Advertisement

ಎರಡು ಸಾವಿರ ರೈತರಿಗೆ 6 ಕೋಟಿ ರೂ. ಸಾಲ ವಿತರಣೆ

10:07 AM Oct 24, 2021 | Team Udayavani |

ಕಲಬುರಗಿ: ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಸಾಲ ಸಿಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲೂ ಈಗ ನೀಡಲಾಗುತ್ತಿರುವ ಸಾಲದ ಪ್ರಮಾಣ ಹತ್ತು ಪಟ್ಟು ಹೆಚ್ಚಿಗೆ ದೊರಕುವಂತೆ ಆಗಲು ತಾವು ಯತ್ನಿಸುತ್ತೇವೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

Advertisement

ನಗರದ ಆಳಂದ ರಸ್ತೆಯ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ ದಕ್ಷಿಣ ಮತಕ್ಷೇತ್ರದ ಸಿಂದಗಿ, ಪಟ್ಟಣ, ಭೀಮಳ್ಳಿ, ಸಾವಳಗಿ, ಕೋಟನೂರ ಡಿ, ಹುಣಸಿಹಡಗಿಲ್‌, ಶರಣಸಿರಸಗಿ, ಹೀರಾಪುರ, ಮಿಣಜಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎರಡು ಸಾವಿರ ರೈತರಿಗೆ ಆರು ಕೋಟಿ ರೂ, ಬಡ್ಡಿ ರಹಿತ ಬೆಳೆಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ದೊರಕಬೇಕೆಂದರೆ ಬ್ಯಾಂಕ್‌ ಪುನಶ್ಚೇತನಗೊಳ್ಳಬೇಕು. ಪಡೆದ ಸಾಲ ಸಕಾಲಕ್ಕೆ ಮರುಪಾವತಿಸಬೇಕು. ಈ ಹಿಂದೆ ರೈತರಿಗೆ ಸಾಲವನ್ನು ಅತ್ಯಂತ ಕನಿಷ್ಟವಾಗಿ ನೀಡಲಾಗುತ್ತಿತ್ತು. ಈಗ ಹೆಚ್ಚಿಗೆ ಮಾಡಲಾಗಿದೆ. ಇದು ತಮ್ಮ ಸರ್ಕಾರ ರೈತಪರ ಎಂಬುದನ್ನು ನಿರೂಪಿಸುತ್ತದೆ ಎಂದರು.

ಉಪಾಧ್ಯಕ್ಷ ಸುರೇಶ ಸಜ್ಜನ್‌ ಮಾತನಾಡಿ, ಬ್ಯಾಂಕ್‌ ಈಗ ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದೆ. ಹೀಗಾಗಿ ರೈತರಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನಗಳಲ್ಲಿ ಹಿರಿಯ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಾ ಅಧ್ಯಕ್ಷರಾಗಲಿದ್ದಾರೆ ಎಂದರು.

ಯುಕೆಪಿ ಕಾಡಾ ಆಡಳಿತಾಧಿಕಾರಿ ಶರಣಬಸಪ್ಪ ಬೆಣ್ಣೂರು ಮಾತನಾಡಿ, ಸಹಕಾರಿ ಕ್ಷೇತ್ರದ ಬಲವರ್ಧನೆಯಲ್ಲಿ ಪ್ರಾಮಾಣಿಕತೆ ಯೇ ಮುಖ್ಯ. ಹೀಗಾಗಿ ಪಡೆದ ಸಾಲ ಸಕಾಲದಲ್ಲಿ ಮರು ಪಾವತಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ: ಲೆಹೆಂಗದಲ್ಲಿ ವಿದೇಶಕ್ಕೆ ಮಾದಕ ವಸ್ತುಗಳ ರಫ್ತು

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಾ, ರೈತರಿಗೆ ಸಾಲ ನೀಡದಿರುವ ಮಟ್ಟಿಗೆ ತಲುಪಿದ್ದ ಬ್ಯಾಂಕ್‌ ಪುನಶ್ಚೇತನಗೊಳ್ಳಲು ಹಿಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಇಚ್ಛಾಶಕ್ತಿ ಕಾರಣವಾಗಿದೆ. ಮಧ್ಯಾಮಾವಧಿ ಸಾಲ ಮನ್ನಾ ಮಾಡಿರುವುದು ಹಾಗೂ 10 ಕೋಟಿ ರೂ. ಶೇರು ನೀಡಿರುವುದು, ಜತೆಗೆ 200 ಕೋಟಿ ರೂ. ಅಪೆಕ್ಸ್‌ ದಿಂದ ಸಾಲ ದೊರಕಿಸುವಂತೆ ಮಾಡಿರುವುದೇ ಕಾರಣ ಎಂದರು.

ಮತ್ತೋರ್ವ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ಎಂಡಿ ಚಿದಾನಂದ ನಿಂಬಾಳ, ಜನರಲ್‌ ಮ್ಯಾನೇಜರ ಮುತ್ತುರಾಜ, ತಹಶೀಲ್ದಾರ್‌ ಪ್ರಕಾಶ ಕುದುರೆ, ಸಹಾಯಕ ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ಪ್ರಮುಖರಾದ ರಾಜೇಂದ್ರ ಕರೇಕಲ್‌, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹಣಮಂತರಾವ ಭೈರಾಮಡಗಿ, ಲಿಂಗರಾಜ ಧುಳಗೊಂಡ, ಸಂಗಮೇಶ್ವರ ಚೋರಗಸ್ತಿ, ಶಿವರಾಯ ಶಿವಮೂರ್ತಿ, ಶಿವರಾಜ ಎಸ್‌. ಸಿರಸಗಿ ಕೋಟನೂರ, ಪ್ರಭುಲಿಂಗ ಮೂಲಗೆ, ಗಂಗಾಧರ ಪೊಲೀಸ್‌ ಪಾಟೀಲ, ಲಿಂಗಣಗೌಡ ಪಾಟೀಲ, ಬ್ಯಾಂಕ್‌ ಅಧಿಕಾರಿಗಳಾದ ಬಸವರಾಜ ಕಲ್ಲೂರ, ರುದ್ರಗೌಡ, ಸದಲಾಪುರ, ಪ್ರವೀಣ, ಮಲ್ಲಿಕಾರ್ಜುನ, ಗಣಪುರ, ಪೂಜಾರಿ ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ 250 ರೈತರಿಗೆ ಬೀಜ, ಎಂ.ಎನ್‌. ಲಿಕ್ವಿಡ್‌ ಕೀಟನಾಶಕ ಹಾಗೂ 94 ಸಿ ಅಡಿಯಲ್ಲಿ ರೈತರಿಗೆ ಹಕ್ಕುಪತ್ರಗಳನ್ನು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ವಿತರಿಸಿದರು. ಶಿವಶಂಕರ ಬಿರಾದಾರ ನಿರೂಪಿಸಿದರು, ಬಿ.ಜಿ. ಕಲ್ಲೂರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next