Advertisement

ಬಡ ಮಕ್ಕಳ ವೈದ್ಯಕೀಯ ಶಿಕ್ಷಣಕ್ಕೆ 8 ಲಕ್ಷ ರೂ. ನೆರವು ನೀಡಿದ ಎಂ.ಬಿ.ಪಾಟೀಲ್

04:10 PM Dec 02, 2022 | Team Udayavani |

ವಿಜಯಪುರ : ನೀಟ್ ಪಾಸಾಗಿ ಸರಕಾರಿ ಕೋಟಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಪ್ರವೇಶ ಪಡೆಯಲು ಪರದಾಡುತ್ತಿದ್ದ ರೈತ ಮತ್ತು ಕೃಷಿ ಕಾರ್ಮಿಕನ ಮಕ್ಕಳಿಗೆ ಹಣಕಾಸು ನೆರವು ನೀಡುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಬಿಎಲ್ ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹುಬನೂರ ಗ್ರಾಮದ ಚನಬಸು ಮಾಳಿ ಮತ್ತು ಸಿದ್ಧಾಪುರ ಗ್ರಾಮದ ಶೆಮ್ಮಿರ ಜಾತಗಾರ ಎಂಬಿಬಿಎಸ್ ಪ್ರವೇಶ ಪಡೆಯಲು ಹಣಕಾಸಿನ ತೊಂದರೆಯಿಂದಾಗಿ ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳ ಪೋಷಕರು ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ತಮ್ಮ ಅಳಲು ತೊಡಿಕೊಂಡರು. ಆಗ ಕೂಡಲೇ ಸ್ಪಂದಿಸಿದ ಶಾಸಕರು ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯವಿರುವ ಶುಲ್ಕವನ್ನು ನೀಡುವ ಮೂಲಕ ನೆರವಾಗಿದ್ದಾರೆ.

