Advertisement

86ನೇ ನುಡಿ ಜಾತ್ರೆಗೆ ಏಲಕ್ಕಿ ನಗರಿ ಝಗಮಗ

08:52 PM Jan 04, 2023 | Team Udayavani |

ಹಾವೇರಿ: 86ನೇ ನುಡಿ ಜಾತ್ರೆಗೆ ಸಿದ್ಧಗೊಂಡಿರುವ ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಹಳದಿ, ಕೆಂಪು ಬಾವುಟಗಳು ರಾರಾಜಿಸುತ್ತಿವೆ. ನಗರದಾದ್ಯಂತ ಮೈಸೂರು ದಸರಾ ಮಾದರಿ ದೀಪಾಲಂಕಾರ ಮಾಡಿದ್ದು, ಪ್ರಮುಖ ವೃತ್ತ, ರಸ್ತೆ ಮತ್ತು ಕಟ್ಟಡಗಳು ವಿವಿಧ ಬಣ್ಣಗಳ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

Advertisement

ನಗರದ ಹೊಸಮನಿ ಸಿದ್ದಪ್ಪ ವೃತ್ತ, ರಾಣಿ ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಗಾಂ ಧಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಜೆ.ಎಚ್‌.ಪಟೇಲ್‌ ವೃತ್ತ, ಎಂಎಂ ಸರ್ಕಲ್‌, ಜೆಪಿ ಸರ್ಕಲ್‌, ಸಂಗೂರ ಕರಿಯಪ್ಪ ಸರ್ಕಲ್‌ ಸೇರಿದಂತೆ ಮುಂತಾದ ವೃತ್ತಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಅಲ್ಲದೇ, ಹಳದಿ, ಕೆಂಪು ಬಟ್ಟೆಗಳನ್ನು ಅಳವಡಿಸಿ ನಗರವನ್ನು ಶೃಂಗರಿಸಲಾಗಿದೆ.

ಕೆಇಬಿ ಸರ್ಕಲ್‌ನಿಂದ ಹುಬ್ಬಳ್ಳಿ ರೋಡ್‌ ಬೈಪಾಸ್‌ವರೆಗೆ ಹಳೆ ಪಿ.ಬಿ. ರಸ್ತೆ, ಎಂ.ಜಿ. ರಸ್ತೆ, ಗುತ್ತಲ ರಸ್ತೆ ಮಾರ್ಗ, ತೋಟದ ಯಲ್ಲಾಪುರ ಮಾರ್ಗ, ಹಾನಗಲ್ಲ ಬೈಪಾಸ್‌ವರೆಗೆ, ಕಾಗಿನೆಲೆ ಬೈಪಾಸ್‌, ಜಿಲ್ಲಾ ಧಿಕಾರಿಗಳ ಕಚೇರಿ ರಸ್ತೆ ಮಾರ್ಗ, ಹಳೆ ಅಂಚೆ ಕಚೇರಿ ಮಾರ್ಗ, ಎಂಪಿಎಂಸಿ ಮಾರ್ಗ ಸೇರಿದಂತೆ ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ವಿದ್ಯುತ್‌ ದೀಪಗಳು ಝಗಮಗಿಸುತ್ತಿವೆ.

ಹೂವಿನ ಅಲಂಕಾರ:

ನಗರದ ವೃತ್ತ, ಡಿವೈಡರ್‌, ಪ್ರವೇಶ ದ್ವಾರ ಹಾಗೂ ಬಸ್‌ ನಿಲ್ದಾಣದ ಎದುರುಗಡೆ ಇರುವ ಸ್ಥಳಗಳಲ್ಲಿ ವಿವಿಧ ಹೂವುಗಳ ಅಲಂಕಾರಕ್ಕಾಗಿ ಗುಲಾಬಿ, ಸಾಲ್ವಿಯಾ, ಪೆಟೋನಿಯಾ, ಪ್ಲಾಕ್ಸ್‌, ಗೋಲ್ಡನ್‌ ರಾಡ್‌ ಮುಂತಾದ ಹೂವುಗಳನ್ನು ಬಳಸಲಾಗುತ್ತದೆ. ಜರ್ಬೆರಾ, ಆರ್ಕಿಡ್‌, ಅಂತೋರಿಯಂ, ಬರ್ಡ್‌ ಆಫ್‌ ಪ್ಯಾರಾಡೈಸ್‌, ಗ್ಲಾಡಿಯೋಲಸ್‌, ಕಾರ್ನೆಷನ್‌, ಲಿಲ್ಲಿ ಹೂವುಗಳಿಂದ ನಗರವನ್ನು ಅಲಂಕರಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

Advertisement

ಒಂದು ಸಾವಿರ ಕನ್ನಡ ಬಾವುಟ:

ಒಂದು ಸಾವಿರ ಕನ್ನಡ ಧ್ವಜಗಳನ್ನು ನಗರದ ವಿವಿಧೆಡೆ ಅಳವಡಿಸಲಾಗುತ್ತಿದ್ದು, ಹಳದಿ, ಕೆಂಪು ಬಾವುಟಗಳಿಂದ ಶೃಂಗರಿಸಲಾಗುತ್ತಿದೆ. ನಗರದ ಪ್ರಮುಖ ಪ್ರವೇಶ ಮಾರ್ಗದಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಿದ್ದು, ನಗರದ ಬಸ್‌ ನಿಲ್ದಾಣದ ಮೇಲ್ಸೇತುವೆಗೆ ಫ್ಲೆಕ್ಸ್‌ ಬೋರ್ಡ್‌ ಅಳವಡಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಿದ್ದು ಗಮನ ಸೆಳೆಯುತ್ತಿದೆ.

