Advertisement

ರಾಜ್ಯದಲ್ಲಿ 50 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಲಭ್ಯವಿದೆ : ಸಿಎಂ ಬೊಮ್ಮಾಯಿ

10:01 PM Nov 04, 2022 | Team Udayavani |

ಬೆಂಗಳೂರು : ಉತ್ತಮ ಮೂಲಸೌಕರ್ಯವುಳ್ಳ 50 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಇನ್ವೆಸ್ಟ್ ಕರ್ನಾಟಕ 2022 ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹುಬ್ಬಳ್ಳಿ ಧಾರವಾಡ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಲ್ಯಾಂಡ್ ಬ್ಯಾಂಕ್ ಲಭ್ಯವಿದೆ. ಶಿವಮೊಗ್ಗ ಬಿಜಾಪುರ ವಿಮಾನ ನಿಲ್ದಾಣ ಶೀಘ್ರ ಆರಂಭವಾಗುತ್ತಿದ್ದು, ಕಾರವಾರದಲ್ಲಿ ವಿಮಾನ ನಿಲ್ದಾಣವಾಗಲಿದೆ. 6000 ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ ರಾಜ್ಯದಲ್ಲಿನ ಮೂಲಸೌಕರ್ಯ ವ್ಯವಸ್ಥೆ, ನೀತಿಗಳು ಬಂಡವಾಳ ಹೂಡಿಕೆದಾರರನ್ನು ನಿರಾಶೆಗೊಳಿಸುವುದಿಲ್ಲ. ಈ ಸಮಾವೇಶ ಕರ್ನಾಟಕದ ಆರ್ಥಿಕತೆಯ ಮುಂದಿನ ಹಂತದ ಅಭಿವೃದ್ಧಿಗೆ ತಳಪಾಯವಾಗಲಿದೆ ಎಂದರು.

ಮೂರು ತಿಂಗಳೊಳಗೆ ಬಂಡವಾಳ ಹೂಡಿಕೆ ಒಪ್ಪಂದಗಳ ಅನುಷ್ಠಾನ ಪ್ರಕ್ರಿಯೆ ಪ್ರಾರಂಭ

ಈ ಬಾರಿಯ ಜಿಮ್ ಸಮಾವೇಶದಲ್ಲಿ 9.8 ಲಕ್ಷ ಕೋಟಿ ಒಪ್ಪಂದಗಳು ಸಹಿಯಾಗಿದ್ದು,ಇವುಗಳಲ್ಲಿ 2.83 ಲಕ್ಷ ಕೋಟಿ ಬಂಡವಾಳ ಯೋಜನೆಗಳು, ಈಗಾಗಲೇ ಅನುಮೋದನೆ ದೊರೆತಿದ್ದು, ಈ ಬಾರಿಯ ಜಿಮ್ ಪ್ರಾರಂಭವಾಗುವ ಮೊದಲೇ ಶೇ.29% ರಷ್ಟು ಯೋಜನೆಗಳಿಗೆ ಅನುಮೋದನೆಯಾಗಿದೆ. ಸುಮಾರು 10 ಲಕ್ಷ ಕೋಟಿ ಬಂಡವಾಳ ಒಪ್ಪಂದಗಳ ಸಾಕಾರಕ್ಕೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಮುಂದಿನ 3 ತಿಂಗಳ ಅವಧಿಯೊಳಗೆ ಬಂಡವಾಳ ಹೂಡಿಕೆಯ ಎಲ್ಲ ಒಪ್ಪಂಗಳ ಅನುಷ್ಠಾನ ಪ್ರಕ್ರಿಯೆ ಪ್ರಾರಂಭವಾಬೇಕು. ಮೂರು ತಿಂಗಳ ನಂತರ ಈ ಬಗ್ಗೆ ಪಾರದರ್ಶಕ ವರದಿಯನ್ನು ಜನರಿಗೆ ನೀಡಬೇಕು ಎಂದರು.