ಇಂದು ತಮ್ಮ ನಿವಾಸಕ್ಕೆ ಆಗಮಿಸಿದ ಇಬ್ಬರೂ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್. ಮೊದಲ ವರ್ಷದ ಕಾಲೇಜು ಮತ್ತು ಹಾಸ್ಟೇಲು ಶುಲ್ಕ ಮತ್ತೀತರ ವೆಚ್ಚ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ರೂ. 4,07,196 ಮೌಲ್ಯದ ಚೆಕ್ ವಿತರಿಸಿದರು. ಅಲ್ಲದೆ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಬಸವನಾಡಿನ ಹೆಮ್ಮೆಯನ್ನು ಎತ್ತಿ ಹಿಡಿಯುವಂತೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಚನಬಸು ತಂದೆ ಆನಂದ ಮಾಳಿ, ಶೆಮ್ಮಿರ ತಂದೆ ಮೆಹಬೂಬ ಜಾತಗಾರ, ಬಿಎಲ್ ಡಿಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್.ವಿ.ಕುಲಕರ್ಣಿ ಮತ್ತು ಬಿಎಲ್ ಡಿಇ ಮುಖ್ಯ ಆಡಳಿತಾಧಿಕಾರಿ ಆರ್.ಬಿ.ಕೊಟ್ನಾಳ ಉಪಸ್ಥಿತರಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಹುಬನೂರಿನ ವಿದ್ಯಾರ್ಥಿ ಚನಬಸು ಮಾಳಿ, ನನ್ನ ತಂದೆ ಆನಂದ ಮಾಳಿ ಬಡ ರೈತರಾಗಿದ್ದಾರೆ. ನೀಟ್ ಪಾಸಾದರೂ ಹಣದ ಸಮಸ್ಯೆ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡ ಪ್ರಶಾಂತ ಜಂಡೆ ಮತ್ತು ನಮ್ಮ ತಂದೆ ಶಾಸಕರನ್ನು ಭೇಟಿಯಾದಾಗ ಕೂಡಲೇ ಸ್ಪಂದಿಸಿದ್ದಾರೆ. ಕಷ್ಟಪಟ್ಟು ಸರಕಾರಿ ಶಾಲೆಯಲ್ಲಿ ಓದಿ ವೈದ್ಯನಾಗಬೇಕೆಂಬ ಕನಸು ಕಂಡಿದ್ದ ನನಗೆ ಸುಳ್ಯದ ವೆಂಕಟೇಶ್ವರಗೌಡ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆದರೆ ಹಣದ ಸಮಸ್ಯೆ ಹಿನ್ನೆಲೆಯಲ್ಲಿ ಪರದಾಡುತ್ತಿದ್ದ ನಮಗೆ ಆಪತ್ಭಾಂಧವರಾಗಿದ್ದಾರೆ. ವೈದ್ಯನಾಗಬೇಕೆಂಬ ನನ್ನ ಕನಸಿಗೆ ಎಂ.ಬಿ.ಪಾಟೀಲರು ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ. ಈಗ ನನ್ನ ಕನಸು ನನಸಾಗುತ್ತಿದೆ. ಶಾಸಕರು ಮೊದಲ ಕಂತಿನ ಹಣ ರೂ. 4 ಲಕ್ಷ ಚೆಕ್ ನೀಡಿದ್ದು ಕೋರ್ಸ್ ಮುಗಿಸಲು ಅಗತ್ಯವಾಗಿರುವ ಉಳಿದ ಹಣವನ್ನು ಕೂಡ ಹಂತಹಂತವಾಗಿ ನೀಡುವುದಾಗಿ ತಿಳಿಸಿದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿ ಶಮ್ಮಿರ ಜಾತಗಾರ ಮಾತನಾಡಿ, ಎಸ್ ಎಸ್ಎಲ್ ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಸರಕಾರಿ ಶಾಲೆಯಲ್ಲಿ ಓದಿರುವ ನಾನು ವೈದ್ಯನಾಗುವ ಕನಸು ಕಂಡಿದ್ದೆ ನಮ್ಮ ತಂದೆ ತಾಯಿ ಕೃಷಿ ಕಾರ್ಮಿಕರಾಗಿದ್ದು ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಕಬ್ಬು ಕಡಿಯಲು ಗುಳೆ ಹೋಗುತ್ತಾರೆ. ನೀಟ್ ಪಾಸಾದ ನನಗೆ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಸ್ ಸೀಟು ಸಿಕ್ಕಿತ್ತು. ಆದರೆ, ಬಡ ಕುಟುಂಬಕ್ಕೆ ಸೇರಿರುವ ನಮಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈಗ ಎಂ.ಬಿ.ಪಾಟೀಲರು ನೇರವಾಗುವ ಮೂಲಕ ನನ್ನ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ವಿದ್ಯಾರ್ಥಿ ತಂದೆ ಮೆಹಬೂಬ ಜಾತಗಾರ ಮಾತನಾಡಿ, ಕೃಷಿ ಕಾರ್ಮಿಕನಾಗಿರುವ ನನಗೆ ಮಗನನ್ನು ವೈದ್ಯನನ್ನಾಗಿ ಮಾಡಲು ಸಾಧ್ಯವಿರಲಿಲ್ಲ. ನಮ್ಮ ಸಂಕಷ್ಟಕ್ಕೆ ನೆರವಾಗುವ ಮೂಲಕ ಎಂ.ಬಿ.ಪಾಟೀಲರು ಎಂದೂ ಮರೆಯದ ದೊಡ್ಡ ಉಪಕಾರ ಮಾಡಿದ್ದಾರೆ. ಜೀವನಪೂರ್ತಿ ಅವರಿಗೆ ಋಣಿಯಾಗಿರುತ್ತೇವೆ ಎಂದು ಆನಂದಭಾಷ್ಟ ಸುರಿಸಿದರು.

ಈ ಹಿಂದೆಯೂ ಹಲವಾರು ಜನರಿಗೆ ಎಂಬಿಬಿ ಎಸ್ ಓದಲು ಸಹಾಯ ಮಾಡಿರುವ ಎಂ.ಬಿ.ಪಾಟೀಲರು ಈಗ ಮತ್ತೆ ಇಬ್ಬರು ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next