Advertisement

Blind Chess: ರಾಷ್ಟ್ರೀಯ ಅಂಧರ ಚೆಸ್‌ ಕಿಶನ್‌ ಗಂಗೊಳ್ಳಿಗೆ 8ನೇ ಪ್ರಶಸ್ತಿ

11:31 PM Dec 26, 2023 | Team Udayavani |

ಕುಂದಾಪುರ: ಅಖೀಲ ಭಾರತೀಯ ಅಂಧರ ಚೆಸ್‌ ಫೆಡರೇಶನ್‌ (ಎಐಸಿಎಫ್‌ಬಿ) ವತಿಯಿಂದ ಬೆಂಗಳೂರಿನಲ್ಲಿ ನಡೆದ 17ನೇ ರಾಷ್ಟ್ರೀಯ ಅಂಧರ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರ ಮೂಲದ ಕಿಶನ್‌ ಗಂಗೊಳ್ಳಿ ದಾಖಲೆಯ 8ನೇ ಬಾರಿಗೆ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ಬೆಂಗಳೂರಿನ ಆರ್ಯನ್‌ ಫೌಂಡೇಶನ್‌ನಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ದೇಶದ 40 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಹಾಲಿ ಚಾಂಪಿಯನ್‌ ಕಿಶನ್‌ ಗಂಗೊಳ್ಳಿ 2,032 ಅಂಕ ಪಡೆಯುವ ಮೂಲಕ ಮತ್ತೆ ಅಗ್ರಸ್ಥಾನಿಯಾಗಿ ಮೂಡಿಬಂದರು. ತಮಿಳುನಾಡಿನ ಸಾಯಿಕೃಷ್ಣ ಎನ್‌.ಟಿ. 1,734 ಅಂಕ ಹಾಗೂ ಒಡಿಶಾದ ಪಾತ್ರ ಸುಬೆಂದು ಕುಮಾರ್‌ 1,732 ಅಂಕ ಪಡೆದು 2ನೇ ಹಾಗೂ 3ನೇ ಸ್ಥಾನಿಯಾದರು.

ಇದು ಅಂತಾರಾಷ್ಟ್ರೀಯ ಅಂಧರ ಚೆಸ್‌ ಟೂರ್ನಿಗಳಿಗೆ ಭಾರತೀಯರ ಆಯ್ಕೆಗೆ ಇರುವ ಪ್ರಮುಖ ಪಂದ್ಯಾವಳಿಯಾಗಿದೆ. ಇಲ್ಲಿ ಉತ್ತಮ ಆಟವಾಡಿದ ಕಿಶನ್‌ ಗಂಗೊಳ್ಳಿ ಸೇರಿದಂತೆ 12 ಮಂದಿ ಕ್ರೀಡಾಳುಗಳು ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ಅಂಧರ ಅಂತಾರಾಷ್ಟ್ರೀಯ ಚೆಸ್‌ ಫೆಸ್ಟಿವಲ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ರಾಜ್ಯ ಚೆಸ್‌ ಅಸೋಸಿಯೇಶನ್‌ ಅಧ್ಯಕ್ಷ ಡಿ.ಪಿ. ಅನಂತ, ಆರ್ಯನ್‌ ಕೇರ್‌ ಫೌಂಡೇಶನ್‌ನ ಟ್ರಸ್ಟಿ ರಾಜಶೇಖರ್‌ ಎಂ.ಪಿ., ಪತ್ರಕರ್ತೆ ವಸಂತಿ ಹರಿಪ್ರಕಾಶ್‌, ಉದ್ಯಮಿ ಜಯರಾಮ್‌, ವಿಶ್ವ ಬಾಕ್ಸಿಂಗ್‌ ಚೆಸ್‌ ಚಾಂಪಿಯನ್‌ ಆರ್ಯನ್‌ ಸೂರ್ಯ, ಎಐಸಿಎಫ್‌ಬಿಯ ಕಾರ್ಯದರ್ಶಿ ಮನೀಷ್‌ ಟಿ. ಬಹುಮಾನ ವಿತರಣಾ ಸಮಾರಂಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next