Advertisement

ಕರ್ನಾಟಕ ಮಾತ್ರ ಮೂಲ ಸೌಕರ್ಯ ಕಲ್ಪಿಸುತ್ತಿದೆ‌
2000 ನಲ್ಲಿ ಮೊದಲ ಜಿಮ್ ಮಾಡಲಾಗಿತ್ತು. 27 ಸಾವಿರ ಕೋಟಿ ಹೂಡಿಕೆಯ ಭರವಸೆಯಾಗಿದ್ದು, 44% ಬಂಡವಾಳ ಹೂಡಿಕೆಯಾಯಿತು. 2010 ರಲ್ಲಿ 3,94,768 ಕೋಟಿ ಭರವಸೆ ನಿಡಲಾಗಿತ್ತು, ಶೇ 14 ರಷ್ಟು ಮಾತ್ರ ಸಾಕಾರವಾಯಿತು. 2012 ರಲ್ಲಿ 6,77,158 ಕೋಟಿ ಬಂಡವಾಳ ಭರವಸೆಯಲ್ಲಿ ಕೇವಲ 8% , 2016 ರಲ್ಲಿ 3,05,000 ಕೋಟಿ ಕೇವಲ 15% ಸಾಕಾರವಾಗಿದೆ. ಈ ಬಾರಿ ನಮ್ಮ ಸರ್ಕಾರ ಈ ರೀತಿ ಆಗಲು ಬಿಡುವುದಿಲ್ಲ. ಯಾವ ಸರ್ಕಾರವೂ ವಾಸ್ತವ ಅಂಶ ಹೇಳುವುದಿಲ್ಲ. ನಾನು ಪ್ರಮಾಣಿಕತೆಯಿಂದ ಪಾರದರ್ಶಕತೆಯಿಂದ ಇದನ್ನು ತಿಳಿಸುತ್ತಿದ್ದು, ನಾನು ನನ್ನ ರಾಜ್ಯದ ಜನತೆಗೆ ವಾಸ್ತವ ಹೇಳಬಯಸುತ್ತೇನೆ ಎಂದರು.

ಕನ್ನಡದವರಿಗೆ ಹೂಡಿಕೆ ಮಾಡುವ ಸಾಮರ್ಥ್ಯ ಬರಬೇಕು

ಕನ್ನಡದವರಿಗೆ ಹೂಡಿಕೆ ಮಾಡುವ ಸಾಮರ್ಥ್ಯ ಬರಬೇಕು. ರಾಜ್ಯದಲ್ಲಿ ದಲಿತ ಉದ್ದಿಮೆಗಾರರು ಪ್ರಮುಖ ವಲಯಗಳಲ್ಲಿ ಮುಂದೆ ಬರುತ್ತಿದ್ದಾರೆ. ಬುದ್ದಿವಂತಿಕೆ ಪರಿಶ್ರಮ ವ್ಯಕ್ತಿ ವರ್ಗದ ಸ್ವತ್ತಲ್ಲ. ಪ್ರಾಮಾಣಿಕ ಪ್ರಯತ್ನ ಮಾಡಿದವರಿಗೆ ಯಶಸ್ಸು ಒಲಿಯುತ್ತದೆ. ಈ ಸಮಾವೇಶವು ಯುವಜನರನ್ನು ಆಕರ್ಷಿಸಬೇಕು. ಅವರು ಮುಂದಿನ ಸಮಾವೇಶದಲ್ಲಿ ನಲ್ಲಿ ಸಹಿ ಮಾಡುವಂತಿರಬೇಕು. ಇಲ್ಲಿ ಹೂಡಿಕೆ ಹಾಗೂ ಪ್ರೇರಣೆ ಎರಡೂ ಆಗಿದ್ದು, ಈ ಬಂಡವಾಳ ಹೂಡಿಕೆ ಸಮಾವೇಶದಿಂದ ಉತ್ತೇಜನ ಹಾಗೂ ಉತ್ಸಾಹ ಮೂಡಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಜಗತ್ತು ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಬಂಡವಾಳ ಹೂಡಿಕೆಯ ಸಮಾವೇಶ ಮಾಡುವ ಧೈರ್ಯ ಕರ್ನಾಟಕ ಮಾಡಿದೆ

