Advertisement

Caste census ಒಳಪಟ್ಟವರು 6 ಕೋಟಿ ಮಂದಿ:158.47 ಕೋಟಿ ರೂಪಾಯಿ ವೆಚ್ಚ  

12:40 AM Mar 01, 2024 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ತಿಜೋರಿಯಲ್ಲಿ 8 ವರ್ಷಗಳಿಂದ ಗೆದ್ದಲು ಹಿಡಿದಿದ್ದ ಜಾತಿ ಜನಗಣತಿ ದತ್ತಾಂಶಗಳಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಮರುಜೀವ ತುಂಬುವ ಸ್ಪಷ್ಟ ಸುಳಿವು ನೀಡಿತ್ತು. ಈಗ ಅದೇ ದತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಿದ ವರದಿಯನ್ನು ಸರಕಾರ ಸ್ವೀಕರಿಸಿದೆ.

Advertisement

2015ರ ಎಪ್ರಿಲ್‌ 15ರಿಂದ ಮೇ 15ರ ಅವಧಿಯಲ್ಲಿ ಈ ಜಾತಿ ಜನಗಣತಿ ಸಮೀಕ್ಷೆ ನಡೆದಿತ್ತು. ಇದರ ವ್ಯಾಪ್ತಿಗೆ ರಾಜ್ಯದ 6 ಕೋಟಿ ಜನ ಒಳಪಟ್ಟಿದ್ದಾರೆ. ಸರಕಾರಿ ಸಿಬಂದಿ, ಉಪಕರಣಗಳನ್ನು ಬಳಸಿ ಕೊಂಡು ಈ ಪ್ರಕ್ರಿಯೆಯಲ್ಲಿ 1.65 ಲಕ್ಷ ಗಣತಿ ದಾರರು ಈ ಕೆಲಸ ಮಾಡಿದ್ದರು. ವರದಿ ಯಲ್ಲಿ ಪ್ರತಿ ಕುಟುಂಬದ ಮುಖ್ಯಸ್ಥ, ಸದಸ್ಯರು, ಲಿಂಗ, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಾನ ಮಾನ, ಪೂರ್ಣಗೊಂಡ ವಯಸ್ಸು ಹೀಗೆ ಒಟ್ಟು 55 ಅಂಶಗಳ ಮಾಹಿತಿ ಸಂಗ್ರಹಿಸಲಾಗಿತ್ತು.

ಸಾಮಾಜಿಕ ನ್ಯಾಯ ಒದಗಿಸುವುದು ಇದರ ಬಹುಮುಖ್ಯ ಉದ್ದೇಶ ಎಂಬುದು ಕಾಂಗ್ರೆಸ್‌ ಸರಕಾರದ ವಾದ. ಸಂವಿಧಾನದ ವಿಧಿ 15(4) ರ ಅನ್ವಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಸಮುದಾಯಗಳ ಜನಸಂಖ್ಯೆ ಮತ್ತು ಅವುಗಳ ಸ್ಥಿತಿಗತಿಗಳ ಸಮಗ್ರ ಮಾಹಿತಿ ಆವಶ್ಯಕ. ಅದರ ಭಾಗವೇ ಜಾತಿ ಗಣತಿ. ಅದಕ್ಕಿಂತ ಮುಖ್ಯವಾಗಿ ವಿವಿಧ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ನಿರ್ಧರಿಸಲು ಜಾತಿ ಸಮೀಕ್ಷೆ ಮೂಲ ಆಧಾರ. ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ. 69ರಷ್ಟಿದ್ದು ಇದಕ್ಕಾಗಿ ತಮಿಳುನಾಡು ಕೂಡ ಇದೇ ಕ್ರಮವನ್ನು ಅನುಸರಿಸಿದೆ. ಅಲ್ಲಿ 1982-83ರಲ್ಲೇ ಅಂಬಾ ಶಂಕರ ಆಯೋಗ ಜಾತಿ ಗಣತಿ ಮಾಡಿ ವರದಿ ಸಲ್ಲಿಸಿತ್ತು. ಅದನ್ನು ಆಧರಿಸಿ ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಸರಕಾರ ಈ ಸಮೀಕ್ಷೆಗೆ 2014-15ರಿಂದ 2016-17ರ ವರೆಗೆ ಒಟ್ಟು 206.84 ಕೋಟಿ ರೂ. ನಿಗದಿಪಡಿಸಿ, ಅದರಲ್ಲಿ 192.79 ಕೋಟಿ ರೂ. ಬಿಡುಗಡೆ ಮಾಡಿತ್ತು. ವರದಿ ಸಿದ್ಧಪಡಿಸಲು 158.47 ಕೋ.ರೂ. ವೆಚ್ಚ ಮಾಡಲಾಗಿದೆ. ಜಾತಿ ಗಣತಿಯ ಗಣಕೀಕರಣಕ್ಕೆ ಬಿಇಎಲ್‌ (ಭಾರತ್‌ ಅರ್ತ್‌ಮೂವರ್ ಲಿ.,) ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ 43.09 ಕೋ. ರೂ. ವೆಚ್ಚವಾಗಬಹುದು ಎಂದು ಅಂದಾಜಿಸಿತ್ತು. ಬಹುತೇಕ ಎಲ್ಲ ಜಿಲ್ಲೆಗಳು ನೂರಕ್ಕೆ ನೂರರಷ್ಟು ಸಮೀಕ್ಷೆ ವ್ಯಾಪ್ತಿಗೆ ಬಂದಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಶೇ. 85-90 ಜನರನ್ನು ಸಂಪರ್ಕಿಸಲಾಗಿದೆ.

