿತ್ತು. ಮೈಸೂರು ವಿ.ವಿ. ಪ್ರಸಾರಾಂಗ ನಿರ್ದೇಶಕರಾಗಿದ್ದ ಡಾ|ಪ್ರಭುಶಂಕರ ಅವರು “ಸಂಶೋಧಕರು ಹಿರಿಯ ವ್ಯಕ್ತಿಗಳ ಜನ್ಮದಿನಾಂಕ, ಪುಣ್ಯತಿಥಿ ವರ್ಷವನ್ನು ನೆನಪಿಟ್ಟುಕೊಳ್ಳಲು ಬಹಳ ಶ್ರಮಪಡುತ್ತಾರೆ. ನೀವು ಹೇಗಿದ್ದರೂ 1900ರಲ್ಲಿ (ಜೂನ್‌ 16) ಹುಟ್ಟಿದವರು. ನೆನಪಿಟ್ಟುಕೊಳ್ಳುವುದು ಸುಲಭ. ಇನ್ನೆರಡು ವರ್ಷ ಮನಸ್ಸು ಮಾಡಿದರೆ (!) ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ’ ಎಂದು ಹಾಸ್ಯಚಟಾಕಿ ಹಾರಿಸಿದರು. “ಸಂಶೋಧಕರು ಸಾಯಲಿ, ನಾನು ಬದುಕಿರುತ್ತೇನೆ’ ಎಂದು ಪ್ರತಿ ಹಾಸ್ಯ ಚಟಾಕಿ ಹಾರಿಸಿಬಿಟ್ಟರು. ಹಾಸ್ಯದ ಮಾತಾದರೂ ಸತ್ಯವಾಯಿತು, 103 ವರ್ಷ ಬದುಕಿದರು (ನಿಧನ 2003 ಆಗಸ್ಟ್‌ 23), ಮತ್ತೂ ಬದುಕುತ್ತಿದ್ದರು…

Advertisement

ಸಾವು ಕಾಯಿಲೆಯಿಂದಲ್ಲ: ಶತಾಯುಷಿಗೆ ಬಿಪಿ, ರಕ್ತದೊತ್ತಡದಂತಹ ಯಾವುದೇ ಸಮಸ್ಯೆ ಇದ್ದಿರಲಿಲ್ಲ. ವಾಕಿಂಗ್‌ ಹೋಗುವಾಗ ನಾಯಿಗಳು ಓಡಿಕೊಂಡು ಬಂದವು. ಗಾಬರಿಯಾಗಿ ಹಿಂದಿರುಗಿದರು. ಆಯ ತಪ್ಪಿ ಬಿದ್ದವರಿಗೆ ಸೊಂಟ ಮುರಿದು ಹೋಯಿತು. ಮಗನ ಪ್ರಕಾರ ಶಸ್ತ್ರಚಿಕಿತ್ಸೆಯಲ್ಲಿ ತಪ್ಪಾಗಿ ಸಾವು ಉಂಟಾಯಿತು. ನಾಯಿಗಳು ಬರದಿದ್ದರೆ…?
ಇಂತಹ ಕಥಾನಕಗಳನ್ನು ಕೇಳಿದಾಗ ಚಿಕ್ಕಪ್ರಾಯ ದಿಂದಲೇ ಸಾಧನೆ ಮಾಡಿರುವವರು ಎಂಬ ಭಾವನೆ ಬರುತ್ತದೆ. ಲೇಖಕರು, ಸಾಹಿತಿಗಳು, ಸರಕಾರಿ ಕಾಲೇಜು ಪ್ರಾಧ್ಯಾಪಕರಾಗಿ, ಮೈಸೂರು ಆಕಾಶವಾಣಿ ಅಧಿಕಾರಿ ಯಾಗಿದ್ದವರು. 55ನೇ ವರ್ಷದಲ್ಲಿ ನಿವೃತ್ತರಾದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರಂಭವಾದಾಗ ಪ್ರಥಮ ನಿರ್ದೇಶಕರಾದರು. 55ರ ಬಳಿಕ ವಾಕಿಂಗ್‌ ಪ್ರವೃತ್ತಿ ಆರಂಭಿಸಿದವರು. ಕಡಿಮೆ ಊಟವನ್ನು ಹಿಂದಿನಿಂದಲೇ ರೂಢಿಸಿಕೊಂಡು ಬಂದವರು.

ದೈವೀಗುಣವೇ ದೇವರು: ಕಥಾನಾಯಕ ಮಂಡ್ಯ ಜಿಲ್ಲೆ ಅಕ್ಕಿಹೆಬ್ಟಾಳಿನಲ್ಲಿ ಜನಿಸಿದ ನರಸಿಂಹ ಮೂರ್ತಿ ರಾವ್‌. “ದೇವರು’ ಎಂಬ ಪುಸ್ತಕ ಬರೆದು ಚಾಲ್ತಿಯಲ್ಲಿರುವ ದೇವರ ನಂಬಿಕೆಯನ್ನು ನಿರಾಕರಿಸಿ ಪ್ರಸಿದ್ಧರಾದ ಎ.ಎನ್‌.ಮೂರ್ತಿ ರಾವ್‌ “ಸಂಜೆಗಣ್ಣಿನ ಹಿನ್ನೋಟ’ ಕೃತಿ ಮೂಲಕ ಚಿರಪರಿಚಿತರು. ಅಮೆರಿಕ, ಫಿಲಿಫೈನ್ಸ್‌, ಭಾರತದಲ್ಲಿ ವೈರಾಲಜಿಸ್ಟ್‌ ಆಗಿ, ಸ್ವಯಂ ಆಸಕ್ತಿಯಿಂದ ಆಹಾರತಜ್ಞರಾಗಿ ತೀರ್ಥಹಳ್ಳಿಯಲ್ಲಿ ಕೃಷಿಯಲ್ಲಿ ತೊಡಗಿರುವ ಈಗ 92ರ ಹರೆಯದ ಡಾ|ನಾಗರಾಜ್‌ ನಡಿಗೆಯಲ್ಲಿ ತಂದೆಯನ್ನು ಸಮಗ ಟ್ಟಲು ಆಗದ ಮಗ. “ಕಡಿಮೆ ತಿಂದರೆ ದೇಹ ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಇಲ್ಲವಾದರೆ ಹೊರಗೆ ಹೋಗತ್ತೆ. ಆಹಾರ ಕ್ರಮದಿಂದ ರೋಗಗಳನ್ನು ದೂರ ಇಡಬಹುದು’ ಎಂಬ ಅಧ್ಯಯನಾನುಭವ ಡಾ| ನಾಗರಾಜ್‌ರದ್ದು. “ಲೋಕ ವಿದ್ಯಮಾನದ ದೇವರನ್ನು ತಂದೆ ನಿರಾಕರಿಸಿದರು. ದೈವೀಗುಣವನ್ನೇ ದೇವರೆನ್ನುತ್ತಿದ್ದರು. ಇಳಿವಯಸ್ಸಿನಲ್ಲಿ ಕೇನೋಪನಿಷತ್ತಿನ 13 ಶ್ಲೋಕಗಳನ್ನು ಭಾಷಾಂತರಿಸಿದರು’ ಎಂದೂ ಮಗ ನೆನಪಿಸಿಕೊಳ್ಳುತ್ತಾರೆ.

 -ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next