ಈಗಿನ ಪರಿಸ್ಥಿತಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಅತ್ಯಂತ ಪ್ರಮುಖ ಹಾಗೂ ವಿಶೇಷವಾದ ಕಾರ್ಯಕ್ರಮ. ಹಿಂದಿನ ಎಲ್ಲಾ ಸಮಾವೇಶಗಳಿಗಿಂತಲೂ ಇದು ಮುಖ್ಯವಾಗಿದೆ. ಬಂಡವಾಳ ಹೂಡಿಕೆ ಸಮಾವೇಶ ಅತ್ಯಂತ ಮುಖ್ಯವಾಗಿದೆ. ಇಡೀ ಜಗತ್ತು ಆರ್ಥಿಕ ಸಂಕಷ್ಟದಿಂದ ತತ್ತರಿಸಿವೆ. ಮುಂದುವರೆದ ರಾಷ್ಟ್ರಗಳು ಕಠಿಣ ಪರಿಸ್ಥಿತಿ ಎದುರಿಸುತ್ತಿವೆ‌. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಈ ಸಂದರ್ಭದಲ್ಲಿ ಬಂಡವಾಳ ಹೂಡಿಕೆಯ ಸಮಾವೇಶ ಮಾಡುವ ಧೈರ್ಯ ಮಾಡಿದೆ. ಜಗತ್ತು ಜನರನ್ನು ಬದುಕಿಸುವ ಕಾರ್ಯದಲ್ಲಿ ಮುಳುಗಿರುವಾಗ ಕರ್ನಾಟಕ ಸಾಹಸ ಮಾಡಿದ್ದು. ಫಲಿತಾಂಶ ಎಲ್ಲರ ಮುಂದಿದೆ ಎಂದರು.

ನಮ್ಮ ಶಕ್ತಿ ಅರಿತಿದ್ದೇವೆ

ಕರ್ನಾಟಕ ರಾಜ್ಯದ ಮೇಲೆ ಎಲ್ಲರೂ ಭರವಸೆ ಇಟ್ಟು ಬಂದಿದ್ದಾರೆ. ಆರ್ಥಿಕತೆಯ ದಿಗ್ಗಜರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿರುವಾಗ, ನಾವು ನಮ್ಮ ಹೆಜ್ಜೆಗಳನ್ನು ಮುಂದಿರಿಸುತ್ತಿದ್ದೇವೆ. ಕೋವಿಡ್ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿರುವ ಹೊತ್ತಿನಲ್ಲಿ ನಮ್ಮ ರಾಜ್ಯದ ಶಕ್ತಿ ನಮ್ಮ ಜನ ಎಂದು ಮನಗಂಡಿದ್ದೇವೆ. ತಂತ್ರಜ್ಞಾನ, ಕೌಶಲ್ಯ, ಭವಿಷ್ಯದ ಮುನ್ನೋಟವುಳ್ಳ ಸರ್ಕಾರ, ನಮ್ಮ ನೀತಿಗಳು, ನಮ್ಮ ಶಕ್ತಿಯಾಗಿವೆ. ನಮ್ಮಲ್ಲಿ ಹೂಡಿಕೆಗಳು ಸುಧಾರಣೆಯಾಗಿದ್ದು, ಕರ್ನಾಟಕ ಇಂದು ಯೋಚಿಸಿದ್ದನ್ನು ದೇಶ ನಾಳೆ ಯೋಚಿಸುತ್ತದೆ. ಆರ್ಥಿಕ ಹಿಂಜರಿತದ ಕಾರ್ಮೋಡದ ಮೇಲೆ ಬೆಳ್ಳಿ ರೇಖೆಗಳು ನಮಗೆ ಕಾಣುತ್ತಿವೆ ಎಂದರು.