ಸಮೀಕ್ಷೆಗಿತ್ತು ವಿರೋಧ
ಸಮೀಕ್ಷೆ ಬಗ್ಗೆ ಪ್ರಬಲ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಶೇಷವಾಗಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದ್ದು, ಉಳಿದ ಸಮುದಾಯಗಳು ಪ್ರಬಲವಾಗಿವೆ ಎಂದು ಬಿಂಬಿಸುವುದು. ಆ ಮೂಲಕ ಪ್ರಮುಖ ಸಮುದಾಯಗಳ ಪ್ರಾಬಲ್ಯ ಕುಂದಿಸುವ ಪ್ರಯತ್ನಗಳು ಇದರ ಹಿಂದಿವೆ ಎಂಬ ಆರೋಪ ಕೇಳಿಬಂದಿತ್ತು. ಸಮೀಕ್ಷೆಗೆ ಬಂದಾಗ ಮಾಹಿತಿಗಳನ್ನು ನೀಡದಿರುವಂತೆಯೂ ಕೆಲವರು ಕರೆ ನೀಡಿದರು. ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಹೀಗೇ ನಮೂದಿಸಬೇಕು ಎಂದು ತಮ್ಮ ಸಮುದಾಯ ಬಾಂಧವರಿಗೆ ಆಯಾ ಮುಖಂಡರು ಅಭಿಯಾನದ ರೂಪದಲ್ಲಿ ಜಾಗೃತಿ ಮೂಡಿಸಿದ್ದರು.

Advertisement

2004ರಲ್ಲೇ ಸಿದ್ದರಾಮಯ್ಯ ಚಿಂತನೆ
ಜಾತಿ ಗಣತಿಯು ಸಿದ್ದರಾಮಯ್ಯ ಅವರ ದಶಕಗಳ ಕನಸು. 2004ರಲ್ಲಿ ಮೊದಲ ಬಾರಿಗೆ ಅವರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ, ತಾವು ಉಪ ಮುಖ್ಯಮಂತ್ರಿ ಆಗಿದ್ದಾಗ ಹಣವನ್ನೂ ಮೀಸಲಿಟ್ಟಿದ್ದರು. ಹಲವು ಕಾರಣಗಳಿಂದ ಅದು ಅಲ್ಲಿಯೇ ನಿಂತಿತ್ತು. ಇದಾದ ಮೇಲೆ ಅದಕ್ಕೆ ಚಾಲನೆ ದೊರಕಿದ್ದು ದಶಕದ ಬಳಿಕ. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ವರದಿ ಸಿದ್ಧಗೊಂಡಿತಾದರೂ ಸ್ವೀಕಾರ ಆಗಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂತು.

500 ಜಾತಿಗಳ ಸೇರ್ಪಡೆ
ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿಗಳು (ಒಬಿಸಿ) ಸಹಿತ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಸಮೀಕ್ಷೆ ಬಳಿಕ 500 ಜಾತಿಗಳು ಹೊಸದಾಗಿ ಗುರುತಿಸಿ ಪಟ್ಟಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next