ನಗರದ ಎಲ್ಲ ವೃತ್ತ, ವಿದ್ಯುತ್‌ ಕಂಬ, ಡಿವೈಡರ್‌ ಕಂಬಗಳಿಗೆ ವಿಶೇಷ ಹೂವಿನ ಅಲಂಕಾರ, ಕನ್ನಡ ಧ್ವಜದ ಮಾದರಿಯಲ್ಲಿ ಕೆಂಪು-ಹಳದಿ ಬಟ್ಟೆಯಿಂದ ಶೃಂಗಾರ ಹಾಗೂ ಕಾಂಪೌಂಡ್‌ಗಳ ಮೇಲೆ ವರ್ಲಿಕಲೆ ಜತೆಗೆ ಚಿತ್ರಕಲಾ ಬರಹ ಬಿಡಿಸಿರುವುದು ನಗರದ ಸೌಂದರ್ಯಕ್ಕೆ ಮೆರಗು ನೀಡುತ್ತಿದೆ.

ಅದ್ಧೂರಿ ಮೆರವಣಿಗೆ:

ಅಕ್ಷರ ಜಾತ್ರೆಗೆ ಸಾಂಸ್ಕೃತಿಕ ಮೆರಗು ಹಾಗೂ ಅದ್ಧೂರಿತನ ತರುವ ನಿಟ್ಟಿನಲ್ಲಿ ಸಮ್ಮೇಳನದ ಮೆರವಣಿಗೆಯನ್ನು ವಿಶಿಷ್ಟವಾಗಿ ನಡೆಸಲಾಗುತ್ತಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅರಮನೆ ದರ್ಬಾರ್‌ ಮಾದರಿ ಭವ್ಯ ರಥವನ್ನು ಸಿದ್ಧಗೊಳಿಸಲಾಗಿದೆ. ಮೆರವಣಿಗೆಗಾಗಿ 15ಸಾವಿರ ಕನ್ನಡ ಧ್ವಜ, 10 ಸಾವಿರ ಶಲ್ಯ ಸಿದ್ಧಪಡಿಸಲಾಗಿದೆ. ಸ್ವಯಂಸೇವಕರಿಗೆ ಬ್ಯಾಡ್ಜ್ ಹಾಗೂ ಐಡಿ ಕಾರ್ಡ್‌ ನೀಡಲಾಗುತ್ತಿದೆ. ಮೆರವಣಿಗೆಯಲ್ಲಿ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಮೆರವಣಿಗೆ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಬಸವರಾಜ ಶಿವಣ್ಣನವರ ತಿಳಿಸಿದರು.

100 ಕಲಾ ತಂಡುಗಳು ಭಾಗಿ:

ರಾಜ್ಯದ 31 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕರೆತರಲು 12 ಸಾರೋಟಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಂದು ಸಾರೋಟಿನಲ್ಲಿ ಮೂವರು ಅಧ್ಯಕ್ಷರು ಆಸೀನರಾಗಲಿದ್ದಾರೆ. ಚಂಡಿಮದ್ದಳೆ, ನಂದಿಕೋಲು, ಪೂಜಾ ಕುಣಿತ, ಕಂಸಾಳೆ, ಪುರವಂತಿಕೆ, ಜಗ್ಗಲಿಗೆ, ಡೊಳ್ಳು, ಝಾಂಜ್‌, ಕರಡಿಮಜಲು, ಲಂಬಾಣಿ ನೃತ್ಯ, ಮಹಿಳಾ ವೀರಗಾಸೆ, ಹಲಗೆ, ಜಗ್ಗಲಿಗೆ, ಕೋಲಾಟ ಸೇರಿದಂತೆ 100ಕ್ಕೂ ಅ ಧಿಕ ಕಲಾತಂಡಗಳು ಪಾಲ್ಗೊಳ್ಳಲಿವೆ. ಹಾವೇರಿ ಜಿಲ್ಲೆಯ 50 ಕಲಾ ತಂಡಗಳಿಗೆ ಆದ್ಯತೆ ನೀಡಿದ್ದರೆ, ಹೊರ ಜಿಲ್ಲೆಯ 50 ಕಲಾ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೇರಳದ ಚಂಡಿಮದ್ದಳೆ ಆಯ್ಕೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸಾಗುವ ಕಲಾವಿದರು, ಸಾರ್ವಜನಿಕರಿಗೆ ಆರು ಸ್ಥಳಗಳಲ್ಲಿ ನೀರು, ತಂಪು ಪಾನೀಯ, ಚಾಕೋಲೇಟ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದ್ದಾರೆ.

ಕನಕ ಕೋಟೆ ಮಾದರಿ ಮುಖ್ಯದ್ವಾರ: 

ನುಡಿ ಜಾತ್ರೆ ನಡೆಯುವ ವೇದಿಕೆ ಸ್ಥಳದಲ್ಲಿ ಬಾಡದ ಕನಕ ಅರಮನೆ ಮಾದರಿಯ ಕೋಟೆ ಶೈಲಿಯಲ್ಲಿ ಸಮ್ಮೇಳನದ ಪ್ರಧಾನ ವೇದಿಕೆಯ ಮುಖ್ಯದ್ವಾರವನ್ನು ನಿರ್ಮಿಸಿರುವುದು ವಿಶೇಷವಾಗಿದೆ. 20 ಅಡಿ ಅಗಲ, 15 ಅಡಿ ಎತ್ತರದ ದ್ವಾರಗಳನ್ನು ಒಳಗೊಂಡ ಕೋಟೆ ಬಾಗಿಲುಗಳನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌, ಥರ್ಮಾಕೋಲ್‌, ಕಬ್ಬಿಣದ ಪೈಪ್‌ ಹಾಗೂ ಪ್ಲೈವುಡ್‌ ಬಳಸಿ ನಿರ್ಮಿಸಲಾಗಿದೆ.

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next