ನವೀಕರಿಸಬಹುದಾದ ಇಂಧನದಲ್ಲಿ ಗಲ್ಫ್ ರಾಷ್ಟ್ರಗಳನ್ನು ಹಿಂದಿಕ್ಕುವ ಗುರಿ

ಕಠಿಣ ಶ್ರಮದಿಂದ ಮಾತ್ರ ಫಲಿತಾಂಶ ಬರುತ್ತದೆ. ನಾವು ನಮ್ಮ ದೃಷ್ಟಿ, ಕಾರ್ಯವೈಖರಿ ಎಲ್ಲವನ್ನು ಬದಲಾಯಿಸುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸಲು ನಾವು ಸಿದ್ದರಾಗಿದ್ದೇವೆ.ಶೇ 63% ನವೀಕರಿಸಬಹುದಾದ ಇಂಧನವನ್ನು ಕರ್ನಾಟಕ ಉತ್ಪಾದಿಸುತ್ತಿದೆ. ಈ ಕ್ಷೇತ್ರದಲ್ಲಿ ನಾವು ಹೊಸತನಕ್ಕೆ ಬದಲಾಗಬೇಕಿದೆ.

ನಾವು ಗಲ್ಪ್ ರಾಷ್ಟ್ರಗಳೊಂದಿಗೆ ಸ್ಪರ್ಧೆಗಿಳಿದು ಹೈಡ್ರೊಜನ್ ಇಂಧನ , ಅಮೊನಿಯಾವನ್ನು ಮೊದಲು ತಯಾರಿಸುತ್ತೇವೆ. ಪೆಬ್ರವರಿ, ಮಾರ್ಚ್ ನಲ್ಲಿ ಹೈಡ್ರೊಜನ್ ಅಮೊನಿಯಾ ಧನವನ್ನು ತಯಾರಿಸುವ ಗುರಿ ನಮ್ಮದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ನಾವು ಅತ್ಯಂತ ಗಂಭೀರ ಸರ್ಕಾರ. ಗಂಭೀರ ಹೂಡಿಕೆದಾರರು ನಮಗೆ ಅಗತ್ಯ ಎಂದರು.

ನೈಜ ಹೂಡಿಕೆದಾರರು ಅಗತ್ಯ

ಈ ಹೂಡಿಕೆಯಲ್ಲಿ 9 ಲಕ್ಷ ಕೋಟಿಗಿಂತಲೂ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದೆ. ಆದರೆ ಇದು ಅನುಷ್ಠಾನಕ್ಕೆ ಬರಬೇಕು. ನಮ್ಮ ಸರ್ಕಾರ ನೈಜ ಬಂಡವಾಳ ಹೂಡಿಕೆದಾರರನ್ನು ಬಯಸುತ್ತದೆ. ಭರವಸೆ ನೀಡಿದವರು ಉದ್ಯಮ ಸ್ಥಾಪನೆ ಮಾಡಬೇಕು. ಪರಸ್ಪರ ಸಹಕಾರದಿಂದ ಈ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬೇಕು ಕರ್ನಾಟಕ ಮಾತ್ರ ಮೂಲ ಸೌಕರ್ಯ ಕಲ್ಪಿಸುತ್ತಿದೆ‌. ಬೆಂಗಳೂರಿನ ಸುತ್ತಮುತ್ತ ಹಾಗೂ ಬೆಂಗಳೂರಿನ ಹೊರ ವಲಯದಲ್ಲಿಯೂ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಮೊದಲು ಬೆಂಗಳೂರು ಐಟಿಹಬ್ ಆಗಿತ್ತು, ಆದರೆ ಇದರೊಂದಿಗೆ ಬೆಂಗಳೂರು ಆರ್ಥಿಕ ಹಬ್ ಕೂಡ ಆಗಿದೆ ಎಂದರು.

ಆರ್ಥಿಕ ಬೆಳವಣಿಗೆಗೆ ಹೂಡಿಕೆದಾರರ ಸಮಾವೇಶ ಪೂರಕ

ಕರ್ನಾಟಕದಲ್ಲಿ ಹೂಡಿಕೆಗೆ ವಿಶಿಷ್ಟ ಸೌಲಭ್ಯಗಳಿವೆ. ಆರ್ಥಿಕ ಬೆಳವಣಿಗೆಗೆ ಈ ಸಮಾವೇಶ ಪೂರಕವಾಗಿದೆ. ಸಮಾವೇಶ 120 ಕಿಮೀ ವೇಗದಲ್ಲಿ ಸಾಗುತ್ತಿದೆ. ನಮ್ಮ ಸಾಮಾನ್ಯ ಜನರು, ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಬಹುದು ಆದರೆ ಅಂತಿಮವಾಗಿ ಕಾರ್ಮಿಕ ಕೆಲಸ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯ. ನಾವು ಬಹಳ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಭೌತಿಕ ಬದಲಾವಣೆಯನ್ನು ತರುವ ವ್ಯಕ್ತಿಯ ಕೊಡುಗೆಯನ್ನು ನಮ್ಮ ಸರ್ಕಾರ ಗುರುತಿಸುತ್ತದೆ ಎಂದರು. ಸಾಮಾಜಿಕ ಸುಧಾರಣೆ ಆರ್ಥಿಕತೆಯನ್ನೂ ಸುಧಾರಿಸುತ್ತದೆ. ಉದ್ಯೋಗ ಸೃಜನೆಗಾಗಿ ಜವಳಿ ಪಾರ್ಕ್ ಮುಂತಾದ ಯೋಜನೆಗಳನ್ನು, ನೀತಿಗಳನ್ನು ಜಾರಿಗೆ ತಂದಿದ್ದೇವೆ. ಪ್ರಧಾನಿಯವರ ಮಾರ್ಗದರ್ಶನದಂತೆ ನಾವು ನಡೆಯುತ್ತಿದ್ದೇವೆ. ನಮ್ಮ ಪ್ರಧಾನಮಂತ್ರಿಗಳು ದೇಶದಲ್ಲಿ ಬಹಳಷ್ಟು ಸುಧಾರಣೆ ಹಾಗೂ ಬದಲಾವಣೆಗಳನ್ನು ತಂದಿದ್ದಾರೆ. ಆರ್ಥಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆಯೂ ಆಗಲಿದ್ದು, ಪ್ರಧಾನಿಗಳ ಎಲ್ಲಾ ಯೋಜನೆಗಳನ್ನು ನಮ್ಮ ಸರ್ಕಾರ ಪಾಲಿಸಿ ಅನುಷ್ಠಾನಕ್ಕೆ ತರುತ್ತಿದೆ ಎಂದರು.

ಅಂತ್ಯವಲ್ಲ, ಮಧ್ಯಂತರ

ಕರ್ನಾಟಕ ಎಲ್ಲಾ ರಂಗಗಳಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ. ಸವಾಲುಗಳನ್ನು ನಾವು ಎದುರಿಸುತ್ತೇವೆ. ಹೂಡಿಕೆದಾರರ ಸವಾಲು ಮತ್ತು ಯಶಸ್ಸು ನಮ್ಮದೂ ಕೂಡ. ಇದು ಅಂತ್ಯವಲ್ಲ. ಮೂರು ತಿಂಗಳ ನಂತರ ಮತ್ತೆ ಆರಂಭವಾಗುತ್ತದೆ. ನಿರಂತರ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತೇವೆ. ಇದು ಕೇವಲ ಮಧ್ಯಂತರ. ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಧಿಕಾರಗಳ ಶ್ರಮ

ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೇಂದ್ರದಿಂದ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಬೀದರ್ ನಲ್ಲಿ ಸಿಪೆಟ್ ಸ್ಥಾಪನೆಗೆ ಭೂಮಿಪೂಜೆ ಮಾಡಲಾಗಿದೆ. ಕೈಗಾರಿಕಾ ಸಚಿವ ನಿರಾಣಿ ಹಾಗೂ ಅಧಿಕಾರಿಗಳು ಜಾಗತಿಕ ಉದ್ದಿಮೆದಾರರ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಹೂಡಿಕೆಯಾಗದೆ. ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯಸಚಿವ ಭಗವಂತ್ ಖೂಬಾ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ:ಇ. ವಿ.ರಮಣರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣಾ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next